Advertisement

ಸೋದರತ್ವದ ದ್ಯೋತಕ, ರಾಷ್ಟ್ರ  ಕಾರ್ಯಕ್ಕೆ ಪ್ರೇರಣೆ

11:45 PM Aug 21, 2021 | Team Udayavani |

ಚಾಂದ್ರಮಾನದ ಶ್ರಾವಣ ಮಾಸ ಭಾರತೀಯರಿಗೆ ಆ ವರ್ಷದಲ್ಲಿ ಬರುವ ಹಬ್ಬಗಳ ಪ್ರವೇಶಕ್ಕಿರುವ ಹೆಬ್ಟಾಗಿಲು. ಶ್ರಾವಣದ ಹುಣ್ಣಿಮೆಯಂದು ರಕ್ಷಾ ಬಂಧನ ಹಬ್ಬವಾಗಿ ಆಚರಿಸಲಾಗುತ್ತದೆ. ಅಣ್ಣ-ತಂಗಿಯರ ನಡುವಣ ಬಂಧವನ್ನು ಮತ್ತಷ್ಟು ಬಿಗಿಗೊಳಿಸುವ ಈ ಹಬ್ಬದ ಆಚರಣೆ ಸಾಂಕೇತಿಕವೆನಿಸಿದರೂ ಇದನ್ನು ಕೇವಲ ಮನೆಗೆ ಮಾತ್ರ ಸೀಮಿತಗೊಳಿಸ ಲಾಗದು. ರಕ್ಷಾ ಬಂಧನದ ದಿನದಂದು ಸಹೋದರಿಯರು ಸಹೋದರರಿಗೆ ರಾಖೀ ಕಟ್ಟಿದರೆ ಇದಕ್ಕೆ ಪ್ರತಿಯಾಗಿ ಸಹೋದ ರರು ಸಿಹಿಯನ್ನೋ, ಏನಾದರೂ ಉಡುಗೊರೆ ಯನ್ನು ನೀಡುತ್ತಾರೆ. ಈ ಮೂಲಕ ಶಾಶ್ವತ ಪ್ರೀತಿ, ರಕ್ಷಣೆಯನ್ನು ಬಯಸಿ ಬಂದ ಸಹೋದರಿಯರಿಗೆ ರಕ್ಷಣೆ ನೀಡುವ ಅಭಯವನ್ನು ಸಹೋದರರು ನೀಡುತ್ತಾರೆ.

Advertisement

ಯಾವುದೇ ಶುಭ ಕಾರ್ಯಕ್ರಮಗಳನ್ನು ಆರಂಭ ಮಾಡುವ ಮುನ್ನ ಕೈಗೆ ಅರಶಿನ ದಾರದಿಂದ ಅರಶಿನ ಕೊಂಬು ಸಹಿತ ಕೂಡಿದ ಕಂಕಣ ಕಟ್ಟುವ, ಬೆರಳಿಗೆ ಧರ್ಬೆಯ ಕೂರ್ಚದಿಂದ ಮಾಡಿರುವ ಪವಿತ್ರ ಧರಿಸುವ ಕ್ರಮವಿದೆ. ಎಲ್ಲಿಯವರೆಗೆ ಉದ್ದೇಶಿತ ಆ ಕಾರ್ಯಕ್ರಮ ಇರುತ್ತದೋ ಅಲ್ಲಿಯವರೆಗೆ ಆ ಕಂಕಣ, ಪವಿತ್ರ ನಮ್ಮ ಕೈಯಲ್ಲಿರಬೇಕು. ಅದು ನಮ್ಮನ್ನು ಸದಾ ಯಾವ ಕಾರ್ಯಕ್ಕಾಗಿ ನಾವು ಸಿದ್ದರಾಗಿದ್ದೇವೆಯೋ ಅದಕ್ಕೆ ಬದ್ಧ ರಾಗಿರುವಂತೆ ಪ್ರೇರೇಪಿಸುತ್ತಿರುತ್ತದೆ. ಆ ನೆಲೆಯಲ್ಲಿ ಶ್ರಾವಣ ಹುಣ್ಣಿಮೆಯಂದು ಆಚರಿಸಿಕೊಳ್ಳುವ ಸಹೋ ದರತೆಯ ಸಂಕೇತವಾಗಿರುವ ರಕ್ಷಾ ಬಂಧನ ಹಬ್ಬಕ್ಕಿರುವ ಮಹತ್ವ ಹಿರಿದು. ಹೌದು, ಇಂದು ನಾವು ಪರಸ್ಪರ ಕಟ್ಟಿಕೊಳ್ಳುವ ಈ ರಕ್ಷೆ ರಾಷ್ಟ್ರ ಕಾರ್ಯದಲ್ಲಿ ಸದಾ ಎಚ್ಚರದಲ್ಲಿ ಇರುವಂತೆ ಪ್ರೇರೇಪಿಸಬೇಕಾಗಿದೆ.

ಯಾವುದೇ ಹಬ್ಬ, ಉತ್ಸವಕ್ಕಾದರೂ ಒಂದು ಪೌರಾಣಿಕ ಹಿನ್ನಲೆ ಅಥವಾ ಐತಿಹಾಸಿಕ ನೆಲೆಗಟ್ಟು ಇದ್ದೇ ಇರುತ್ತದೆ. ಹಾಗಾಗಿ ಪುರಾಣ ಅಥವಾ ಇತಿಹಾಸದ ಬೆಳಕಿನಲ್ಲಿ ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ವರ್ತಮಾನದಲ್ಲಿ ಈ ರಕ್ಷಾ ಬಂಧನ ನಮಗೆ ಹೇಗೆ ಮತ್ತು ಯಾವ ರೀತಿ ಪ್ರೇರಣೆ ನೀಡಬಹುದು ಎಂಬುದನ್ನು ವಿವೇಚಿಸುವ ಸಣ್ಣ ಪ್ರಯತ್ನ ಮಾಡೋಣ.

ಚಾರಿತ್ರಿಕ ಹಿನ್ನೆಲೆ: ರಜಪೂತ ಮಾನಿನಿಯರ ಮಾನಧನ ಈ ರಾಖಿ ರಕ್ಷೆಯ ಕುರಿತಾದ ಒಂದು ಹಾಡಿನಲ್ಲಿ ಈ ಸಾಲು ಬರುತ್ತದೆ. ನೂರಾರು ವರ್ಷಗಳ ಪರತಂತ್ರದಿಂದ ಮುಕ್ತಗೊಂಡ ನಮ್ಮ ದೇಶಕ್ಕೆ ಈಗ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮ. ಈ ನೂರಾರು ವರ್ಷಗಳ ಅಕ್ರಮಣಗಳ ಕಾಲಘಟ್ಟದಲ್ಲಿ ಆನೇಕ ವಿಘಟನೆಗಳನ್ನು ಈ ದೇಶ ಕಂಡಿದೆ. ರಜಪೂತ ರಾಜ ಮನೆತನಗಳ ಮೇಲೆ ನಡೆದ ಮೊಘಲ್‌ ಸಾಮ್ರಾಜ್ಯದ ಅಕ್ರಮಣದ ಸಂದರ್ಭದಲ್ಲಿ ಆ ರಜಪೂತ ರಾಜಮನೆತನದ ಹೆಣ್ಣುಮಕ್ಕಳ ಮಾನಕ್ಕೆ, ಪ್ರಾಣಕ್ಕೆ ಕುತ್ತು ಬಂದಾಗ, ಅವರ ರಕ್ಷಣೆಗೆ ಒದಗಿ ಬಂದುದು ಇದೇ ರಕ್ಷೆ ಎಂದು ಇತಿಹಾಸ ಹೇಳುತ್ತದೆ.

ದೇಶದ ಬಾಹ್ಯ, ಆಂತರಿಕ ಸುರಕ್ಷೆ: ಅಖಂಡ ಭಾರತದ ಒಂದು ಭಾಗವಾಗಿದ್ದ ಅಫ್ಘಾನ್‌ನ ಇಂದಿನ ಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಭೀಕರ, ಭೀಭತ್ಸ ವರದಿಗಳನ್ನು ನೋಡುವಾಗ, ಕೇಳುವಾಗ ಅಂದಿನ ಆ ಸ್ಥಿತಿ ಹೇಗಿದ್ದಿರಬಹುದು ಎಂಬ ಕಲ್ಪನೆ ಬರಲು ಸಾಧ್ಯ. ಇವತ್ತಿಗೂ ಈ ಅಪಾಯದ ಕರೆಗಂಟೆ ಭಾರತದ ನೆತ್ತಿಯ ಮೇಲೆ ತೂಗುತ್ತಲೇ ಇದೆ. ಮೂರು ಕಡೆ ಸಮುದ್ರ, ಒಂದು ಕಡೆ ಹಿಮಾಚ್ಛಾದಿತ ಪರ್ವತ ಶಿಖರಗಳನ್ನು ಒಳಗೊಂಡ ಈ ರಾಷ್ಟ್ರದ ಗಡಿ ಮತ್ತು ಅಂತರಿಕ ಸುರಕ್ಷತೆ ಭಾರತಕ್ಕೆ ಸದಾ ಸವಾಲೇ ಹೌದು. ಒಂದು ದೇಶದ ರಕ್ಷಣೆಯ ಹೊಣೆ ಕೇವಲ ಒಂದು ಚುನಾಯಿತ ಸರಕಾರಕ್ಕೆ ಮಾತ್ರ ಅಲ್ಲ, ಆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಂಬಂಧಿಸಿದ್ದು. ನೋಡು ನೋಡುತ್ತಿದ್ದಂತೆ ಒಂದು ಇಡೀ ರಾಷ್ಟ್ರದ ಚುಕ್ಕಾಣಿ ಹೇಗೆ ಮತೀಯವಾದಿಗಳ ಕೈಗೆ ಸಿಲುಕಿ ಆ ರಾಷ್ಟ್ರ ಹೇಗೆ ನಲುಗುತ್ತಿದೆ ಎಂಬುದಕ್ಕೆ ಅಫ್ಘಾನ್‌ ಉದಾಹರಣೆಯಾಗಿ ನಮ್ಮ ಮುಂದೆ ಇದೆ. ಇದು ನಮಗೆ ಪಾಠವೂ ಹೌದು, ಎಚ್ಚರಿಕೆಯೂ ಹೌದು. ಯಾವುದೋ ಒಂದು ಕ್ಷಣಿಕ ಆಸೆ, ಆಮಿಷಗಳು ನಮ್ಮ ಭವಿಷ್ಯಕ್ಕೆ ಕಲ್ಲು ಹಾಕದಿರುವಂತೆ ನೋಡಿಕೊಳ್ಳಬೇಕಾದ ಎಚ್ಚರಿಕೆಯನ್ನು ನಾವು ಹೊಂದಬೇಕಾಗಿದೆ.

Advertisement

ಆರೋಗ್ಯ ಸುರಕ್ಷೆಯ ಸವಾಲು: ಕಳೆದ ಒಂದೂವರೆ, ಎರಡು ವರ್ಷ ಗಳಿಂದ ಇಡೀ ಜಗತ್ತು ಕಣ್ಣಿಗೆ ಕಾಣದಿರುವ ಒಂದು ಯಕಶ್ಚಿತ್‌ ವೈರಸ್‌ನ ಕಾರಣದಿಂದ ನಲುಗುತ್ತಿದೆ. ಒಂದು ಕಡೆ ಮಂಗಳನ ಅಂಗಳದಲ್ಲಿ ಮನೆ ಮಾಡಲು ಮನುಷ್ಯ ಸಿದ್ಧತೆ ನಡೆಸುವ ಹೊತ್ತಿನಲ್ಲೇ, ತನ್ನದೇ ಮನೆಯ ಅಂಗಳಕ್ಕೆ ಇಳಿಯಲು ಹತ್ತು ಬಾರಿ ಯೋಚಿಸುವ ಸ್ಥಿತಿ ನಮ್ಮ ಮುಂದೆ ಇರುವುದು ವಿಪರ್ಯಾಸ. ಒಂದು ರೋಗಾಣು ಆಧುನಿಕ ಮನುಷ್ಯನ ವೈಜ್ಞಾನಿಕ ಪ್ರಗತಿಗೆ ಸವಾಲು ಹಾಕುವಂತೆ ರಣಕೇಕೆ ಹಾಕುತ್ತಿದೆ. ಇಡೀ ಜಗತ್ತು ಇಂದು ಆರೋಗ್ಯ ಸುರಕ್ಷೆಯ ಬಗ್ಗೆ ಚರ್ಚಿಸುತ್ತಿದೆ. ಇನ್ನೂ ವೈಯಕ್ತಿಕ ಮತ್ತು ಸಾಮಾಜಿಕ ಆರೋಗ್ಯದ ಅಷ್ಟೇನೂ ಕಾಳಜಿ ಹೊಂದಿರದ ನಮ್ಮ ದೇಶದ ಅರೋಗ್ಯ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವುದೇ ಮತ್ತು ಅದು ಕಳೆದ ಒಂದೂವರೆ ವರ್ಷಗಳಲ್ಲಿ ಜಗಜ್ಜಾಹೀರು ಆಗಿದೆ ಅಷ್ಟೇ. ಆದರೂ ನಮ್ಮ ಜನಸಾಂದ್ರತೆಯನ್ನು ಹೋಲಿಕೆ ಮಾಡಿದರೆ ನಮ್ಮಲ್ಲಿ ಈ ಕೊರೊನಾ ಉಂಟುಮಾಡಿರುವ ಉಪದ್ವಾತ ಕಡಿಮೆ ಎಂದೇ ಹೇಳಬಹುದು. ಅದಕ್ಕೆ ಬಹಳ ಮುಖ್ಯ ಕಾರಣ ನಮ್ಮ ಆಹಾರ ಪದ್ಧತಿ. ನಿತ್ಯ ಅಡುಗೆಯಲ್ಲಿ ಬಳಸಲ್ಪಡುತ್ತಿರುವ ಈ ಆನೇಕ ಸಂಬಾರ ಪದಾರ್ಥಗಳು ನಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹಳ ಮುಖ್ಯ ಪ್ರಭಾವ ಬೀರಿದೆ ಎಂಬುದು ಆನುಭವ ಜನ್ಯ. ಆದರೆ ಇಂದು ಆಧುನಿಕ, ಪಾಶ್ಚಾತ್ಯ ಆಹಾರ ಪದ್ಧತಿಗಳಿಗೆ ಮಾರು ಹೋಗಿ ತಮ್ಮತನವನ್ನು ಕಳಕೊಳ್ಳುತ್ತಿರುವ ಎಲ್ಲರಿಗೂ ಎಚ್ಚೆತ್ತುಕೊಳಕ್ಷೆು ಇದು ಸಕಾಲ.

ಶಿಕ್ಷಣ ಸುರಕ್ಷೆ: ಯಾವುದೇ ಒಂದು ರಾಷ್ಟ್ರಕ್ಕೆ ತನ್ನದೇ ಆದ ಒಂದು ಶಿಕ್ಷಣ ನೀತಿ ಇರಬೇಕಾದುದು ಅತೀ ಅಗತ್ಯಗಳಲ್ಲಿ ಒಂದು. ಕೇವಲ ಅಂಕ, ಗ್ರೇಡ್‌ ಆಧಾರಿತ ಶಿಕ್ಷಣ ವ್ಯವಸ್ಥೆಯಿಂದ ಶಿಕ್ಷಣ ಕಲಿತ ವಿದ್ಯಾರ್ಥಿ, ಸ್ವಂತ ವಿವೇಕ, ವಿವೇಚನೆಗಳಿಂದ ಮುಕ್ತನಾಗಿ ವಿಶ್ವ ವಿದ್ಯಾನಿಲಯಗಳಿಂದ ಕೇವಲ ಉದ್ಯೋಗ ಪಡೆಯುವ ಪ್ರಮಾಣಪತ್ರ ಪಡೆಯುವುದಕ್ಕಷ್ಟೇ ಸೀಮಿತವಾಗಿರುವುದನ್ನು ಕಾಣುತ್ತಿದ್ದೇವೆ. ನಮ್ಮ ಜೀವನಕ್ಕೆ ಬೇಕಾದ ಯಾವ ಮೌಲ್ಯ, ಶಕ್ತಿ, ಸಾಮರ್ಥ್ಯವನ್ನು ಇಂದಿನ ಆಧುನಿಕ ಶಿಕ್ಷಣ ಪದ್ಧತಿ ನಮಗೆ ಕಲಿಸಿಕೊಡುವುದಿಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಜಾರಿಗೊಳ್ಳುತ್ತಿದೆ. ಈ ಕುರಿತು ಒಂದು ವ್ಯಾಪಕವಾದ ಧನಾತ್ಮಕ ಚರ್ಚೆ ಸಮಾಜದಲ್ಲಾಗಬೇಕಾಗಿದೆ.

ಒಂದು ಸ್ವಾವಲಂಬಿ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಇವೆಲ್ಲವೂ ಪೂರಕ, ಪ್ರೇರಕ. ಆಂತರಿಕ, ಬಾಹ್ಯ, ಬಲಿಷ್ಠ ಸುರಕ್ಷೆಯೊಂದಿಗೆ ಸ್ವಾಸ್ಥ್ಯಪೂರ್ಣ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರ ಭಾವದಿಂದ ನಾವು ಇಂದು ಕಟ್ಟಿಕೊಳ್ಳುತ್ತಿರುವ ರಕ್ಷೆ ಪ್ರೇರಣೆ ನೀಡಲಿ ಎಂಬುದು ಸದಾಶಯ.

 

ಚಂದ್ರಶೇಖರ ಆಚಾರ್ಯ ಕೈಯಬೆ

Advertisement

Udayavani is now on Telegram. Click here to join our channel and stay updated with the latest news.

Next