Advertisement

ಮಂಗಳವಾರಪೇಟೆಯಲ್ಲಿ ಧೂಳು ನಿತ್ಯದ ಗೋಳು

10:56 AM Jun 01, 2019 | Team Udayavani |

ರಾಯಚೂರು: ‘ಯಾವುದಾದರೂ ಅಭಿವೃದ್ಧಿ ಕೆಲಸಗಳಿಗೆ ಜನರ ಸಹಕಾರ ಮುಖ್ಯ. ಹಾಗಂತ ವರ್ಷಾನುಗಟ್ಟಲೇ ಕಾಮಗಾರಿಯನ್ನೇ ಮಾಡದಿದ್ದರೆ ಎಲ್ಲಿಯವರೆಗೆ ತಾಳ್ಮೆ ವಹಿಸಬೇಕು’ ಹೀಗೆ ಆಕ್ರೋಶದಿಂದ ಪ್ರಶ್ನಿಸುತ್ತಾರೆ 14ನೇ ವಾರ್ಡ್‌ ನಿವಾಸಿಗಳು.

Advertisement

ನಗರದ 14, 15ನೇ ವಾರ್ಡ್‌ನ ಮಂಗಳವಾರ ಪೇಟೆಯಲ್ಲಿ ಕಳೆದ 6-7 ತಿಂಗಳ ಹಿಂದೆ ರಸ್ತೆ ಅಗಲೀಕರಣಕ್ಕೆಂದು ನಗರಸಭೆ ಸಾಕಷ್ಟು ಕಟ್ಟಡಗಳನ್ನು ತೆರವುಗೊಳಿಸಿದೆ. ಆದರೆ, ಈವರೆಗೂ ಅಲ್ಲಿ ರಸ್ತೆ ಕಾಮಗಾರಿಯನ್ನೇ ಆರಂಭಿಸಿಲ್ಲ. ಇದರಿಂದ ನಿವಾಸಿಗಳು, ವಾಹನ ಸವಾರರು, ಪ್ರಯಾಣಿಕರು ನಿತ್ಯ ಯಾತನೆ ಅನುಭವಿಸುತ್ತಿದ್ದು, ಈ ಕೂಪದಿಂದ ಎಂದು ಮುಕ್ತಿ ಸಿಗುವುದೋ ಎಂದು ನಗರಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಬಂಗಾರ ಬಜಾರದಿಂದ ಶಶಿಮಹಲ್ಗೆ ತೆರಳುವ ಮಾರ್ಗಮಧ್ಯೆ ಸಾಕಷ್ಟು ಕಟ್ಟಡಗಳನ್ನು ತೆರವು ಮಾಡಲಾಗಿದೆ. ಅಲ್ಲದೇ, ಇದು ಮುಂದೆ ಮಂತ್ರಾಲಯ ರಸ್ತೆಗೆ ಸಂಪರ್ಕ ಕಲ್ಪಿಸುವುದರಿಂದ ಓಟಾಟ ಹೆಚ್ಚಾಗಿರುತ್ತದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಈ ರಸ್ತೆಯಲ್ಲಿ ಓಡಾಡುವುದು ಸವಾಲಿನ ಕೆಲಸವಾಗಿದೆ. ಹಂತ ಹಂತವಾಗಿ ರಸ್ತೆ ಅಗಲೀಕರಣ ಮಾಡುತ್ತಿದ್ದು, ಈ ಹಿಂದೆ ಬೇರೆ ಬಡಾವಣೆಗಳಲ್ಲಿ ಕಾಮಗಾರಿ ನಿರ್ವಹಿಸಲಾಗಿತ್ತು. ಈಗಲೂ ಅಂಥದ್ದೇ ವಿಳಂಬ ನೀತಿ ಅನುಸರಿಸುತ್ತಿದ್ದು, ಜನ ರೋಸಿ ಹೋಗಿದ್ದಾರೆ.

ಧೂಳಿನಲ್ಲೇ ಜೀವನ: ಕಟ್ಟಡಗಳನ್ನು ತೆರವುಗೊಳಿಸಿದ ನಗರಸಭೆ ಬಳಿಕ ಅಲ್ಲಿ ಸಂಗ್ರಹವಾದ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿಲ್ಲ. ಇದರಿಂದ ರಸ್ತೆ ಸಂಪೂರ್ಣ ಧೂಳಿನಿಂದ ಆವೃತಗೊಂಡಿದೆ. ಅಕ್ಕಪಕ್ಕದ ವ್ಯಾಪಾರಿಗಳು ಧೂಳಿನ ಕಾಟಕ್ಕೆ ಬೇಸತ್ತಿದ್ದಾರೆ. ನಿತ್ಯ ಧೂಳು ಜಾಡಿಸುವುದೇ ಕಾಯಕವಾಗಿಬಿಟ್ಟಿದೆ ಎಂದು ನಿವಾಸಿಗಳು ದೂರುತ್ತಾರೆ. ನಮ್ಮದು ರೊಟ್ಟಿ ವ್ಯಾಪಾರ. ನಿತ್ಯ ವಿಪರೀತ ಧೂಳು ಬರುವುದಿಂದ ಆಹಾರ ಪದಾರ್ಥಗಳ ಮೇಲೆಲ್ಲ ಧೂಳು ಹರಡುತ್ತಿದೆ. ಆ ಪದಾರ್ಥಗಳನ್ನು ರಕ್ಷಿಸಿಕೊಳ್ಳುವುದೇ ಸವಾಲಾಗಿದೆ ಎಂದು ನೊಂದು ನುಡಿಯುತ್ತಾರೆ ವ್ಯಾಪಾರಿ.

ಕಟ್ಟಡಗಳ ಮರುನಿರ್ಮಾಣ: ಅಚ್ಚರಿ ಎಂದರೆ ಈಗಾಗಲೇ ರಸ್ತೆ ಅಗಲೀಕರಣದ ವೇಳೆ ತೆರವುಗೊಂಡ ಬಹುತೇಕ ಮನೆಗಳನ್ನು ಅಲ್ಲಿನ ನಿವಾಸಿಗಳು ಪುನಃ ನಿರ್ಮಿಸಿಕೊಂಡಿದ್ದಾರೆ. ಸರ್ಕಾರದ ಸ್ಥಳ ಬಿಟ್ಟು ತಮ್ಮ ತಮ್ಮ ಸ್ಥಳದಲ್ಲಿ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ, ರಸ್ತೆ ಕಾಮಗಾರಿ ಮಾತ್ರ ಇನ್ನೂ ಶುರುವಾಗುತ್ತಿಲ್ಲ. ಬದಲಿಗೆ ಈ ಮುಂಚೆ ನಿರ್ಮಿಸಿದ್ದ ಚರಂಡಿಯನ್ನೇ ತ್ಯಾಜ್ಯಗಳಿಂದ ಮುಚ್ಚಿ ಹಾಕಿರುವುದೇ ನಗರಾಡಳಿತ ಸಾಧನೆ ಎನ್ನುವಂತಾಗಿದೆ.

Advertisement

ನೀತಿ ಸಂಹಿತೆ ಅಡ್ಡಿ: ಹಿಂದೆ ಮೂರ್‍ನಾಲ್ಕು ತಿಂಗಳು ಅನಗತ್ಯ ನೆಪವೊಡ್ಡಿ ಕಾಮಗಾರಿ ಮುಂದೂಡಿದ್ದ ಅಧಿಕಾರಿಗಳು, ಬಳಿಕ ಲೋಕಸಭೆ ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿ ಕಾಮಗಾರಿ ಮುಂದೂಡಿದ್ದಾರೆ. ಇದರಿಂದ ಕಳೆದ 5-6 ತಿಂಗಳಿಂದ ಇಲ್ಲಿನ ಜನರಿಗೆ ನೆಮ್ಮದಿ ಇಲ್ಲದಾಗಿದೆ. ಆದರೆ, ಈಗ ನೀತಿ ಸಂಹಿತೆ ತೆರವಾಗಿದ್ದು, ಇನ್ನಾದರೂ ಎಚ್ಚೆತ್ತುಕೊಂಡು ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಕಾಮಗಾರಿ ನಿರ್ವಹಿಸಲಿ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ನಮಗೆ ಅಧಿಕಾರ ಸಿಕ್ಕಿಲ್ಲ: ಈ ಕುರಿತು ಚುನಾಯಿತ ಪ್ರತಿನಿಧಿಗಳನ್ನು ಸ್ಥಳೀಯರು ಪ್ರಶ್ನಿಸಿದರೆ, ಅವರು ಮಾತ್ರ ನಾವೇನು ಮಾಡುವುದು ನಮಗೆ ಅಧಿಕಾರವೇ ಇಲ್ಲ. ಇನ್ನೂ ಹೊಸ ಆಡಳಿತ ಮಂಡಲಿ ರಚನೆ ಆಗಿಲ್ಲ. ಕನಿಷ್ಠ ಪಕ್ಷ ಸಭೆಗಳಲ್ಲಿ ಪಾಲ್ಗೊಂಡರೆ ನಮ್ಮ ವಾರ್ಡ್‌ ಸಮಸ್ಯೆಗಳ ಧ್ವನಿ ಎತ್ತಬಹುದು ಎಂದು ಜಾರಿಕೊಳ್ಳುತ್ತಿದ್ದಾರೆ.

ಪದೇಪದೆ ಟ್ರಾಫಿಕ್‌ ಜಾಮ್‌: ಕಟ್ಟಡಗಳ ತೆರವು ಮಾಡಿದ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಚರಂಡಿ ನೀರು ರಸ್ತೆಯಲ್ಲೆಲ್ಲ ಹರಿಯುತ್ತಿದ್ದು, ಅಲ್ಲಲ್ಲಿ ರಸ್ತೆ ಕೆಸರುಮಯವಾಗಿದೆ. ಇದರಿಂದ ಯಾವುದಾದರೂ ದೊಡ್ಡ ವಾಹನಗಳು ಈ ಮಾರ್ಗದಲ್ಲಿ ಬಂದರೆ ಸಾಕು ಟ್ರಾಫಿಕ್‌ ಸಮಸ್ಯೆ ಎದುರಾಗುತ್ತಿದೆ. ಸ್ಥಳೀಯರು, ವ್ಯಾಪಾರಿಗಳಿಗೆ ಇದರಿಂದ ಗೋಳಾಟ ತಪ್ಪುತ್ತಿಲ್ಲ.

ಒಟ್ಟಿನಲ್ಲಿ ಒಂದಲ್ಲ ನೆಪ ಹೇಳುತ್ತಾ ಅಧಿಕಾರಿಗಳು ಕಾಮಗಾರಿ ನಿರ್ವಹಿಸದೆ ಮುಂದೂಡುತ್ತಿದ್ದು, ಜನ ಮಾತ್ರ ನಾನಾ ಸಂಕಷ್ಟಕ್ಕೆ ತುತ್ತಾಗುವಂತಾಗಿದೆ. ಇನ್ನಾದರೂ ನಗರಸಭೆ ತ್ವರಿತಗತಿಯಲ್ಲಿ ಕಾಮಗಾರಿ ನಿರ್ವಹಿಸಲು ಕ್ರಮ ಕೈಗೊಳ್ಳಲಿ ಎಂಬುದು ಸ್ಥಳೀಯರ ಒತ್ತಾಯ.

ನಮಗಂತೂ ಸಾಕಾಗಿ ಹೋಗಿದೆ. ತರಾತುರಿಯಲ್ಲಿ ಕಟ್ಟಡಗಳನ್ನು ತೆರವು ಮಾಡಿದರು. ಪರಿಹಾರ ನೀಡುವುದಾಗಿ ತಿಳಿಸಿದ್ದರು. ಆದರೆ, ಈವರೆಗೆ ಬಿಡಿಗಾಸು ನೀಡಿಲ್ಲ. ಈಗ ನೋಡಿದರೆ ಕಾಮಗಾರಿಯನ್ನೂ ಶುರು ಮಾಡಿಲ್ಲ. ತ್ಯಾಜ್ಯವೆಲ್ಲ ರಸ್ತೆಯಲ್ಲಿ ಸಂಗ್ರಹಗೊಂಡಿದ್ದು, ಧೂಳಿನ ಕಾಟಕ್ಕೆ ಬೇಸತ್ತಿದ್ದೇವೆ.
ನರಸಿಂಹ,
ಸ್ಥಳೀಯ ನಿವಾಸಿ

ರಸ್ತೆ ಮಧ್ಯದಲ್ಲಿರುವ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ ಪಕ್ಕಕ್ಕೆ ನೆಡಲು ಈಗಾಗಲೇ ಟೆಂಡರ್‌ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಶುರು ಮಾಡುವುದಾಗಿ ತಿಳಿಸಿದ್ದಾರೆ. ಯಾವುದೇ ಅನುದಾನದ ಕೊರತೆಯಾಗಲಿ, ತಾಂತ್ರಿಕ ತೊಂದರೆಗಳಾಲಿ ಇಲ್ಲ. ಕಂಬಗಳನ್ನು ಸ್ಥಳಾಂತರಿಸುತ್ತಿದ್ದಂತೆಯೇ ರಸ್ತೆ ಕಾಮಗಾರಿ ನಿರ್ವಹಿಸಲಾಗುವುದು. ಆದಷ್ಟು ಬೇಗ ಕಾಮಗಾರಿ ಶುರುವಾಗಲಿದೆ.
ರಮೇಶ ನಾಯಕ,
ನಗರಸಭೆ ಪೌರಾಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next