ಹಾವೇರಿ: ಗುರುವಾರ ನಸುಕಿನಜಾವ ಜಿಲ್ಲೆಯ ವಿವಿಧೆಡೆ ಭಾರಿ ಗಾಳಿ, ಗುಡುಗು, ಮಿಂಚಿನೊಂದಿಗೆ ಅರ್ಧ ತಾಸಿಗೂ ಹೆಚ್ಚು ಕಾಲ ಮಳೆ ಸುರಿಯಿತು.
ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆ ಗುಡುಗು, ಮಿಂಚಿನೊಂದಿಗೆ ಸುರಿದ ಈ ಪ್ರಥಮ ಮಳೆಯ ಆರ್ಭಟಕ್ಕೆ ಕೆಲವು ಅಂಗಡಿಗಳಿಗೆ ನೀರು ನುಗ್ಗಿ, ಹತ್ತಾರು ಮರ ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಬ್ಯಾಡಗಿಯಲ್ಲೂ ಗಾಳಿಯ ರಭಸಕ್ಕೆ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಹಾನಗಲ್ಲ ತಾಲೂಕಿನ ಅಕ್ಕಿಆಲೂರು ಬಳಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಬಿದ್ದಿದೆ. ಸವಣೂರು ತಾಲೂಕಿನಲ್ಲಿ 2 ವಿದ್ಯುತ್ ಕಂಬ ಬಿದ್ದಿದ್ದು ಒಂದು ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿದೆ. ರಾಣಿಬೆನ್ನೂರು ತಾಲೂಕಿನಲ್ಲೂ ಸಾಧಾರಣ ಮಳೆಯಾಗಿದೆ. ಇದರಿಂದ ಕೆಲವು ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ನಗರದ ಎಸ್ಪಿ ಕಚೇರಿ ಎದುರಿನ ಮೂರ್ನಾಲ್ಕು ಅಂಗಡಿಗಳಿಗೆ ಚರಂಡಿ ನೀರು ತ್ಯಾಜ್ಯ ಸಹಿತ ಬಟ್ಟೆಯ ಅಂಗಡಿಗಳ ಒಳಗೆ ನುಗ್ಗಿತು.
ನೆಲಮಹಡಿಯಲ್ಲಿರುವ ಈ ಅಂಗಡಿಗಳಲ್ಲಿ ನುಗ್ಗಿದ್ದ ನೀರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ನೀರು ಹೊರಹಾಕಲು ಶ್ರಮಿಸಿದರು. ಚರಂಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಟ್ಟಿದ್ದರಿಂದ ಮಳೆ ನೀರು ಹೊರಗೆ ಹರಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಬಟ್ಟೆ ನೀರಿನಲ್ಲಿ ಸಿಲುಕಿ ಹಾಳಾಗಿದೆ. ಇಲ್ಲಿಯ ಬಸವೇಶ್ವರ ನಗರ 1ನೇ ಕ್ರಾಸ್ನಲ್ಲಿ ಮರವೊಂದು ಉರುಳಿ ಬಿದ್ದಿದೆ.