Advertisement

ಶಾಂತಲಾ ಟ್ರಸ್ಟ್‌ನಿಂದ ಸರ್ಕಾರಿ ಶಾಲೆ ಅಭಿವೃದ್ಧಿ

03:49 PM Aug 12, 2019 | Naveen |

ರಾಮನಗರ: ಮನಸ್ಸಿದ್ದರೆ ಮಾರ್ಗ ಈ ನಾಣ್ಣುಡಿಯನ್ನು ಮತ್ತೆ ನಿಜ ಮಾಡಿದ್ದು ಕೃಷ್ಣಾ ಪುರದೊಡ್ಡಿಯ ಶಾಂತಲಾ ಚಾರಿಟಬಲ್ ಟ್ರಸ್ಟ್‌ ಸುಮಾರು 73 ವರ್ಷ ಹಳೆಯದಾಗಿರುವ ಕೃಷ್ಣಾಪುರದೊಡ್ಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಟ್ರಸ್ಟ್‌ ದತ್ತು ತೆಗೆದುಕೊಂಡು ಸುಮಾರು 5 ಲಕ್ಷ ರೂ ವಚ್ಚದಲ್ಲಿ ಅಭಿವೃದ್ಧಿ ಪಡಿಸಿದೆ.

Advertisement

ಸದಾ ಒಂದಿಲ್ಲೊಂದು ಸಾಂಸ್ಕೃತಿಕ ಚಟುವಟಿಕೆಗ‌ಳನ್ನು ಹಮ್ಮಿಕೊಂಡು ಜಿಲ್ಲಾದ್ಯಂತ ಗುರುತಿಸಿಕೊಂಡಿರುವ ಶಾಂತಲಾ ಚಾರಿಟಬಲ್ ಟ್ರಸ್ಟ್‌ ಸ್ವಯಂ ಪ್ರೇರಿತವಾಗಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಮಾಡಿ ಇತರೆ ಸಂಘಟನೆಗಳಿಗೆ ಮಾರ್ಗ ದರ್ಶಕವಾಗಿದೆ.

ಶಾಲೆಯ ಚಿತ್ರಣವೇ ಬದಲು: ನಮ್ಮೂರ ಸರ್ಕಾರಿ ಶಾಲೆಗೆ ನಾವೇ ಶಕ್ತಿ ತುಂಬ ಬೇಕು, ಅದನ್ನು ಉಳಿಸಿಕೊಳ್ಳಬೇಕು, ಮಕ್ಕಳನ್ನು ಆಕರ್ಷಿಸಬೇಕು ಎಂಬುದು ಸಾಂಸ್ಕೃತಿಕ ಚಟುವಟಿಕೆಗಳ ಆಯೋಜಕಿ ಹಾಗೂ ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್‌ ಅವರ ಪರಮ ಉದ್ದೇಶ. ‘ನಮ್ಮೂರ ಶಾಲೆ-ನಮ್ಮ ಶಕ್ತಿ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಇಡೀ ಶಾಲೆಯ ಚಿತ್ರಣವನ್ನೇ ಅವರು ಬದಲಿಸಿದ್ದಾರೆ. ಹೊರಾಂಗಣವಲ್ಲದೆ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಕಾರಣವಾಗಲು ಉದ್ದೇಶಿಸಿದ್ದಾರೆ.

ಆಟದ ಮೈದಾನ ಅಭಿವೃದ್ಧಿ: ತಾಲೂಕಿನ ಕೈಲಾಂಚ ಹೋಬಳಿ ಕೃಷ್ಣಾಪುರ ದೊಡ್ಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತಿತ್ತು. ಶಾಲೆಯ ಆವರಣ ವಿಶಾಲವಾಗಿದ್ದು, ಶಿಕ್ಷಕರೇ ಕೆಲವಷ್ಟು ಗಿಡಗಳನ್ನು ಬೆಳೆಸಿದ್ದರು. ಆದರೆ ಶಾಂತಲ ಚಾರಿಟಬಲ್ ಟ್ರಸ್ಟ್‌ ನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್‌ ಈ ಶಾಲೆಯ ಚಿತ್ರಣವನ್ನು ಬದಲಿಸಲು ಉದ್ದೇಶಿಸಿದರು. ತಾರಸಿಗೆ ಚುರುಕಿ ಹಾಕಿಸಿ ನೀರು ಸೋರುವುದನ್ನು ನಿಲ್ಲಿಸಿದ್ದಾರೆ. ಆಟದ ಮೈದಾನವನ್ನು ಅಭಿವೃದ್ಧಿ ಪಡಿಸಿದ್ದಾರೆ.

ಕಟ್ಟಡಕ್ಕೆ ಬಣ್ಣ: ಉದ್ಯಾನವನ ನಿರ್ಮಾಣಕ್ಕೆ ವಿದ್ಯಾರ್ಥಿಗಳು, ಗ್ರಾಮಸ್ಥರೊಂದಿಗೆ ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾಗಿದ್ದು, ತಂತಿ ಬೇಲಿಯನ್ನು ಹಾಕಿ ಕೈ ತೋಟವನ್ನು ಸಿದ್ದಪಡಿಸಲಾಗಿದೆ. ಶಾಲೆಯ ಬಿಸಿ ಊಟಕ್ಕೆ ಬೇಕಾಗಿರುವ ತರಕಾರಿ ಇತ್ಯಾದಿ ಸಸ್ಯಗಳನ್ನು ಬೆಳಸಲು ಉದ್ದೇಶಿಸಲಾಗಿದೆ. ಶಾಲೆಯ ಇಡೀ ಕಟ್ಟಡಕ್ಕೆ ಬಣ್ಣ ಬಳಿಸಲಾಗಿದೆ.

Advertisement

ಬಣ್ಣ, ಬಣ್ಣದ ಚಿತ್ರಗಳು: ಮಕ್ಕಳ ಮನ ಸೆಳೆಯುವ ಮತ್ತು ಅವರಲ್ಲಿ ಕೆಲವು ವಿಚಾರಗಳಲ್ಲಿ ಜಾಗೃತಿ ಮೂಡಿಸುವ ಮತ್ತು ಮನಸ್ಸು ಮುದಗೊಳಿಸುವ ಪ್ರಾಣಿ, ಪಕ್ಷಿ, ಸಸ್ಯಗಳ ಬಣ್ಣ, ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಘೋಷ ವಾಕ್ಯಗಳು ಬರೆಸಲಾಗಿದೆ. ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವಂತೆ ಗಣಕ ಯಂತ್ರಗಳನ್ನು ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್‌ ಭಾಷೆ ಮತ್ತು ಇತರ ವಿಷಯಗಳಲ್ಲಿ ಹೆಚ್ಚುವರಿ ತರಬೇತಿ ನೀಡಲು ಆಸಕ್ತ ಪದವೀದರರನ್ನು ಅತಿಥಿ ಶಿಕ್ಷಕರನ್ನು ಕರೆಸಿ ವಿಶೇಷ ತರಗತಿಗಳನ್ನು ನಡೆಸಲು ಉತ್ಸಕತೆ ತೋರಿದ್ದಾರೆ.

ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಬೀಜ ಬಿತ್ತುವ ಉದ್ದೇಶ: ರಾಮನಗರ ಜಿಲ್ಲೆಯಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್‌ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಖ್ಯಾತಿಗೊಳಿಸಿದೆ. ಟ್ರಸ್ಟ್‌ ನ ಕಾರ್ಯದರ್ಶಿ ಕವಿತಾರಾವ್‌ ಸ್ವತಃ ಕಲಾ ಪೋಷಕರು. ಇವರ ಇಬ್ಬರುಪುತ್ರಿಯರಾದ ಚಿತ್ರರಾವ್‌ ಮತ್ತು ಕಾವ್ಯ ರಾವ್‌ ಭರತನಾಟ್ಯ, ಗಾಯನ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.

ಸಾಂಸ್ಕೃತಿಕ ಕುಟುಂಬದ ಹಿನ್ನೆಲೆಯಲ್ಲಿರುವುದರಿಂದ ಕೃಷ್ಣಾಪುರದೊಡ್ಡಿ ಸರ್ಕಾರಿ ಶಾಲೆಯ ಮಕ್ಕಳನ್ನು ಸಾಂಸ್ಕೃತಿಕವಾಗಿ ತೊಡಗಿಸಲು ಅವರು ಉದ್ದೇಶಿಸಿದ್ದಾರೆ. ಶಾಲೆಯ ಆವರಣದಲ್ಲೇ 25 ಅಡಿ ಅಗಲ, 19 ಅಡಿ ಉದ್ದದ ವೇದಿಕೆಯನ್ನು ನಿರ್ಮಿಸಿದ್ದಾರೆ. ಸಂಸ್ಕೃತಿ ರಂಗಮಂದಿರ ಎಂದು ನಾಮಕರಣ ಮಾಡಿದ್ದಾರೆ. ಇಷ್ಟಲ್ಲದೆ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಇಡೀ ವರ್ಷಕ್ಕೆ ಬೇಕಾಗುವಷ್ಟು ಲೇಖನಸಾಮಾಗ್ರಿ ಕೊಡಲಾಗಿದೆ. ಶಾಲಾ ಮಕ್ಕಳಲ್ಲಿ ಕ್ರೀಡಾಚಟುವಟಿಕೆ, ಯೋಗ, ಧ್ಯಾನ, ನೃತ್ಯ, ಸಂಗೀತ ತರಗತಿಗಳನ್ನು ಆಯೋಜಿಸುವುದಾಗಿ ಕವಿತಾ ರಾವ್‌ ತಿಳಿಸಿದ್ದಾರೆ.

ನಾಳೆ ಕಾರ್ಯಕ್ರಮ: ಆ.13ರ ಮಂಗಳವಾರ ಟ್ರಸ್ಟ್‌ ತಾನು ಅಭಿವೃದ್ಧಿ ಪಡಿಸಿರುವ ಶಾಲೆಯನ್ನು ಗ್ರಾಮಕ್ಕೆ ಸಮರ್ಪಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಪಂ ಅಧ್ಯಕ್ಷರು, ಸದಸ್ಯರು, ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಕವಿತಾ ರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next