Advertisement

ರಕ್ಷಿತ್‌ ಕೈಗೆ ಕೋಳ

10:00 PM Jun 05, 2018 | |

ರಕ್ಷಿತ್‌ ಶೆಟ್ಟಿಯ ಅಭಿಮಾನಿಗಳು ಅವರ ಹುಟ್ಟುಹಬ್ಬಕ್ಕಾಗಿ ಎದುರು ನೋಡುತ್ತಿದ್ದರು. ಹುಟ್ಟುಹಬ್ಬದಂದು ಸಿನಿಮಾವೊಂದರ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡುವುದಾಗಿ ರಕ್ಷಿತ್‌ ಹೇಳಿದ್ದರು. ಇಂದು ರಕ್ಷಿತ್‌ ಹುಟ್ಟುಹಬ್ಬ. ಅದರಂತೆ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದೆ. ಹೌದು, ರಕ್ಷಿತ್‌ ಬಹುನಿರೀಕ್ಷೆ ಇಟ್ಟುಕೊಂಡಿರುವ “ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದೆ.

Advertisement

ಪೊಲೀಸ್‌ ಗೆಟಪ್‌ನಲ್ಲಿರುವ ರಕ್ಷಿತ್‌ ಶೆಟ್ಟಿಯನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಗಡ್ಡಬಿಟ್ಟು, ಸನ್‌ಗ್ಲಾಸ್‌ ಹಾಕಿಕೊಂಡಿರುವ ರಕ್ಷಿತ್‌, ಕೈ ಕೋಳ ಹಾಕಿಕೊಂಡು ಪೊಲೀಸ್‌ ಗೆಪಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್‌ ಆಗಿ ಸ್ವತಃ ಕೈ ಕೋಳ ಹಾಕಿಕೊಂಡಿದ್ದು ಯಾಕೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಸಹಜವಾಗಿ ಎದ್ದಿದೆ. ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಸಿನಿಮಾ ಬಿಡುಗಡೆವರೆಗೆ ಕಾಯಲೇಬೇಕು.

ಇನ್ನು, ಹುಟ್ಟುಹಬ್ಬ ಪ್ರಯುಕ್ತ ಚಿತ್ರದ ಫ‌ಸ್ಟ್‌ಲುಕ್‌ ಟೀಸರ್‌ ಕೂಡಾ ಬಿಡುಗಡೆಯಾಗಲಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ “ಅವನೇ ಶ್ರೀಮನ್ನಾರಾಯಣ’ ಸಿನಿಮಾ ಹೇಗೆ ಮೂಡಿಬರುತ್ತದೆ ಎಂಬ ಕುತೂಹಲ ಸ್ವತಃ ರಕ್ಷಿತ್‌ಗೆ ಇತ್ತಂತೆ. ಅಭಿಮಾನಿಗಳ ಕುತೂಹಲವನ್ನು ತಣಿಸಬಹುದೇ ಎಂದು ಯೋಚಿಸುತ್ತಿದ್ದ ಅವರು ಈಗ ಸಿನಿಮಾ ಮೂಡಿಬರುತ್ತಿರುವ ರೀತಿಯಿಂದ ಖುಷಿಯಾಗಿದ್ದಾರೆ.

ಹುಟ್ಟುಹಬ್ಬದ ದಿನ ಬಿಡುಗಡೆಯಾಗುತ್ತಿರುವ ಟೀಸರ್‌ ಅನ್ನು ಪ್ರೇಕ್ಷಕರು ಇಷ್ಟಪಡುತ್ತಾರೆಂಬ ನಂಬಿಕೆ ಕೂಡಾ ರಕ್ಷಿತ್‌ಗಿದೆ. “ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಚಿತ್ರೀಕರಣ ಬಾಗಲಕೋಟೆ, ಬಿಜಾಪುರ ಹಾಗೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ಇಲ್ಲಿವರೆಗೆ ಸುಮಾರು 33 ದಿನಗಳ ಕಾಲ ಚಿತ್ರೀಕರಣವಾಗಿದ್ದು, ಇನ್ನೂ 70 ದಿನಗಳ ಚಿತ್ರೀಕರಣ ಬಾಕಿ ಇದೆ.

ಈ ಚಿತ್ರವನ್ನು ರಕ್ಷಿತ್‌ ಶೆಟ್ಟಿ, ಪುಷ್ಕರ್‌ ಹಾಗೂ ಪ್ರಕಾಶ್‌ ಸೇರಿಕೊಂಡು ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಸಚಿನ್‌ ನಿರ್ದೇಶಿಸುತ್ತಿದ್ದು, ಅಜನೀಶ್‌ ಲೋಕನಾಥ್‌ ಅವರ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಸಾನ್ವಿ ಶ್ರೀವತ್ಸ ನಾಯಕಿ. ಚಿತ್ರವನ್ನು ಡಿಸೆಂಬರ್‌ 28ಕ್ಕೆ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಅದಕ್ಕೆ ಕಾರಣ 2016ರಲ್ಲಿ “ಕಿರಿಕ್‌ ಪಾರ್ಟಿ’ ಚಿತ್ರ ಅದೇ ದಿನ ತೆರೆಕಂಡಿತ್ತು ಮತ್ತು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು.

Advertisement

ಆ ಕಾರಣದಿಂದ “ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನೂ ಅದೇ ದಿನ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ. ಈ ನಡುವೆಯೇ ರಕ್ಷಿತ್‌ ನಿರ್ಮಾಣದಲ್ಲಿ “777ಚಾರ್ಲಿ’ ಚಿತ್ರ ಆರಂಭವಾಗಲಿದ್ದು, ಈ ಚಿತ್ರಕ್ಕೂ ರಕ್ಷಿತ್‌ ನಾಯಕ. “ಅವನೇ ಶ್ರೀಮನ್ನಾರಾಯಣ’ ಸಿನಿಮಾಕ್ಕೆ ಬ್ರೇಕ್‌ ಕೊಟ್ಟು, ರಕ್ಷಿತ್‌, “ಚಾರ್ಲಿ’ಯಲ್ಲಿ ತೊಡಗಲಿದ್ದಾರೆ. ಈ ಚಿತ್ರದಲ್ಲಿ ನಾಯಿ ಹಾಗೂ ವ್ಯಕ್ತಿಯೊಬ್ಬನ ನಡುವಿನ ಬಾಂಧವ್ಯದ ಕಥೆಯನ್ನು ಹೇಳಲಿದ್ದಾರೆ ನಿರ್ದೇಶಕ ಕಿರಣ್‌ ರಾಜ್‌. ಈಗಾಗಲೇ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next