Advertisement

JDU ಜತೆ ಸದ್ದಿಲ್ಲದೆ ಡೀಲ್‌: ಬಿಹಾರದಲ್ಲಿ ಬಿಜೆಪಿ ಗೋಲ್‌

12:53 AM Jan 29, 2024 | Team Udayavani |

ಪಟ್ನಾ:ಇತ್ತೀಚಿನ ವರ್ಷಗಳಲ್ಲಿ ವಿವಿಧ ರಾಜ್ಯಗಳಲ್ಲಿ ಆದ ರಾಜಕೀಯ ಬೆಳವಣಿಗೆಗಳು, ಸರ್ಕಾರಗಳ ಪತನಗಳ ಇತಿಹಾಸ ನೋಡಿದರೆ ಒಂದಂತೂ ಸ್ಪಷ್ಟವಾಗುತ್ತದೆ. ಆರಂಭದಲ್ಲಿ “ಕಾದು ನೋಡುವ ತಂತ್ರ’ ಅನುಸರಿಸುವ ಬಿಜೆಪಿ, ನಂತರದಲ್ಲಿ ಪ್ರತಿಪಕ್ಷಗಳ ಆಡಳಿತವಿರುವ ಸರ್ಕಾರದೊಳಗಿನ ಭಿನ್ನಮತಗಳು, ಅಸಮಾಧಾನಗಳನ್ನೇ ದಾಳವಾಗಿಸಿಕೊಂಡು, ಸದ್ದಿಲ್ಲದೇ “ಆಪರೇಷನ್‌’ ನಡೆಸಿ, ಆ ರಾಜ್ಯದಲ್ಲಿ ಅಧಿಕಾರಕ್ಕೇರುತ್ತದೆ.

Advertisement

ಬಿಹಾರದಲ್ಲಿ ನಡೆದಿದ್ದೂ ಇದುವೇ! 2017ರಲ್ಲಿ ನಿತೀಶ್‌ ಕುಮಾರ್‌ ಅವರು ಬಿಜೆಪಿ ಜತೆ ಮೈತ್ರಿ ಕಡಿದುಕೊಂಡು ಆರ್‌ಜೆಡಿ-ಕಾಂಗ್ರೆಸ್‌ನ ಮಹಾಮೈತ್ರಿಯೊಂದಿಗೆ ಕೈಜೋಡಿಸಿದಾಗ, ಬಿಜೆಪಿಯು ಕಾದು ನೋಡುವ ತಂತ್ರಕ್ಕೆ ಶರಣಾಗಿ, ಸಮಯ ಬರಲಿ ಎಂದು ಕಾಯುತ್ತಿತ್ತು. ಯಾವಾಗ ಆರ್‌ಜೆಡಿ ಜತೆ ನಿತೀಶ್‌ ಸಂಬಂಧ ಹಳಸುತ್ತಾ ಬಂತೋ, ವಿಪಕ್ಷಗಳ ಇಂಡಿಯಾ ಮೈತ್ರಿಯಲ್ಲೂ ನಿತೀಶ್‌ ಮೂಲೆಗುಂಪಾಗುತ್ತಿದ್ದಾರೆ ಎಂಬ ಸುಳಿವು ಸಿಕ್ಕಿತೋ, ಬಿಜೆಪಿ ತನ್ನ ಮಾಸ್ಟರ್‌ಪ್ಲ್ರಾನ್‌ ಜಾರಿ ಮಾಡಿತು. ನಿತೀಶ್‌ ಜತೆ ಹಿಂಬಾಗಿಲ ಮಾತುಕತೆ ಶುರುಮಾಡಿತು.

ಕಳೆದ ಕೆಲವು ದಿನಗಳಲ್ಲಿ ಬಿಹಾರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಹೈಡ್ರಾಮಾಗಳೇ ಇದಕ್ಕೆ ಸಾಕ್ಷಿ. ಆರಂಭದಲ್ಲಿ ಬಿಜೆಪಿ ನಾಯಕ ಸುಶೀಲ್‌ ಮೋದಿ ಸೇರಿದಂತೆ ಕೆಲವರು ನಿತೀಶ್‌ ಅವರ ಘರ್‌ವಾಪ್ಸಿಗೆ ವಿರೋಧ ವ್ಯಕ್ತಪಡಿಸಿದರಾದರೂ, ನಂತರ ಹೈಕಮಾಂಡ್‌ನ‌ ಸೂಚನೆಗೆ ಎಲ್ಲರೂ ತಲೆಬಾಗಬೇಕಾಯಿತು. ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರು ಒಂದು ಹಂತದಲ್ಲಿ, “ನಿತೀಶ್‌ಗೆ ಬಿಜೆಪಿ ಬಾಗಿಲು ಮುಚ್ಚಿದೆ’ ಎಂದು ಹೇಳಿದರಾದರೂ, ನಂತರ ಮೌನಕ್ಕೆ ಶರಣಾದರು.

ನಿತೀಶ್‌ ನಮ್ಮ ಹಾದಿಗೆ ಬರುತ್ತಿದ್ದಾರೆ ಎಂಬ ಸುಳಿವು ಸಿಕ್ಕಿದ ಕೂಡಲೇ ಬಿಜೆಪಿ ಹೈಕಮಾಂಡ್‌ ಬಿಹಾರ ನಾಯಕರಾದ ಸುಶೀಲ್‌ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಸಾಮ್ರಾಟ್‌ ಚೌಧರಿ ಸೇರಿದಂತೆ ಇತರೆ ಪ್ರಮುಖರನ್ನು ದೆಹಲಿಗೆ ಕರೆಸಿ, ಮಾತುಕತೆ ನಡೆಸಿತು. ಕೇಂದ್ರ ಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ನಡ್ಡಾ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಕೂಡ ಈ ಸಭೆಯಲ್ಲಿದ್ದರು. ಇದರ ಬೆನ್ನಲ್ಲೇ ಸುಶೀಲ್‌ ಮೋದಿ ಕೂಡ, “ರಾಜಕೀಯದಲ್ಲಿ ಯಾವ ಬಾಗಿಲು ಕೂಡ ಶಾಶ್ವತವಾಗಿ ಮುಚ್ಚಿರುವುದಿಲ್ಲ’ ಎಂದರೆ, ಗಿರಿರಾಜ್‌ ಸಿಂಗ್‌ ಅವರೂ, ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದರು. ಇವೆಲ್ಲವೂ ನಿತೀಶ್‌ ಜತೆ ಬಿಜೆಪಿ ಮಾತುಕತೆ ಯಶಸ್ವಿಯಾಗಿರುವುದರ ಸುಳಿವು ನೀಡಿತು. ಒಟ್ಟಿನಲ್ಲಿ ಚಾಣಕ್ಯ ಶಾ, ಬಿಹಾರದ ರಾಜಕೀಯದಲ್ಲಿ ಉರುಳಿಸಿದ ದಾಳವು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಉರುಳಿಸಿದೆ.

ಬಿಜೆಪಿಗೇನು ಲಾಭ?

Advertisement

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಮತ್ತೂಂದು ರಾಜ್ಯ ಬಿಜೆಪಿ ತೆಕ್ಕೆಗೆ

ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆಲ್ಲಲು ನೆರವು

ನಿತೀಶ್‌ರನ್ನೇ ತನ್ನತ್ತ ಸೆಳೆದಿದ್ದು ರಾಷ್ಟ್ರೀಯ ಮಟ್ಟದಲ್ಲಿ ಇಂಡಿಯಾ ಒಕ್ಕೂಟಕ್ಕೆ ಭಾರೀ ಪೆಟ್ಟು

ಬಿಹಾರ ಸರ್ಕಾರದ ನಿರ್ಧಾರಗಳಲ್ಲಿ ಹೆಚ್ಚಿನ ನಿಯಂತ್ರಣ ಸಾಧಿಸಲು ಸಾಧ್ಯ.

ನಿತೀಶ್‌ಗೇನು ಲಾಭ?

2019ರಲ್ಲಿ ಗೆದ್ದ ಲೋಕಸಭಾ ಸ್ಥಾನಗಳನ್ನು ಈ ಬಾರಿಯೂ ಉಳಿಸಿಕೊಳ್ಳಬಹುದು

ಬಿಹಾರದ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು

ದೇಶಾದ್ಯಂತ ಬಿಜೆಪಿ, ಮೋದಿ ಪರ ಅಲೆ ಇರುವುದರಿಂದ ಮತ್ತೆ ಎನ್‌ಡಿಎ ಗೆಲ್ಲುವ ಸಾಧ್ಯತೆ ಹೆಚ್ಚಿರುವುದು

2025ರ ಬಳಿಕ ಕೇಂದ್ರದಲ್ಲಿ ಹೈಪ್ರೊಫೈಲ್‌ ಸ್ಥಾನ, ಒಂದಲ್ಲ ಒಂದು ದಿನ ಪ್ರಧಾನಿ ಸ್ಥಾನ ನಿರೀಕ್ಷೆ

ಒಬಿಸಿ ಸಮುದಾಯದ ಪ್ರಮುಖ ಸಾಮ್ರಾಟ್‌

ಬಿಹಾರ ವಿಧಾನ ಪರಿಷತ್‌ ಸದಸ್ಯರಾಗಿರುವ ಇವರು ನಿತೀಶ್‌ ಸಂಪುಟದಲ್ಲಿ ಡಿಸಿಎಂ ಆಗುವ ಮೊದಲು ಪ್ರತಿಪಕ್ಷ ನಾಯಕರೂ ಆಗಿದ್ದರು. ಕಳೆದ ವರ್ಷದ ಮಾರ್ಚ್‌ನಲ್ಲಿ ಸಾಮ್ರಾಟ್‌ ಚೌಧರಿ ಅವರನ್ನು ಬಿಹಾರ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ರಾಜಕೀಯವಾಗಿಯೂ ಪ್ರಮುಖ ಕೌಟುಂಬಿಕ ಹಿನ್ನೆಲೆಯಿಂದ ಬಂದಿರುವ ಅವರು, ರಾಜ್ಯದಲ್ಲಿ ಪ್ರಬಲ ಸಮುದಾಯವಾಗಿರುವ ಕುಮ್ರಿ ಮತ್ತು ಖುಶ್ವಾಹ ಜನರ ಮತಗಳನ್ನು ಸೆಳೆಯವ ನಿಟ್ಟಿನಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ನಿಯುಕ್ತಿಗೊಳಿಸಲಾಗಿತ್ತು. ಮೂಲತಃ ಆರ್‌ಜೆಡಿ ನಾಯಕರಾಗಿದ್ದ ಅವರು, 2014ರಲ್ಲಿ 13 ಶಾಸಕರ ಜತೆಗೆ ಪಕ್ಷವನ್ನು ಒಡೆದಿದ್ದರು.

ಆರ್‌ಎಸ್‌ಎಸ್‌ ಹಿನ್ನೆಲೆಯ ವಿಜಯ ಸಿನ್ಹಾ

ಲಖೀಸರೈ ಕ್ಷೇತ್ರದ ಶಾಸಕರಾಗಿರುವ ಸಿನ್ಹಾ ಅವರು ಬಿಹಾರ ವಿಧಾನಸಭೆ ಯಲ್ಲಿ 2005ರಿಂದ ಬಿಜೆಪಿ ನಾಯಕರಾಗಿದ್ದವರು. 2020ರಿಂದ 2022ರ ವರೆಗೆ ವಿಧಾನಸಭೆಯ ಸ್ಪೀಕರ್‌ ಆಗಿದ್ದವರು. ಬಿಜೆಪಿ ವತಿಯಿಂದ ಬಿಹಾರ ವಿಧಾನಸಭೆಯಲ್ಲಿ ಸ್ಪೀಕರ್‌ ಆದ ಹೆಗ್ಗಳಿಕೆಯೂ ಅವರದ್ದೇ. ಭೂಮಿಹಾರ್‌ ಸಮುದಾಯದ ನಾಯಕರಾಗಿರುವ ಅವರು, ಎಂಜಿನಿಯರಿಂಗ್‌ ಪದವೀಧರರು. ಜತೆಗೆ ಆರ್‌ಎಸ್‌ಎಸ್‌ ಹಿನ್ನೆಯುಳ್ಳವರು. ರಾಜ್ಯ ಬಿಜೆಪಿ ಘಟಕದಲ್ಲಿ ಸಂಸದ ಸುಶೀಲ್‌ ಕುಮಾರ್‌ ಮೋದಿಯವರ ಬಳಿಕ ಅತ್ಯಂತ ಹೆಚ್ಚು ಗೌರವಕ್ಕೆ ಪಾತ್ರರಾಗಿರುವ ವ್ಯಕ್ತಿ ಸಿನ್ಹಾ ಆಗಿದ್ದಾರೆ.

ಗೋಸುಂಬೆ ತನ್ನ ಚರ್ಮದ ಬಣ್ಣ ಬದಲಿಸುವುದಕ್ಕೇ ಕುಖ್ಯಾತಿ ಪಡೆದಿದೆ. ಅದೇ ರೀತಿ ರಾಜಕೀಯ ನಿಯತ್ತನ್ನು ಬದಲಿಸುವ ಪಲ್ಟಿ ಕುಮಾರ್‌ಗೂ “ಗೋಸುಂಬೆ (ಊಸರವಳ್ಳಿ)ರತ್ನ’ ಪ್ರಶಸ್ತಿ ನೀಡಬೇಕು.

ತೇಜ್‌ ಪ್ರತಾಪ್‌  ಆರ್‌ಜೆಡಿ ನಾಯಕ

ನಂಬಿಕೆ ದ್ರೋಹವನ್ನು ಜನ ಸಹಿಸಲ್ಲ. ನಿತೀಶ್‌ ಈಗ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರು ಒಕ್ಕೂಟ ತೊರೆದಿದ್ದು ಇಂಡಿಯಾ ಬ್ಲಾಕ್‌ಗೆ ಲಾಭ ಮತ್ತು ಬಿಜೆಪಿಗೆ ನಷ್ಟ.

 ರವೀಂದ್ರನ್‌ ಡಿಎಂಕೆ ವಕ್ತಾರ

ಕಸವು ಮತ್ತೆ ಕಸದ ತೊಟ್ಟಿಗೆ ಸೇರ್ಪಡೆಗೊಂಡಿದೆ. ಗಬ್ಬುನಾರುತ್ತಿರುವ ಕಸವನ್ನು ಮತ್ತೆ ಸೇರ್ಪಡೆಗೊಳಿಸಿಕೊಂಡಿದ್ದಕ್ಕೆ ಆ ಗುಂಪಿಗೆ ಶುಭಾಶಯಗಳು.

 ರೋಹಿಣಿ  ಲಾಲು ಪುತ್ರಿ

ನಿತೀಶ್‌ ಇಂಡಿಯಾ ಒಕ್ಕೂಟದಿಂದ ಹೊರಬರುವುದು 5 ದಿನ ಮೊದಲೇ ತಿಳಿದಿತ್ತು. ಲಾಲು ಅವರು ಈ ಬಗ್ಗೆ ತಿಳಿಸಿದ್ದರು. ಎಲ್ಲೂ ಬಹಿರಂಗಪಡಿಸದಿರಿ ಎಂದಿದ್ದರಿಂದ ನಾನು ಏನೂ ಹೇಳಿರಲಿಲ್ಲ.

ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ

ಈಗ ಮಾಡಿಕೊಂಡ ಮೈತ್ರಿ ಮುಂದಿನ ವಿಧಾನಸಭೆವರೆಗೆ ಖಂಡಿತ ಉಳಿಯುವುದಿಲ್ಲ. ಲೋಕಸಭೆ ಚುನಾವಣೆ ಮುಗಿದ ಕೆಲವೇ ತಿಂಗಳ ಲ್ಲೇ ಪತನಗೊಳ್ಳಲಿದೆ.

ಪ್ರಶಾಂತ್‌ ಕಿಶೋರ್‌ ಚುನಾವಣೆ ತಜ್ಞ

 

Advertisement

Udayavani is now on Telegram. Click here to join our channel and stay updated with the latest news.

Next