Advertisement

ಶ್ವಾನಗಳಿಗೆ ರೇಬಿಸ್‌ ಲಸಿಕೆ ಹಾಕಿಸಿ: ಚವ್ಹಾಣ

05:46 PM Sep 29, 2021 | Team Udayavani |

ಬೀದರ: ವಿಶ್ವ ರೇಬಿಸ್‌ ದಿನಾಚರಣೆ ಅಂಗವಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಆಯೋಜಿಸಿರುವ ರೇಬಿಸ್‌ ಲಸಿಕಾ ಅಭಿಯಾನಕ್ಕೆ ಮಂಗಳವಾರ ನಗರದ ಪಾಲಿ ಕ್ಲಿನಿಕ್‌ನಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಸಚಿವರು, ಜಾಗತಿಕವಾಗಿ ರೇಬಿಸ್‌ ರೋಗ ನಿರ್ಮೂಲನೆಗೆ ಜಾಗೃತಿ ಮೂಡಿಸಲು, ಪ್ರತಿ ವರ್ಷ ಸೆ.28ರಂದು ವಿಶ್ವ ರೇಬಿಸ್‌ ದಿನ ಆಚರಿಸಲಾಗುತ್ತದೆ. ಸಾರ್ವಜನಿಕರಿಗೆ ರೇಬಿಸ್‌ ರೋಗದ ಕುರಿತು ಅರಿವು ಮೂಡಿಸುವ ಹಾಗೂ ಉಚಿತ ಲಸಿಕೆ ಹಾಕುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ರಾಜ್ಯಾದ್ಯಂತ ಸೆ.30ರವರೆಗೆ 3 ದಿನಗಳ ಕಾಲ ಜರುಗಲಿದ್ದು, ರಾಜ್ಯದ ಎಲ್ಲ ಪಶು ಆಸ್ಪತ್ರೆಗಳಲ್ಲಿ ಉಚಿತವಾಗಿ ನಾಯಿಗಳಿಗೆ ಲಸಿಕೆ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.

ಮಾರಣಾಂತಿಕವಾಗಿರುವ ರೇಬಿಸ್‌ ರೋಗ ಬಾರದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಮುದ್ದು ಪ್ರಾಣಿಗಳೆಂದು ಪರಿಗಣಿಸ್ಪಡುವ ನಾಯಿಗಳ ಆರೋಗ್ಯದ ದೃಷ್ಟಿಯಿಂದ ಪಶು ಚಿಕಿತ್ಸಾ ಕೇಂದ್ರದಲ್ಲಿ ಲಸಿಕೆ ಹಾಕಿಸಬೇಕು. ಪಶು ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ರೇಬಿಸ್‌ ರೋಗ ಮತ್ತು ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಜೊಲ್ಲು ಸುರಿಸುವಿಕೆ, ಎಲ್ಲರ ಮೇಲೆ ಏರಿಹೋಗಿ ಕಚ್ಚಲು ಪ್ರಯತ್ನಿಸುವುದು, ಕರೆಗೆ ಪ್ರತಿಕ್ರಿಯೆ ನೀಡದಿರುವುದು, ಕ್ರಮೇಣ ಧ್ವನಿಯಲ್ಲಿ ವ್ಯತ್ಯಾಸ, ಗೊಂದಲ ಪಡುವುದು, ಪಾರ್ಶ್ವವಾಯು ಕಾಣಿಸಿ 8-10 ದಿನಗಳಲ್ಲಿ ಸಾವು ಸಂಭವಿಸುವುದು ಉಗ್ರ ಹುಚ್ಚಿನ ಲಕ್ಷಣಗಳು ಮತ್ತು ಮೂಲೆಯಲ್ಲಿ ಮುದುಡಿ ಕೂತಿರುವುದು, ಊಟ ಮಾಡದಿರುವುದು, ಗಂಟಲು ಊದುವಿಕೆ, ತೆರೆದ ಬಾಯಿ ಮುಚ್ಚಲಾಗದೇ ಸಾವನ್ನಪ್ಪುವುದು ಮಂದ ಹುಚ್ಚಿನ ಲಕ್ಷಣಗಳಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿ ಹೇಳಿದರು.

ಹುಚ್ಚು ನಾಯಿ ಕಚ್ಚಿದರೆ ಕಚ್ಚಿದ ಗಾಯವನ್ನು ಸಾಬೂನು ಹಾಗೂ ನೀರಿನಿಂದ ಚೆನ್ನಾಗಿ ತೊಳೆಯಬೇಕು, ಕಚ್ಚಿದ ಗಾಯಕ್ಕೆ ಡೆಟಾಲ್‌/ ಸಾವಲಾನ್‌/ ಪೊವೀಡೀನ್‌ ಅಯೋಡಿನ್‌ನಂತಹ ರೋಗ ನಿರೋಧಕ ಔಷಧಿ ಹಚ್ಚಬೇಕು. ಯಾವುದೇ ಕಾರಣಕ್ಕೂ ಗಾಯದ ಭಾಗ ಬ್ಯಾಂಡೇಜ್‌/ಬಟ್ಟೆಯಿಂದ ಕಟ್ಟಬಾರದು. ರಕ್ತ ಬಂದಂತಹ ಗಾಯವಾದರೆ ಕೂಡಲೇ ರೇಬಿಸ್‌ ಇಮ್ಯೂನೋಗ್ಲೋಬುಲಿನ್‌ ಚುಚ್ಚುಮದ್ದು ಗಾಯಕ್ಕೆ ಕೊಡಿಸಬೇಕು ಎಂದು ತಿಳಿಸಿದರು.

Advertisement

ಹುಚ್ಚು ನಾಯಿ ಕಡಿತಕ್ಕೊಳಗಾದ ವ್ಯಕ್ತಿ ಅಥವಾ ಜಾನುವಾರುಗಳಿಗೆ 0, 3, 7, 14, 28ನೇ ದಿನಗಳಂದು ತಪ್ಪದೇ ಲಸಿಕೆ ಕೊಡಬೇಕು. ರೋಗದ ಬಗ್ಗೆ ನಿಷ್ಕಾಳಜಿ ವಹಿಸಬಾರದು. ರೋಗ ಬಾರದಂತೆ ತಡೆಯಲು ಲಸಿಕೆಯೇ ಪ್ರಮುಖ ಅಸ್ತ್ರವಾಗಿದೆ ಎಂದರು. ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಸಲಹಾ ಸಮಿತಿ ಸದಸ್ಯ ಶಿವರಾಜ ಗಂದಗೆ, ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರ ಭೂರೆ, ವೈದ್ಯಾಧಿ ಕಾರಿ ಡಾ| ಬಸವರಾಜ ನಿಟ್ಟೂರೆ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ರೇಬಿಸ್‌ನಿಂದ ನರಳುತ್ತಿರುವ ಪ್ರಾಣಿ ಕಚ್ಚಿದಾಗ/ ನೆಕ್ಕಿದಾಗ ಶರೀರದೊಳಗೆ ರೇಬಿಸ್‌ ವೈರಾಣು ಪ್ರವೇಶಿಸಿ, ರೋಗ ಉಂಟು ಮಾಡುತ್ತದೆ. ರೇಬಿಸ್‌ನಿಂದ ನರಳುತ್ತಿರುವ ಪ್ರಾಣಿಯ ಜೊಲ್ಲಿನಿಂದ ರೇಬಿಸ್‌ ವೈರಾಣು ಇತರೆ ಪ್ರಾಣಿಗಳಿಗೆ ಹರಡುತ್ತದೆ. ನಾಯಿ, ಬೆಕ್ಕು, ಕುರಿ, ಮೇಕೆ, ಹಸು, ಎಮ್ಮೆ, ಕೋತಿ, ತೋಳ, ನರಿ, ಕರಡಿ, ಮುಂಗುಸಿ, ಹಂದಿ, ಕತ್ತೆ, ಕುದುರೆ ಮತ್ತು ಒಂಟೆಗಳಿಂದ ರೇಬಿಸ್‌ ಹರಡುತ್ತದೆ. ಆದರೆ ಭಾರತದಲ್ಲಿ ಬಹುತೇಕ ಜನರಿಗೆ ಹುಚ್ಚುನಾಯಿ ಕಡಿತದಿಂದ ರೇಬಿಸ್‌ ಹರಡುತ್ತದೆ.
ಪ್ರಭು ಚವ್ಹಾಣ, ಉಸ್ತುವಾರಿ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next