Advertisement

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

01:02 PM Jul 19, 2024 | Team Udayavani |

ರಾಜ್‌ ಬಿ ಶೆಟ್ಟಿ ಮಾತಿಗೆ ಸಿಕ್ಕರೆ ಯಾವುದೇ ಹಮ್ಮು-ಬಿಮ್ಮು ಇಲ್ಲದೇ ನಿರರ್ಗಳವಾಗಿ ಮಾತನಾಡುತ್ತಾರೆ. ಪ್ರತಿ ವಿಚಾರದ ಕುರಿತು ತುಂಬಾ ಆಳವಾಗಿ ಹಾಗೂ ಅಷ್ಟೇ ಸೂಕ್ಷ್ಮವಾಗಿ ಮಾತನಾಡುವ ಚಾಕಚಕ್ಯತೆ ಶೆಟ್ರದ್ದು. ಒಂಥರಾ ಫಿಲ್ಟರ್‌ಲೆಸ್‌ ಮಾತು. ಅದೇ ಕಾರಣದಿಂದ ಅವರನ್ನು ಇಷ್ಟಪಡುವ ದೊಡ್ಡ ವರ್ಗವೇ ಇದೆ. ಕನ್ನಡ ಚಿತ್ರರಂಗ, ಪ್ರೇಕ್ಷಕರ ಮನಸ್ಥತಿ, ಎಡವಿದ ಹಾದಿ, ತಿದ್ದಿ ಮೇಲೇಳುವ ಸೂತ್ರ.. ಹೀಗೆ ರಾಜ್‌ ಹಲವು ಸಂಗತಿಗಳನ್ನು ಮಾತನಾಡಿದ್ದಾರೆ. ಅದನ್ನು ಅವರ ಮಾತಲ್ಲೇ ಕೇಳಿ…

Advertisement

1 ಮಲಯಾಳಂನಲ್ಲಿ ಹೊಸಬರ ಸಿನಿಮಾಗಳು ಹಿಟ್‌ ಆಗುತ್ತವೆ ಎನ್ನುತ್ತೇವೆ. ಆದರೆ, ಅದರ ಹಿಂದಿನ ತಂಡವನ್ನು ನಾವು ಗಮನಿಸಬೇಕು. “ಆವೇಶಂ’ ಚಿತ್ರವನ್ನು ಗಮನಿಸಿದರೆ, ಆ ಚಿತ್ರಕ್ಕೆ ದುಡಿದ ತಂತ್ರಜ್ಞರೆಲ್ಲಾ ಹೆಸರು ಮಾಡಿದವರು. ಅವರ ಜೊತೆಗೆ ಫ‌ಹಾದ್‌ ಫಾಜಿಲ್‌ ಸಹ ಇದ್ದಾರೆ. ಹಾಗಾಗಿ, ಸಿನಿಮಾ ಗೆಲುವು, ಸೋಲು ನಂತರದ ಮಾತು. ಆರಂಭಿಕವಾಗಿ ಒಂದಿಷ್ಟು ಪ್ರೇಕ್ಷಕರು ಬರುತ್ತಾರೆ. “ಪ್ರೇಮಲು’ ಚಿತ್ರದಲ್ಲಿ ಹೊಸಬರು ಕೆಲಸ ಮಾಡಿದ್ದಾರೆ ಎಂಬುದು ಮಾತ್ರ ನಮಗೆ ಕಾಣುತ್ತದೆ. ಅದರ ಹಿಂದೆ, ಒಂದು ನುರಿತ ತಂಡ ಇದೆ. ಜನಪ್ರಿಯ ತಂತ್ರಜ್ಞರು, ನಿರ್ಮಾಪಕರು ಆ ಚಿತ್ರದ ಹಿಂದಿದ್ದಾರೆ. ಕನ್ನಡದಲ್ಲಿ “ಕಾಟೇರ’ ಆಯ್ತು ನೋಡಿ, ಆ ತರಹ. ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ, ಕಥೆಗಾರ, ಸಂಗೀತ ನಿರ್ದೇಶಕ ಎಲ್ಲರೂ ಸೇರಬೇಕು. ಆ ತರಹದ ಒಗ್ಗಟ್ಟು ಹೆಚ್ಚಾದಾಗ ಒಂದು ಚಿತ್ರಕ್ಕೆ ಅನುಕೂಲವಾಗುತ್ತದೆ. ಚಿತ್ರ ಮಾರಾಟ ಮಾಡುವುದು ಸುಲಭವಾಗುತ್ತದೆ.

2 ಕೆಜಿಎಫ್ ನಂತರ ನಮ್ಮಲ್ಲಿ ವರ್ಷಕ್ಕೆ ಒಂದೋ, ಎರಡೋ ದೊಡ್ಡ ಚಿತ್ರಗಳು ಮಾತ್ರ ಬಿಡುಗಡೆಯಾಗುತ್ತಿವೆ. ಇದರಿಂದ ಚಿತ್ರಮಂದಿರಗಳಿಗೆ ಕಷ್ಟವಾಗಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಪ್ರೇಕ್ಷಕರಿಗೂ ತಾವು ಇಷ್ಟಪಟ್ಟಿದ್ದು ನೋಡೋಕೆ ಸಿಗುತ್ತಿಲ್ಲ. ಇದರಿಂದ ಚಿತ್ರಮಂದಿರ ಸಂಸ್ಕೃತಿ ಮಿಸ್‌ ಆಗುತ್ತಿದೆ. ಪ್ರಮುಖವಾಗಿ ಪ್ರೇಕ್ಷಕರನ್ನು ನಿರಂತರವಾಗಿ ಕರೆಸಿಕೊಳ್ಳುವ ಕೆಲಸವಾಗಬೇಕು. ಬರೀ ದೊಡ್ಡ ದೊಡ್ಡ ಚಿತ್ರಗಳನ್ನು ಮಾಡೋದಕ್ಕೆ ಹೋಗಿ ವಿಳಂಬವಾಗುತ್ತಿದೆ. ಅದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆ ಮಲಯಾಳಂನಲ್ಲೂ ಆಗಿತ್ತು. ಆದರೆ, ಅವರು ಸರಿ ಮಾಡಿಕೊಂಡರು. ಅಲ್ಲಿ ಚಿತ್ರೀಕರಣ ಮುಗಿದ ಮೂರು ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುತ್ತದೆ.‌ ಗುಣಮಟ್ಟ ಎಷ್ಟು ಮುಖ್ಯವೋ, ಅದನ್ನು ಎಷ್ಟು ಬೇಗ ಮಾಡುತ್ತೀವೋ ಅದು ಸಹ ಬಹಳ ಮುಖ್ಯ.

3 ಯಾವುದೇ ಸಿನಿಮಾಕ್ಕಾಗಲೀ ಪ್ರಮುಖವಾಗಿ ಪ್ಲಾನಿಂಗ್‌ ಮುಖ್ಯ. ಅಬ್ರಹಾಂ ಲಿಂಕನ್‌ಗೆ ಯಾರೋ ಹೇಳಿದರಂತೆ. ನಾಲ್ಕು ಗಂಟೆ ಕೊಡುತ್ತೀನಿ, ಅಷ್ಟರಲ್ಲಿ ಗಿಡ ಕತ್ತರಿಸಬೇಕು ಎಂದರಂತೆ. ಅದಕ್ಕೆ ಒಪ್ಪುವ ಅವರು, ಮೂರು ತಾಸು ಕತ್ತಿ ಶಾರ್ಪ್‌ ಮಾಡಿ, ಒಂದು ತಾಸಿನಲ್ಲಿ ಗಿಡ ಕತ್ತರಿಸುತ್ತಾರೆ. ನಾವು ಈ ನಿಟ್ಟಿನಲ್ಲಿ ಯೋಚಿಸಬೇಕು. ಚಿತ್ರೀಕರಣಕ್ಕೆ ಹೋದ ಮೇಲೆ ಪ್ರತಿ ನಿಮಿಷವೂ ದುಡ್ಡೇ. ಅದಕ್ಕೇ, ಮೊದಲು ನಾವು ಚೆನ್ನಾಗಿ ತಯಾರಿ ಮಾಡಿಕೊಂಡಿರಬೇಕು. ಪ್ರತಿ ವಿವರವನ್ನು ಬರೆದಿಟ್ಟುಕೊಂಡರೆ, ಆಗ ಕೆಲಸ ಸುಲಭ.

Advertisement

4 ಜನರಿಗೆ ಇಷ್ಟವಾಗುವ ಸಿನಿಮಾ ಮಾಡಬೇಕು. ಅದು ಬಿಟ್ಟು ಕನ್ನಡ ಭಾಷೆಯ ಚಿತ್ರಗಳನ್ನು ಪ್ರೇಕ್ಷಕರು ನೋಡುತ್ತಿಲ್ಲ ಎಂದು ಆರೋಪ ಮಾಡುತ್ತಿರುವುದು, ದೊಡ್ಡ ಅಪರಾಧ. ಸಿನಿಮಾ ಚೆನ್ನಾಗಿರಬೇಕು, ಅದೊಂದೇ ಮಾನದಂಡ. ನಾವು ಸಿನಿಮಾ ಸಂಸ್ಕೃತಿ ಬೆಳೆಸಿಲ್ಲ. ಅದು ನಮ್ಮ ತಪ್ಪು. ನಮ್ಮ ತಪ್ಪನ್ನು ಅವರ ಮೇಲೆ ಹಾಕಬಾರದು. ನಾನು ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಒಂದು ಚಿತ್ರ ಚೆನ್ನಾಗಿಲ್ಲ ಎಂದರೆ, ಚೆನ್ನಾಗಿಲ್ಲ ಎಂದೇ ಹೇಳಬೇಕು. ಕನ್ನಡ ಚಿತ್ರ ಎಂಬ ಕಾರಣಕ್ಕೆ ಚೆನ್ನಾಗಿದೆ ಎಂದರೆ ಮೋಸ ಮಾಡಿದ ಹಾಗಾಗುತ್ತದೆ.

5 ಸಿನಿಮಾಕ್ಕೆ ಜನ ಬರುತ್ತಿಲ್ಲ ಎಂದು ನಾವು ಹೇಳುತ್ತೇವೆ. ಆದರೆ, ನಾವು ಹೋಗುತ್ತಿರುವ ದಾರಿ ತಪ್ಪಾಗಿರಬಹುದು. ಅದನ್ನು ಪ್ರೇಕ್ಷಕರು ಪದೇಪದೇ ಹೇಳುತ್ತಿದ್ದಾರೆ. ಅವರ ಮಾತನ್ನೊಮ್ಮೆ ಕೇಳ್ಳೋಣ. ಅವರನ್ನು ಸುಮ್ಮನೆ ಬೈಯ್ಯುವುದು ಬೇಡ. ಅವರು ಬರುತ್ತಿಲ್ಲ ಅಂದರೆ ಯಾಕೆ ಎಂದು ಅರ್ಥ ಮಾಡಿಕೊಳ್ಳಬೇಕು. ಅದೇ ಜನ “ಕಲ್ಕಿ’ ನೋಡುತ್ತಿದ್ದಾರೆ. ಇನ್ಯಾವುದೋ ಮಲಯಾಳಂ ಸಿನಿಮಾ ನೋಡುತ್ತಿದ್ದಾರೆ. ಒಳ್ಳೆಯ ಸಿನಿಮಾ ಅಂತನಿಸಿದರೆ ನೋಡುತ್ತಾರೆ. ನಮ್ಮ ಸಿನಿಮಾ ನೋಡುತ್ತಿಲ್ಲ ಎಂದರೆ, ಏನೋ ದೋಷ ಇರಬೇಕು. ಕೆಲವು ಕೆಟ್ಟ ಸಿನಿಮಾಗಳಿಂದ ಒಂದು ಒಳ್ಳೆಯ ಸಿನಿಮಾ ಸೋಲುವುದುಂಟು. ಅದನ್ನು ಸಂಘಟಿತವಾಗಿ ಅನುಭವಿಸಬೇಕು. ಒಟ್ಟಿಗೆ ನಿಂತು ಹೋರಾಡಿ, ಒಳ್ಳೆಯ ಸಿನಿಮಾಗಳನ್ನು ಕೊಡೋಣ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next