Advertisement

ಚತುಷ್ಪಥ ಹೆದ್ದಾರಿ ನಿರ್ವಹಣೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ನವಯುಗ

10:19 AM Feb 15, 2020 | sudhir |

ಕೋಟ: ನವಯುಗ ಕಂಪನಿಯ ನಿರ್ವಹಣೆಯಲ್ಲಿರುವ ಜಿಲ್ಲೆಯ ಮೂರು ಟೋಲ್‌ಗ‌ಳಲ್ಲಿ ತುರ್ತು ಸೇವೆಗಳು ಸಮರ್ಪಕವಾಗಿ ನಿರ್ವಹಣೆಗೊಳ್ಳುತ್ತಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಹಲವಾರು ಸಮಸ್ಯೆಗಳು ತಲೆದೋರಿದೆ.

Advertisement

ಬೀದಿ ದೀಪಗಳನ್ನು ದುರಸ್ತಿ ಗೊಳಿಸದೆ ಐದಾರು ತಿಂಗಳು ಕಳೆದಿದ್ದು ಹೈಮಾಸ್ಟ್‌ ಸೇರಿದಂತೆ ಹಲವಾರು ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೆ ಒಂದೆರಡು ದೀಪಗಳನ್ನು ದುರಸ್ತಿಗೊಳಿಸಿ ಕಣ್ಣೊ ರೆಸುವ ತಂತ್ರಗಾರಿಕೆ ಮಾಡಲಾಗುತ್ತದೆ ಹಾಗೂ ಅಪಘಾತ ಮುಂತಾದ ವಿಚಾರಗಳನ್ನು ಟೋಲ್‌ನ ಸಿಬಂದಿಗಳ ಗಮನಕ್ಕೆ ತರಲು ಅನುಕೂಲವಾಗುವಂತೆ ಹೆದ್ದಾರಿಯ ಪ್ರತಿ ಕಿ.ಮೀ.ಗೊಂದು ತುರ್ತು ಸೇವೆಯ ಪೋನ್‌ ಬೂತ್‌ ಅಳವಡಿಸಲಾಗಿತ್ತು. ಆದರೆ ಇದರಲ್ಲಿ ಬಹುತೇಕ ಬೂತ್‌ಗಳು ಕೆಟ್ಟು ವರ್ಷಗಳು ಕಳೆದಿದ್ದು ಇದುವರೆಗೆ ದುರಸ್ತಿಯಾಗಿಲ್ಲ.

ಸಾಸ್ತಾನ ಟೋಲ್‌ನ ಆ್ಯಂಬುಲೆನ್ಸ್‌ ಅಪ‌ಘಾತ ಗೊಂಡವರನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸಕ್ಕಿಂತ ಹೆಚ್ಚು ಟೋಲ್‌ನ ಕಾರ್ಮಿಕರನ್ನು ಕೆಲಸಕ್ಕೆ ಕರೆತರಲು-ಬಿಟ್ಟುಬರಲು, ಕಚೇರಿಗಳಿಗೆ ತೆರಳಲು, ಪೊಲೀಸ್‌ ಠಾಣೆಗೆ ಹೋಗಲು ಹೀಗೆ ಆಲ್‌ ಇನ್‌ ಒನ್‌ ರೀತಿಯಲ್ಲಿ ಉಪಯೋಗಿಸಲಾಗುತ್ತದೆ.

ಗಸ್ತು, ಟೋಯಿಂಗ್‌ ವಾಹನವಿಲ್ಲ
ಟೋಲ್‌ನ ಗಸ್ತು ವಾಹನ ಹೆದ್ದಾರಿಯಲ್ಲಿ ದಿನ ನಿತ್ಯ ಸಂಚರಿಸಬೇಕು ಹಾಗೂ ಅಪಘಾತಕ್ಕೊಳಗಾಗುವ, ಕೆಟ್ಟು ನಿಲ್ಲುವ ವಾಹನಗಳನ್ನು ಟೋಯಿಂಗ್‌ ವಾಹನ ಬಳಸಿ ಬದಿಗೆ ಸರಿಸುವ, ಗ್ಯಾರೇಜ್‌ ತಲುಪಿಸುವ ಕಾರ್ಯ ಮಾಡಬೇಕು. ಸರ್ವಿಸ್‌ ರಸ್ತೆ, ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡದಂತೆ ನೋಡಿ ಕೊಳ್ಳಬೇಕು ಎನ್ನುವ ನಿಯಮವಿದೆ. ಆದರೆ ಹೆಚ್ಚಿನ ಕಡೆಗಳಲ್ಲಿ ಗಸ್ತುವಾಹನವೂ ಇಲ್ಲ, ಟೋಯಿಂಗ್‌ ವಾಹನವೂ ಇಲ್ಲ. ಹೀಗಾಗಿ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್‌ ಮಾಡಲಾಗುತ್ತದೆ.

ನಿರ್ವಹಣೆಗೆ ಹಣವಿಲ್ಲ ?
ಬೀದಿ ದೀಪ ಸೇರಿದಂತೆ ಎಲ್ಲಾ ನಿರ್ವಹಣೆಗಳನ್ನು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದು ನವಯುಗ ಈ ಕಂಪನಿಗೆ ಹಣ ನೀಡಬೇಕು. ಆದರೆ ಸರಿಯಾಗಿ ಹಣ ಬಿಡುಗಡೆಯಾಗುತ್ತಿಲ್ಲವಾದ್ದರಿಂದ ನಿರ್ವಹಣೆ ವಹಿಸಿಕೊಂಡ ಕಂಪನಿ ಕೆಲಸ ಮಾಡುತ್ತಿಲ್ಲ ಎನ್ನುವುದು ಬಲ್ಲ ಮೂಲಗಳ ಅಭಿಪ್ರಾಯವಾಗಿದೆ.

Advertisement

ಈ ಎಲ್ಲಾ ಸಮಸ್ಯೆಗಳ ಕುರಿತು ಎಷ್ಟೇ ದೂರು ಸಲ್ಲಿಸಿದರೂ ಕಂಪನಿ ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖೆ ಈ ಕುರಿತು ಕ್ರಮಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.

ಸತ್ತು ಬಿದ್ದ ನಾಯಿಗಳ ವಿಲೇವಾರಿ ಇಲ್ಲ
ಹೆದ್ದಾರಿಯಲ್ಲಿ ಅಪಘಾತವಾಗಿ ಸಾಯುವ ನಾಯಿ ಗಳನ್ನು ಗಸ್ತು ವಾಹನಗಳ ಮೂಲಕ ಸ್ಥಳಾಂತರಿಸಿ ಮಣ್ಣು ಮಾಡಬೇಕು ಎಂಬ ನಿಯಮವಿದೆ. ಆದರೆ ಹೆಚ್ಚಿನ ಟೋಲ್‌ಗ‌ಳಲ್ಲಿ ಗಸ್ತು ವಾಹನ, ಅಗತ್ಯ ಸಿಬಂದಿಗಳು ಇಲ್ಲದಿರುವುದಿಂದ ರಸ್ತೆಯಲ್ಲಿ ಸಾಯುವ ನಾಯಿಗಳನ್ನು ವಿಲೇ ಮಾಡುವವರಿಲ್ಲದೆ ಸವಾರರು ಮೂಗುಮುಚ್ಚಿಕೊಂಡು ತಿರುಗಾಡಬೇಕಾದ ಪರಿಸ್ಥಿತಿ.

ಸಮಸ್ಯೆ ಪರಿಹಾರಕ್ಕೆ ಕ್ರಮ
ಟೋಲ್‌ನಲ್ಲಿ ತುರ್ತು ಸೇವೆಗಳ ಸಮಸ್ಯೆ ಇರುವ ಕುರಿತು ಗಮನಕ್ಕೆ ಬಂದಿದೆ. ಬೀದಿ ದೀಪ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಪದೇ-ಪದೇ ಹಾಳಾಗುವುದರಿಂದ ನಿರ್ವಹಣೆ ಸ್ವಲ್ಪ ಕಷ್ಟವಾಗುತ್ತಿದೆ. ಆ್ಯಂಬುಲೆನ್ಸ್‌ ಬೇರೆ ಕೆಲಸಗಳಿಗೆ ಉಪಯೋಗಿಸದಂತೆ ಸೂಚನೆ ನೀಡಲಾಗಿದೆ. ಪೋನ್‌ ಬೂತ್‌ಗಳ ದುರಸ್ತಿಗೂ ಕ್ರಮಕೈಗೊಳ್ಳಲಾಗುವುದು.

– ಶಿವಪ್ರಸಾದ್‌ ರೈ, ಟೋಲ್‌ ನಿರ್ವಾಹಕರು

Advertisement

Udayavani is now on Telegram. Click here to join our channel and stay updated with the latest news.

Next