Advertisement

ಸಮ್ಮೇಳನ ಸದಸ್ಯತ್ವ : ರಾಯಚೂರು ಮುಂದು

12:10 PM Feb 02, 2020 | Naveen |

ರಾಯಚೂರು: ಕಲಬುರಗಿಯಲ್ಲಿ ಫೆ.5ರಿಂದ ನಡೆಯಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿ ಮಾಡಿಕೊಂಡ ಜನರಲ್ಲಿ ರಾಯಚೂರಿಗೆ ಎರಡನೇ ಸ್ಥಾನ. ಈ ಮೂಲಕ ಜಿಲ್ಲೆಯ ಜನರು ಸಾಹಿತ್ಯ ಪ್ರೇಮ ಮೆರೆದಿರುವುದು ವಿಶೇಷ.

Advertisement

ರಾಯಚೂರಿನಲ್ಲಿ 82ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಆಗ
ಇಲ್ಲಿ ನೆರೆದ ಜನಸ್ತೋಮ ಕಂಡು ಗಣ್ಯರು- ಸಾಹಿತಿಗಳು ಬೆರಗಾಗಿದ್ದರು. ಬಂಡಾಯ ಸಾಹಿತ್ಯದ ನೆಲೆವೀಡಾದ ರಾಯಚೂರು ಜಿಲ್ಲೆ, ಇಂದಿಗೂ ಅಕ್ಷರ ಪ್ರೀತಿಯನ್ನು ಕಿಂಚಿತ್ತೂ ಕಳೆದುಕೊಂಡಿಲ್ಲ ಎನ್ನಲಿಕ್ಕೆ ಇದು ನಿದರ್ಶನವಾಗಿದೆ. ಬೆಂಗಳೂರು ಕೇಂದ್ರ ಸಾಹಿತ್ಯ ಪರಿಷತ್‌ 1453 ನೋಂದಣಿ ಮಾಡಿಸಿದ್ದರೆ, ಆತಿಥ್ಯ ವಹಿಸಿರುವ ಕಲಬುರಗಿ ಜಿಲ್ಲೆ 2050 ಸದಸ್ಯತ್ವ ನೋಂದಣಿ ಮಾಡಿಸಿದೆ. ಇದನ್ನು ಹೊರತಾಗಿಸಿ ಹೆಚ್ಚು ನೋಂದಣಿಯಾದ
ಜಿಲ್ಲೆಗಳ ಸಾಲಿನಲ್ಲಿ ತುಮಕೂರು ಮೊದಲಾದರೆ, ರಾಯಚೂರು ಎರಡನೇ ಸ್ಥಾನದಲ್ಲಿದೆ.
ತುಮಕೂರು ಜಿಲ್ಲೆಯ 1500 ಜನ ನೋಂದಣಿ ಮಾಡಿಸುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ; 1400 ಜನ ನೋಂದಣಿ ಮಾಡುವ ಮೂಲಕ ರಾಯಚೂರು ಎರಡನೇ ಸ್ಥಾನದಲ್ಲಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೇವಲ 11 ಸದಸ್ಯರು ನೋಂದಣಿ ಮಾಡಿಸಿದ್ದು, ಅತಿ ಕಡಿಮೆ ಎನಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ 15 ಜನ ನೋಂದಣಿ ಮಾಡಿಸಿದ್ದಾರೆ. ಕಸಾಪದಿಂದ 100 ರಶೀದಿಯುಳ್ಳ 239 ನೋಂದಣಿ ಪುಸ್ತಕಗಳನ್ನು ವಿತರಿಸಲಾಗಿತ್ತು. ಅದರಲ್ಲಿ 26 ರಶೀದಿ ಪುಸ್ತಕಗಳು ಉಳಿದಿವೆ. ಒಂಭತ್ತು ಜಿಲ್ಲೆಗಳಲ್ಲಿ ಶೇ.100 ಗುರಿ ತಲುಪಲಾಗಿದೆ. ಹುಬ್ಬಳ್ಳಿಯಲ್ಲಿ 10 ಪುಸ್ತಕಗಳ ಪೈಕಿ ಐದು ಮಾತ್ರ ಖರ್ಚಾದರೆ, ಶಿವಮೊಗ್ಗದಲ್ಲಿ 540 ನೋಂದಣಿಯಾಗಿದ್ದು, 460 ಬಾಕಿ ರಶೀದಿ ಉಳಿದಿವೆ. ಅಂದರೆ ಶೇ.54 ಗುರಿ ತಲುಪಲಾಗಿದೆ.

250 ರೂ. ಶುಲ್ಕ: ಪ್ರತಿ ಸದಸ್ಯರಿಗೆ ನೋಂದಣಿ ಶುಲ್ಕ 250ರೂ. ನಿಗದಿಮಾಡಲಾಗಿದೆ. ಒಂದು
ಕಿಟ್‌, ಅದರಲ್ಲಿ ಆಹ್ವಾನ ಪತ್ರಿಕೆ, ನೋಟ್‌ಬುಕ್‌ ಮತ್ತು ಪೆನ್‌ ಇರಲಿದೆ. ಅದರ ಜತೆಗೆ ಸದಸ್ಯತ್ವ ಬ್ಯಾಡ್ಜ್ ನೀಡಲಾಗುತ್ತಿದೆ. ವಸತಿ, ಊಟ, ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೆಡಿಕಲ್‌ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮೂರು ದಿನಗಳ ಕಾಲ ಎಲ್ಲ ಸೌಲಭ್ಯ ನಿಭಾಯಿಸಲು ಕಲಬುರಗಿ ಜಿಲ್ಲಾಡಳಿತ ಈಗಾಗಲೇ ಕಾರ್ಯಕ್ರಮ ರೂಪಿಸಿದೆ.

ಎಲ್ಲರಿಗೂ ಬರಲ್ಲ ಸಂದೇಶ
ರಾಜ್ಯದಿಂದ ಒಟ್ಟು 21,030 ಜನ ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತ ಅವರಿಗೆ ಸೂಕ್ತ ಮಾಹಿತಿ ನೀಡಲು ಕಾಲ್‌ ಸೆಂಟರ್‌ ಮೂಲಕ ಏಕಕಾಲಕ್ಕೆ ಸಂದೇಶ ಕಳುಹಿಸುವ ವ್ಯವಸ್ಥೆ ಮಾಡಿದೆ. ಆದರೆ, ಬಹುತೇಕ ಸದಸ್ಯರಿಗೆ ಈ ಸಂದೇಶ ತಲುಪುವುದು ಕಷ್ಟ. ಏಕೆಂದರೆ ಕೆಲ ಜಿಲ್ಲೆಗಳಲ್ಲಿ ಕೇವಲ ಸದಸ್ಯತ್ವ ಹೆಸರು ಮಾತ್ರ ನೀಡಿದ್ದು, ಮೊಬೈಲ್‌ ಸಂಖ್ಯೆಯನ್ನೇ ನೀಡಿಲ್ಲ. ಹೀಗಾಗಿ ಸಮ್ಮೇಳನಕ್ಕೆ ಬರುವ ಸದಸ್ಯರು ತಮ್ಮ ವಸತಿ ಬಗ್ಗೆ ಖುದ್ದು ತೆರಳಿ ಖಚಿತಪಡಿಸಿಕೊಳ್ಳಬೇಕಿದೆ.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರಲು ನೋಂದಣಿ ಮಾಡಿಸಿದ ಸದಸ್ಯರಿಗೆ ಕಿಟ್‌ ನೀಡಲಾಗುವುದು. ಮೂರು ದಿನಗಳ ವಸತಿ, ಊಟದ ವ್ಯವಸ್ಥೆ, ಆರೋಗ್ಯ ಸಮಸ್ಯೆಗೆ ತುತ್ತಾದವರಿಗೆ ಮೆಡಿಕಲ್‌ ಸೌಲಭ್ಯ ಕಲ್ಪಿಸಲಾಗುವುದು. ಸಾಕಷ್ಟು ಜನ ಮೊಬೈಲ್‌ ಸಂಖ್ಯೆ ನೀಡದ ಕಾರಣ ಎಲ್ಲಿ ವಸತಿ ಮಾಡಲಾಗಿದೆ ಎಂದು ಸಂದೇಶ ತಲುಪಲ್ಲ. ಅಂಥವರು ಮಾಹಿತಿ ಕೇಂದ್ರಕ್ಕೆ ಸಂಪರ್ಕಿಸಿ ವಿವರ ನೀಡಿದರೆ ಅವರಿಗೆ ಸೌಲಭ್ಯ ಕಲ್ಪಿಸಲಾಗುವುದು. ಸಾಹಿತ್ಯಾಸಕ್ತರಿಗೆ ಯಾವುದೇ ಕೊರತೆಯಾಗದಂತೆ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗುತ್ತಿದೆ.
ಶರತ್‌, ಕಲಬುರಗಿ ಜಿಲ್ಲಾಧಿಕಾರಿ

Advertisement

ಕೇಂದ್ರ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಹೆಚ್ಚು ನೋಂದಣಿ ಮಾಡಿದ್ದು,
ತುಮಕೂರು ಬಿಟ್ಟರೆ ರಾಯಚೂರು ಜಿಲ್ಲೆ. ಕೆಲ ವರ್ಷಗಳ ಹಿಂದೆ ರಾಯಚೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಸದಸ್ಯತ್ವ ನೋಂದಣಿಯಲ್ಲೂ ನಮ್ಮ ಜಿಲ್ಲೆಯ ಸಾಹಿತ್ಯಾಸಕ್ತರು ಮುಂಚೂಣಿಯಲ್ಲಿದ್ದಾರೆ.
ಡಾ|ಬಸವಪ್ರಭು ಪಾಟೀಲ
ಕಸಾಪ ಜಿಲ್ಲಾಧ್ಯಕ್ಷ, ರಾಯಚೂರು

„ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next