Advertisement

Rabkavi Banhatti; ಲೇಔಟ್ ಗಳಲ್ಲಿ ಮೂಲ ಸೌಕರ್ಯಗಳ ಕೊರತೆ: ಸೂಕ್ತ ಕ್ರಮಕ್ಕೆ ಆಗ್ರಹ

06:23 PM Sep 03, 2024 | Team Udayavani |

ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್ ಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು ಲೇಔಟ್ ಗಳ ಮಾಲೀಕರು ನಗರಸಭೆಯ ಯಾವುದೇ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಮತ್ತು ಲೇಔಟ್ ಗಳಲ್ಲಿ ಕಳಪೆ ಕಾಮಗಾರಿ ಮತ್ತು ಸುಳ್ಳು ಮಾಹಿತಿಯನ್ನು ನಗರಸಭೆಗೆ ನೀಡುತ್ತಿದ್ದಾರೆ. ಅಂಥವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸದಸ್ಯರು ನಗರಸಭೆಯ ಅಧಿಕಾರಿಗಳನ್ನು ಆಗ್ರಹಿಸಿದರು.

Advertisement

ಮುಂದಿನ ದಿನಗಳಲ್ಲಿ ಇಂಥ ಲೇಔಟ್ ಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ನಗರಸಭೆಯ ಸಾಮಾನ್ಯ ಸಭೆಯ ಅನುಮತಿಯನ್ನು ಪಡೆದುಕೊಳ್ಳಬೇಕು. ಅಧ್ಯಕ್ಷರನ್ನು ಒಳಗೊಂಡಂತೆ ಒಂದು ಸಮಿತಿಯನ್ನು ನಿರ್ಮಿಸಬೇಕು ಎಂದು ನಗರಸಭೆಯ ಸದಸ್ಯರ ಸಂಜಯ ತೆಗ್ಗಿ ಸಭೆಗೆ ತಿಳಿಸಿದರು.

ಮತ್ತೊರ್ವ ಸದಸ್ಯ ಶ್ರೀಶೈಲ ಬೀಳಗಿ ಮಾತನಾಡಿ, ಲೇಔಟ್ ಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ನಗರಸಭೆಯ ರಸ್ತೆ, ಚರಂಡಿ ಸೇರಿದಂತೆ ಆಸ್ತಿಗಳನ್ನು ಹಾಳು ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಎಫ್ ಐ ಆರ್ ಮಾಡುವಂತೆ ಆಗ್ರಹಿಸಿದರು.

ಇ-ಆಸ್ತಿಗಳ ಗೊಂದಲದಿಂದಾಗಿ ಅವಳಿ ನಗರಗಳ ಸಾರ್ವಜನಿಕರಿಗೆ ಆಸ್ತಿಗಳ ನೊಂದಣಿ, ಮಾರಾಟ ಮತ್ತು ಖರೀದಿ ಮಾಡಲು ತೊಂದರೆಯಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಇದನ್ನು ಸರಳೀಕರಣಗೊಳಿಸಲು ತಿಳಿಸಿದರು.

ನಗರಸಭೆಯ ವ್ಯಾಪ್ತಿಯಲ್ಲಿ ಇಪ್ಪತ್ತು ಸಾವಿರ ಆಸ್ತಿಗಳಿವೆ. ಆದ್ದರಿಂದ ಆಸ್ತಿಗಳ ಮಾಲೀಕರು ತಮ್ಮ ಸೂಕ್ತ ದಾಖಲೆಗಳನ್ನು ನೀಡಿ ಆಸ್ತಿಗಳನ್ನು ಇ-ಆಸ್ತಿಕರಣಗೊಳಿಸಿಕೊಳ್ಳಬೇಕು ಎಂದು ಪೌರಾಯುಕ್ತ ಜಗದೀಶ ಈಟಿ ತಿಳಿಸಿದರು.

Advertisement

ನಗರಸಭೆಯ ಅಧಿಕಾರಿಗಳು ರಬಕವಿ ನಗರದಲ್ಲಿರುವ ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಂಜಯ ತೆಗ್ಗಿ ಆಗ್ರಹಿಸಿದರು.

ಲೆಕ್ಕಪತ್ರಗಳ ಮಾಹಿತಿಯನ್ನು ಸದಸ್ಯರಿಗೆ ನೀಡಿ: ಸಾಮಾನ್ಯ ಸಭೆಗಿಂತ ಮುಂಚಿತವಾಗಿ ನಗರಸಭೆಯ ಸದಸ್ಯರಿಗೆ ಲೆಕ್ಕ ಪತ್ರಗಳ ಮಾಹಿತಿಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ನಗರಸಭೆಯ ಲೆಕ್ಕಪತ್ರಗಳು ಪಾರದರ್ಶಕವಾಗಿರುವಂತೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಸರ್ವರ್ ಸಮಸ್ಯೆಯಿಂದಾಗಿ ಹಣಕಾಸು ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ನಗರಸಭೆಯ ಸದಸ್ಯೆ ದುರ್ಗವ್ವ ಹರಿಜನ ಮಾತನಾಡಿ, ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡದೇ ಇರುವುದರಿಂದ ವಾರ್ಡ್ ನಲ್ಲಿ ಯಾವುದೇ ದುರಸ್ತಿ ಮತ್ತು ಕಾರ್ಯಗಳು ನಡೆಯುತ್ತಿಲ್ಲ. ಇದರಿಂದಾಗಿ ವಾರ್ಡ್ ಜನರಿಗೆ ಉತ್ತರ ನೀಡುವುದು ಕಷ್ಟವಾಗಿದೆ. ಆದ್ದರಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಆಗ್ರಹಿಸಿದರು.

ವೃತ್ತ ನಾಮಕರಣ: ಬನಹಟ್ಟಿಯ ಸೋಮವಾರ ಪೇಟೆಯಲ್ಲಿನ ರಸ್ತೆಗೆ ಸಂಗೋಳ್ಳಿ ರಾಯಣ್ಣ ವೃತ್ತ ನಾಮಕರಣಕ್ಕೆ ಸಭೆ ಅಂಗೀಕರಿಸಿತು.

ಪ್ರಸಕ್ತ ವರ್ಷ ವಿವಿಧ ಘಟಕಗಳಲ್ಲಿನ ಕಾರ್ಯನಿರ್ವಹಣೆಯ ಕಾರ್ಮಿಕರ ವೇತನ ಸುಮಾರು1 ಕೋಟಿ ರೂ.ಗಳಷ್ಟು ಟೆಂಡರ್ ಕರೆಯಲು ಸಭೆ ತೀರ್ಮಾನಿಸಿತು.

ಅವಳಿ ನಗರಾದ್ಯಂತವಿರುವ ಶೌಚಾಲಯ ನಿರ್ವಹಣೆದಾರರಿಗೆ ಉಚಿತವಾಗಿತ್ತು. ಇದೀಗ ಟೆಂಡರ್ ಕರೆಯುವ ಮೂಲಕ ಹೊಸ ನಿರ್ವಹಣೆದಾರರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಸದಸ್ಯರು ಸಹಮತ ತೋರಿಸಿದರು.

ವಿವಿಧ ಟೆಂಡರ್ ಗಳಿಗೆ ಸಭೆಯಲ್ಲಿ ಅನುಮೋದನೆಯನ್ನು ನೀಡಲಾಯಿತು.ಯಲ್ಲಪ್ಪ ಕಟಗಿ, ಗೌರಿ ಮಿಳ್ಳಿ, ಬಸವರಾಜ ಗುಡೋಡಗಿ, ಚಿದಾನಂದ ಹೊರಟ್ಟಿ, ಶಶಿಕಲಾ ಸಾರವಾಡ ಸೇರಿದಂತೆ ಅನೇಕರು ವಾರ್ಡ್ ಗಳ ಸಮಸ್ಯೆಗಳನ್ನು ಸಭೆಗೆ ತಿಳಿಸಿದರು.

ನಗರಸಭೆಯ ಅಧ್ಯಕ್ಷೆ ವಿದ್ಯಾ ಧಬಾಡಿ, ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ ಇದ್ದರು.ನಗರಸಭೆಯ ಮ್ಯಾನೇಜರ್ ಮುಖೇಶ ಬನಹಟ್ಟಿ, ವೈಶಾಲಿ ಹಿಪ್ಪರಗಿ, ಶೋಭಾ ಹೊಸಮನಿ, ಸಂಗೀತಾ ಕೋಳಿ, ಮುತ್ತಪ್ಪ ಚೌಡಕಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next