Advertisement

ನಗರದಲ್ಲಿ ಅವಾಂತರ ಸೃಷ್ಟಿಸಿದ ವರ್ಷಧಾರೆ

12:31 PM Apr 04, 2018 | Team Udayavani |

ಬೆಂಗಳೂರು: ನಗರದಲ್ಲಿ ಸತತ ನಾಲ್ಕೈದು ದಿನಗಳಿಂದ ಸುರಿಯುತ್ತಿದ್ದ ಮಳೆ, ಮಂಗಳವಾರ ವಿರಾಮ ನೀಡಿತು. ಆದರೆ, ಹಿಂದಿನ ದಿನದ ಮಳೆ ಅವಾಂತರದ ಬಿಸಿ ಜನರಿಗೆ ಬೆಳಗ್ಗೆ ಕೂಡ ತಟ್ಟಿತು. ಮಳೆ ರಭಸಕ್ಕೆ ಆರ್‌.ಟಿ.ನಗರ, ಸಹಕಾರನಗರ, ರಾಜಾಜಿನಗರ 5ನೇ ಬ್ಲಾಕ್‌, ಸುಲ್ತಾನ್‌ಪಾಳ್ಯದಲ್ಲಿ ಮರ ನೆಲಕಚ್ಚಿದವು. ಒಂದೆರಡು ಕಡೆ ಮರಗಳ ತೆರವುಗೊಳಿ ಸುವಲ್ಲಿ ತಡವಾಗಿದ್ದರಿಂದ ಸಂಚಾರ ದಟ್ಟಣೆ ಜತೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಿ ಜನ ಪರದಾಡಿದರು.

Advertisement

ಆರ್‌.ಟಿ.ನಗರದ 5ನೇ ಮುಖ್ಯರಸ್ತೆಯಲ್ಲಿ ಧರೆಗುರುಳಿದ ಬೃಹದಾಕಾರದ ಮರವನ್ನು ಮಂಗಳವಾರ ಬೆಳಿಗ್ಗೆವರೆಗೂ
ತೆರವುಗೊಳಿಸಿರಲಿಲ್ಲ. ಈ ಮರವು ವಿದ್ಯುತ್‌ ಲೈನ್‌ ಮೇಲೆ ಬಿದ್ದಿದ್ದರಿಂದ ಬಡಾವಣೆಯಲ್ಲಿ ಗಂಟೆಗಟ್ಟಲೆ ವಿದ್ಯುತ್‌ ಸಂಪರ್ಕ ಇರಲಿಲ್ಲ. ಸ್ಥಳೀಯರು ದೂರು ನೀಡಿದ ತುಸು ಹೊತ್ತಿನ ನಂತರ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ
ದುರಸ್ತಿಗೊಳಿಸಿದರು. ಈ ಮಧ್ಯೆ ನಗರದಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಏಪ್ರಿಲ್‌ 4 ಮತ್ತು 5ರಂದು ಗುಡುಗುಸಹಿತ ಹಾಗೂ 6ರಿಂದ 8ರವರೆಗೆ ಹಗುರವಾದ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

ಆಲಿಕಲ್ಲು ಮಳೆಗೆ 77ಹೆಕ್ಟೇರ್‌ ಬೆಳೆ ನಾಶ 
ಕೋಲಾರ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ 77 ಹೆಕ್ಟೇರ್‌ ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳು ನಾಶವಾಗಿದ್ದು, ಸುಮಾರು 40 ಲಕ್ಷ ರೂ. ನಷ್ಟ ಸಂಭವಿಸಿದೆ. ಮಾ. 30 ರಂದು ಕೋಲಾರ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಯಿಂದಾಗಿ ಕೋಲಾರ, ಮಾಲೂರು ಹಾಗೂ ಶ್ರೀನಿವಾಸಪುರ ತಾಲೂಕು ಗಳಲ್ಲಿ ಬೆಳೆಗಳಿಗೆ ಹಾನಿ ಸಂಭವಿಸಿದ್ದು, ಬೆಳೆ ಹಾನಿಯಿಂದ 94 ರೈತರು ನಷ್ಟ ಅನುಭವಿಸಿದ್ದಾರೆ. ಮಾಲೂರು ತಾಲೂಕಿನ ಕಸಬಾ ಹೋಬಳಿ ಸೊಣ್ಣಹಳ್ಳಿ, ಪಿಚ್ಚಗುಂಟ್ರಹಳ್ಳಿ, ಗುಂಡನಹಳ್ಳಿ, ಮಾದನಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಗೆ ಭಾರಿ ಹಾನಿಯಾಗಿದೆ.

 ತಾಲೂಕಿನ 10 ಮಂದಿ ರೈತರು, ಮಾಲೂರು ತಾಲೂಕಿನ 46 ಮಂದಿ ರೈತರು ಹಾಗೂ ಶ್ರೀನಿವಾಸಪುರ ತಾಲೂಕಿನ 38 ರೈತರು ಸೇರಿದಂತೆ ಒಟ್ಟು 94 ಮಂದಿ ರೈತರ ಬೆಳೆ ಹಾನಿಯಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next