Advertisement

ಅಧಿಕಾರಕ್ಕೆ ಬಂದರೆ ರಾಮ ಮಂದಿರ ತೀರ್ಪು ಬದಲಿಸಲು ರಾಹುಲ್‌ ಚಿಂತನೆ: ಕೈ ಮಾಜಿ ನಾಯಕ ಆಚಾರ್ಯ

01:30 AM May 07, 2024 | Team Udayavani |

ಹೊಸದಿಲ್ಲಿ: “ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮ ಜನ್ಮಭೂಮಿ ಕುರಿತಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಬದಲಿಸಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಈಗಾಗಲೇ ಸಭೆ ನಡೆಸಿ ಚರ್ಚಿಸಿದ್ದಾರೆ’ ಎಂದು ಕಾಂಗ್ರೆಸ್‌ ಮಾಜಿ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣನ್‌ ಹೇಳಿದ್ದಾರೆ.

Advertisement

ಸೋಮವಾರ ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಆಚಾರ್ಯ, ನಾನು ಕಳೆದ 32 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದೇನೆ. ಯಾವಾಗ ರಾಮ ಮಂದಿರ ವಿಚಾರ ಪ್ರಸ್ತಾವವಾಯಿತೋ ಆಗ ರಾಹುಲ್‌ ಮಂದಿರ ವಿಚಾರದಲ್ಲಿ ಸುಪ್ರೀಂಕೋರ್ಟ್‌ ತೀರ್ಪನ್ನೇ ಬದಲಿಸಲು ಚಿಂತನೆ ನಡೆಸಿದ್ದರು. ಶಾ ಬಾನೋ ಪ್ರಕರಣದಲ್ಲಿ ಹೊಸ ಕಾಯ್ದೆ ತರುವ ಮೂಲಕ ರಾಜೀವ್‌ ಗಾಂಧಿ ಅವರು ಹೇಗೆ ಸುಪ್ರೀಂಕೋರ್ಟ್‌ ತೀರ್ಪನ್ನೇ ಪಕ್ಕಕ್ಕೆ ಇರಿಸಿದರೋ, ಅದೇ ಮಾದರಿಯಲ್ಲಿ ಅಯೋಧ್ಯೆ ತೀರ್ಪನ್ನು ಬದಿಗಿರಿಸುವುದಾಗಿ ರಾಹುಲ್‌ ಹೇಳಿದ್ದರೆಂದು ಆಚಾರ್ಯ ತಿಳಿಸಿದ್ದಾರೆ.

ಜತೆಗೆ ಸಭೆಯೊಂದರಲ್ಲಿ ಬಹು ಆಪ್ತರೊಂದಿಗೆ ಈ ವಿಚಾರವನ್ನು ರಾಹುಲ್‌ ಗಾಂಧಿ ಚರ್ಚೆಯನ್ನೂ ಮಾಡಿದ್ದರು. ನಾವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ವಿಶೇಷ ಅಧಿಕಾರವಿರುವ ಸಮಿತಿ (ಸೂಪರ್‌ ಪವರ್‌ ಕಮಿಟಿ)ಯೊಂದನ್ನು ರಚಿಸಿ, ಅದರ ಮೂಲಕ ಅಯೋಧ್ಯೆ ತೀರ್ಪನ್ನು ತಲೆಕೆಳಗಾಗಿ ಮಾಡೋಣ ಎಂದೂ ನಿರ್ಧರಿಸಿದ್ದರು ಎಂಬುದಾಗಿ ಆಚಾರ್ಯ ಆರೋಪಿಸಿದ್ದಾರೆ.

ರಾಮ ಮಂದಿರ ಉದ್ಘಾಟನೆಗೆ ಹೋಗದಿರಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿದ ಬಳಿಕ ಆಚಾರ್ಯ ಅವರು ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರೆಂದು ಫೆಬ್ರವರಿಯಲ್ಲಿ ಅವರನ್ನು ಪಕ್ಷ ಉಚ್ಚಾಟನೆ ಮಾಡಿತ್ತು. ಇದೀಗ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಆಚಾರ್ಯರು ರಾಹುಲ್‌ ಗಾಂಧಿ ವಿರುದ್ಧ ನೀಡಿರುವ ಈ ಹೇಳಿಕೆಯಿಂದಾಗಿ ಬಿಜೆಪಿಗೆ ಕಾಂಗ್ರೆಸ್‌ ವಿರುದ್ಧ ಹೊಸ ಅಸ್ತ್ರ ಸಿಕ್ಕಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next