Advertisement

ರಾಹುಲ್‌ ಪ್ರಧಾನಿ ಅಭ್ಯರ್ಥಿ ಹಾಸ್ಯಾಸ್ಪದ: ಜೋಶಿ

10:19 AM Apr 09, 2019 | pallavi |
ಧಾರವಾಡ: ಪಾಕಿಸ್ತಾನದ ಪರ ವಾದ ಮಂಡಿಸುವ ರಾಹುಲ್‌ ಗಾಂಧಿ ದೇಶದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿರುವುದು ಹಾಸ್ಯಾಸ್ಪದ ಸಂಗತಿ. ಇದನ್ನು ಈ ದೇಶದ ಜನತೆ ಯಾವುದೇ ಕಾರಣಕ್ಕೂ ಒಪ್ಪಲ್ಲ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು.
ತಾಲೂಕಿನ ಶಿವಳ್ಳಿ, ಮರೇವಾಡ, ತಿಮ್ಮಾಪುರ, ಹೆಬ್ಬಳ್ಳಿ, ಹಾಗೂ ಶಿಬಾರಗಟ್ಟಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ರೋಡ್‌ ಶೋ, ಬಹಿರಂಗ ಸಭೆ ಹಾಗೂ ಬಿರುಸಿನ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ಕಾಂಗ್ರೆಸ್‌ನ ಅನೇಕ ನಾಯಕರು ತಮ್ಮ ಮಗ ರಾಹುಲ್‌ ಗಾಂಧಿಯಂತೆ ಆಗಲು ಬಯಸುವುದಿಲ್ಲ. ಆದರೆ ದೇಶದ ಪ್ರಧಾನಿಯಾಗಲು ಹೇಗೆ ಒಪ್ಪುತ್ತಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕಾದರೆ ಧಾರವಾಡದಲ್ಲಿ ಅಷ್ಟೇ ಅಲ್ಲ. ಇಡೀ ರಾಜ್ಯ-ದೇಶದಲ್ಲಿ ಬಿಜೆಪಿ ಗೆಲ್ಲಬೇಕಿದೆ ಎಂದರು.
ಶಾಸಕ ಅಮೃತ ದೇಸಾಯಿ ಮಾತನಾಡಿ, ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಈ ಸಲದ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿದೆ. ಸಮರ್ಥ ಹಾಗೂ ಸದೃಢ ಅಭ್ಯರ್ಥಿ ಪ್ರಹ್ಲಾದ ಜೋಶಿಯವರನ್ನು ಮತ್ತೆ ಗೆಲ್ಲಿಸುವ ಮೂಲಕ ಅವರನ್ನು ಕೇಂದ್ರ ಸಚಿವರನ್ನಾಗಿ ನಾವೆಲ್ಲ ನೋಡಬೇಕಿದೆ ಎಂದರು.
ಶ್ರೀಗಳಿಂದ ಆಶೀರ್ವಾದ: ಕರಡಿಗುಡ್ಡ ಗ್ರಾಮದಲ್ಲಿ ನಡೆದ ಹೊಸೂರು ಕುಟುಂಬದವರ ಮದುವೆ ಸಮಾರಂಭದಲ್ಲಿ ಭಾಗಿಯಾದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯರನ್ನು ಸಂಸದ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಭೇಟಿಯಾಗಿ ಆಶೀರ್ವಾದ ಪಡೆದರು.
ಮಾಜಿ ಶಾಸಕಿ ಸೀಮಾ ಮಸೂತಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ತವನಪ್ಪ ಅಷ್ಟಗಿ, ಸವಿತಾ ಅಮರಶೆಟ್ಟಿ, ನಾಗಪ್ಪ ಗಾಣಿಗೇರ, ಶಶಿ ಕುಲಕರ್ಣಿ, ಗುರುನಾಥ ಗೌಡ ಗೌಡರ ಉಪಸ್ಥಿತರಿದ್ದರು.
ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬ ರಾಜಕಾರಣ ವಿಶ್ವದೆಲ್ಲೆಡೆ ಪ್ರಚಾರ ಆಗುತ್ತಿದೆ. ಕಾಂಗ್ರೆಸ್‌
ಹಾಗೂ ಜೆಡಿಎಸ್‌ ಯಾವುದೇ ಕಾರಣಕ್ಕೂ ಗೆಲ್ಲದಂತೆ ನೋಡಿಕೊಳ್ಳಬೇಕು.
 ಪ್ರಹ್ಲಾದ ಜೋಶಿ, ಬಿಜೆಪಿ ಅಭ್ಯರ್ಥಿ
Advertisement

Udayavani is now on Telegram. Click here to join our channel and stay updated with the latest news.

Next