Advertisement

ಪೋಹಣಕರ್‌ಗೆ ರಾಜಗುರು ರಾಷ್ಟ್ರೀಯ ಪ್ರಶಸ್ತಿ ಪ್ರದಾನ

09:17 AM Aug 25, 2019 | Suhan S |

ಧಾರವಾಡ: ಪಂ| ಬಸವರಾಜ ರಾಜಗುರು ಜನ್ಮದಿನಾಚರಣೆ ಅಂಗವಾಗಿ ಸ್ವರಸಾಮ್ರಾಟ್ ಪಂ| ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ನಗರದ ಸೃಜನಾ ರಂಗಮಂದಿರದಲ್ಲಿ 2019ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಶನಿವಾರ ಜರುಗಿತು.

Advertisement

ಪೊಲೀಸ್‌ ಆಯುಕ್ತ ಆರ್‌. ದಿಲೀಪ ಅವರು 1 ಲಕ್ಷ ನಗದು ಒಳಗೊಂಡ ಪ್ರಸಕ್ತ ಸಾಲಿನ ರಾಷ್ಟ್ರೀಯ ಪ್ರಶಸ್ತಿಯನ್ನು ಮುಂಬೈಯ ಪಂ| ಅಜಯ್‌ ಪೋಹಣಕರ್‌ ಅವರಿಗೆ ಪ್ರದಾನ ಮಾಡಿದರು. ತಲಾ 25 ಸಾವಿರ ನಗದು ಒಳಗೊಂಡ ಯುವ ಪ್ರಶಸ್ತಿಯನ್ನು ಪುಣೆಯ ಸಾವನಿ ಶೇಂಡೆ ಹಾಗೂ ಬಾಗಲಕೋಟೆಯ ಕೇಶವ ಜೋಶಿ ಅವರಿಗೆ ನೀಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಪಂ| ಅಜಯ್‌ ಪೋಹಣಕರ್‌ ಮಾತನಾಡಿ, ಮಹಾನ್‌ ಗಾಯಕರ ಹೆಸರಿನಲ್ಲಿ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ. ಪ್ರಶಸ್ತಿ ನೀಡಿದ ಟ್ರಸ್ಟ್‌ ಹಾಗೂ ಸರ್ಕಾರಕ್ಕೆ ಅಭಿನಂದನೆ. ಸಂಗೀತ ಕ್ಷೇತ್ರದಲ್ಲಿ ದಿಗ್ಗಜರಾಗಿದ್ದ ಪಂ| ರಾಜಗುರು ಅವರನ್ನು 1960ರಲ್ಲಿ ಭೇಟಿ ಮಾಡಿದ್ದೆ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಪಂ| ರಾಜಗುರು ಅವರ 100ನೇ ಜನ್ಮದಿನವನ್ನು ರಾಜ್ಯದ ಎಲ್ಲ ಕಡೆಗಳಲ್ಲಿ ಆಚರಿಸಲು ಚಿಂತಿಸಲಾಗಿದೆ. ಯುವ ಕಲಾವಿದರು ಈ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು ಎಂದರು.

ಟ್ರಸ್ಟ್‌ ಸದಸ್ಯರಾದ ಭಾರತಿದೇವಿ ರಾಜಗುರು, ಡಾ| ಮುದ್ದುಮೋನ, ಡಾ| ಉದಯಕುಮಾರ ದೇಸಾಯಿ, ಡಾ| ಜಿ.ಎಂ. ಹೆಗಡೆ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಸ್ವಾಗತಿಸಿದರು. ನಿಜಗುಣ ರಾಜಗುರು ಪ್ರಾಸ್ತಾವಿಕ ಮಾತನಾಡಿದರು. ರವಿ ಕುಲಕರ್ಣಿ ನಿರೂಪಿಸಿದರು.

Advertisement

ಪ್ರಶಸ್ತಿ ಪ್ರದಾನದ ನಂತರ ಪ್ರಶಸ್ತಿ ಪುರಸ್ಕೃತರಾದ ಪಂ| ಅಜಯ್‌ ಪೋಹಣಕರ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ಯುವ ಪ್ರಶಸ್ತಿ ವಿಜೇತ ಕಲಾವಿದರಾದ ಸಾವಣಿ ಶೇಂಡೆ ಪುಣೆ ಮತ್ತು ಕೇಶವ ಜೋಶಿ ಗಾಯನ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next