Advertisement

ಭೂಮಿಯ ದಾಹ; ತಣಿಸುವ ಮೋಹ

09:36 PM Mar 28, 2019 | Sriram |

ವಿಶೇಷ ವರದಿ – ಉಡುಪಿ: ಬೇಸಗೆ ಬಂದಾಗ ನೀರಿನ ಸಮಸ್ಯೆ ಕಾಡುವುದು ಇಂದು ನಿನ್ನೆಯ ಸಂಗತಿಯಲ್ಲ. ಆ ಕ್ಷಣಕ್ಕೆ ಹೀಗೆ ಮಾಡಬಹುದಿತ್ತಲ್ಲ ಅನ್ನುವ ಯೋಚನೆ ಬಂದರೂ ಅದು ಆ ಯೋಚನೆ ಯೋಜನೆಯಾಗುವ ಹೊತ್ತಿಗೆ ಮಳೆರಾಯ ಸುರಿದು ನೀರೊದಗಿಸುತ್ತಾನೆ. ಬಳಿಕ ನೀರಿನ ನೆನಪಾಗುವುದು ಮುಂದಿನ ಬೇಸಗೆಗೆ! ಇದು ಬಹುತೇಕ ಕಡೆ ಇರುವಂತಹ ನೈಜ ಸತ್ಯ.

Advertisement

ಈ ಸಾಲಿನಲ್ಲಿ ಕಲ್ಯಾಣಪುರದ ಜೋಸೆಫ್ ಜಿ.ಎಂ. ರೆಬೆಲ್ಲೊ ತುಸು ಭಿನ್ನವಾಗಿ ನಿಲ್ಲುತ್ತಾರೆ. ಬಂಟಕಲ್ಲು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಚಾಲಕರಾಗಿರುವ ಇವರು ಬಿಡುವಿನ ಸಂದರ್ಭದಲ್ಲಿ ಭೂಮಿ ದಾಹ ತಣಿಸುವ ಪರಿಸರ ಪ್ರೇಮಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.

ತೆರೆದ ಬಾವಿ ಹಾಗೂ ಕೊಳವೆ ಬಾವಿಗೆ ಮಳೆ ನೀರನ್ನು ಇಂಗಿಸುವ ಕಾಯಕಕ್ಕೆ ಯುವಕರನ್ನು ಪ್ರೇರೇಪಿಸುತ್ತಿದ್ದಾರೆ. ಸಂಘ-ಸಂಸ್ಥೆಗಳು, ಶಾಲಾ- ಕಾಲೇಜುಗಳು, ಜಿ.ಪಂ., ತಾ.ಪಂಗಳಲ್ಲೂ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗ ವಹಿಸಿ ಜಲಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ರಾಜ್ಯಾದ್ಯಂತ ಮಾಹಿತಿ ನೀಡುವ ಕೆಲಸ ಎಂಟು ವರ್ಷಗಳಿಂದ ಅವರು ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಈ ಬಗ್ಗೆ ಮಾಹಿತಿ ನೀಡುವ ಕೆಲಸವನ್ನೂ ಇವರು ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 250ಕ್ಕೂ ಅಧಿಕ ಕಡೆ ಜಲ ಮರುಪೂರಣವನ್ನು ಇವರು ನಡೆಸಿದ್ದಾರೆ. ಪವರ್‌ಪಾಯಿಂಟ್‌, ಪೈಂಟಿಂಗ್‌ ಚಿತ್ರಗಳು, ಪ್ರಾತ್ಯಕ್ಷಿಕೆಗಳ ಮೂಲಕ ಇವರು ಜನರಲ್ಲಿ ಜಾಗೃತಿ ಮೂಡಿಸಿ ಜಲಪ್ರೇಮ ಬೆಳೆಸುತ್ತಿದ್ದಾರೆ.

ಜನವರಿಯಿಂದ ಮೇ ಸೂಕ್ತ ಸಮಯ
ಜಲಮರುಪೂರಣ ಆರಂಭಿಸಲು ಜನವರಿಯಿಂದ ಮೇ ತಿಂಗಳವರೆಗೆ ಉತ್ತಮ ಕಾಲ. ಈ ಸಮಯದಲ್ಲೇ ಸಕಲ ಸಿದ್ಧತೆ ಮಾಡಿಕೊಂಡರೆ ಮಳೆಗಾಲಕ್ಕೆ ವ್ಯವಸ್ಥಿತವಾಗಿ ನೀರು ಶೇಖರಿಸಿಡಬಹುದು ಎನ್ನುತ್ತಾರೆ ಅವರು.

Advertisement

ಬಾಲ್ಯದಿಂದಲೇ ಪರಿಸರ ಪ್ರೀತಿ
ಬಾಲ್ಯದಿಂದಲೇ ಪರಿಸರ ಪ್ರೇಮ ಇವರಿಗೆ ರಕ್ತಗತವಾಗಿತ್ತು. ಸ್ವತ್ಛತೆ, ಅರಣ್ಯೀಕರಣ, ಗ್ರಾಮೀಣಾಭಿವೃದ್ಧಿ, ಜಲಮರುಪೂರಣದ ಬಗ್ಗೆ ಇವರು ನಿರರ್ಗಳವಾಗಿ ಮಾಹಿತಿ ನೀಡುತ್ತಾರೆ. ಇಲ್ಲಿಯವರೆಗೆ 1 ಲಕ್ಷಕ್ಕೂ ಅಧಿಕ ಮಂದಿಗೆ ತರಬೇತಿ ನೀಡಿದ ಕೀರ್ತಿ ಇವರದ್ದಾಗಿದೆ.

ನೀರಿನ ಪ್ರಾಮುಖ್ಯ
ಒಂದಿಷ್ಟು ನೀರನ್ನು ಮುಖಕ್ಕೆ ಚಿಮುಕಿಸಿದಾಗ ಚೇತರಿಸಿಕೊಳ್ಳುತ್ತೇವೆ. ಇಷ್ಟೊಂದು ಮಹತ್ವ ಪೂರ್ಣವಾದ ಶಕ್ತಿ ನೀರಿಗಿದೆ. ಆಕಸ್ಮಿಕವಾಗಿ ಎಲ್ಲಿಯಾದರೂ ಬೆಂಕಿ ಅವಗಢ ಸಂಭವಿಸಿದ ಸಂದರ್ಭಗಳಲ್ಲಿ ಬೆಂಕಿ ನಂದಿಸಲು ನೀರೇ ಪ್ರಮುಖವಾಗಿರುತ್ತದೆ. ಇಷ್ಟೇ ಅಲ್ಲದೆ ನಾವು ದಿನ ನಿತ್ಯ ಬಳಸುವ ವಸ್ತುಗಳು ಸಹಿತ ವಿದ್ಯುತ್‌ಗೂ ನೀರೇ ಮೂಲವಾಗಿದೆ. ಡ್ಯಾಂಗಳಲ್ಲಿ ಸಂಗ್ರಹಿಸಿಟ್ಟ ಈ ಮಳೆ ನೀರಿನಿಂದಲೇ ವಿದ್ಯುತ್‌ ಉತ್ಪಾದನೆಯಾಗುತ್ತಿದೆ.

ಮಳೆ ನೀರು ಇಂಗಿಸುವಿಕೆಯ ಲಾಭಗಳು
ಇದು ಪರಿಸರ ಸ್ನೇಹಿ ತಂತ್ರಜ್ಞಾನವಾಗಿದ್ದು ಕಡಿಮೆ ಖರ್ಚಿನಲ್ಲಿ ನಿರ್ವಹಿಸಬಹುದು. ಭೂಮಿಯ ತಾಪಮಾನ ಕಾಪಾಡಲು ಇದು ಸಹಕಾರಿ. ಭೂಮಿಯ ಮೇಲ್ಮಟ್ಟದಲ್ಲೇ ಸದಾ ನೀರು ದೊರಕುತ್ತದೆ. ಭೂಗರ್ಭದಲ್ಲಿ ಉತ್ತಮ ಗುಣಮಟ್ಟದ ನೀರು ಸಂಗ್ರಹಣೆಯಾಗಿ ನೀರಿನ ಸಮಸ್ಯೆ ನಿವಾರಿಸಲು ಇದು ಸಹಕಾರಿಯಾಗುತ್ತದೆ.

ಹೀಗೆ ಶೇಖರಿಸಿ
1. ಬೆಳಕು, ಗಾಳಿ ಹೋಗದಂತೆ ಸೀಲ್‌ ಮಾಡಿ ಮಳೆನೀರನ್ನು ಶೇಖರಿಸಿ ಇಡಬೇಕು.
2. ತೆರೆದ ಬಾವಿಗೂ ಮಳೆನೀರು ಹರಿಸಬಹುದು.
3.ಮಳೆನೀರಿನ ಸಂಪರ್ಕವನ್ನೂ ಬೋರ್‌ವೆಲ್‌ಗೆ ಕೊಡುವ ಕೆಲಸವನ್ನೂ ಮಾಡಬಹುದು.
4.2000ರೂ.ನಿಂದ 24ಸಾವಿರ ರೂ. ವಿನಿಯೋಗಿಸಿದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬಹುದು.

ಜಾಗೃತಿ ಅಗತ್ಯ
ಪ್ರತಿಯೊಬ್ಬರೂ ಹಿತಮಿತವಾಗಿ ನೀರು ಬಳಸಿ ಇತರರಿಗೂ ಸಿಗುವಂತೆ ಮಾಡಬೇಕು. ಕಲುಷಿತ ನೀರನ್ನು ಪುನರ್‌ಬಳಕೆ ಮಾಡಿದರೆ ಸಾಕಷ್ಟು ಉಪಯೋಗವಾಗಬಹುದು. ನೀರಿನ ಮರುಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಪರಿಸರನಾಶ, ಪರಿಸರ ಮಾಲಿನ್ಯ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು ಇದನ್ನು ಅಚ್ಚುಕಟ್ಟಾಗಿ ಪಾಲಿಸಿದರೆ ಮಾತ್ರ ಪರಿಸರ ಉಳಿಯಲು ಸಾಧ್ಯ.
– ಜೋಸೆಫ್ ಜಿ.ಎಂ.ರೆಬೆಲ್ಲೊ,

Advertisement

Udayavani is now on Telegram. Click here to join our channel and stay updated with the latest news.

Next