Advertisement

ಪ್ರಜೆಗಳಿಗೆ ರಾಜಭವನ ಮುಕ್ತ

06:15 AM Aug 17, 2018 | Team Udayavani |

ಬೆಂಗಳೂರು: ಹದಿನೈದು ದಿನಗಳ ಮಟ್ಟಿಗೆ “ಪ್ರಜೆ’ಗಳಿಗೆ “ರಾಜ’ಭವನ ಮುಕ್ತವಾಗಲಿದೆ. ಹೌದು! ಆ.16ರಿಂದ 31ರವರೆಗೆ ರಾಜಭವನಕ್ಕೆ ಭೇಟಿ ನೀಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಮಾಡಿಕೊಡಲಾಗಿದೆ.

Advertisement

ರಾಜ್ಯ ಸರ್ಕಾರದ ಸಂವಿಧಾನ ಮುಖ್ಯಸ್ಥರಾದ ರಾಜ್ಯಪಾಲರ ಕಾರ್ಯ ಮತ್ತು ಆವಾಸ ಸ್ಥಾನ ಆಗಿರುವ ರಾಜಭವನ “ಹೈ ಸೆಕ್ಯೂರಿಟಿ’ ಪ್ರದೇಶಗಳಲ್ಲೊಂದು. ಸಾರ್ವಜನಿಕರ ಪ್ರವೇಶ, ಭೇಟಿ ಮತ್ತು ಸಂದರ್ಶನಕ್ಕೆ ಇಲ್ಲಿ ಮುಕ್ತ ಅವಕಾಶ ಇರುವುದಿಲ್ಲ.
ಆದರೆ, ಸಾಮಾನ್ಯ ಜನರಲ್ಲಿ ರಾಜಭವನದ ಕುರಿತು ಇರುವ ಕುತೂಹಲ ತಣಿಸಲು, ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಈ ರಾಜಭವನ ಎಂಬ ಪಾರಂಪರಿಕ ಕಟ್ಟಡ ವೈಭವ ಕಣ್ಣಾರೆ ಕಂಡು ಸಂಭ್ರಮಪಟ್ಟುಕೊಳ್ಳಲು ಅವಕಾಶ ಮಾಡಿಕೊಡಲು ಈಗಿನ ರಾಜ್ಯಪಾಲ ವಜುಭಾಯಿ ವಾಲಾ ಮುಂದಾಗಿದ್ದಾರೆ. ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಸಾರ್ವಜನಿಕ ಪ್ರವೇಶಕ್ಕೆ ಮುಕ್ತ ಅವಕಾಶ ಮಾಡಿಕೊಡುತ್ತಿರುವುದು ರಾಜಭವನದ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

ಗುರುವಾರ ರಾಜಭವನದ ಗಾಜಿನಮನೆಯಲ್ಲಿ ವಿಶೇಷ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯಪಾಲ ವಜುಭಾಯಿ ವಾಲಾ, ರಾಜಭವನ ದರ್ಶನಕ್ಕೆ ಹದಿನೈದು ದಿನಗಳ ಸಾರ್ವಜನಿಕರಿಗೆ ಮುಕ್ತ ಅವಕಾಶ ಮಾಡಿಕೊಡಲಾಗುತ್ತಿದೆ. ಇದೊಂದು ವಿನೂತನ ಪ್ರಯತ್ನವಾಗಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೆಂಗಳೂರಿನಗ ನಾಗರಿಕರಲ್ಲಿ ಮನವಿ ಮಾಡಿದರು.

ಆ.16ರಿಂದ 31ರವರೆಗೆ ಒಟ್ಟು 15 ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರಲಿದೆ. ಈ ಅವಧಿಯಲ್ಲಿ ಸಂಜೆ 4ರಿಂದ 7.30ರ ತನಕ ರಾಜಭವನಕ್ಕೆ ಭೇಟಿ ಕೊಡಬಹುದು. ಆನ್‌ಲೈನ್‌ನಲ್ಲಿ ನೊಂದಾಯಿಸಿಕೊಂಡವರ ಪೈಕಿ ಪ್ರತಿ ದಿನ 350ರಿಂದ 400 ಮಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗುವುದು. 20 ಮಂದಿಯ ಒಂದು ಗುಂಪು ಮಾಡಿ ಇಡೀ ರಾಜಭವನ ಸುತ್ತಾಡಿಸಲಾಗುವುದು. ಇದಕ್ಕಾಗಿ ಮಾಗದರ್ಶಕರನ್ನು (ಗೈಡ್‌) ನೇಮಕ ಮಾಡಲಾಗಿದೆ. ಜನರಿಂದ ಬೇಡಿಕೆ ವ್ಯಕ್ತವಾದರೆ ಭೇಟಿಯ ದಿನಗಳನ್ನು ವಿಸ್ತರಿಸುವ ಬಗ್ಗೆ ಚಿಂತಿಸಲಾಗುವುದು. ಜತೆಗೆ ಸದ್ಯ ವರ್ಷದಲ್ಲಿ ಒಂದು ಬಾರಿ ಈ ಅವಕಾಶ ಮಾಡಿಕೊಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅವಶ್ಯಕತೆ ಕಂಡು ಬಂದಲ್ಲಿ ವರ್ಷದಲ್ಲಿ 2 ಬಾರಿ ಈ ರೀತಿಯ ವ್ಯವಸ್ಥೆ ಮಾಡಲು ರಾಜಭವನ ಸಿದ್ಧವಿದೆ ಎಂದು ವಾಲಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next