Advertisement

ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯವಾಗಲಿ: ವಂ|ವಿಲ್ಫ್ರೆಡ್‌ ರೋಡ್ರಿಗಸ್‌

12:33 AM Jul 22, 2019 | Sriram |

ಮಹಾನಗರ: ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ಹಮ್ಮಿಕೊಳ್ಳುತ್ತಿರುವ ಸ್ವಚ್ಛತ ಅಭಿಯಾನದ 5ನೇ ವರ್ಷದ 33ನೇ ಶ್ರಮದಾನ ಜು. 21ರಂದು ಬಿಕರ್ನಕಟ್ಟೆ ಪ್ರದೇಶದಲ್ಲಿ ಜರಗಿತು.

Advertisement

ಸ್ವಚ್ಛತಾ ಶ್ರಮದಾನಕ್ಕೆ ಬೆಳಗ್ಗೆ 7.30ಕ್ಕೆ ಬಾಲಯೇಸು ಪುಣ್ಯಕ್ಷೇತ್ರದ ಮುಖ್ಯದ್ವಾರದ ಎದುರುಗಡೆ ಪುಣ್ಯ ಕ್ಷೇತ್ರದ ಧರ್ಮಗುರುಗಳಾದ ವಂ| ವಿಲ್ಫ್ರೆಡ್‌ ರೋಡ್ರಿಗಸ್‌, ಎಪ್ಸನ್‌ ಇಂಡಿ ಯಾ ಪ್ರಾದೇ ಶಿಕ ಮುಖ್ಯಸ್ಥ ಅನಿಲ್ ಕುಮಾರ್‌ ಅವರು ಜಂಟಿಯಾಗಿ ಚಾಲನೆ ನೀಡಿದರು.

ಶ್ರಮದಾನಕ್ಕೂ ಮುನ್ನ ಮಾತನಾಡಿದ ವಂ| ವಿಲ್ಫ್ರೆಡ್‌ ರೋಡ್ರಿಗಸ್‌ ಅವರು ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯವಾಗಬೇಕು. ಪರಿಸರ ಸ್ವಚ್ಛತೆಯಿಂದ ಡೆಂಗ್ಯೂ ಮಲೇರಿಯಾದಂತಹ ರೋಗಗಳನ್ನೂ ನಿಯಂತ್ರಿಸಲು ಸಾಧ್ಯವಿದೆ. ರೋಗಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರು ಕೈಜೋಡಿಸುವಂತಾಗಲಿ ಎಂದರು.

ಸರಕಾರವೇ ಎಲ್ಲವನ್ನು ಮಾಡಲಿ ಎಂದು ಕಾಯದೇ ಸರಕಾರಕ್ಕೆ ಹಾಗೂ ಅಧಿಕಾರಿಗಳಿಗೆ ನಮ್ಮ ಕಾರ್ಯ ಸ್ಫೂರ್ತಿ ತರುವಂತೆ ನಾವು ಕರ್ತವ್ಯವನ್ನು ನಿರ್ವ ಹಿಸಲು ಪ್ರಯತ್ನಿಸೋಣ. ಈ ಜಗತ್ತಿನಲ್ಲಿ ಬದಲಾವಣೆ ಬರಬೇಕಾದರೆ ಅದು ಯಾವುದೇ ಸರಕಾರ, ರಾಜಕಾರಣಿ ಅಥವಾ ಅಧಿಕಾರಿಗಳಿಂದ ಸಾಧ್ಯವಿಲ್ಲ. ಬದ ಲಾಗಿ ಜನಸಾಮಾನ್ಯರು ಸಮಾಜದಲ್ಲಿ, ರಾಷ್ಟ್ರದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲರು. ರಾಮಕೃಷ್ಣ ಮಿಷನ್‌ನಂತಹ ಸಂಸ್ಥೆಗಳು ಜನಸಾಮಾನ್ಯರ ಮೂಲಕ ಇಂತಹ ಸ್ವಚ್ಛತ ಅಭಿಯಾನವನ್ನು ನಿರಂತರವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಿ ಕೊಂಡು ಬರುತ್ತಿರುವುದು ಶ್ಲಾಘನೀಯ ಎಂದವರು ಹೇಳಿದರು.

ಜಯರಾಜ್‌ ಗೌಡ, ಕೋಡಂಗೆ ಬಾಲಕೃಷ್ಣ ನಾೖಕ್‌, ಸುಭೋದಯ ಆಳ್ವ, ಪ್ರೊ| ಶೇಷಪ್ಪ ಅಮೀನ್‌, ವಸಂತಿ ನಾಯಕ್‌, ಸುನಂದಾ ಶಿವರಾಂ, ಸುನೀಲ್ ಪಾಂಡೇಶ್ವರ ಇನ್ನಿತರ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

Advertisement

ಶ್ರಮದಾನ
ಸ್ವಚ್ಛತಾ ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್‌ ಕೋಟೆಕಾರ್‌ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ ಶ್ರಮದಾನವನ್ನು ಕೈಗೊಳ್ಳಲಾಯಿತು. ಕೈಕಂಬ ಮೇಲ್ಸೇತುವೆ ಬಳಿ ಇದ್ದ ತ್ಯಾಜ್ಯ ರಾಶಿಯನ್ನು ಉಮಾಕಾಂತ ಸುವರ್ಣ, ದಾಮೋದರ್‌ ಭಟ್ ಜತೆ ಸೇರಿ ಕಾರ್ಯಕರ್ತರು ತೆರವುಗೊಳಿಸಿ ಸ್ವಚ್ಛ ಮಾಡಿದರು. ಎರಡನೇ ಗುಂಪು ದಿಲ್ರಾಜ್‌ ಆಳ್ವ ನೇತೃತ್ವದಲ್ಲಿ ನಂತೂರು ವೃತ್ತದ ಬಳಿಯಲ್ಲಿ ಸ್ವಚ್ಛತೆಯನ್ನು ಕೈಗೊಂಡು, ಅಲ್ಲಿದ್ದ ತ್ಯಾಜ್ಯರಾಶಿಯನ್ನು ತೆರವುಗೊಳಿಸಿದರು. ಅಲ್ಲಿನ ತೋಡು ಗಳನ್ನು ಶುಚಿಗೊಳಿಸಲಾಯಿತು. ಅನಿ ರುದ್ಧ ನಾಯಕ, ಶಿವು ಪುತ್ತೂರು, ಹಾಗೂ ಇತರ ಕಾರ್ಯಕರ್ತರು ಬಾಲಯೇಸು ಚರ್ಚ್‌ ಮುಖ್ಯ ದ್ವಾರದ ಸುತ್ತಮುತ್ತ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಅಲ್ಲಿದ್ದ ಕಸದ ರಾಶಿಗಳನು ತೆರವುಗೊಳಿಸಿದರು. ಬಳಿಕ ಬಿಕರ್ನಕಟ್ಟೆ ಫ್ಲೈಓವರ್‌ ಕೆಳಭಾಗದಲ್ಲಿ ಬಿದ್ದುಕೊಂಡಿದ್ದ ತ್ಯಾಜ್ಯ ಹಾಗೂ ಅದರ ಪಕ್ಕದಲ್ಲಿದ್ದ ತ್ಯಾಜ್ಯರಾಶಿಗಳನ್ನು ಸುಧೀರ್‌ ನರೋನ್ಹ ಮಾರ್ಗದರ್ಶನದಲ್ಲಿ ಜೇಸಿಬಿ ಸಹಾಯದಿಂದ ಸ್ವಚ್ಛ ಮಾಡಲಾಯಿತು. ಮಾರ್ಗವಿಭಾಜಕ, ಮಾರ್ಗಬದಿಯಲ್ಲಿ ಬೆಳೆದಿದ್ದ ಕಳೆಯನ್ನು ತೆಗೆದು ಸ್ವಚ್ಛ ಮಾಡಲಾಯಿತು.

ಗ್ಯಾರೇಜೊಂದರ ಬಳಿ ಇದ್ದ ಟಯರ್‌ಗಳನ್ನು ತೆರವುಗೊಳಿಸಿ ಜಾಗೃತಿ ಮೂಡಿ ಸಲಾಯಿತು . ರಾಮಕೃಷ್ಣ ವಿಷನ್‌ ವತಿಯಿಂದ ವಾಮಂಜೂರಿನಲ್ಲಿ ಕಳೆದ ವರ್ಷ ನಿರ್ಮಾಣ ಮಾಡಿದ್ದ ಬಸ್‌ ತಂಗುದಾಣವನ್ನು ರವಿ ಕೆ.ಆರ್‌. ಮುತುವರ್ಜಿಯಲ್ಲಿ ಶುಚಿಗೊಳಿಸಿ, ಆಸನಗಳಿಗೆ ಬಣ್ಣಬಳಿದು, ಸ್ವಚ್ಛತೆಯ ಸಂದೇಶ ಸಾರುವ ಫಲಕಗಳನ್ನು ಅಳವಡಿಸಿ ನವೀಕರಣ ಮಾಡಲಾಯಿತು.

ಡೆಂಗ್ಯೂ- ಮಲೇರಿಯಾ ಜಾಗೃತಿ ಅಭಿಯಾನ
ನಗರದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಮಲೇರಿಯಾ, ಡೆಂಗ್ಯೂ ಕುರಿತು ಜಾಗೃತಿ ಮೂಡಿಸಲು ರಾಮಕೃಷ್ಣ ಮಿಷನ್‌ ಕಾರ್ಯಕರ್ತರು ಅಭಿಯಾನವನ್ನು ನಡೆಸಲಿದ್ದಾರೆ. ಸೋಮವಾರದಿಂದ ಮುಳಿಹಿತ್ಲು, ಜೆಪ್ಪು, ಗುಜ್ಜರಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಮನೆಗಳನ್ನು ಸಂಪರ್ಕಿಸಿ ಜನಜಾಗೃತಿಗೆ ಪ್ರಯತ್ನಿಸಲಾಗುವುದು. ಸಾಮಾಜಿಕ ಕಾರ್ಯಕರ್ತ ಸುರೇಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ. ಅಭಿಯಾನದಲ್ಲಿ ಸ್ವಚ್ಛತೆಯ ಮಹತ್ವ, ಡೆಂಗ್ಯೂ ಮಲೇರಿಯಾ ಮುಂಜಾಗ್ರತಾ ಕ್ರಮಗಳು, ಪರಿಹಾರ, ನಿವಾರಣೋಪಾಯಗಳ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಮುನ್ನೆಚ್ಚರಿಕೆ ಅಗತ್ಯ
ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಮಾತನಾಡಿ, ಸ್ವಚ್ಛತಾ ಅಭಿಯಾನದ ಜತೆ ಜತೆಗೆ ಡೆಂಗ್ಯೂ -ಮಲೇರಿಯಾ ಕುರಿತು ಜಾಗೃತಿ ಹಾಗೂ ಪರಿಹಾರೋಪಾಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯ ಸ್ವಚ್ಛಮಂಗಳೂರು ಸ್ವಯಂ ಸೇವಕರು ಮಾಡಬೇಕಿದೆ. ಈಗಾಗಲೇ ರಾಮಕೃಷ್ಣ ಮಿಷನ್‌ನಿಂದ ಡೆಂಗ್ಯೂ, ಮಲೇರಿಯಾ ಜಾಗೃತಿಗಾಗಿ ತಂಡವನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕಾಯಿಲೆ ಗಳು ಬರದಂತೆ ಮುನ್ನೆಚ್ಚರಿಕೆ ಕ್ರಮ ಗಳನ್ನು ಕೈಗೊಂಡು, ನಗರವನ್ನು ಡೆಂಗ್ಯೂ- ಮಲೇರಿಯಾದಿಂದ ಮುಕ್ತ ಮಾಡಬೇಕು. ಜನರು ತಮ್ಮ ಮನೆಯ ಸುತ್ತಮುತ್ತಲಿನ ಸ್ಥಳಗಳನ್ನು ಸ್ವಚ್ಛವಾಗಿಟ್ಟು ಕೊಳ್ಳುವಂತೆ ತಿಳಿಹೇಳುವ ಕಾರ್ಯ ವ್ಯಾಪಕವಾಗಿ ಆಗಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next