Advertisement

ಹುಯ್ಯೋ ಹುಯ್ಯೋ ಮಳೆರಾಯ

07:40 AM Jun 21, 2019 | Suhan S |

ಧಾರವಾಡ: ಬೀಸುವ ಗಾಳಿಯೊಡನೆ ಹಾರಿ ಹೋಗುತ್ತಿರುವ ಮೋಡಗಳು.. ಹಕ್ಕಿ ಆರಿಸಿಕೊಳ್ಳಲು ಒಂದು ಕಾಳು ಇರದಂತೆ ಸ್ವಚ್ಛವಾಗಿ ಹಂಗಾಮಿಗೆ ಹದ ಮಾಡಿಟ್ಟ ಯರಿ ಭೂಮಿ… ಒಣ ಬಿತ್ತಿಗೆಯಾದ ಭೂಮಿಯಲ್ಲಿ ಮೊಳಕೆಯೊಡಲು ಒದ್ದಾಡುತ್ತಿರುವ ಬಿತ್ತಿದ ಬೀಜಗಳು.. ಇನ್ನು ಮಳೆಯಾದರೂ ಬಿತ್ತುವಂತಿಲ್ಲ.. ಬಿತ್ತಿದರೆ ಮತ್ತಷ್ಟು ಹೊರೆ ಎನ್ನುತ್ತಿರುವ ಅನ್ನದಾತರು.. ಒಟ್ಟಿನಲ್ಲಿ ಜಿಲ್ಲೆಯ ರೈತರಿಗೆ ಮತ್ತೂಂದು ಬರದ ಬರೆಯ ಅನುಭವವಾಗುತ್ತಿದೆ.

Advertisement

ಕಾರ ಹುಣ್ಣಿಮೆಗೆ ಮಲೆನಾಡಿನ ರೈತರು ತಮ್ಮ ಭತ್ತದ ಹೊಲದಲ್ಲಿ ಮಣ್ಣಿನ ಗಡಗಿ(ಬೆಚ್ಚು) ಇಟ್ಟು ಭೂ ನಮನ ಸಲ್ಲಿಸಬೇಕಿತ್ತು. ಇನ್ನು ಕರಿಭೂಮಿಯ ಬೆಳವಲದವರ ಹೊಲದಲ್ಲಿ ಶೇಂಗಾ, ಉದ್ದು, ಹೆಸರು, ಆಲುಗಡ್ಡೆ, ಜೋಳ ಸೇರಿ ಎಂಟಕ್ಕೂ ಹೆಚ್ಚು ಬೆಳೆಗಳು ರಂಗೋಲಿ ಹಾಕಿದಂತೆ ಮೊಳಕೆಯೊಡೆಯಬೇಕಿತ್ತು. ಆದರೆ ಎಲ್ಲವೂ ಮಳೆರಾಯನ ಅವಕೃಪೆಯಾಗಿ ಕಾರ ಹುಣ್ಣಿಮೆ ಮುಗಿದು ಮಣ್ಣೆತ್ತಿನ ಅಮಾವಾಸ್ಯೆ ಸಮೀಪಿಸಿದ್ದು, ಇನ್ನು ಮಳೆಯಾದರೂ ರೈತರು ಹಿಡಿ ಕಾಳನ್ನು ಕೂಡ ಹೊಲಗಳಲ್ಲಿ ಹಾಕುವುದಿಲ್ಲ. ಹೀಗಾಗಿ ಈ ವರ್ಷದ ಮುಂಗಾರಿ ಬೆಳೆ ಕಥೆ ಹೆಚ್ಚು ಕಡಿಮೆ ಇಲ್ಲಿಗೆ ಮುಗಿದಂತೆಯೇ.

ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದು ರೈತರು ಭೂಮಿಯನ್ನು ಬಿತ್ತನೆಗೆ ಹದ ಮಾಡಿಕೊಂಡಿದ್ದಾರೆ. ಜೂ. 15ರ ವರೆಗೂ ಉತ್ತಮ ಮಳೆಯಾಗಿದ್ದರೂ ಸಾಕಾಗಿತ್ತು ರೈತರು ದೇವರನ್ನು ನಂಬಿ ಭೂಮಿಗೆ ಬೀಜ ಬಿತ್ತುತ್ತಿದ್ದರು. ಆದರೆ ಇದೀಗ ಜೂ. 20 ದಾಟಿದ ಮೇಲೆ ಮುಂಗಾರಿ ಬಿತ್ತನೆ ಮಾಡಿದರೆ, ಅಕ್ಟೋಬರ್‌ನಲ್ಲಿ ಬಿತ್ತನೆಯಾಗುವ ಹಿಂಗಾರು ಬೆಳೆಗಳಿಗೂ ಇದು ಅಡ್ಡಿಯಾಗುತ್ತದೆ. ಹೀಗಾಗಿ ರೈತರು ಮುಂಗಾರಿ ಬೀಜ ಬಿತ್ತನೆಯಿಂದ ಹಿಂದೆ ಸರಿಯುತ್ತಿದ್ದಾರೆ.

ಅರೆಮಲೆನಾಡಿಗೆ ಬಂದ ಸೋಯಾ-ಗೊಂಜಾಳ: ಜಿಲ್ಲೆಯಲ್ಲಿ 2,57,899 ಹೆಕ್ಟೇರ್‌ ಭೂ ಪ್ರದೇಶವಿದ್ದು ಮುಂಗಾರಿನಲ್ಲಿ ಭತ್ತ, ಸೋಯಾಬಿನ್‌, ಶೇಂಗಾ, ಹೆಸರು, ಉದ್ದು, ಆಲುಗಡ್ಡೆ, ಜೋಳ, ಮೆಣಸಿನಕಾಯಿ, ಹತ್ತಿ ಬೆಳೆಯಲಾಗುತ್ತಿತ್ತು. ಆದರೆ ಮುಂಗಾರು ಮಳೆ ವಿಳಂಬವಾಗಿದ್ದರಿಂದ ಬಿತ್ತನೆ ಪ್ರಮಾಣ ಅತೀ ಕಡಿಮೆಯಾಗಿದೆ. ಈ ವರೆಗೂ ಜಿಲ್ಲೆಯಲ್ಲಿ ಒಟ್ಟು 2,487 ಕ್ವಿಂಟಲ್ನಷ್ಟು ಬೀಜ ವಿತರಣೆಯನ್ನು ಕೃಷಿ ಇಲಾಖೆ ಮಾಡಿದೆ. 1,19,026 ಟನ್‌ ಗೊಬ್ಬರದ ದಾಸ್ತಾನು ಕೂಡ ಇದ್ದು ರೈತರು ಕೊಂಡುಕೊಂಡಿದ್ದಾರೆ.

Advertisement

ಈ ವರೆಗೂ ಪಶ್ಚಿಮಘಟ್ಟದ ಸೆರಗಿನುದ್ದಕ್ಕೂ ಉತ್ತಮ ಮಳೆಯಾಗುತ್ತಿದ್ದರಿಂದ ಇಲ್ಲಿ ದೇಶಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷದಿಂದ ಇಲ್ಲಿ ಕಡಿಮೆ ಮಳೆಯಾಗುತ್ತಿರುವುದರಿಂದ ಬಯಲು ಸೀಮೆಯಲ್ಲಿ ಕಡಿಮೆ ಮಳೆ ಆಧಾರಿತವಾಗಿ ಬೆಳೆಯಲಾಗುತ್ತಿದ್ದ ಸೋಯಾ ಅವರೆ ಮತ್ತು ಗೋವಿನಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ವರ್ಷ ಕೂಡ ಜಿಲ್ಲೆಯಲ್ಲಿ ಈ ವರೆಗೂ ಬಿತ್ತನೆಯಾದ ಬೆಳೆಗಳ ಪೈಕಿ ಶೇ.40 ಬರೀ ಸೋಯಾ ಮತ್ತು ಗೋವಿನಜೋಳವೇ ಬಿತ್ತನೆಯಾಗಿದೆ. ಧಾರವಾಡ, ಕಲಘಟಗಿ ತಾಲೂಕಿನಲ್ಲಿ ದೇಶಿ ಭತ್ತಕ್ಕೆ ಪರ್ಯಾಯವಾಗಿ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೋಯಾ ಮತ್ತು ಗೋವಿನಜೋಳದ ಬೀಜ ಬಿತ್ತನೆ ಮಾಡಿದ್ದಾರೆ. ಕಡಿಮೆ ಮಳೆ ಮತ್ತು ಅತೀ ಬೇಗವಾಗಿ ಬೆಳೆದು ನಿಲ್ಲುವ ದೊಡಗ್ಯಾ, ಚಂಪಾಕಲಿ ಮತ್ತು ಸಾಳಿ ಭತ್ತದ ತಳಿಯನ್ನೇ ರೈತರು ಆಯ್ಕೆ ಮಾಡಿಕೊಂಡು ಬಿತ್ತನೆ ಮಾಡಿದರೂ ಮಳೆ ಕೊರತೆ ಎದುರಾಗಿದ್ದರಿಂದ ಆ ಬೆಳೆಗಳು ಸರಿಯಾಗಿ ಹುಟ್ಟಿಲ್ಲ.

ಜಾನುವಾರು ಮೇವು ತಲೆನೋವು: ಮುಂಗಾರು ಚುರುಕುಗೊಳ್ಳುವ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಮುಂಗಾರು ವಿಳಂಬ ಜಾನುವಾರುಗಳಿಗೆ ಮೇವಿನ ಕೊರತೆಯ ಆತಂಕವನ್ನುಂಟು ಮಾಡಿದೆ. ರೈತರು ಈಗಾಗಲೇ ತಮ್ಮ ಜಾನುವಾರುಗಳನ್ನು ರಸ್ತೆ, ಹೊಲದ ಬದುಗಳಲ್ಲಿ ಮೇಯಿಸುತ್ತಿದ್ದಾರೆ. ಮುಂಗಾರಿನಲ್ಲಿ ಭತ್ತ, ಸೋಯಾ ಅವರೆ, ಶೇಂಗಾ ಹೊಟ್ಟು, ಜಾನುವಾರುಗಳಿಗೆ ಉತ್ತಮ ಮೇವಾಗುತ್ತದೆ. ಆದರೆ ಮುಂಗಾರು ಕೈ ಕೊಟ್ಟರೆ ರೈತರಿಗೆ ಮೇವಿನ ಕೊರತೆ ಉಂಟಾಗಲಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಆರು ಕಡೆ ಮೇವು ಬ್ಯಾಂಕ್‌ ಇದ್ದು ಇನ್ನಷ್ಟು ಮೇವು ಬ್ಯಾಂಕ್‌ ಹೆಚ್ಚಿಸುವ ಅನಿವಾರ್ಯತೆ ಜಿಲ್ಲಾಡಳಿತದ ಮುಂದಿದೆ.

 

•ಬಸವರಾಜ ಹೊಂಗಲ್

Advertisement

Udayavani is now on Telegram. Click here to join our channel and stay updated with the latest news.

Next