Advertisement

ರಾಯಚೂರಿನಲ್ಲಿ ‘ಕೈ’ಕೊಟ್ಟ ದಲಿತರು-ಮುಸ್ಲಿಂರು!

11:25 AM May 27, 2019 | Naveen |

ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು:
ರಾಯಚೂರು ಲೋಕಸಭೆ ಕ್ಷೇತ್ರ ಹಾಗೂ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಭದ್ರಕೋಟೆ ಎಂದೇ ಬಿಂಬಿತಗೊಂಡಿವೆ. ಅಂಥ ಕ್ಷೇತ್ರದಲ್ಲೂ ಹೀನಾಯ ಸೋಲಾಗಿರುವುದಕ್ಕೆ ಪಕ್ಷದ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಸನ್ನಿಹಿತವಾಗಿದೆ.

Advertisement

ಈ ಸೋಲಿಗೆ ಮೋದಿ ಅಲೆಯಲ್ಲದೇ ಅನೇಕ ಕಾರಣಗಳು ಇವೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ರಾಯಚೂರು ನಗರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳ ಪ್ರಾಬಲ್ಯವಿದ್ದು, ದಲಿತ ಮತಗಳು ಕಾಂಗ್ರೆಸ್‌ ಕೈ ಹಿಡಿದ ಉದಾಹರಣೆ ಸಾಕಷ್ಟಿವೆ. ಹೀಗಾಗಿ ಇಲ್ಲಿ ಹೆಚ್ಚಾಗಿ ಗೆದ್ದಿರುವುದು ಕಾಂಗ್ರೆಸ್‌ ಪಕ್ಷವೇ. ಅದರ ಜತೆಗೆ ಲೋಕಸಭೆ ಚುನಾವಣೆಗಳಲ್ಲೂ ರಾಯಚೂರು ಕ್ಷೇತ್ರದಲ್ಲಿ ಬಹುತೇಕ ಕಾಂಗ್ರೆಸ್‌ ಗೆದ್ದಿರುವುದು ಗಮನಾರ್ಹ. ನಗರಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸುವಲ್ಲಿ ತೋರಿದ ಆಸ್ಥೆಯನ್ನು ಕೆಲ ನಾಯಕರು ಲೋಕಸಭೆ ಚುನಾವಣೆಯಲ್ಲಿ ಅಷ್ಟಾಗಿ ತೋರಲಿಲ್ಲ. ಕಾಂಗ್ರೆಸ್‌ ಸೋಲಿಗೆ ಮೋದಿ ಅಲೆ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆಯೋ ಅದರಷ್ಟೇ ಕೆಲಸ ಕಾಂಗ್ರೆಸ್‌ ಪಕ್ಷದೊಳಗಿನ ಆಂತರಿಕ ಕಲಹಗಳೂ ಮಾಡಿವೆ. ಕಳೆದ ಕೆಲ ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಹೆಚ್ಚಾಗಿದೆ. ಮುಖಂಡರು ನಾನೊಂದು, ನೀನೊಂದು ದಿಕ್ಕು ಎನ್ನುವಂತಿರುವುದು ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್‌ ಮಾಡಿದೆ. ಮಾಜಿ ಶಾಸಕ ಸೈಯ್ಯದ್‌ ಯಾಸಿನ್‌ ಹಾಗೂ ಎಂಎಲ್ಸಿ ಎನ್‌.ಎಸ್‌.ಬೋಸರಾಜ್‌ ಬಣಗಳು ಇಂದಿಗೂ ಒಗ್ಗೂಡಿಲ್ಲ. ಮೇಲ್ನೋಟಕ್ಕೆ ನಾವೆಲ್ಲ ಒಂದೇ ಎಂಬ ಒಗ್ಗಟ್ಟಿನ ಮಂತ್ರ ಜಪಿಸಿದರೂ ಒಳಗೊಳಗೆ ಒಬ್ಬರನ್ನು ಕಂಡರೆ ಮತ್ತೂಬ್ಬರಿಗೆ ಆಗುತ್ತಿಲ್ಲ. ಆದರೆ, ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿದ್ದ ಬಿ.ವಿ.ನಾಯಕ ಅವರು ಸೈಯ್ಯದ್‌ ಯಾಸಿನ್‌ ಸಖ್ಯ ಬೆಳೆಸಿದ್ದು, ಬೋಸರಾಜ್‌ ಬಣಕ್ಕೆ ಸಹಿಸಲಾಗಿಲ್ಲ ಎನ್ನುತ್ತವೆ ಮೂಲಗಳು. ಹೀಗಾಗಿ ಅವರು ಹಂತ ಹಂತವಾಗಿ ಅಂತರ ಕಾಯ್ದುಕೊಂಡರು ಎನ್ನಲಾಗುತ್ತಿದೆ. ಜತೆಗೆ ನಗರದ ಮುಖಂಡ ಬಾಬರ್‌ ಸುದ್ದಿಗೋಷ್ಠಿ ನಡೆಸಿ ಎನ್‌.ಎಸ್‌.ಬೋಸರಾಜ್‌ ನೇತೃತ್ವದಲ್ಲಿ ನಾವು ಚುನಾವಣೆ ಪ್ರಚಾರ ಮಾಡುವುದಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಳಾಗಲು ಬೋಸರಾಜ್‌ ಹಾಗೂ ಅವರ ಮಗ ರವಿ ಬೋಸರಾಜ್‌ ಕಾರಣ ಎಂದು ನೇರವಾಗಿ ಆರೋಪಿಸಿದ್ದರು.

ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭಾವಗೊಂಡಿದ್ದ ಸೈಯ್ಯದ್‌ ಯಾಸಿನ್‌ ಈ ಬಾರಿ ಪ್ರಚಾರದಲ್ಲಿ ಅಷ್ಟಾಗಿ ತೊಡಗಲಿಲ್ಲ ಎನ್ನುವ ಟೀಕೆಗಳು ಇವೆ. ಅನೇಕ ಮುಖಂಡರು ರಾಹುಲ್ ಗಾಂಧಿ ಪ್ರಚಾರ ಸಮಾವೇಶದಲ್ಲಿ ಪ್ರತ್ಯಕ್ಷರಾದವರು ಬಳಿಕ ಅದೃಶ್ಯರಾದರು. ಹೀಗೆ ನಾಮಕೆವಾಸ್ತೆ ಬೆಂಬಲ ನೀಡಿ ತಳ ಮಟ್ಟದಲ್ಲಿ ಕೆಲಸ ಮಾಡದಿರುವುದು ಕಾಂಗ್ರೆಸ್‌ ಹೀನಾಯ ಸೋಲಿಗೆ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ.

ನಗರ ಕ್ಷೇತ್ರ ನಿರ್ಲಕ್ಷ್ಯ: ಲೋಕಾ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದ್ದ ಮುಖಂಡರು ಹೆಚ್ಚಾಗಿ ಪ್ರಚಾರಕ್ಕೆ ಒತ್ತು ನೀಡಲಿಲ್ಲ. ಅಭ್ಯರ್ಥಿ ಬಿ.ವಿ.ನಾಯಕರು ಕೂಡ ಕ್ಷೇತ್ರದ ಎಲ್ಲೆಡೆ ಸಾಕಷ್ಟು ಪ್ರಚಾರ ನಡೆಸಿದರೂ ನಗರದ ಬಹುತೇಕ ವಾರ್ಡ್‌ಗಳಿಗೆ ತೆರಳಲೇ ಇಲ್ಲ. ಕಾರ್ಯಕರ್ತರು ಕೂಡ ತಳಮಟ್ಟದಲ್ಲಿ ಹೆಚ್ಚಾಗಿ ಪ್ರಚಾರ ನಡೆಸಲಿಲ್ಲ.

ಕೈ ಹಿಡಿಯದ ದಲಿತ ಮತಗಳು
ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ ಎಂದಾಗ ಅನೇಕ ದಲಿತ ಪರ ಸಂಘಟನೆಗಳ ಮುಖಂಡರು ಸಾಲು ಸಾಲು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ ಬೆಂಬಲ ಘೋಷಿಸಿದ್ದರು. ಬಿಜೆಪಿಯಿಂದ ಸಂವಿಧಾನಕ್ಕೆ ಉಳಿಗಾಲವಿಲ್ಲ. ಹೀಗಾಗಿ ಪರಿಶಿಷ್ಟ ಜಾತಿ ಸಮಾಜದವರು ಬಿಜೆಪಿಗೆ ಬೆಂಬಲಿಸಬೇಕು ಎಂದು ಕರೆ ನೀಡಿದ್ದರು. ಅಲ್ಲದೇ, ಕಾಂಗ್ರೆಸ್‌ ಗೆಲುವಿಗಾಗಿ ಶ್ರಮಿಸುವ ಮಾತನ್ನಾಡಿದ್ದರು. ಫಲಿತಾಂಶ ಕಂಡಾಗ ದಲಿತ ಮತಗಳು ಕೂಡ ಕಾಂಗ್ರೆಸ್‌ ಕೈ ಹಿಡಿದಂತೆ ಕಾಣಿಸುತ್ತಿಲ್ಲ.
ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಲ್ಲೇ ಹಿನ್ನಡೆ
ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಶಾಸಕರಿರುವ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಭಾರೀ ಮುನ್ನಡೆ ಸಿಕ್ಕಿರುವುದು ಗಮನಾರ್ಹ. ಕಾಂಗ್ರೆಸ್‌ ಶಾಸಕರಿರುವ ಗ್ರಾಮೀಣ ಕ್ಷೇತ್ರದಲ್ಲಿ 16,252, ಲಿಂಗಸುಗೂರಿನಲ್ಲಿ 21,697 ಹಾಗೂ ಶಹಾಪುರದಲ್ಲಿ 19,123 ಮತಗಳಿಂದ ಹಿನ್ನಡೆ ಅನುಭವಿಸಿದೆ. ಬಿಜೆಪಿ ಅಧಿಕಾರದಲ್ಲಿದ್ದರೂ ಕಾಂಗ್ರೆಸ್‌ ಕೈ ಹಿಡಿಯುವ ಸಾಧ್ಯತೆಗಳಿದ್ದ ರಾಯಚೂರು ನಗರ ಕ್ಷೇತ್ರದಲ್ಲಿ 9,438 ಮತಗಳಿಂದ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದೆ. ಸೂಕ್ತ ಅಭ್ಯರ್ಥಿಯೇ ಸಿಗದೆ ಕಂಗಾಲಾಗಿದ್ದ ಬಿಜೆಪಿಗೆ 1,17,716 ಮತಗಳ ಲೀಡ್‌ ಬರಲು ಮೋದಿ ಅಲೆಯೊಂದೇ ಕಾರಣವಾಗಿರಲು ಸಾಧ್ಯವಿಲ್ಲ. ಕಳೆದ ಬಾರಿ ಮೋದಿ ಅಲೆಯ ಮಧ್ಯೆಯೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಮೂರು ಕಡೆ ಕಾಂಗ್ರೆಸ್‌ ಗೆದ್ದಿತ್ತು. ಇಷ್ಟಾದರೂ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿಗೆ ಪಕ್ಷದೊಳಗಿನ ಆಂತರಿಕ ಭಿನ್ನಮತವೂ ಕಾರಣವಾಗಿರಲೇಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿರುವುದನ್ನು ಅರಿಯಬೇಕಿದೆ.
Advertisement

Udayavani is now on Telegram. Click here to join our channel and stay updated with the latest news.

Next