Advertisement

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

10:50 PM Apr 25, 2024 | Team Udayavani |

ರಬಕವಿ-ಬನಹಟ್ಟಿ : ಪ್ರಸಕ್ತ ವರ್ಷ ಮಳೆ ಉತ್ತಮ ರಿತಿಯಲ್ಲಿ ಪ್ರಾರಂಭವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಈ ಬಾರಿ ಅರಿಸಿನ ಬೀಜಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ದುಪ್ಪಟ್ಟಾಗಿದೆ. ಅರಿಸಿನಕ್ಕೆ ಉತ್ತಮ ಬೆಲೆಯೂ ಕೂಡಾ ಇರುವುದರಿಂದ ಈ ಭಾಗದ ರೈತರು ಅರಿಸಿನ ಬೀಜಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ.

Advertisement

ಈ ಭಾಗಕ್ಕೆ ತಮಿಳುನಾಡಿನ ಸೇಲಂ ಹಾಗೂ ಕಡಪಾ ಪಟ್ಟಣಗಳಿಂದ ಅರಿಸಿನ ಬೀಜಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ತಮಿಳುನಾಡಿನಲ್ಲಿ ಮಳೆ ಪ್ರಮಾಣ ತೀರ ಕಡಿಮೆಯಾದ ಕಾರಣ ಅಲ್ಲಿನ ಸೇಲಂ ಪಟ್ಟಣದಲ್ಲಿ ಅರಿಸಿನ ಬೀಜಗಳ ಇಳುವರಿ ಕಡಿಮೆಯಾಗಿದೆ. ಆದ್ದರಿಂದ ಸೇಲಂನಿಂದ ಬರುವ ಅರಿಸಿನ ಬೀಜಗಳ ಪೂರೈಕೆಯೂ ಕಡಿಮೆಯಾಗಿದ್ದರಿಂದ ಇಲ್ಲಿ ಬೇಡಿಕೆ ಹೆಚ್ಚಾಗಿ ಬೆಲೆ ಕೂಡಾ ಗಗನಕ್ಕೇರಲು ಕಾರಣವಾಗಿದೆ ಎನ್ನುತ್ತಾರೆ ಇಲ್ಲಿನ ಬೀಜಗಳ ವ್ಯಾಪಾರಸ್ಥರಾದ ಜಗದಾಳದ ದೇವರಾಜ ರಾಠಿ.

ಸೇಲಂ ನಲ್ಲಿ ಮಳೆಯಾಗದ ಕಾರಣ ಕೇಲವೇ ಕೆಲವು ರೈತರಲ್ಲಿ ಮಾತ್ರ ಅರಿಸಿನ ಬೀಜಗಳ ಸಂಗ್ರವಿದೆ. ಮುಂದಿನ ದಿನಗಳಲ್ಲಿ ಬೀಜಗಳ ಬೆಲೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಅವುಗಳನ್ನು ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ. ಆದ್ದರಿಂದ ಕರ್ನಾಟಕದಲ್ಲಿ ಬೀಜಗಳ ಕೊರತೆಯಾಗಿದೆ ಮತ್ತು ಬೆಲೆಗಳಲ್ಲಿ ಕೂಡಾ ಹೆಚ್ಚಾಗಿದೆ. ಕಳೆದ ಸಲ ಒಂದು ಕ್ವಿಂಟಲ್ ಓರಿಜನಲ್ ಚಿನ್ನಾ ಸೇಲಂ ಎಂಬ ಹೆಸರಿನ ಬೀಜಕ್ಕೆ ರೂ. 4000 ಇತ್ತು. ಆದರೆ ಈ ಬಾರಿ ರೂ.7800 ರವರೆಗೆ ಮಾರಾಟವಾಗುತ್ತಿದೆ. ನಾಂದೇಡ ಸೇಲಂ 6000 ರಿಂದ 5500 ವರೆಗೆ ಇದ್ದು, ಬೆಲೆ ಇನ್ನಷ್ಟು ಹೆಚ್ಚಾಗುವ ಸಂಭವವಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಈ ಭಾಗದಲ್ಲಿ ಒಂದೆರಡು ಉತ್ತಮ ಮಳೆಯಾಗುತ್ತದೆ ಎಂಬ ಅಪಾರ ನಂಬಿಕೆಯ ಮೇಲೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಅರಿಸಿನ ನಾಟಿಗೆ ಸಜ್ಜಾಗುತ್ತಿದ್ದಾರೆ.

ಜಾಗದಾಳ ನಾವಲಗಿ ಗ್ರಾಮಗಳ ಸುತ್ತ ಮುತ್ತಲಿನ ಭಾಗದಲ್ಲಿ ಅಂದಾಜು 100 ಟನ್‌ಗೂ ಹೆಚ್ಚು ಅರಿಸಿನ ಬೀಜಗಳು ಮಾರಾಟವಾಗುತ್ತವೆ. ಒಂದು ಲಾರಿಯಲ್ಲಿ 10 ರಿಂದ16 ಟನ್‌ಷ್ಟು ಬೀಜಗಳು ಬರುತ್ತವೆ.

Advertisement

ಜಗದಾಳ ಗ್ರಾಮಕ್ಕೆ ಅರಿಸಿನ ಬೀಜಗಳನ್ನು ಖರೀದಿಸಲು ರಬಕವಿ ಬನಹಟ್ಟಿ, ಜಮಖಂಡಿ, ಗೋಕಾಕ, ರಾಯಬಾಗ ಮತ್ತು ಅಥಣಿ ತಾಲೂಕಿನ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ರೈತರು ಆಗಮಿಸುತ್ತಿದ್ದಾರೆ.

ಅರಿಸಿನ ಬೀಜಗಳಲ್ಲಿಯೂ ಕೂಡಾ ಸಾಕಷ್ಟು ಕಲಬೆರೆಕೆಯ ಬೀಜಗಳು ಬರುತ್ತಿರುವುದರಿಂದ ರೈತರಿಗೆ ತೊಂದರೆಯಾಗಿದೆ ಆದರೂ ಜಗದಾಳ ಭಾಗದಲ್ಲಿ ಮಾರಾಟವಾಗುವ ಬೀಜ ಉತ್ತಮ ಗುಣಮಟ್ಟದ್ದಾಗಿರುತ್ತದೆ . ಕಳೆದ 10 ವರ್ಷದಿಂದ ಈಲ್ಲಿಯೇ ನಾವು ಬೀಜ ಖರೀದಿ ಮಾಡುತ್ತಿದ್ದೇವೆ. ಈ ಬಾರಿ ಮಳೆ ಇಲ್ಲದಿದ್ದರೂ ಮಳೆ ಬರುತ್ತದೆ ಎಂಬ ಭರವಸೆಯಿಂದ ಬೀಜ ಸಂಗ್ರಹಿಸುತ್ತಿದ್ದೇವೆ ಎಂದು ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ರೈತ ಕೇಶವ ಬಾಬು ಹಾರೂಗೇರಿ ಪತ್ರಿಕೆಗೆ ತಿಳಿಸಿದರು.

ಒಟ್ಟಿನಲ್ಲಿ ಅರಿಸಿನ ಕೃಷಿ ರೈತರಿಗೆ ಪರಿಶ್ರಮದ ಬೆಳೆಯಾಗಿದ್ದರೂ, ಮಾರುಕಟ್ಟೆಯಲ್ಲಿ ಅರಿಸಿನಕ್ಕೆ ಸಾಂಗ್ಲಿ ಮಾರುಕಟ್ಟೆಯಲ್ಲಿ ಈ ಬಾರಿ 15000 ರೂ. ಪ್ರತಿ ಕ್ವಿಂಟಲ್‌ಗೆ ಮಾರಾಟವಾಗುತ್ತಿದೆ.

ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next