Advertisement

Rabakavi Banahatti: ಸದ್ಯಕ್ಕಿಲ್ಲ ಕುಡಿಯುವ ನೀರಿನ ಸಮಸ್ಯೆ

03:50 PM Apr 25, 2023 | Team Udayavani |

ರಬಕವಿ-ಬನಹಟ್ಟಿ : ಈ ವರ್ಷ ಬಿಸಿಲಿನ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ರಬಕವಿ-ಬನಹಟ್ಟಿ ತಾಲೂಕಿಗೆ ಕೃಷ್ಣಾ-ಘಟಪ್ರಭಾ ನದಿ ಪ್ರಮುಖ ನೀರಿನ ಜಲಮೂಲಗಳಾಗಿವೆ. ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಇಳಿಮುಖವಾದರೂ ಮೇ ಕೊನೆಯವರೆಗೆ ನೀರು ಸಾಕಾಗಬಹುದೆಂಬುದು ಅಧಿಕಾರಿಗಳ ಅಂಬೋಣ.

Advertisement

ಅಲ್ಲದೇ ಮಹಾರಾಷ್ಟ್ರದ ಕೊಯ್ನಾ ಹಾಗೂ ರಾಜಾಪೂರ ಬ್ಯಾರೇಜ್‌ ಗಳ ಮೂಲಕ ನೀರು ಬಿಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಮಹಾರಾಷ್ಟ್ರ ಸರಕಾರದ ಜತೆ ಮಾತುಕತೆ ನಡೆಸಿದ್ದು, ಅದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಿದೆ.ನೀರು ಬಿಡುವ ಸಾಧ್ಯತೆ ಇರುವುದರಿಂದ ಬಹುಶಃ ಈ ಬಾರಿಯೂ ಬೇಸಿಗೆಯನ್ನು ಸರಾಗವಾಗಿ ಕಳೆಯಬಹುದೆಂದು ಅಧಿಕಾರಿಗಳು ಹೇಳುತ್ತಾರೆ.

ಕಳೆದ 2-3 ವರ್ಷಗಳಿಂದ ಕೃಷ್ಣಾ-ಘಟಪ್ರಭಾ ನದಿಗಳು ತುಂಬಿ ಹರಿದು ಅಂತರ್ಜಲ ಮಟ್ಟ ಹೆಚ್ಚಾಗಿದ್ದು ನೀರಿನ ಅಭಾವ ಅಷ್ಟಾಗಿ ಕಾಣಸಿಗದು. 3-4 ವರ್ಷಗಳ ಹಿಂದೆ ಕುಡಿಯುವ ನೀರಿನ ಬವಣೆ ಸಾಕಷ್ಟಿತ್ತು. ಆದರೆ ಇದಕ್ಕೆ ಜಿಲ್ಲಾಡಳಿತ, ತಾಲೂಕಾಡಳಿತ ಆಯಾ ಭಾಗದಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಿ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ರಬಕವಿ-ಬನಹಟ್ಟಿ ತಾಲೂಕಿನ ಅವಳಿ ನಗರಗಳಲ್ಲಿ ಉಂಟಾಗುತ್ತಿದ್ದ ನೀರಿನ ಬವಣೆ ಸದ್ಯಕ್ಕೆ ಕಂಡು ಬರುತ್ತಿಲ್ಲ. ಕಾರಣ ನಗರದ ಎಲ್ಲ ವಾರ್ಡ್‌ಗಳಲ್ಲಿ ನಗರಸಭೆ ವತಿಯಿಂದ ಕೃಷ್ಣಾ ನದಿಯಿಂದ ಜಾಕ್‌ವೆಲ್‌ ಮೂಲಕ ನೀರಿನ ವ್ಯವಸ್ಥೆ ಮಾಡುತ್ತಿದ್ದು, ಅಲ್ಲದೇ ಪ್ರತಿಯೊಂದು ವಾರ್ಡ್‌ಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಿದ್ದು ಇದರಿಂದ ಈ ಸಲದ ಬೇಸಿಗೆಯನ್ನು ಸಂಪೂರ್ಣ ನಿಭಾಯಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

ಮಹಾಲಿಂಗಪುರದಲ್ಲೂ ನೀರಿನ ಸಮಸ್ಯೆ ಆಗಲಾರದು. ಕಾರಣ ಅಲ್ಲಿ ಕೆರೆ ತುಂಬಿದ್ದು, ಪುರಸಭೆ ಕೊಳವೆ ಬಾವಿಗಳನ್ನು ಕೊರೆಯಿಸಿದ್ದರಿಂದ ನೀರಿನ ಸಮಸ್ಯೆ ಉಂಟಾಗುವ ಸಂಭವವಿಲ್ಲ. ಅಲ್ಲದೇ ಅಲ್ಲಿನ ಪುರಸಭೆ ಅಧಿ ಕಾರಿಗಳು ಮುಂಜಾಗ್ರತಾ ಕ್ರಮವಾಗಿ ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದಾರೆ.

Advertisement

ತೇರದಾಳದಲ್ಲೂ ನೀರಿನ ಸಮಸ್ಯೆ ಉಂಟಾಗದು. ಅಲ್ಲಿಯೂ ಕೂಡಾ ಕೃಷ್ಣಾ ನದಿ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಬೇಸಿಗೆಯನ್ನು ನಿರಾಯಾಸವಾಗಿ ಕಳೆಯಬಹುದು.

ಗ್ರಾಮೀಣ ಪ್ರದೇಶಗಳಲ್ಲೂ ಸಾಕಷ್ಟು ಕೊಳವೆ ಬಾವಿ ಕೊರೆಯಿಸಿರುವುದರಿಂದ ಅಲ್ಲೂ ಕೂಡಾ ಈ ಬಾರಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ. ಅಲ್ಲದೇ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಯಿಂದ ಕೃಷ್ಣಾ ನದಿ ಮೂಲಕ ನೀರು ಕೊಡಿಸುವ ವ್ಯವಸ್ಥೆ ಮಾಡಿದೆ. ಆಸಂಗಿ-ಜಗದಾಳ ಗ್ರಾಮಗಳಲ್ಲಿ ಬಾವಿ-ಕೊಳವೆ ಬಾವಿಗಳ ಮೂಲಕ ಗ್ರಾಪಂನವರು ನೀರು ಪೂರೈಸುತ್ತಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶದ ಕೆಲ ಬಡಾವಣೆಗಳಿಗೆ ನೀರಿನ ಸಮಸ್ಯೆ ಆಗಬಹುದು. ಆದರೂ ಅಲ್ಲಿ ಸಮರ್ಪಕ ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ತಾಲೂಕು ಆಡಳಿತ ಹೇಳುತ್ತಿದೆ.

ಬಾವಿ-ಕೊಳವೆಬಾವಿ ಬಳಸಿ ನೀರು ಪೂರೈಕೆ: ತಾಲೂಕಿನ ಆಸಂಗಿ ಗ್ರಾಮ ಪಂಚಾಯಿತಿ ಬಾವಿ, ಕೊಳವೆ ಬಾವಿಗಳನ್ನು ಬಳಸಿ ವರ್ಷದ 12 ತಿಂಗಳು ನೀರು ಪೂರೈಸುತ್ತಿರುವುದು ವಿಶೇಷವಾಗಿದೆ. ಅದೇ ರೀತಿ ಜಗದಾಳ ಗ್ರಾಮದಲ್ಲೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಚಾಲೂ ಇದ್ದರೂ, ಬೋರ್‌ ವೆಲ್‌ ಮೂಲಕ ಪ್ರತಿದಿನ ನೀರು ಪೂರೈಕೆ ವ್ಯವಸ್ಥೆ ಮಾಡಿಕೊಂಡಿದೆ. ಇದರಿಂದ ಈ ಭಾಗದಲ್ಲೂ ಕೂಡಾ ಯಾವುದೇ ನೀರಿನ ತೊಂದರೆ ಇಲ್ಲ.

ಈ ಭಾಗದ ಕೃಷ್ಣಾ-ಘಟಪ್ರಭಾ ನದಿಯಿಂದ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದ್ದು, ಅಲ್ಲದೇ ಕೊಳವೆ ಬಾವಿಗಳು ಹೆಚ್ಚಾಗಿ ಇರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಸಮರ್ಪಕ ನೀರು ದೊರೆಯುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಅಲ್ಲದೇ ಬೇಸಿಗೆಯಲ್ಲಿ ತಾಪಮಾನ ಹೆಚ್ಚಿರುವುದರಿಂದ ಸಾರ್ವಜನಿಕ ಸಂಘ-ಸಂಸ್ಥೆಗಳು ಪ್ರತಿ ವರ್ಷದಂತೆ ಬಸ್‌ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಅರವಟಿಗೆಗಳನ್ನು ಆರಂಭಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.

ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಆದರೂ ತಾಲೂಕಿನಲ್ಲಿ ಬೋರವೆಲ್‌ಗ‌ಳನ್ನು ಹಾಗೂ ಟ್ಯಾಂಕರ್‌ಗಳನ್ನು ಗುರುತಿಸಿದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಂಡು ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ.  –ಉಮೇಶ ಸಿದ್ನಾಳ, ಕಾರ್ಯ ನಿರ್ವಹಣಾಧಿಕಾರಿ, ತಾಪಂ, ರಬಕವಿ-ಬನಹಟ್ಟಿ.

ತಾಲೂಕಿನಲ್ಲಿ ನೀರಿನ ಯಾವುದೇ ಸಮಸ್ಯೆ ಇಲ್ಲ.ಈ ಕುರಿತು ಈಗಾಗಲೇ ಸಭೆ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ನೀರಿನ ಅಭಾವ ಆಗಲ್ಲ. ಆದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. –ಡಾ|ಡಿ.ಎಚ್‌.ಹೂಗಾರ, ತಹಶೀಲ್ದಾರ್‌, ರಬಕವಿ-ಬನಹಟಿ

ರಬಕವಿ-ಬನಹಟ್ಟಿನಗರಸಭೆಯಾದ್ಯಂತ ಈ ವರ್ಷ ನೀರಿನ ಸಮಸ್ಯೆ ಸದ್ಯಕ್ಕಂತೂ ಇಲ್ಲ. ಆದರೂ ಮುಂಜಾಗ್ರತೆ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಂಡಿದ್ದೇವೆ. –ಅಶೋಕ ಗುಡಿಮನಿ ಪೌರಾಯುಕ್ತರು, ನಗರಸಭೆ, ರಬಕವಿ-ಬನಹಟ್ಟಿ

ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next