Advertisement

ಕರಾವಳಿಯಲ್ಲಿ ಉತ್ತಮ ಮಳೆ 

10:43 PM May 12, 2022 | Team Udayavani |

ಮಂಗಳೂರು/ಉಡುಪಿ/ ಸುಳ್ಯ, ಮೇ 12: “ಅಸಾನಿ’ ಚಂಡಮಾರುತದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ದಿನವಿಡೀ ಜಿಟಿ ಜಿಟಿ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗಿತ್ತು.

Advertisement

ಸುಳ್ಯ ತಾಲೂಕಿನಲ್ಲಿ ಗುರುವಾರವೂ ಮಳೆ ಮುಂದುವರಿದಿದೆ. ಬುಧವಾರ ರಾತ್ರಿ, ಗುರುವಾರ ದಿನವಿಡೀ ಮಳೆಯಾಗಿದೆ. ಸುಳ್ಯ ನಗರ, ಜಾಲೂÕರು, ಗುತ್ತಿಗಾರು, ಅರಂತೋಡು, ಸುಬ್ರಹ್ಮಣ್ಯ, ಸಂಪಾಜೆ, ಐವರ್ನಾಡು, ಬೆಳ್ಳಾರೆ, ಪಂಜ, ಬಿಳಿನೆಲೆ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು ಸೇರಿದಂತೆ ವಿವಿಧೆಡೆ ನಿರಂತರ ಉತ್ತಮ ಮಳೆಯಾಗಿದೆ.

ದೊಡ್ಡತೋಟ-ಮರ್ಕಂಜ ರಸ್ತೆಯ ಹೈದಂಗೂರು ಎಂಬಲ್ಲಿ ಬುಧವಾರ ಗೇರು ಬೀಜದ ಮರ ರಸ್ತೆಗೆ ಬಿದ್ದ ಘಟನೆ ನಡೆದಿದೆ. ಸ್ಥಳೀಯರು ಕಾರ್ಯಚರಣೆ ನಡೆಸಿ ತೆರವು ಕಾರ್ಯ ನಡೆಸಿದರು. ಘಟನೆಯಲ್ಲಿ ವಿದ್ಯುತ್‌ ತಂತಿಗೂ ಹಾನಿಯಾಗಿದೆ.

ಉಡುಪಿ, ಮಣಿಪಾಲ ಸೇರಿದಂತೆ ಜಿಲ್ಲೆಯಲ್ಲಿ ಆಗಾಗ ಸಣ್ಣದಾಗಿ ಮಳೆ ಹನಿದಿದೆ. ಕಳೆದ ಎರಡು ದಿನಗಳಿಂದ ದ.ಕ. ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ವಾತಾವರಣ ತಂಪಾಗಿದ್ದು, ಗರಿಷ್ಠ ಉಷ್ಣಾಂಶದಲ್ಲಿ ವಾಡಿಕೆಗಿಂತ 7 ಡಿ.ಸೆ. ಇಳಿಮುಖಗೊಂಡಿದೆ. ಐಎಂಡಿ ಮಾಹಿತಿಯಂತೆ ಮಂಗಳೂರಿನಲ್ಲಿ ಗುರವಾರದಂದು 27.6 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 7 ಡಿ.ಸೆ. ಕಡಿಮೆ ಇತ್ತು. 23.3 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2 ಡಿ.ಸೆ. ಕಡಿಮೆ ಇತ್ತು.

ಇಂದು “ಎಲ್ಲೋ ಅಲರ್ಟ್‌’ :

Advertisement

ರಾಜ್ಯ ಕರಾವಳಿ ಬಾಗದಲ್ಲಿ ಮೇ 13ರಂದು ಬಿರುಸಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ “ಎಲ್ಲೋ ಅಲರ್ಟ್‌’ ಘೊಷಿಸಿದೆ. ಈ ವೇಳೆ ಗಾಳಿಯಿಂದ ಕೂಡಿದ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದೆ.

ಉಡುಪಿ ನಗರದ ಸುತ್ತಮುತ್ತ ಬುಧವಾರ ತಡರಾತ್ರಿ, ಗುರುವಾರ ಸಣ್ಣದಾಗಿ ಮಳೆಯಾಗಿದೆ. ಇಡೀ ದಿನ ಮೋಡ ಕವಿದ ವಾತಾವರಣದೊಂದಿಗೆ ಉಡುಪಿ, ಮಣಿಪಾಲ, ಮಲ್ಪೆ, ಪರ್ಕಳ ಭಾಗದಲ್ಲಿ ಬಿಟ್ಟುಬಿಟ್ಟು ಹನಿಹನಿ ಮಳೆ ಸುರಿದಿದೆ. ಮೇ 14ರ ವರೆಗೂ ಮಳೆ ವಾತಾವರಣ ಮುಂದುವರಿಯಲಿದೆ ಕೇಂದ್ರ ಹವಾಮಾನ ಇಲಾಖೆ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next