Advertisement

ಮೂಲ ಕೃಷಿ ನಂಬಿದ ಪ್ರಗತಿಪರ ಕೃಷಿಕ ರಾಮ ನಾಯ್ಕ

10:22 AM Dec 23, 2019 | mahesh |

ಹೆಸರು: ರಾಮ ನಾಯ್ಕ
ಏನೇನು ಕೃಷಿ: ಭತ್ತ
ವಯಸ್ಸು: 53
ಕೃಷಿ ಪ್ರದೇಶ: 3 ಎಕ್ರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ತÌದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕಿನ್ನಿಗೋಳಿ: ಆಧುನಿಕತೆ ಬೆಳೆದ ಈ ಯುಗದಲ್ಲಿ ಎಲ್ಲದಕ್ಕೂ ತಂತ್ರಜ್ಞಾನವನ್ನೇ ನಂಬಿಕೊಂಡಿರುವ ನಾವು ಕೃಷಿ ಕ್ಷೇತ್ರದ ಕಡೆಗೆ ಮುಖ ಮಾಡುವುದಿಲ್ಲ. ಇನ್ನು ಪುರಾತನ ಕಾಲದಿಂದಲೂ ದ.ಕ. ಜಿಲ್ಲೆಯಲ್ಲಿ ಭತ್ತದ ಕೃಷಿಯಿಂದಲೇ ಬದುಕು ಕಟ್ಟಿಕೊಂಡು ಬರಲಾಗಿದೆ. ಏತನ್ಮಧ್ಯೆ ಕೃಷಿ ಕ್ಷೇತ್ರದಲ್ಲಿ ಪಾಲ್ಗೊಳ್ಳುವಿಕೆ ಕಡಿಮೆ ಆಗುತ್ತಿದೆ ಎಂಬ ವಾದದ ನಡುವೆ ಬಳುಜೆ ಗ್ರಾ.ಪಂ. ವ್ಯಾಪ್ತಿಯ ಕೊಲ್ಲೂರು ಪದವು ಸಮೀಪದ ರಾಮ ನಾಯ್ಕ ಅವರು ಪ್ರಗತಿಪರ ಕೃಷಿಕರಾಗಿ ಉತ್ತಮ ಮಾರ್ಗದರ್ಶಕರಾಗಿದ್ದಾರೆ.

53 ವರ್ಷದ ರಾಮ ನಾಯ್ಕ ಅವರು ಪತ್ನಿ ಹಾಗೂ ಮಕ್ಕಳ ಜತೆಗೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಲೂ ಭತ್ತದ ಕೃಷಿಯನ್ನು ನೆಚ್ಚಿಕೊಂಡಿರುವ ಇವರು ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿಯಾದ ಕೃಷಿಯಿಂದ ಜೀವನ ಸಾಗಿಸುತ್ತಿದ್ದಾರೆ.

ರಾಮ ನಾಯ್ಕ ಅವರು ಊರಿನಲ್ಲಿ ಪಾಥಮಿಕ, ಪ್ರೌಢ ಶಿಕ್ಷಣ ಪಡೆದ ಅನಂತರ ಜೀವನಕ್ಕಾಗಿ ಮುಂಬಯಿಗೆ ತೆರಳಿ ಹೊಟೇಲ್‌ನಲ್ಲಿ ಕೆಲಸ ನೆಚ್ಚಿಕೊಂಡರು. ಆದರೆ ಬಳಿಕ ಊರಿನಲ್ಲಿ ಕೃಷಿ ಮಾಡಬೇಕು, ನಮ್ಮ ಮೂಲ ಕೃಷಿ ಭತ್ತದ ಬೇಸಾಯ ಮಾಡಿ ಏನಾದರೂ ಸಾಧನೆ ಮಾಡಬೇಕು ಎಂಬ ಮಹಾದಾಸೆಯಿಂದ ಭತ್ತ ಬೇಸಾಯಕ್ಕೆ ಮುಂದಾದರು. ನಿರಂತರ ಆರು ವರ್ಷದಲ್ಲಿ ಎರಡು ಬೆಳೆಗಳನ್ನು ಬೆಳೆಯುತ್ತಾರೆ ರಾಮ ನಾಯ್ಕರು.

Advertisement

ತೆಂಗು ಕೃಷಿ, ಬೆಂಡೆ, ಅಲಸಂಡೆ, ತರಕಾರಿ ಪೂರಕ ಬೆಳೆ
ಸುಮಾರು 75ಕ್ಕೂ ಅಧಿಕ ತೆಂಗಿನ ಮರಗಳಿದ್ದು ಅದರಿಂದಲೂ ಅದಾಯ ಬರುತ್ತಿದೆ. ಮಳೆಗಾಲದಲ್ಲಿ, ಬೇಸಗೆಯಲ್ಲಿ ತರಕಾರಿ ಬೆಳೆಗಳಾದ ಬೆಂಡೆ, ಅಲಸಂಡೆ, ಬಸಳೆ, ಹರಿವೆ ಸೊಪ್ಪು, ಇನ್ನಿತರ ಸೊಪ್ಪು ತರಕಾರಿ ಬೆಳೆ ಬೆಳೆಯಲಾಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಸಾವಯವ ತರಕಾರಿಗೆ ಉತ್ತಮ ಬೇಡಿಕೆ ಇದ್ದು ಊರಿನ ಬೆಂಡೆಕಾಯಿಯಿಂದ ಉತ್ತಮ ಇಳುವರಿ ಹಾಗೂ ಆದಾಯವು ಇದೆ ಎನ್ನುತ್ತಾರೆ ರಾಮ ನಾಯ್ಕ ಅವರು.

ಪ್ರತಿವರ್ಷ ಎರಡು ಮುಂಗಾರು ಹಾಗೂ ಹಿಂಗಾರು ಭತ್ತದ ಬೆಳೆಗೆ ಉಳುಮೆಗೆ ಟ್ರ್ಯಾಕ್ಟರ್‌ ಬಳಸಲಾಗುತ್ತದೆ. ಮತ್ತೆ ಕಟಾಟವಿಗೆ ನಾವೇ ಕೈಯಿಂದ ಕಟಾವು ಮಾಡುತ್ತೇವೆೆ. ಇದರಿಂದ ದನ ಕರುಗಳಿಗೆ ಉತ್ತಮ ಮೇವು ದೊರೆಯುತ್ತದೆ ಎನ್ನುತ್ತಾರೆ. ಕಾಲ ಕಾಲಕ್ಕೆ ಭತ್ತದ ಬೆಳೆಗೆ ಹಟ್ಟಿ ಗೊಬ್ಬರ ಹಾಗೂ ಸುಡುಮಣ್ಣು ಉತ್ತಮ ಗೊಬ್ಬರವಾಗಿದ್ದು, ಬೇಸಗೆಯಲ್ಲಿ ಗದ್ದೆಯ ಬದಿಯಲ್ಲಿನ ಒಣಗಿದ ತರಗೆಲೆಗಳು ಹಾಗೂ ಹುಲ್ಲು ಗದ್ದೆಗೆ ಹಾಕಿ ಅದರ ಜತೆಗೆ ಮಣ್ಣು ಸೇರಿಸಿ ಬೆಂಕಿ ಕೊಟ್ಟು ಸುಡುಮಣ್ಣು ಮಾಡಲಾಗುತ್ತಿದೆ. ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ ಮಾಡುವುದಿಲ್ಲ ಎನ್ನುತ್ತಾರೆ ರಾಮ ನಾಯ್ಕR ಅವರು.

ಉತ್ತಮ ಇಳುವರಿಗೆ ಪ್ರಶಸ್ತಿ
 ಕೃಷಿ ಇಲಾಖೆಯಿಂದ 2016-17ನೇ ಸಾಲಿನಲ್ಲಿ ತಾಲೂಕು ಮಟ್ಟದಲ್ಲಿ ಭತ್ತದ ಬೆಳೆಗೆ 5ನೇ ಪ್ರಶಸ್ತಿ ಬಂದಿದೆ.
 ಈ ಬಾರಿಗೆ ಹೋಬಳಿ ಮಟ್ಟದಲ್ಲಿ ಉತ್ತಮ ಇಳುವರಿಗೆ ಪ್ರಶಸ್ತಿ ಬಂದಿದೆ.
ಇವರು ಪ್ರತಿವರ್ಷವೂ ಸಾಲು ನಾಟಿ ಮಾಡಿ ಭತ್ತದ ಬೇಸಾಯ ಮಾಡುತ್ತಿದ್ದಾರೆ. ಈ ಬಾರಿ ಮಳೆಗಾಲದಲ್ಲಿ ಜ್ಯೋತಿ ತಳಿ ಬೆಳೆ ಬೆಳೆದಿದ್ದಾರೆ. ಉತ್ತಮ ಇಳುವರಿ ಬಂದಿದೆ. ಮತ್ತೆ ಈಗ ಕೃಷಿ ಇಲಾಖೆಯ ಹೊಸ ಬೀಜ ತಂದು ಸಣ್ಣಕ್ಕಿ ಬೆಳೆ ಮಾಡಲಾಗುತ್ತಿದೆ ಎನ್ನುತ್ತಾರೆ. ಭತ್ತದ ಬೆಳೆಯ ಜತೆಗೆ ತರಕಾರಿ, ತೆಂಗು, ಅಡಿಕೆ, ಅನನಾಸು ಬೆಳೆ ಬೆಳೆದರೆ ಲಾಭ ಜಾಸ್ತಿ ಇದೆ. ಕೃಷಿ ಯಿಂದ ನಷ್ಟದ ಮಾತು ಇಲ್ಲ ಆದರೆ ನವಿಲು, ಕಾಡು ಹಂದಿಯಿಂದ ಭತ್ತದ ಬೆಳೆಗೆ ಹಾಗೂ ಅಲಸಂಡೆ ಇನ್ನಿತರ ತರಕಾರಿ ಕೃಷಿಗೆ ತೊಂದರೆ ಇದೆ.
ಮೊಬೈಲ್‌ ಸಂಖ್ಯೆ: 9740688201


ವ್ಯವಸ್ಥಿತ ಕೃಷಿ
ರಾಮನಾಯ್ಕರಿಗೆ ಭತ್ತದ ಬಗ್ಗೆ ಅಪಾರವಾದ ಪ್ರೀತಿ. ಈ ನಿಟ್ಟಿನಲ್ಲಿ ಮುಂಬಯಿಯಲ್ಲಿ ಹೊಟೇಲ್‌ನಲ್ಲಿ ಉದ್ಯೋಗವನ್ನು ಬಿಟ್ಟು ಊರಿಗೆ ಬಂದು ಕೃಷಿ ಮಾಡಿಕೊಂಡಿದ್ದಾರೆ. ಸರಿಯಾದ ರೀತಿಯಲ್ಲಿ ವ್ಯವಸ್ಥಿತವಾಗಿ ಕೃಷಿ ಮಾಡಿದರೆ ಮಾತ್ರ ಲಾಭವಿದೆ. ಭತ್ತದ ಕೃಷಿಯ ಜೊತೆಗೆ ತರಕಾರಿ ಕೃಷಿ ಕೂಡ ಮಾಡಿದರೆ ಲಾಭವಾಗುತ್ತದೆ. ಇಂದಿನ ಯುವಜನರು ಈ ಬಗ್ಗೆ ಆಸಕ್ತಿ ವಹಿಸಬೇಕು ಅಳಿವಿನಂಚಿನಲ್ಲಿರುವ ಭತ್ತದ ಕೃಷಿಗೆ ಸರಕಾರ ಮತ್ತು ಇಲಾಖೆ ಪ್ರೋತ್ಸಾಹ ನೀಡಬೇಕು. ಭತ್ತಕ್ಕೆ ಸರಿಯಾದ ಬೆಂಬಲ ಬೆಲೆ ಕೊಡಬೇಕು. ಇನ್ನು ಕೃಷಿಗೆ ಕಾಡುಪ್ರಾಣಿ‌ಗಳ ಕಾಟ ಇರುವುದರಿಂದ ಕೃಷಿಗೆ ಹಿನ್ನಡೆ ಉಂಟಾಗುತ್ತಿದ್ದು, ಈ ಬಗ್ಗೆ ಇಲಾಖೆ ಗಮನ ಹರಿಸಬೇಕು.
– ರಾಮ ನಾಯ್ಕ. ಕೃಷಿಕ

ರಘುನಾಥ ಕಾಮತ್‌, ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next