Advertisement

ಅಡವಿ ಗಿರಿಗೆ ಬಣ್ಣದ ಗರಿ

03:21 PM Jul 21, 2017 | |

ವಿಶಾಲವಾಗಿ ಹರಡಿರುವ ಗಿರಿಗಳ ಸಾಲು, ಅವುಗಳ ಕೊರಳಿಗೆ ಹಾಸಿರುವ ಹಸಿರು ರುಮಾಲು. ಗಿರಿಕಣಿವೆಗಳಲ್ಲಿ ಕಾನನದ ಮೌನ ಧ್ಯಾನ, ಭೂತಾಯಿಯ ಹಸಿರು ಸೆರಗು ಬಾನಿಗೂ ಭೂಮಿಗೂ ತೋರಣ ಬೆಸೆಯುವ ರೀತಿಯಲ್ಲಿ ಒಂದಕ್ಕೊಂದು ಸಮ್ಮೊಹನ. ಇದು ಪಶ್ಚಿಮ ಘಟ್ಟ. ಕಾನನ ಮತ್ತು ಆಗಸದ ಒಡನಾಟದ ಬೆಡಗು. ಅನಂತದವರೆಗೂ ನೀಲಾಗಸದೊಂದಿಗೆ ಗಿರಿಗಳ ಹಸಿರು ಒಡಲು ಬೆರೆತ ಸಹಜ ಸುಂದರ ದೃಶ್ಯಗಳ ಕಡಲನ್ನು ಕಂಡರೆ ನಿಸರ್ಗವೆಂಬುದು ಒಂದು ಬೃಹತ್‌ ಕಲಾಗ್ಯಾಲರಿ ಎಂಬ ವಿಸ್ಮಯವನ್ನು ಒಪ್ಪಿಕೊಳ್ಳಲೇಬೇಕು. ನೋಡುವ ಕಣ್ಣು -ಗ್ರಹಿಸುವ ಮನಸ್ಸು ಇದ್ದರೆ ಪಶ್ಚಿಮ ಘಟ್ಟದ ಪ್ರತಿ ದೃಶ್ಯಕ್ಕೂ ಒಂದು ಕಲಾ ಚೌಕಟ್ಟು ಇದ್ದೇ ಇದೆ. ಮಳೆಗಾಲದಲ್ಲಿ ಪಶ್ಚಿಮಘಟ್ಟದ ಯಾವುದೇ ಗಿರಿ ಕಣಿವೆ ಪ್ರದೇಶಕ್ಕೆ ಹೋದರೂ ಕ್ಷಣಕ್ಷಣಕ್ಕೂ ರಮಣೀಯ ದೃಶ್ಯಗಳು ತಮ್ಮ ಚೆಲುವಿನ ಅಗಾಧತೆಯಿಂದ ಮೋಡಿ ಮಾಡಬಲ್ಲವು. 

Advertisement

ಮಳೆಗಾಲದ ಒಂದು ದಿನದ ಮಧುರ ಕ್ಷಣಗಳನ್ನು ಸವಿಯಲು ಹಾಗೂ ಸವಿದ ದೃಶ್ಯಗಳನ್ನು ಕುಂಚದಲ್ಲಿ ಸೆರೆಹಿಡಿಯಲು ಮಂಗಳೂರಿನ ಕರಾವಳಿ ಚಿತ್ರಕಲಾ ಚಾವಡಿಯ ಕಲಾವಿದರು ಹೊರಟದ್ದು ಸಕಲೇಶಪುರದ ಪಶ್ಚಿಮ ಘಟ್ಟದಂಚಿನ  ಅಚ್ಚನಹಳ್ಳಿ ಎಂಬ ಪ್ರಕೃತಿಯ ಸುಂದರ ಮಡಿಲಿಗೆ. ಅಚ್ಚನಹಳ್ಳಿ  ಸುಂದರವಾದ ಗಿರಿ- ಕಣಿವೆಗಳ ತಾಣ. ನಾವು ಅಚ್ಚನಹಳ್ಳಿ ತಲುಪುವ ಹೊತ್ತಿಗೆ ಹನಿಹನಿ ಮಳೆಯೊಂದಿಗೆ ಇಬ್ಬನಿ ದಿಬ್ಬಣವು ಗಿರಿಗಳಿಂದ ನಿಧಾನಕ್ಕೆ ಹೊರಡಲನುವಾಗಿತ್ತು. ಮಂಜು ಸಿಂಚನದೊಂದಿಗೆ ಸುತ್ತಮುತ್ತಲಿನ ಪ್ರದೇಶವೆಲ್ಲ ಮಸುಕಾಗಿ ಪುಳಕಿತಗೊಂಡಿರುವಂತಿತ್ತು. ಅಚ್ಚನಹಳ್ಳಿಯಲ್ಲಿರುವ ಗೆಳೆಯರಾದ ಅವಿನಂದ್‌ ಅವರ ಸುಂದರವಾದ ಮನೆ ಎತ್ತರದಲ್ಲಿದೆ, ಸುತ್ತಲಿನ ನಿಸರ್ಗ ದೃಶ್ಯವು ಈ ಮನೆಯಿಂದ ರಮಣೀಯವಾಗಿ ಕಾಣುತ್ತದೆ. ಮನೆಯ ಯಜಮಾನರಾದ ವಿಜಯ ವಿವೇಕಾನಂದ್‌ ಹಾಗೂ ರೂಪಾ ಕಲಾವಿದರನ್ನು ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿದ ರೀತಿಯೂ ಮಲೆನಾಡಿನ ಸೌಂದರ್ಯದ ಪ್ರತೀಕವಾಗಿತ್ತು. ನಮ್ಮ ತಂಡದ‌ ಒಂದಷ್ಟು ಚಾರ‌ಣಿಗರು ಸಮೀಪದ ಅಗ್ನಿಬೆಟ್ಟವನ್ನೇರಿದರೆ ಇನ್ನೊಂದಿಷ್ಟು ಕಲಾವಿದರು ಕ್ಯಾನ್ವಾಸ್‌ನಲ್ಲಿ ಅಚ್ಚನಹಳ್ಳಿಯ ಸುತ್ತಲಿನ ಇಬ್ಬನಿ ಹೊದಿಕೆಯ ಹಬ್ಬದ ವಾತಾವರಣವನ್ನು ಚಿತ್ರಿಸಿದರು. ಕಲಾವಿದರಾದ ಗಣೇಶ್‌ ಸೋಮಯಾಜಿ ಗಿರಿ ಕಂದರಗಳ ಹಸಿರು ಬೆಡಗನ್ನು ಚಿತ್ರಿಸಿದರೆ ತಾರನಾಥ್‌ ಕೈರಂಗಳ ಮರಗಿಡಗಳ ಮೇಲೆ ಇದ್ದ ಮಂಜಿನ ಹೊದಿಕೆಯನ್ನು, ತಿಳಿಕಡು ಬಣ್ಣಗಳ ಸಂಯಮ ದೊಂದಿಗೆ ರಚಿಸಿದರು. ಹಸಿರು ಹಾಡಿಯ ಮೌನನಿನಾದವನ್ನು ವರ್ಣಾಭಿವ್ಯಕ್ತಿಗೊಳಿಸಿದ್ದು ಸುಧೀರ್‌ ಕಾವೂರು. ಬಾಲಕೃಷ್ಣ ಶೆಟ್ಟಿಯವರು ಬಾನಿಗೆ ಮರದ ಚುಂಬನವನ್ನು ಚಿತ್ರಿಸಿದರು. ಪೂರ್ಣೇಶ್‌ ಅವರು ಮರಗಿಡ ಬಳ್ಳಿಗಳ ಹಸಿರು ಉತ್ಸವವನ್ನು ಕ್ಯಾನ್ವಾಸಿಗಿಳಿಸಿದರು. ಕಲಾವಿದರು ತಮ್ಮ ಕಲಾಕೃತಿಗಳನ್ನು ರಚಿಸುತ್ತಿರುವಾಗ ನಿಸರ್ಗ ಕ್ಷಣ ಕ್ಷಣವೂ ಬದಲಾಗುತ್ತ ಕಲಾವಿದರಿಗೆ ಸ್ಫೂರ್ತಿ ನೀಡುತ್ತಿತ್ತು. ನಿಸರ್ಗ ಸಹಜ ವರ್ಣ ಸಂಯೋಜನೆ ಗಳ ಆಗಮನ ಮತ್ತು ನಿರ್ಗಮನಗಳು ಅರಿವಿಲ್ಲದಂತೆ ಕಲಾಕೃತಿಗಳಾಗಿ ಕ್ಯಾನ್ವಾಸ್‌ಗೆ ಇಳಿಯುತ್ತಲೇ ಇದ್ದವು. 

ದಿನೇಶ್‌ ಹೊಳ್ಳ

Advertisement

Udayavani is now on Telegram. Click here to join our channel and stay updated with the latest news.

Next