ಗುವಾಹಟಿ: ಕೆಕೆಆರ್ ಮತ್ತು ರಾಜಸ್ಥಾನ್ ನಡುವಿನ ಭಾನುವಾರ ನಡೆಯಬೇಕಾಗಿದ್ದ ಪಂದ್ಯ ಟಾಸ್ ಬಳಿಕ ಒಂದೂ ಎಸೆತ ಕಾಣದೆ ರದ್ದಾಗಿದೆ. ಇದರಿಂದಾಗಿ ಮುಂದಿನ ಹಂತದ ಸ್ಪಷ್ಟ ಚಿತ್ರಣ ಲಭ್ಯವಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಿರಂತರ ಸುರಿದ ಮಳೆ ಪಂದ್ಯಕ್ಕೆ ಅವಕಾಶ ನೀಡಲಿಲ್ಲ. ಮಳೆ ನಿಂತ ಬಳಿಕ ಗ್ರೌಂಡ್ಸ್ಟಾಫ್ ಆಟವನ್ನು ನಡೆಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ ಹವಾಮಾನವು ಮಳೆಯೊಂದಿಗೆ ಮುಂದುವರಿದ ಕಾರಣ ಆಟ ಸಾಧ್ಯವಾಗದೆ ಪಂದ್ಯ ರದ್ದು ಮಾಡಬೇಕಾಯಿತು.
ಈ ಫಲಿತಾಂಶದಿಂದ ಎರಡನೇ ಸ್ಥಾನಕ್ಕೆ ಏರುವ ರಾಜಸ್ಥಾನ್ ಕನಸು ನನಸಾಗಲಿಲ್ಲ 17 ಅಂಕ ಹೊಂದಿದ್ದರೂ ನಿವ್ವಳ ರನ್ ರೇಟ್ನಿಂದಾಗಿ(+0.273) ಮೂರನೇ ಸ್ಥಾನದಲ್ಲೇ ಉಳಿಯಿತು. ಹೈದರಾಬಾದ್ 17 ಅಂಕ ಹೊಂದಿ +0.414 ರನ್ ರೇಟ್ ಹೊಂದಿದೆ.
ಮೇ 21 ರಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆಗ್ರ ಸ್ಥಾನಿ ಕೆಕೆಆರ್ ಮತ್ತು ಹೈದರಾಬಾದ್ ಮುಖಾಮುಖಿಯಾಗಲಿದೆ.
ಮೇ 22 ರಂದು ಅಹಮದಾಬಾದ್ ನಲ್ಲೆ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ಯು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಮೇ 24 ರಂದು ಚೆನ್ನೈನಲ್ಲಿ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದ್ದು, ಮೇ 26 ರಂದು ಚೆನ್ನೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.