ಜೈಸಲ್ಮೇರ್: ರಾಜಸ್ಥಾನದ ಕಾಂಗ್ರೆಸ್ ಸರಕಾರದ ನೂತನ ಸಚಿವ ಸಲೆಹ್ ಮೊಹಮ್ಮದ್ ಅವರು ಭಾನುವಾರ ಪೋಖ್ರಾಣ್ನಲ್ಲಿರುವ ಶಿವ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಧಾರ್ಮಿಕ ಭಾವೈಕ್ಯತೆ ಮೆರೆದಿದ್ದಾರೆ.
ಅಚ್ಚರಿಯೆಂದರೆ, ಮುಸ್ಲಿಂ ಧಾರ್ಮಿಕ ನಾಯಕರಾಗಿರುವ ಗಾಝಿ ಫಕೀರ್ ಅವರ ಪುತ್ರನಾಗಿರುವ ಮೊಹಮ್ಮದ್ ಅವರ ನಡೆ ಆ ಭಾಗದ ಜನರಿಗೆ ಅಚ್ಚರಿಗೆ ಕಾರಣವಾಯಿತು.
ಚುನಾವಣೆಗೂ ಮುನ್ನ ಮೊಹಮ್ಮದ್ ಅವರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದ್ದರು ಎಂದು ದೇಗುಲದ ಅರ್ಚಕ ಮಧು ಚಂಗಾನಿ ಅವರು ಹೇಳಿದ್ದಾರೆ.
ದೇಗುಲಕ್ಕೆ ಆಗಮಿಸಿದ ಮೊಹಮ್ಮದ್ ಅವರು ಅಭಿಷೇಕ ನೆರವೇರಿಸಿದರು. ಶಿವಲಿಂಗಕ್ಕೆ ಹಾಲು ಮತ್ತು ಜೇನನ್ನು ಸುರಿದು ಭಕ್ತ ಭಾವ ಮೆರೆದರು.
ಈ ಬಾರಿಯ ಚುನಾವಣೆಯಲ್ಲಿ ಪೋಖ್ರಾಣ್ ಕ್ಷೇತ್ರ ಧಾರ್ಮಿಕ ಜಿದ್ದಾಜಿದ್ದಿಗೆ ಸಾಕ್ಷಿಯಾಗಿತ್ತು. ಮೊಹಮ್ಮದ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ ಬಿಜೆಪಿಯಿಂದ ತಾರಾತಾರ ಮಠದ ನಾಯಕ ಸ್ವಾಮಿ ಪ್ರತಾಪ್ ಪುರಿ ಅವರು ಕಣದಲ್ಲಿದ್ದರು. ಅಂತಿಮವಾಗಿ ಜಯ ಮೊಹಮ್ಮದ್ ಅವರಿಗೆ ಒಲಿದಿತ್ತು.