Advertisement

ರಾಜ್ಯಪಾಲರಿಗೇ ಗಡುವು; ಇಂದು ಸಂಜೆಯೊಳಗೆ ಆಹ್ವಾನ ಕೊಡಿ ಎಂದ ಶಶಿಕಲಾ

03:45 AM Feb 13, 2017 | |

ಚೆನ್ನೈ/ನವದೆಹಲಿ: ತಮಿಳುನಾಡಿನಲ್ಲಾಗುತ್ತಿರುವ ಬೆಳವಣಿಗೆಗಳಿಗೆ ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಅವರ ವಿಳಂಬ ನೀತಿಯೇ ಕಾರಣ ಎಂದು ಹೇಳಿರುವ ಶಶಿಕಲಾ, ರಾಜ್ಯಪಾಲರಿಗೆ ಸೋಮವಾರ ಸಂಜೆಯ ಗಡುವು ವಿಧಿಸಿದ್ದಾರೆ. “ನಾವು ರಾಜ್ಯಪಾಲರಿಗೆ ಸೋಮವಾರ ಸಂಜೆಯ ಗಡುವು ವಿಧಿಸುತ್ತೇನೆ. ತದನಂತರವೂ ಸರ್ಕಾರ ರಚನೆಗೆ ಆಹ್ವಾನಿಸದಿದ್ದರೆ, ಮುಂದಿನ ಕ್ರಮದ ಬಗ್ಗೆ ಘೋಷಿಸುತ್ತೇವೆ’ ಎಂದಿದ್ದಾರೆ.

Advertisement

ಅತ್ತ, ಸೋಮವಾರ ಪನ್ನೀರ್‌ಸೆಲ್ವಂ ರೆಸಾರ್ಟ್‌ಗೆ ಪೊಲೀಸರನ್ನು ಕಳಿಸಿ ಅಲ್ಲಿರುವ ಶಾಸಕರನ್ನು ಬಿಡಿಸಲಿದ್ದಾರೆ ಎಂದೇ ಹಂಗಾಮಿ ಸಿಎಂ ಬೆಂಬಲಿಗ ದುರೈ ಪಾಂಡ್ಯನ್‌ ಹೇಳಿದ್ದಾರೆ. ಆದರೆ ಇದನ್ನು ತಳ್ಳಿಹಾಕಿರುವ ಪನ್ನೀರ್‌ಸೆಲ್ವಂ, “”ನನ್ನ ಬಳಿ ಪೊಲೀಸರೇನೋ ಇದ್ದಾರೆ, ಆದರೆ ಯಾವುದೇ ಅತಿರೇಕದ ಕ್ರಮಕ್ಕೆ ಮುಂದಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ ಮಾಜಿ ಸಿಎಂ ಜಯಲಲಿತಾ ಸಾವಿನ ಕುರಿತಂತೆ ಈಗಾಗಲೇ ತನಿಖೆಯ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮತ್ತೆ ರೆಸಾರ್ಟ್‌ಗೆ ಶಶಿಕಲಾ: ಭಾನುವಾರ ಮತ್ತೆ ಶಶಿಕಲಾ ನಟರಾಜನ್‌ ಅವರು ರೆಸಾರ್ಟ್‌ಗೆ ತೆರಳಿ, ಅಲ್ಲಿರುವ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ನನಗೆ 127 ಶಾಸಕರ ಬೆಂಬಲವಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಶಾಸಕರನ್ನು ಯಾರೂ ಕೂಡಿಹಾಕಿಲ್ಲ. ವಿರೋಧಿ ಬಣವು ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ. ಶಶಿಕಲಾ ನಟರಾಜನ್‌ ರೆಸಾರ್ಟಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಮಾತನಾಡಿದ ಹಂಗಾಮಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ, ಪ್ರತಿ ಶಾಸಕನಿಗೆ ನಾಲ್ವರು ಗೂಂಡಾಗಳು ಕಾವಲು ನಿಂತಿದ್ದಾರೆ. ಈ ಬಗ್ಗೆ ಶಾಸಕರ ಬೆಂಬಲಿಗರ ಮೂಲಕ ಮಾಹಿತಿ ಬಂದಿದೆ. ಹೆಚ್ಚಿನ ನಾಯಕರು ರಾಜಧಾನಿಯಲ್ಲಿಲ್ಲದಿದ್ದರೂ ಶಶಿಕಲಾ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಕುವತ್ತೂರಿನಲ್ಲಿರುವ ರೆಸಾರ್ಟಿಗೆ ಚಿನ್ನಮ್ಮ ಯಾಕೆ ಹೋಗಬೇಕಾಗಿತ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲಿರುವ ಶಾಸಕರು ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ ಎಂದು ಅವರು ಹೇಳಿದ್ದಾರೆ. ಧಿಜತೆಗೆ ಜನ ಮತಹಾಕಿದ್ದು, ಜಯಲಲಿತಾ ಅವರಿಗೇ ಹೊರತು, ಶಶಿಕಲಾ ಅವರಿಗಲ್ಲ ಎಂದು ತಿರುಗೇಟು ನೀಡಿದ್ದಾರೆ.  ಮತ್ತೂಂದು ಬೆಳವಣಿಗೆಯಲ್ಲಿ ಖುದ್ದು ಪನ್ನೀರ್‌ಸೆಲ್ವಂ ಅವರೇ ಸೋಮವಾರ ರೆಸಾರ್ಟ್‌ಗೆ ಹೋಗುವ ಸಾಧ್ಯತೆಗಳಿವೆ.

ಹೆಚ್ಚುತ್ತಿರುವ ಸೆಲ್ವಂ ಬಲ: ಇನ್ನೊಂದೆಡೆ, ಭಾನುವಾರ ಮತ್ತೆ ಐವರು ಸಂಸದರು ಸೆಲ್ವಂಗೆ ಬೆಂಬಲ ಸೂಚಿಸಿದ್ದು, ಹಂಗಾಮಿ ಸಿಎಂ ಪರ ನಿಂತ ಸಂಸದರ ಸಂಖ್ಯೆ ಇದೀಗ 10ಕ್ಕೇರಿದಂತಾಗಿದೆ. ಪಕ್ಷವು ಲೋಕಸಭೆಯಲ್ಲಿ 37 ಸದಸ್ಯರನ್ನು ಹೊಂದಿದ್ದು, ಇತ್ತೀಚಿನವರೆಗೂ ಎಲ್ಲರೂ ಶಶಿಕಲಾ ಪರವೇ ನಿಂತಿದ್ದರು. ಆದರೆ, ಶನಿವಾರ ಶಿಕ್ಷಣ ಸಚಿವ ಪಾಂಡ್ಯರಾಜನ್‌ ಅವರು ಸೆಲ್ವಂಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ, ಸಂಸದರಾದ ಪಿ ಆರ್‌ ಸುಂದರಂ, ಕೆ ಅಶೋಕ್‌ ಕುಮಾರ್‌, ಸತ್ಯಭಾಮ ಮತ್ತು ಆರ್‌ ವನರೋಜಾ ಕೂಡ ಹಂಗಾಮಿ ಸಿಎಂಗೆ ನಿಷ್ಠೆ ಬದಲಿಸಿದ್ದರು. ಭಾನುವಾರ ಮತ್ತೆ ಸೆಲ್ವಂಗೆ ಐವರು ಸಂಸದರಾದ ಬಿ ಸೆಂಗುಟ್ಟುವನ್‌, ಜಯಸಿಂಘ… ತ್ಯಾಗರಾಜ್‌ ನಟ್ಟೆರ್ಜಿ, ಆರ್‌ ಪಿ ಮಾರುತರಾಜ, ಆರ್‌ ಲಕ್ಷ್ಮಣನ್‌(ರಾಜ್ಯಸಭೆ), ರಾಜೇಂದ್ರನ್‌ ಮತ್ತು ಶಾಸಕಿ ಪಿ ವಿಜಯಲಕ್ಷ್ಮಿ ಪಳನಿಸಾಮಿ ಬೆಂಬಲ ಘೋಷಿಸಿದ್ದಾರೆ.

ಈ ಬೆಳವಣಿಗೆಯ ಬೆನ್ನಲ್ಲೇ ಶಶಿಕಲಾ ಅವರು ಲಕ್ಷ್ಮಣನ್‌ರನ್ನು ಜಿಲ್ಲಾ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಿ, ಅವರ ಸ್ಥಾನಕ್ಕೆ ಕಾನೂನು ಸಚಿವ ಷಣ್ಮುಗಂರನ್ನು ನೇಮಕ ಮಾಡಿದ್ದಾರೆ. ಬೆಂಬಲಿಗ ಸಂಸದರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಪನ್ನೀರ್‌ಸೆಲ್ವಂ ಅವರು ಶಾಸಕರ ಪೈಕಿ ಈವರೆಗೆ 6 ಮಂದಿ ಬೆಂಬಲವನ್ನಷ್ಟೇ ಪಡೆದಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕೆಂದರೆ ಅವರಿಗೆ 118 ಮಂದಿಯ ಬೆಂಬಲ ಬೇಕೇ ಬೇಕು.

Advertisement

ಮಹಿಳೆಯಾಗಿದ್ದಕ್ಕೆ ಕಷ್ಟ: ಇದಕ್ಕೂ ಮೊದಲು, ಪೋಯೆಸ್‌ ಗಾರ್ಡನ್‌ ಹೊರಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಶಶಿಕಲಾ, “”ಒಬ್ಬ ಮಹಿಳೆಗೆ ರಾಜಕೀಯದಲ್ಲಿರುವುದು ಬಹಳ ಕಷ್ಟ. ಜಯಲಲಿತಾ ಅವರೂ ಇಂಥದ್ದೇ ಕಷ್ಟವನ್ನು ಅನುಭವಿಸಿದ್ದರು,” ಎಂದು ಹೇಳಿದ್ದರು. ಜತೆಗೆ, ಜಯಾ ಅವರಿಗೆ ನಾನು ಬರೆದಿದ್ದೆ ಎಂದು ಹೇಳಿ ಪನ್ನೀರ್‌ಸೆಲ್ವಂ ಅವರು ಬಿಡುಗಡೆ ಮಾಡಿದ ಪತ್ರ ನಕಲಿ. ನಾನು ಅಂತಹ ಪತ್ರ ಬರೆದೇ ಇಲ್ಲ ಎಂಬ ಸ್ಪಷ್ಟನೆಯನ್ನೂ ಅವರು ನೀಡಿದ್ದರು.

ನಾನು, ನಿಮ್ಮ ಪನ್ನೀರ್‌ಸೆಲ್ವಂ
ಎಐಎಡಿಎಂಕೆ ಐಟಿ ಘಟಕವು ಪನ್ನೀರ್‌ಸೆಲ್ವಂ ಪರ ಭರ್ಜರಿ ಅಭಿಯಾನವೊಂದನ್ನು ಆರಂಭಿಸಿದೆ. ಸ್ವತಃ ಪನ್ನೀರ್‌ಸೆಲ್ವಂ ಅವರ ಧ್ವನಿಯಿರುವ ವಾಯ್ಸ ಮೆಸೇಜ್‌ ಅನ್ನು ತಮಿಳರಿಗೆ ರವಾನಿಸಲಾಗುತ್ತಿದೆ. “ನಾನು, ನಿಮ್ಮ ಪನ್ನೀರ್‌ಸೆಲ್ವಂ ಕರೆ ಮಾಡುತ್ತಿದ್ದೇನೆ. ನನಗೆ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ’ ಎಂಬ ಸಂದೇಶವಿರುವ 38 ಸೆಕೆಂಡುಗಳ ವಾಯ್ಸ ಮೆಸೇಜ್‌ಗಳನ್ನು ರಾಜ್ಯಾದ್ಯಂತ ಕಳುಹಿಸಲಾಗುತ್ತಿದೆ. ಸೆಲ್ವಂ ಬಣವು ಬಂಡಾಯವೆದ್ದ ಬೆನ್ನಲ್ಲೇ ಐಟಿ ಘಟಕವು ಮಿಸ್ಡ್ ಕಾಲ್‌ ಅಭಿಯಾನ ಕೈಗೊಂಡಿತ್ತು. ಇದಕ್ಕೆ ಎರಡೇ ದಿನದಲ್ಲಿ ತಮಿಳುನಾಡಿನ ಹೊರಗಿಂದ 2.5 ಲಕ್ಷ, ವಿದೇಶಗಳಿಂದ 1.5 ಕರೆಗಳು ಬಂದಿದ್ದವು.

ಎಐಎಡಿಎಂಕೆ ಆಸ್ತಿ ಜಗಳ
ಪಕ್ಷದಲ್ಲಿ ಬಿಕ್ಕಟ್ಟು ಆರಂಭವಾದ ಬಳಿಕ, ಸೆಲ್ವಂ ಬಣಕ್ಕೆ ಸೇರಿರುವ ಅಧ್ಯಕ್ಷ ಮಧುಸೂದನ್‌ ಮತ್ತು ಕಾನೂನು ಘಟಕದ ಮುಖ್ಯಸ್ಥ ದುರೈ ಪಾಂಡಿಯನ್‌ ಅವರು ಪಕ್ಷದ ಆಸ್ತಿಯನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಜತೆಗೆ, ಪನ್ನೀರ್‌ಸೆಲ್ವಂ ಅವರೂ ಬ್ಯಾಂಕ್‌ ಆಫ್ ಇಂಡಿಯಾ ಶಾಖೆಗೆ ಪತ್ರ ಬರೆದು, ನನ್ನ ಅನುಮತಿಯಿಲ್ಲದೇ ಪಕ್ಷದ ಖಾತೆಯಲ್ಲಿ ಯಾವುದೇ ವಹಿವಾಟು ನಡೆಸಬೇಡಿ ಎಂದು ಕೇಳಿಕೊಂಡಿದ್ದಾರೆ.
– ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಂತೆ ಪಕ್ಷದ ಒಟ್ಟು ಆಸ್ತಿ ಮೌಲ್ಯ- 224 ಕೋಟಿ ರೂ.
– 2015-16ರ ಒಟ್ಟಾರೆ ಆದಾಯ- 54.93 ಕೋಟಿ ರೂ.
– ಈ ಪೈಕಿ ತೆರಿಗೆ ವಿನಾಯ್ತಿ ಪಡೆದ ಮೊತ್ತ- 54.16 ಕೋಟಿ ರೂ.
– ಅತಿ ಹೆಚ್ಚು ಆದಾಯ ಬಂದಿದ್ದು- ಅರ್ಜಿಗಳ ಮಾರಾಟ ಹಾಗೂ ಠೇವಣಿ ಮೇಲಿನ ಬಡ್ಡಿಯಿಂದ
– 2015-16ರಲ್ಲಾದ ಒಟ್ಟಾರೆ ವೆಚ್ಚ- 7.09 ಕೋಟಿ

ಶೆಲ್‌ ಕಂಪನಿಗಳ ಜಾಲದಲ್ಲಿ ಶಶಿಕಲಾ
ಇದೀಗ ಶೆಲ್‌ ಕಂಪನಿಗಳು, ಅಕ್ರಮ ಗಣಿಗಾರಿಕೆ ಜಾಲದಲ್ಲೂ ಶಶಿಕಲಾಗೆ ನಂಟಿತ್ತೇ ಎಂಬ ಅನುಮಾನಗಳು ಶುರುವಾಗಿವೆ. ಶಶಿಕಲಾ ಕುಟುಂಬವು 2002ರಲ್ಲಿ ವೈಕುಠರಾಜನ್‌ ಎಂಬ ಮರಳು ಉದ್ಯಮಿ ಜತೆ ಸೇರಿ ಆರಂಭಿಸಿದ ಎ ವಲ್ಡ್‌ ರಾಕ್‌ ಪ್ರೈ.ಲಿ. ಕಂಪನಿಯು ಹಲವು ಅಕ್ರಮಗಳನ್ನು ಎಸಗುತ್ತಿತ್ತು. ಆದರೂ, ಶಶಿಕಲಾರ ರಾಜಕೀಯ ಪ್ರಭಾವದಿಂದಾಗಿ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲ, ಕಳೆದ 15 ವರ್ಷಗಳಿಂದಲೂ ಈ ಕಂಪನಿಯು ತನ್ನ ಆದಾಯವನ್ನು ಶೂನ್ಯವೆಂದು ತೋರಿಸಿಕೊಳ್ಳುತ್ತಿದೆ. ಇದರ ಜತೆಗೆ ಇನ್ನೂ 12 ಶೆಲ್‌ ಕಂಪನಿಗಳನ್ನು ಶಶಿಕಲಾ ಸಂಬಂಧಿಕರಾದ ವಿ.ಎಸ್‌.ಶಿವಕುಮಾರ್‌ ಮತ್ತು ಕಾರ್ತಿಕೇಯನ್‌ ಕಾಲಿಯಾಪೆರುಮಾಳ್‌ ಆರಂಭಿಸಿದ್ದಾರೆ ಎನ್ನಲಾಗಿದೆ.

ಕುದುರೆ ವ್ಯಾಪಾರ ಆಗುವ ಸಾಧ್ಯತೆ ಇರುವುದರಿಂದ ಪ್ರಮಾಣ ವಚನ ಸ್ವೀಕಾರವನ್ನು ರಾಜ್ಯಪಾಲರು ಅನಿರ್ದಿಷ್ಟಾವಧಿಗೆ ಮುಂದೂಡಲು ಸಾಧ್ಯವಿಲ್ಲ. ಒಂದೆರಡು ದಿನದಲ್ಲಿ ಶಶಿಕಲಾ ವಿರುದ್ಧದ ಅಕ್ರಮ ಆಸ್ತಿ ಕೇಸಿನ ತೀರ್ಪು ಪ್ರಕಟವಾಗುತ್ತದೆ. ಆಗದಿದ್ದರೆ, ತಡಮಾಡದೇ ಬಹುಮತ ಸಾಬೀತಿಗೆ ಅವಕಾಶ ನೀಡಲೇಬೇಕಾಗುತ್ತದೆ.
– ಸೋಲಿ ಸೊರಾಬ್ಜಿ, ಮಾಜಿ ಅಟಾರ್ನಿ ಜನರಲ್‌

ಸರ್ಕಾರ ರಚನೆ ಕುರಿತು ರಾಜ್ಯಪಾಲರು ಸೋಮವಾರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ, ಕುದುರೆ ವ್ಯಾಪಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರ ವಿರುದ್ಧವೇ ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಬೇಕಾಗುತ್ತದೆ.
– ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ರಾಜ್ಯಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next