ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ ಕೇವಲ ಸಾಹಿತ್ಯ ಚಟುವಟಿಕೆಗಳಿಗೆ ಸೀಮಿತಗೊಳ್ಳದೇ ನಾಡು-ನುಡಿ, ನೆಲ-ಜಲದ ಬಗ್ಗೆ ಸದಾ ಸರ್ಕಾರವನ್ನು ಜಾಗೃತಗೊಳಿಸುತ್ತ ಬಂದಿದೆ. ಕನ್ನಡ ನಾಡಿನ ಇತಿಹಾಸದಲ್ಲಿ ಕಸಾಪದ ಬಹುದೊಡ್ಡ ಕೊಡುಗೆ ಇದೆ ಎಂದು ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ರವಿವಾರ ಹಮ್ಮಿಕೊಂಡಿದ್ದ ಕಸಾಪ 105ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಪರಿಷತ್ನ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಎಂಬ ಸಂಸ್ಥೆ ಕಾರ್ಯವೈಖರಿ ಎಷ್ಟು ಹೇಳಿದರೂ ಕಡಿಮೆಯೇ. ಇಂದು ಎಲ್ಲ ಕ್ಷೇತ್ರಗಳಲ್ಲೂ ವ್ಯಾಪ್ತಿ ವಿಸ್ತರಿಸಿಕೊಂಡರೂ ತನ್ನತನ ಕಿಂಚಿತ್ತೂ ಕಳೆದುಕೊಳ್ಳದೇ ಸಾಗಿದೆ. ಅದನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗುವ ಹೊಣೆ ಎಲ್ಲ ಸಾಹಿತಿಗಳ ಮೇಲಿದೆ ಎಂದರು.
ಕಾಳಜಿ ಇರಲಿ: 1915ರಲ್ಲಿ ನಂಜುಂಡಸ್ವಾಮಿ ಅಧ್ಯಕ್ಷತೆಯಲ್ಲಿ ಪರಿಷತ್ ನಡೆದು ಬಂದ ದಾರಿ ಎಲ್ಲರ ಮನದಲ್ಲಿದೆ. ಗಮಕ ಕಲೆ ಬೆಳೆಸುವಲ್ಲಿ ಪರಿಷತ್ ಕೊಡುಗೆ ಮರೆಯುವಂತಿಲ್ಲ. ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಉಳಿದವರು ನಡೆಸಿಕೊಂಡು ಬರುತ್ತಿದ್ದಾರೆ. ಅದರ ಸಾಧಕ-ಬಾಧಕಗಳ ಮೇಲೆ ಅತ್ಯಂತ ಕಾಳಜಿ ತೋರಬೇಕಿದೆ ಎಂದರು.
ಜಿಲ್ಲೆಯ ಹಿರಿಮೆ ದೊಡ್ಡದು: ಹಿರಿಯ ಬಂಡಾಯ ಸಾಹಿತಿ ಬಾಬು ಭಂಡಾರಿಗಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯದಲ್ಲಿ ನೂತನ ಪ್ರಕಾರ ಹುಟ್ಟು ಹಾಕಿದ ಹಿರಿಮೆ ರಾಯಚೂರು ಜಿಲ್ಲೆಯದ್ದು. ಈ ಜಿಲ್ಲೆ ಸಾಹಿತ್ಯಕ, ಸಾಂಸ್ಕೃತಿಕ ಶ್ರೀಮಂತಿಕೆಗೆ ಹೆಸರಾಗಿದೆ. ದಾಸ ಸಾಹಿತ್ಯ, ಗಜಲ್, ಬಂಡಾಯ ಸಾಹಿತ್ಯದ ಪ್ರಸ್ತಾಪವಾದಾಗ ಮೊದಲು ಉಲ್ಲೇಖವಾಗುವುದು ರಾಯಚೂರಿನ ಹೆಸರು. ಸಾಕಷ್ಟು ಯುವ ಪ್ರತಿಭೆಗಳು ಮುಂದೆ ಬರುತ್ತಿದ್ದು, ಕಸಾಪ ಮತ್ತಷ್ಟು ಬಲಪಡಿಸುವ ವಿಶ್ವಾಸವಿದೆ ಎಂದರು.
ಯುವಕರನ್ನು ಸೆಳೆಯುವುದು ಮೊದಲ ಆದ್ಯತೆ: ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ನನ್ನ ಮೇಲೆ ವಿಶ್ವಾಸವಿರಿಸಿ ನೀಡಿದ ಈ ಜವಾಬ್ದಾರಿ ಶ್ರದ್ಧೆಯಿಂದ ಮಾಡುತ್ತೇನೆ. ಪರಿಷತ್ಗೆ ಯುವಕರು ಹೆಚ್ಚಾಗಿ ಬರುತ್ತಿಲ್ಲ. ಯುವಕರನ್ನು ಬರ ಸೆಳೆಯುವ ಕೆಲಸಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಯುವಕರಲ್ಲಿ ಸಾಹಿತ್ಯಾಸಕ್ತಿ ಮೂಡಬೇಕಿದೆ. ಕಳೆದ ಮೂರು ವರ್ಷದಿಂದ ಪರಿಷತ್ ವಿವಿಧ ಹೊಣೆಗಳನ್ನು ನಿಭಾಯಿಸಿದ್ದೇನೆ ಎಂದರು.
ಸಲಹಾ ಸಮಿತಿ ಸದಸ್ಯರಾದ ಡಾ| ರಮೇಶ ಮೇಹರವಾಡೆ, ದಾನಮ್ಮ ಮಾತನಾಡಿದರು. ಸಂಘದ ಗೌರವ ಕಾರ್ಯದರ್ಶಿ ಬಿ.ವಿಜಯ ರಾಜೇಂದ್ರ, ಕೆ.ಯಶೋಧಾ, ರಾಮಣ್ಣ ಬೋಯೆರ್, ಅರುಣಾ ಹಿರೇಮಠ ಇತರರಿದ್ದರು.