Advertisement

ಅಕ್ಷರ ಸಾಧಕನ ಮುಡಿಗೆ ರಾಜ್ಯೋತ್ಸವ ಕಿರೀಟ

10:07 AM Oct 29, 2019 | Suhan S |

ಧಾರವಾಡ: ತಂದೆ ತೀರಿದ ಬಳಿಕ ತಾಯಿ ತೋರಿದ ಪ್ರೀತಿ, ಹರೆಯದಲ್ಲಿ ಬಾಳ ಸಂಗಾತಿಯ ಸಾಥ್‌ ಹಾಗೂ ಇಳಿವಯಸ್ಸಿನಲ್ಲಿ ಮಕ್ಕಳ ಸಹಕಾರವೇ 88 ವರ್ಷವಾದರೂ ಹುಮ್ಮಸ್ಸಿನಿಂದ ತೊಡಗಿಕೊಳ್ಳಲು ಕಾರಣವಾಗಿದೆ.

Advertisement

ಇದೆಲ್ಲರ ಪ್ರತಿಫಲವೇ ಪ್ರಶಸ್ತಿಗೆ ಕಾರಣೀಭೂತ.- ಹೀಗೆಂದವರು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿರುವ ನಗರದ ನಿವಾಸಿ ಡಾ| ಎಸ್‌. ಆರ್‌. ಗುಂಜಾಳ. ಪೂರ್ಣ ಹೆಸರು ಶಿವಪುತ್ರಪ್ಪ ರಾಯಪ್ಪ ಗುಂಜಾಳ. ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯಲ್ಲಿ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಬೆಳಗಾವಿ ನಾಗನೂರು ಮಠದಲ್ಲಿ ಗ್ರಂಥಾಲಯ ಅಧಿಕಾರಿ ಆಗಿ ಸೇವೆಗೈದ ಗುಂಜಾಳ ಅವರು ಕವಿವಿ, ಕರ್ನಾಟಕ ಕಾಲೇಜು ಗ್ರಂಥಪಾಲಕರಾಗಿ ಹಾಗೂ ಗುಲ್ಬರ್ಗ ವಿವಿ ಗ್ರಂಥಾಲಯ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. 1983ರಲ್ಲಿ ಅಮೆರಿಕ ಹಾಗೂ ಕೆನಡಾ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಗ್ರಂಥಾಲಯ ವ್ಯವಸ್ಥೆಯನ್ನು ನಮ್ಮ ನಾಡಿನಲ್ಲಿ ಅಳವಡಿಸಿ ಸಫ‌ಲರಾದವರು ಡಾ| ಗುಂಜಾಳ. ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಓರ್ವ ಹೆಣ್ಣು ಮಗಳು ಇದ್ದಾರೆ. ಮಗಳು ಅಮೆರಿಕದಲ್ಲಿದ್ದರೆ, ಮಗ ನೇವಿಯಲ್ಲಿ ಕ್ಯಾಪ್ಟನ್‌ ಆಗಿ ದೇಶಸೇವೆಯಲ್ಲಿ ತೊಡಗಿದ್ದಾರೆ. ಮತ್ತೂಬ್ಬ ಪುತ್ರ ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೋಳಿವಾಡ ಗ್ರಾಮದಲ್ಲಿ 1932 ಜೂ. 25ರಂದು ರುದ್ರಮ್ಮಾ ಮತ್ತು ರಾಯಪ್ಪ ದಂಪತಿ ಮಗನಾಗಿ ಜನಿಸಿದರು. ಒಂದು ವರ್ಷ ಕಳೆದಿಲ್ಲ ಆಗಲೇ ತಂದೆ ಮರಣ ಕುಟುಂಬಕ್ಕೆ ಆಘಾತ ನೀಡಿತು. ತಂದೆಯ ಕೊರಗು ಇರದಿರಲಿ ಎಂಬ ಕಾರಣಕ್ಕೆ ತಾಯಿ ರುದ್ರಮ್ಮಾ ಬಹಳ ಪ್ರೀತಿಯಿಂದ ಮಗನನ್ನು ಸಲುಹಿದ್ದರೆ, ಸ್ನಾತಕೋತ್ತರ ಕನಸು ನನಸು ಮಾಡಲು ಶಿವಪುತ್ರಪ್ಪ ಅವರ ಪತ್ನಿ ತಾಳಿಯಲ್ಲಿನ ಬಂಗಾರ ಮಾರಿ ಹಣ ನೀಡಿದ್ದರು. ಇವರಿಬ್ಬರ ಆ ತ್ಯಾಗದ ಪರಿಣಾಮವೇ ಈಗ ಶಿಸ್ತುಬದ್ಧ ವೃತ್ತಿಯ ನಿವೃತ್ತಿಯ ನಂತರವೂ ಶಿಕ್ಷಣ, ಗ್ರಂಥಾಲಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವಂತಾಗಿದ್ದು, ಇದರೊಂದಿಗೆ ಶರಣ ಸಾಹಿತ್ಯದಲ್ಲೂ ಅಪಾರ ಸೇವೆ ಸಲ್ಲಿಸಿದ್ದಾರೆ.

ಚಿನ್ನದ ಪದಕ ವಿಜೇತರು: ಹುಟ್ಟೂರು ಕೋಳಿವಾಡದಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದ ಬಳಿಕ ಧಾರವಾಡದಲ್ಲಿ ಕಲಾ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆದರು. ನಂತರದಲ್ಲಿ ಗ್ರಂಥಾಲಯ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು, ಹೈದ್ರಾಬಾದ್‌ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುವ ತೀರ್ಮಾನ ಮಾಡಿದ್ದರು. ಆರ್ಥಿಕವಾಗಿ ಸಬಲರಾಗಿಲ್ಲದ ಕಾರಣ ಕನಸು ಕಮರುವ ಹೊತ್ತಿನಲ್ಲಿ ಆಸರೆಯಾಗಿದ್ದು ಬಾಳ ಸಂಗಾತಿ. ತನ್ನ ಕೊರಳಿನಲ್ಲಿದ್ದ ತಾಳಿಯಲ್ಲಿನ ಬಂಗಾರವನ್ನು ಮಾರಿ ಬಂದ ಹಣವನ್ನು ಇವರಿಗೆ ನೀಡಿ ಸ್ನಾತಕೊತ್ತರ ಶಿಕ್ಷಣದ ಕನಸು ನನಸಾಗುವಂತೆ ಮಾಡಿದರು. ಆ ಬಳಿಕ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉತ್ತಂಗಿ ಚನ್ನಪ್ಪ ಅವರ ಕುರಿತು ಸಲ್ಲಿಸಿದ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ವಿವಿ ಗೌರವ ಡಾಕ್ಟರೆಟ್‌ ಜೊತೆಗೆ ಬಂಗಾರದ ಪದಕ ನೀಡಿ ಗೌರವಿಸಿದೆ.

Advertisement

ಕೋಳಿವಾಡದಲ್ಲಿ ಶಿಕ್ಷಣ ಸೇವೆ: ಹುಟ್ಟೂರು ಕೋಳಿವಾಡದಲ್ಲಿ 25 ವರ್ಷಗಳ ಹಿಂದೆ ತಮ್ಮ ತಾಯಿ ಹೆಸರಿನಲ್ಲಿ ಶಾಲೆ ಆರಂಭಿಸಿದ್ದು, ಈಗ ಆ ಶಾಲೆ ಕಾಲೇಜು ಹಂತಕ್ಕೆ ಬಂದು ನಿಂತಿದೆ. ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವ ಈ ಶಾಲೆಯಲ್ಲಿ ಬಡ ಹಾಗೂ ದಲಿತ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ರುದ್ರಮ್ಮ ರಾಯಪ್ಪ ಗುಂಜಾಳ ಚಾರಿಟೇಬಲ್‌ ಟ್ರಸ್ಟ್‌ ಮೂಲಕ 310 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, 9 ಜನ ಶಿಕ್ಷಕರಿದ್ದಾರೆ. ಇದಲ್ಲದೇ ಈಗ ಬಡ ಮತ್ತು ದಲಿತ ವಿದ್ಯಾರ್ಥಿನಿಯರಿಗಾಗಿ ಪಿಯು ಕಾಲೇಜು ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆಗೆ ಪ್ರಶಸ್ತಿ ಲಭಿಸುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉತ್ತಮ ಗ್ರಂಥಾಲಯ ನಿರ್ಮಿಸಬೇಕಾಗಿದೆ. ಹೀಗಾಗಿ ಇಂಗ್ಲೆಂಡ್‌, ಅಮೆರಿಕ ಸೇರಿದಂತೆ ವಿಶ್ವದ ವಿವಿಧ ಗ್ರಂಥಾಲಯಗಳನ್ನು ಸುತ್ತಾಡಿದ್ದು, ಪಿಯು ಕಾಲೇಜನಲ್ಲಿ ಮಾದರಿ ಗ್ರಂಥಾಲಯ ನಿರ್ಮಿಸುವುದಾಗಿ ಹೇಳುತ್ತಾರೆ ಡಾ| ಗುಂಜಾಳ.

ಸಂದ ಪ್ರಶಸ್ತಿಗಳು: 1974 ಮತ್ತು 1976ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಸವ ಪಂಡಿತ ಪ್ರಶಸ್ತಿ, ಶರಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ, ಮೂಜಗಂ ಗೌರವ ಪ್ರಶಸ್ತಿ, ರಮಣಶ್ರೀ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿವೆ. 2011ರಲ್ಲಿ ಮಹಾಲಿಂಗಪುರದಲ್ಲಿ ನಡೆಚ ಪ್ರಥಮ ಡಾ| ಫ.ಗು. ಹಳಕಟ್ಟಿ ವಚನೋತ್ಸವ ಸಮ್ಮೇಳನ ಸರ್ವಾಧ್ಯಕ್ಷ, 2013ರಲ್ಲಿ ಶಿವಮೊಗ್ಗದಲ್ಲಿ ನಡೆದ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ 2014ರಲ್ಲಿ ವಿಜಯಪುರದಲ್ಲಿ ನಡೆದ 12ನೇ ಅಖೀಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ ಸಂದಿವೆ.

 

-ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next