ಹೊಸದಿಲ್ಲಿ: ಲೋಕಸಭಾ ಚುನಾವಣೆ ನಡೆದು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ರಚಿಸಿದೆ. ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿಪಕ್ಷ ನಾಯಕನ ಸ್ಥಾನಕ್ಕೇರಲಿದ್ದಾರೆ ಎನ್ನಲಾಗಿತ್ತು. ಆದರೆ ರಾಹುಲ್ ಈ ಹುದ್ದೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ವರದಿಯಾಗಿದೆ.
ದಶಕದ ಬಳಿಕ ಕಾಂಗ್ರೆಸ್ ಲೋಕಸಭೆಯಲ್ಲಿ ವಿಪಕ್ಷದ ಸ್ಥಾನ ಪಡೆದಿದೆ. ಹೀಗಾಗಿ ಉತ್ತಮ ನಾಯಕನನ್ನು ವಿಪಕ್ಷ ನಾಯಕರನ್ನಾಗಿ ಮಾಡಲು ಕಾಂಗ್ರೆಸ್ ಮುಂದಾಗಿದೆ. ರಾಹುಲ್ ಗಾಂಧಿ ಅವರು ಒಲ್ಲೆ ಎಂದ ಕಾರಣದಿಂದ ಮೂವರು ಹಿರಿಯ ನಾಯಕರಾದ ಕುಮಾರಿ ಸೆಲ್ಜಾ, ಗೌರವ್ ಗೊಗೊಯ್ ಮತ್ತು ಮನೀಶ್ ತಿವಾರಿ ಅವರನ್ನು ಪರಿಗಣಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟವು 232 ಸೀಟು ಗಳಿಸಿತ್ತು. ಅದರಲ್ಲಿ ಕಾಂಗ್ರೆಸ್ 99 ಕ್ಷೇತ್ರಗಳಲ್ಲಿ ಗೆದ್ದುಕೊಂಡಿತ್ತು. ಪಕ್ಷವು 2014 ರಲ್ಲಿ 44 ಮತ್ತು 2019 ರಲ್ಲಿ 52 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ಉತ್ತೇಜನಕ್ಕೆ ಕಾರಣವಾಗಿದ್ದ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಈ ವಿಚಾರವಾಗಿ ವಿವಿಧ ನಾಯಕರಿಂದ ಅವರ ಮೇಲೆ ಸಾಕಷ್ಟು ಒತ್ತಡ ಬಂದಿದೆ.
2019ರ ಸೋಲಿನ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿದಿದ್ದ ರಾಹುಲ್ ಅವರು ಅದರ ಬಳಿಕ ಯಾವುದೇ ಹುದ್ದೆ ಅಲಂಕರಿಸಲು ಒಪ್ಪುತ್ತಿಲ್ಲ ಎಂದು ವರದಿ ಹೇಳಿದೆ. ರಾಯ್ ಬರೇಲಿ ಮತ್ತು ವಯನಾಡ್ ಕ್ಷೇತ್ರಗಳಲ್ಲಿ ಗೆದ್ದಿರುವ ರಾಹುಲ್ ಅವರು ರಾಯ್ ಬರೇಲಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2019ರಲ್ಲಿಯೂ ಗೆಲುವು ಕಂಡಿದ್ದ ಕೇರಳದ ವಯನಾಡ್ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ. ಅಲ್ಲಿ ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧಿಸುವ ಸಾಧ್ಯತೆಯಿದೆ.