Advertisement

ರೈಲು ಟಿಕೆಟ್‌ಗೆ ಮಳೆ-ಬಿಸಿಲಲ್ಲೇ ಕ್ಯೂ

12:50 AM Sep 22, 2019 | Team Udayavani |

ಕಾಸರಗೋಡು: ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಕಾಸರಗೋಡು ರೈಲು ನಿಲ್ದಾಣ ಒಂದು. ಆದರ್ಶ ರೈಲು ನಿಲ್ದಾಣ ಯಾದಿಯಲ್ಲಿ ಸೇರ್ಪಡೆಗೊಂಡಿರುವ ಈ ರೈಲು ನಿಲ್ದಾಣದಲ್ಲಿ ಒಂದೇ ಟಿಕೆಟ್‌ ಕೌಂಟರ್‌ ಕಾರ್ಯಾಚರಿಸುತ್ತಿರುವುದರಿಂದ ಪ್ರಯಾ ಣಿಕರು ಟಿಕೆಟ್‌ಗಾಗಿ ಬಿಸಿಲಿಗೆ ಎದೆಯೊಡ್ಡಿ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಮಳೆ ಬಂದಲ್ಲಿ ಪ್ರಯಾಣಿಕರು ಅನುಭವಿಸುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ.

Advertisement

ಜಿಲ್ಲೆಯಲ್ಲೇ ಅತೀ ಹೆಚ್ಚಿನ ಪ್ರಯಾಣಿಕರು ಕಾಸರಗೋಡು ರೈಲು ನಿಲ್ದಾಣವನ್ನು ಅವಲಂಬಿಸಿದ್ದಾರೆ. ಪ್ರಯಾಣಿಕರು ಅನುಕೂಲ ಕ್ಕಾಗಿ ಐದು ಟಿಕೆಟ್‌ ಕೌಂಟರ್‌ಗಳಿವೆ. ಆದರೆ ಈ ಐದು ಟಿಕೆಟ್‌ ಕೌಂಟರ್‌ಗಳ ಪೈಕಿ ಒಂದು ಟಿಕೆಟ್‌ ಕೌಂಟರ್‌ ಮಾತ್ರವೇ ಕಾರ್ಯಾಚರಿಸುತ್ತಿದೆ. ಕೆಲವೊಮ್ಮೆ ಎರಡು ಟಿಕೆಟ್‌ ಕೌಂಟರ್‌ ಕಾರ್ಯಚರಿಸುವುದಿದೆ. ಒಂದೇ ಟಿಕೆಟ್‌ ಕೌಂಟರ್‌ ಕಾರ್ಯಚರಿಸುವುದರಿಂದಾಗಿ ರೈಲು ಪ್ರಯಾ ಣಿಕರು ಸರಿದಿಯಲ್ಲಿ ನಿಂತು ಟಿಕೆಟ್‌ ಸಿಗದೆ ರೈಲು ಪ್ರಯಾಣವನ್ನು ಮೊಟಕುಗೊಳಿ ಸಬೇಕಾದ ಘಟನೆಗಳು ನಡೆಯುತ್ತಿವೆ.

ರೈಲು ಬರುವ ಕೆಲವು ನಿಮಿಷಗಳ ಮುನ್ನ ಟಿಕೆಟ್‌ ಕೌಂಟರ್‌ ತೆರೆಯುತ್ತದೆ. ಪ್ರಯಾಣಿಕರು ಟಿಕೆಟ್‌ಗಾಗಿ ಉದ್ದನೆಯ ಕ್ಯೂ ನಿಂತು ತಮ್ಮ ಸರಿದಿಗಾಗಿ ಕಾಯುತ್ತಿದ್ದಾರೆ. ಟಿಕೆಟ್‌ಗಾಗಿ ಕಾದು ಕಾದು ಟಿಕೆಟ್‌ ಸಿಗದ ಪ್ರಯಾಣಿಕರು ರೈಲು ಪ್ರಯಾಣವನ್ನು ಮೊಟಕು ಗೊಳಿಸುತ್ತಿರುವುದು ಸಾಮಾನ್ಯವಾ ಗಿದೆ. ಪ್ರಯಾಣಿಕರು ಸರದಿಯಲ್ಲೇ ಬಾಕಿ ಯಾಗುತ್ತಾರೆ. ಇದೇ ವೇಳೆ ರೈಲು ಗಾಡಿ ನಿಲ್ದಾ ಣಕ್ಕೆ ಬಂದು ತೆರಳಿರುತ್ತದೆ. ಇದರಿಂದಾಗಿ ಪ್ರಯಾಣ ಮೊಟಕುಗೊಳಿಸಬೇಕಾದ ಅನಿವಾ ರ್ಯತೆ ಎದುರಾಗುತ್ತದೆ. ಟಿಕೆಟ್‌ ಕೌಂಟರ್‌ ಕೊಠಡಿಯಲ್ಲಿ ಕ್ಯೂ ಆರಂಭಿಸಿ ಸ್ಥಳವಿಲ್ಲದೆ ಕ್ಯೂ ಉದ್ದಕ್ಕೆ ಬೆಳೆದು ಕಟ್ಟಡದ ಹೊರಗೆ ಬಂದು ಬಿಸಿಲಿಗೆ ನಿಲ್ಲಬೇಕಾದ ದುಸ್ಥಿತಿ ಇದೆ. ಮಳೆ ಬಂದರಂತೂ ಟಿಕೆಟ್‌ಗಾಗಿ ಕ್ಯೂ ನಿಂತವರ ಪರಿಸ್ಥಿತಿ ಶೋಚನೀಯ.

ಟಿಕೆಟ್‌ಗಾಗಿ ಬಿಸಿಲಿನಲ್ಲಿ ಕ್ಯೂ ನಿಲ್ಲಬೇಕಾದ ಸಂದರ್ಭಗಳಲ್ಲಿ ಕೆಲವು ಪ್ರಯಾಣಿಕರು ಬಿಸಿಲ ಬೇಗೆಗೆ ತಲೆ ಸುತ್ತಿ ಬಿದ್ದ ಸಂದರ್ಭಗಳೂ ಇದೆ. ಐದು ಟಿಕೆಟ್‌ ಕೌಂಟರ್‌ಗಳಿದ್ದರೂ, ಕೇವಲ ಒಂದು, ಎರಡು ಕೌಂಟರ್‌ಗಳು ಕಾರ್ಯಚರಿಸುತ್ತಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಕಾಸರಗೋಡು ರೈಲು ನಿಲ್ದಾಣದಲ್ಲಿ ಹೆಚ್ಚಿನ ಟಿಕೆಟ್‌ ಕೌಂಟರ್‌ ಸ್ಥಾಪಿಸಿ ಪ್ರಯಾಣಿ ಕರಿಗೆ ಸೌಲಭ್ಯ ಒದಗಿಸಬೇಕೆಂದು ನಿರಂತರವಾಗಿ ಬೇಡಿಕೆಯನ್ನು ಮುಂದಿರಿಸಿ ದ್ದರೂ ಈ ವರೆಗೂ ರೈಲ್ವೇ ಇಲಾಖೆ ಈ ಬಗ್ಗೆ ಗಮನವನ್ನೇ ಹರಿಸಿಲ್ಲ.

ಟಿಕೆಟ್‌ಗಾಗಿ ವಾಗ್ವಾದ
ಸರದಿಯ ಕೊನೆಯಲ್ಲಿ ಅಥವಾ ಮಧ್ಯದಲ್ಲಿ ನಿಂತಿರುವ ಪ್ರಯಾಣಿಕರು ಸರದಿಯ ಮುಂಭಾಗದಲ್ಲಿ ಪರಿಚಯಸ್ಥರು ಇದ್ದಲ್ಲಿ ಅವರಲ್ಲಿ ಟಿಕೆಟ್‌ಗಾಗಿ ಹಣ ನೀಡುವ ಪ್ರಸಂಗಗಳು ನಡೆಯುತ್ತಿರುವುದರಿಂದ ಸರದಿಯಲ್ಲಿ ನಿಂತ ಇತರ ಪ್ರಯಾಣಿಕರು ವಿರೋಧ ವ್ಯಕ್ತಪಡಿಸುತ್ತಾರೆ. ಇದರಿಂದಾಗಿ ಪ್ರಯಾಣಿಕರ ಮಧ್ಯೆ ವಾಗ್ವಾದ, ಹೊಡೆದಾಟ ನಡೆಯುವ ಪ್ರಸಂಗಗಳು ಎದುರಾಗುತ್ತಿವೆ.

Advertisement

ಸಂಸದರಿಂದ ಮನವಿ
ಕಾಸರಗೋಡು ಜಿಲ್ಲೆಯ ರೈಲು ಪ್ರಯಾಣಿಕರ ವಿವಿಧ ಸಮಸ್ಯೆಗಳಿಗೆ ಪರಿಹಾರ ಹಾಗು ಇನ್ನಷ್ಟು ಸೌಲಭ್ಯ ಒದಗಿಸಬೇಕೆಂದು ಕಾಸರಗೋಡು ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರು ದಕ್ಷಿಣ ರೈಲ್ವೇ ಜನರಲ್‌ ಮೆನೇಜರ್‌ ರಾಹುಲ್‌ ಜೈನ್‌ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಅದರಲ್ಲೊಂದು ಕಾಸರಗೋಡು ರೈಲು ನಿಲ್ದಾಣದಲ್ಲಿ ಹೆಚ್ಚಿನ ಟಿಕೆಟ್‌ ಕೌಂಟರ್‌ ತೆರೆಯಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಗಮನ ಹರಿಸಿ
ಉದ್ದನೆಯ ಕ್ಯೂ ಇರುವುದರಿಂದ ಸರದಿಯಲ್ಲಿ ನಿಂತ ಎಲ್ಲಾ ಪ್ರಯಾಣಿಕರಿಗೆ ಟಿಕೆಟ್‌ ಸಿಗದೆ ರೈಲು ಗಾಡಿ ಸಿಗದೆ ಪ್ರಯಾಣ ಮೊಟಕುಗೊಳ್ಳುವುದು ಸಾಮಾನ್ಯವಾಗಿದೆ. ಇಂತಹ ಸಮಸ್ಯೆಯನ್ನು ಪರಿಹರಿಸಲು ಹೆಚ್ಚಿನ ಟಿಕೆಟ್‌ ಕೌಂಟರ್‌ ಆರಂಭಿಸಬೇಕು. ಈ ಮೂಲಕ ಪ್ರಯಾಣಿಕರಿಗೆ ಸುಲಭದಲ್ಲಿ ಟಿಕೆಟ್‌ ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರೈಲು ಅಧಿಕಾರಿಗಳು ಇತ್ತ ಗಮನ ಹರಿಸಬೇಕು.
– ದಾಮೋದರನ್‌, ರೈಲ್ವೇ ಪ್ರಯಾಣಿಕ

Advertisement

Udayavani is now on Telegram. Click here to join our channel and stay updated with the latest news.

Next