Advertisement

Rain ಕರಾವಳಿಯಾದ್ಯಂತ ಉತ್ತಮ ಮಳೆ: ಮರಬಿದ್ದು ವಿದ್ಯುತ್‌ ವ್ಯತ್ಯಯ

11:13 PM Jun 25, 2024 | Team Udayavani |

ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ಮುಂಗಾರು ಚುರುಕು ಪಡೆದುಕೊಂಡಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ.

Advertisement

ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಜೂ. 26 ಮತ್ತು 27ರಂದು “ಆರೆಂಜ್‌ ಅಲರ್ಟ್‌’ ಮತ್ತು ಜೂ.28, 29 ರಂದು “ಎಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಈ ವೇಳೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

ಬಿರುಗಾಳಿಗೆ ಮರ ಧರೆಗೆ
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನಡುಮೊಗರು ಶಾಲಾ ಬಳಿ ಬಿರುಗಾಳಿಗೆ ಮರಗಳು ರಸ್ತೆಗೆ ಉರುಳಿ ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.

ಇದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಅದಾಗಲೇ ಶಾಲೆ ಬಿಟ್ಟಿದ್ದರಿಂದ ರಸ್ತೆಯಲ್ಲಿ ಪ್ರಯಾಣಿಕರು ಯಾರೂ ಇರಲಿಲ್ಲ. ಸನಿಹ ವಿದ್ಯುತ್‌ ಕಂಬಗಳಿದ್ದರೂ ಅದಕ್ಕೆ ಹಾನಿಯಾಗದಿರುವುದರಿಂದ ಸಂಭಾವ್ಯ ಅಪಾಯ ತಪ್ಪಿದೆ.

ಕಲ್ಲಡ್ಕ: ವಿದ್ಯುತ್‌ ಕಂಬ ಬಿದ್ದು ಟ್ರಾಫಿಕ್‌ ಜಾಮ್‌
ಬಂಟ್ವಾಳ: ಕಲ್ಲಡ್ಕ ಸಮೀಪದ ಕೃಷ್ಣಕೋಡಿ ಬಳಿ ಸೋಮವಾರ ತಡರಾತ್ರಿ ವಿದ್ಯುತ್‌ ಕಂಬವೊಂದು ಉರುಳಿ ಬಿದ್ದು ಕೆಲಹೊತ್ತು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ರಾತ್ರಿ 11.30ರ ಸುಮಾರಿಗೆ ವಿದ್ಯುತ್‌ ಕಂಬ ಬಿದ್ದಿದ್ದು, ಬಳಿಕ ಲೈನ್‌ ಮ್ಯಾನ್‌ ಆಗಮಿಸಿ ಕಂಬವನ್ನು ತೆರವು ಮಾಡಿದರು. ಅದಾಗಲೇ ವಾಹನಗಳು ಸರತಿಯಲ್ಲಿ ನಿಂತಿದ್ದವು.

Advertisement

ಉಡುಪಿ: ಮರಬಿದ್ದು ವಿದ್ಯುತ್‌ ವ್ಯತ್ಯಯ
ಉಡುಪಿ: ಜಿಲ್ಲೆಯಲ್ಲಿ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಸೋಮವಾರ ತಡರಾತ್ರಿ, ಮಂಗಳವಾರ ಬಿಟ್ಟುಬಿಟ್ಟು ನಿರಂತರ ಮಳೆಯಾಗಿದೆ.

ಗಾಳಿ-ಮಳೆಗೆ ಕೆಲವು ಕಡೆಗಳಲ್ಲಿ ಮರಗಳು ಬಿದ್ದು, ವಿದ್ಯುತ್‌ ಪೂರೈಕೆ ವ್ಯತ್ಯಯ ಉಂಟಾಗಿತ್ತು. ಕಾಪು, ಮಲ್ಪೆ, ಉಡುಪಿ, ಮಣಿಪಾಲ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಉಡುಪಿ, ಮಣಿಪಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ಕಡಿತವಾಗಿದ್ದ ವಿದ್ಯುತ್‌ ಸರಬರಾಜು ಮಂಗಳವಾರ ಬೆಳಗ್ಗೆ ಪೂರೈಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next