Advertisement

ರಾಜ್ಯೋತ್ಸವ ಸಂಭ್ರಮಕ್ಕೆ ಕರಾಳ ದಿನದ ಗ್ರಹಣ

04:46 PM Oct 31, 2022 | Team Udayavani |

ಬೆಳಗಾವಿ: ಗಡಿಭಾಗ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದ್ದರೆ ಇದಕ್ಕೆ ತದ್ವಿರುದ್ಧವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕರ್ನಾಟಕ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಸೈಕಲ್‌ ರ್ಯಾಲಿಗೆ ಮುಂದಾಗಿದೆ. ಸಂಭ್ರಮದ ದಿನವೇ ಕರಾಳ ದಿನ ನಡೆಸಿ ನಾಡದ್ರೋಹಿ ಚಟುವಟಿಕೆಗೆ ಎಂಇಎಸ್‌ ಸಜ್ಜಾಗಿದೆ.

Advertisement

2020ರಲ್ಲಿ ಕೊರೊನಾದಿಂದಾಗಿ ಹಾಗೂ 2021ರಲ್ಲಿ ಪುನೀತ್‌ ರಾಜಕುಮಾರ ನಿಧನದಿಂದಾಗಿ ಸರಳವಾಗಿ ಆಚರಣೆಯಾಗಿದ್ದ ಕರ್ನಾಟಕ ರಾಜ್ಯೋತ್ಸವ ಈ ಬಾರಿ ಅದ್ಧೂರಿಯಾಗಿ ನೆರವೇರಲಿದೆ. ಅದಕ್ಕಾಗಿ ಜಿಲ್ಲಾಡಳಿತ ಹಾಗೂ ಕನ್ನಡ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ. ಈ ಉತ್ಸವ ಇಡೀ ರಾಜ್ಯದಲ್ಲಿ ಮಾದರಿ ಆಗುವಂತೆ ಮಾಡಲು ತಯಾರಿ ನಡೆದಿದ್ದು, ಆದರೆ ನಾಡದ್ರೋಹಿ ಎಂಇಎಸ್‌ ಕರಾಳ ದಿನ ಆಚರಿಸುತ್ತಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿ ಪದಾಧಿ ಕಾರಿಗಳು ಈಗಾಗಲೇ 15 ದಿನಗಳಿಂದ ಬೆಳಗಾವಿ ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಮರಾಠಿ ಭಾಷಿಕರ ಪೂರ್ವಭಾವಿ ಸಭೆ ನಡೆಸಿ ಕರಾಳ ದಿನಾಚರಣೆ ಸೈಕಲ್‌ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಸಭೆ ನಡೆಸಿ ಯುವಕರು-ಯುವತಿಯರು, ಮಹಿಳೆಯರು ಸೇರಿದಂತೆ ಎಲ್ಲರೂ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸುವಂತೆ ಆಹ್ವಾನ ನೀಡುತ್ತಿದ್ದಾರೆ.

ಚುನಾವಣೆ ಸಿದ್ಧತೆಗಾಗಿ ಕರಾಳ ದಿನ: ಈ ಬಾರಿಯ ಕರಾಳ ದಿನದ ಸೆ„ಕಲ್‌ ರ್ಯಾಲಿಯಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಮುಂಬರುವ ವಿಧಾನಸಭೆ ಚುನಾವಣೆ ತಯಾರಿ ಮಾಡಿಕೊಳ್ಳುವ ನೀಚ ರಾಜಕಾರಣಕ್ಕೆ ಎಂಇಎಸ್‌ ಮುಂದಾಗಿದೆ. ಈಗಾಗಲೇ ವಿಧಾನಸಭೆ, ಮಹಾನಗರ ಪಾಲಿಕೆ, ತಾಲೂಕು ಪಂಚಾಯತ್‌ ಚುನಾವಣೆಯಲ್ಲಿ ಮಕಾಡೆ ಮಲಗಿರುವ ಎಂಇಎಸ್‌ ಈಗ ಮತ್ತೂಂದು ಪ್ರಯತ್ನ ಎಂಬಂತೆ ಕರಾಳ ದಿನವನ್ನು ದಾಳವನ್ನಾಗಿ ಮಾಡಿಕೊಂಡು, ತನ್ನ ಬೇಳೆ ಬೇಯಿಸಿಕೊಳ್ಳಲು ಮರಾಠಿ ಭಾಷಿಕರನ್ನು ಪ್ರಚೋದಿಸುವ ಹುನ್ನಾರ ನಡೆಸಿದೆ.

ಎಂಇಎಸ್‌ ನಾಯಕರು ನ. 1ರಂದು ನಡೆಸಲು ಉದ್ದೇಶಿಸಿರುವ ಕರಾಳ ದಿನಾಚರಣೆಗೆ ಇನ್ನೂವರೆಗೆ ಪೊಲೀಸ್‌ ಇಲಾಖೆ ಅನುಮತಿ ನೀಡಿಲ್ಲ. ಈ ಬಗ್ಗೆ ಡಿಸಿಪಿ ರವೀಂದ್ರ ಗಡಾದಿ ಸಭೆ ನಡೆಸಿ ಎಂಇಎಸ್‌ ನಾಯಕರಿಗೆ ತಾಕೀತು ಮಾಡಿದ್ದಾರೆ. ಪ್ರಚೋದನಕಾರಿಯಾಗಿ ಹೇಳಿಕೆ ನೀಡಿ ಶಾಂತಿ ಕದಡುವ ಯತ್ನ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ರವೀಂದ್ರ ಗಡಾದಿ ಎಚ್ಚರಿಕೆ ನೀಡಿದ್ದಾರೆ.

Advertisement

ಗತವೈಭವ ಸಾರುವ ರೂಪಕಗಳು:

ಕರ್ನಾಟಕ ರಾಜ್ಯೋತ್ಸವಕ್ಕಾಗಿ ರೂಪಕಗಳ ಮೆರವಣಿಗೆಗಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ನಾಡಿನ ಗತವೈಭವ ಸಾರುವ, ಕಲೆ-ಸಂಸ್ಕೃತಿ ಬಿಂಬಿಸುವ ರೂಪಕಗಳನ್ನು ಮೆರವಣಿಗೆಯಲ್ಲಿ ತರುವಂತೆ ಆಯಾ ಇಲಾಖೆಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅದರಂತೆ ಕೆಲವೊಂದು ಇಲಾಖೆಗಳು ಈಗಾಗಲೇ ರೂಪಕಗಳ ತಯಾರಿಯಲ್ಲಿ ತೊಡಗಿವೆ. ಸುವರ್ಣ ವಿಧಾನಸೌಧ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ, ನಾಡಿನ ಖ್ಯಾತ ಸಾಹಿತಿಗಳು, ನಾಡಿನ ಪಾರಂಪರಿಕ ತಾಣಗಳು, ಪ್ರವಾಸಿ ತಾಣಗಳ ರೂಪಕಗಳು ರಾಜ್ಯೋತ್ಸವ ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.

ಕರ್ನಾಟಕ ರಾಜ್ಯೋತ್ಸವದ ವೈಭವದ ಮೆರವಣಿಗೆಗೆ ಬೆಳಗಾವಿ ಸಾಕ್ಷಿಯಾಗಲಿದೆ. ಅಂದು ಮೆರವಣಿಗೆ ವೀಕ್ಷಿಸಲು ಬೆಳಗಾವಿ ಸೇರಿದಂತೆ ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿಯಿಂದಲೂ ಜನರು ಆಗಮಿಸಲಿದ್ದಾರೆ. ಬೆಳಗಾವಿಯ ಹೃದಯಭಾಗ ರಾಣಿ ಚನ್ನಮ್ಮ ವೃತ್ತವನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿದೆ.

ಡಿಜೆ-ಡಾಲ್ಬಿ ಹಾಡುಗಳಿಗೆ ಕನ್ನಡಿಗರು ಹೆಜ್ಜೆ ಹಾಕಲಿದ್ದಾರೆ. ಕನ್ನಡ ಹಾಡುಗಳು ಬೆಳಗಾವಿಯ ಮೆರವಣಿಗೆಯಲ್ಲಿ ಮಾರ್ದನಿಸಲಿವೆ. ಕನ್ನಡ ನಾಡು-ನುಡಿಗೆ ಸಂಬಂಧಿ ಸಿದ ಹಾಡುಗಳ ರಿಮಿಕ್ಸ್‌, ಡಿಜೆ ವರ್ಷನ್‌ ಮಾಡಲಾಗಿದೆ. ಶಿವರಾಜಕುಮಾರ, ಪುನೀತರಾಜಕುಮಾರ, ದರ್ಶನ, ರವಿಚಂದ್ರ ಸೇರಿದಂತೆ ಅನೇಕ ನಟರ ಚಿತ್ರಗಳಲ್ಲಿಯ ಕನ್ನಡಾಭಿಮಾನ ಬಿಂಬಿಸುವ ಹಾಡುಗಳಿಗೆ ಕನ್ನಡಿಗರು ಹುಚ್ಚೆದ್ದು ಕುಣಿಯಲಿದ್ದಾರೆ.

ಕರಾಳ ದಿನಕ್ಕೆ ಅನುಮತಿ ಇಲ್ಲ

ನ. 1ರಂದು ಎಂಇಎಸ್‌ನ ಕರಾಳ ದಿನಾಚರಣೆಗೆ ಅನುಮತಿ ನೀಡಿಲ್ಲ. ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆ ವೇಳೆ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್‌ ಭದ್ರತೆ ಒದಗಿಸಲಾಗುವುದು. ಮೆರವಣಿಗೆ ಸಾಗುವ ಮಾರ್ಗದಲ್ಲಿ 350 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮೆರವಣಿಗೆ ಮೇಲೆ ನಿಗಾ ಇಡಲು 8 ಡ್ರೋಣ್‌ ಕ್ಯಾಮೆರಾ ಹಾರಾಡಲಿವೆ. ಕಮಿಷನರ್‌, ಮೂವರು ಡಿಸಿಪಿ, 12 ಜನ ಡಿಎಸ್‌ಪಿ, 60 ಜನ ಸಿಪಿಐ, 100 ಜನ ಪಿಎಸ್‌ಐ, 10 ಕೆಎಸ್‌ ಆರ್‌ಪಿ ತುಕಡಿ, 500 ಹೋಮ್‌ ಗಾರ್ಡ್‌, ಹೊರ ಜಿಲ್ಲೆಗಳಿಂದ 1200 ಸಿಬ್ಬಂದಿ ಸೇರಿ ಒಟ್ಟು 2500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುವುದು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ತಿಳಿಸಿದರು.

ಕನ್ನಡಿಗರಿಗೆ ಒಂದು ಲಕ್ಷ ಹೋಳಿಗೆ ಊಟ

ಈ ಬಾರಿಯ ಕರ್ನಾಟಕ ರಾಜ್ಯೋತ್ಸವಕ್ಕೆ ಹುಕ್ಕೇರಿ ಹಿರೇಮಠದಿಂದ ಒಂದು ಲಕ್ಷ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಒಬ್ಬರಿಗೆ ಎರಡು ಹೋಳಿಗೆಯಂತೆ 50 ಸಾವಿರ ಜನರಿಗೆ ಆಗುವಂತೆ ಒಂದು ಲಕ್ಷ ಹೋಳಿಗೆ ತಯಾರಿಸಿ ಊಟ ಹಾಕಲು ಹಿರೇಮಠ ಸಿದ್ಧತೆ ಮಾಡಿಕೊಂಡಿದೆ. ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ 200 ಬಾಣಸಿಗರು ಅಡುಗೆ ತಯಾರಿಸಲಿದ್ದು, ಇದರಲ್ಲಿ 150 ಮಹಿಳೆಯರು ಹೋಳಿಗೆ ಮಾಡಲಿದ್ದಾರೆ. ಹೋಳಿಗೆ, ಬದನೆಕಾಯಿ ಪಲ್ಯ, ಅನ್ನ, ಸಾರು, ಉಪ್ಪಿನಕಾಯಿ ವಿಶೇಷ ಮೆನ್ಯು ಇರಲಿದೆ. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕನ್ನಡದ ಹಬ್ಬದಂದು ಕನ್ನಡಿಗರಿಗೆ ಹೋಳಿಗೆ ಊಟ ಹಾಕಿಸಲಿದ್ದಾರೆ.

-ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next