ರಾಯಚೂರು: ರೈತರ ಸಮಸ್ಯೆಗಳನ್ನು ಮುಂದಿಟ್ಟಕೊಂಡು ನಡೆಸುತ್ತಿರುವ ಭಾರತ್ ಬಂದ್ ನಗರದಲ್ಲಿ ರಾಜಕೀಯ ಸ್ವರೂಪ ಪಡೆಯಿತು.
ಹೋರಾಟಗರೊಬ್ಬರು ಮಾತನಾಡುವಾಗ ಬಿಜೆಪಿ ಜತೆಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು. ಇದರಿಂದ ಹೋರಾಟದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನಾಯಕರು ಮುಜುಗರ ಎದುರಿಸುವಂತಾಯಿತು.
ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ವಿವಿಧ ರೈತ ಹಾಗೂ ಕಾರ್ಮಿಕ ಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಈ ವೇಳೆ ಬಿಎಸ್ ಎನ್ ಎಲ್ ಯೂನಿಯನ್ ಮುಖಂಡ ಲಾಲಪ್ಪ ಮಾತನಾಡಿ, ದೇಶವನ್ನು ಕಾಂಗ್ರೆಸ್ ಅರ್ಧ ಸರ್ವನಾಶ ಮಾಡಿದರೆ ಈಗ ಬಿಜೆಪಿ ಉಳಿದ ಅರ್ಧವನ್ನು ನಾಶ ಮಾಡುತ್ತಿದೆ. ಕಾರ್ಪೊರೇಟ್ ಕಂಪನಿಗಳಿಗೆ ಮಣೆ ಹಾಕಿದ್ದೇ ಕಾಂಗ್ರೆಸ್, ಎಲ್ಲ ಪಕ್ಷಗಳ ಧೋರಣೆ ಒಂದೇ ಆಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ:ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕೇಜ್ರಿವಾಲ್ ಗೆ ಗೃಹಬಂಧನ? ಆರೋಪ ನಿರಾಕರಿಸಿದ ಪೊಲೀಸರು
ಇದರಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಬಿಎಸ್ ಎನ್ ಎಲ್ ನೌಕರರನ್ನು ತೆಗೆದಿದ್ದು ನರೇಂದ್ರ ಮೋದಿ ಅವರ ಸರಕಾರ ಅವರ ವಿರುದ್ಧ ಮಾತನಾಡಿ ಎಂದು ತಾಕೀತು ಮಾಡಿದರು. ಆದರೆ ಇದಕ್ಕೋಪ್ಪದ ಲಾಲಪ್ಪ ನಾವು ಸತ್ಯ ಮಾತನಾಡುತ್ತೇವೆ ಎಂದರು. ಕೊನೆಗೆ ಮೈಕ್ ಬಂದ್ ಮಾಡಿಸಿ ಹೋರಾಟಗಾರನ ಮಾತು ಮೊಟಕುಗೊಳಿಸಿದರು.