Advertisement

ಆಪತ್ತುಗಳನ್ನು ಆತ್ಮ ವಿಶ್ವಾಸದಿಂದ ಪರಿಹರಿಸಿ: ಕೆ.ಎಂ

03:14 PM Nov 17, 2018 | |

ನೆಹರೂನಗರ : ಆಪತ್ತುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಪರಿಹರಿಸಿದಾಗ ವ್ಯಕ್ತಿತ್ವದ ಗಟ್ಟಿತನ ಪ್ರಕಟಗೊಳ್ಳುತ್ತದೆ. ವಿಪತ್ತಿನ ಸಂದರ್ಭದಲ್ಲಿ ಅಂಜಿಕೆಯಿಂದ ಅಳುಕಿ ನಡೆದರೆ ಅನಾಹುತ ಉಂಟಾಗುತ್ತದೆ. ಕಷ್ಟ ಬಂದಾಗ ಕುಗ್ಗದೆ ಮುನ್ನಡೆಯಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್‌ ಹೇಳಿದರು.

Advertisement

ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು -2018 ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ಸೋತಾಗ ನಿರಾಶೆಯನ್ನು ಅನುಭವಿಸದೆ, ಬದುಕಿನ ಧ್ಯೇಯವನ್ನು ಮರೆಯದೆ, ಗೆಲುವಿನತ್ತ ಮುನ್ನುಗ್ಗಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಸರಳ ಬದುಕಿನ ಮುನ್ನೋಟ, ಮಾನವೀಯ ಮಿಡಿತ, ಪರಂಪರೆಯ ಮೇಲಿನ ಗೌರವಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮನಸ್ಸು ವಿಕಾಸಗೊಳ್ಳುತ್ತದೆ. ಸೃಜನಶೀಲತೆ, ಧೈರ್ಯಮತ್ತು ಛಲ ಇದ್ದರೆ ಕನಸನ್ನು ನನಸಾಗಿಸಲು ಸಾಧ್ಯ. ಭವಿಷ್ಯದ ಕುರಿತು ಕನಸುಗಳು ಇದ್ದರೆ ಜೀವನ ಪರಿಪೂರ್ಣವಾಗಿರುತ್ತದೆ. ಕ್ಷಮತೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಎಲ್ಲವೂ ವ್ಯರ್ಥ. ವೈಯಕ್ತಿಕ ಕನಸಿನ ಜತೆಗೆ ದೇಶವನ್ನು ಉನ್ನತಿಗೇರಿಸುವ ಕನಸನ್ನು ಪ್ರತಿಯೊಬ್ಬರೂ ಕಾಣಬೇಕು ಎಂದರು.

ಕನಸುಗಳ ಆಗರ
ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಅದ್ಭುತ ಕನಸುಗಳ ಆಗರ. ಅವರ ಅಂತರಂಗದಲ್ಲಿ ಹರಿಯುವ ಕನಸುಗಳ ಶಕ್ತಿ ಸಾಮರ್ಥ್ಯಗಳು ಅಪಾರ. ಮನಸ್ಸನ್ನು ಸದಾ ಕ್ರಿಯಾಶೀಲವಾಗಿರಿಸುವ ವಿದ್ಯಾರ್ಥಿಗಳ ಕನಸನ್ನು ಈಡೇರಿಸುವ ಕಾರ್ಯವನ್ನು ಈ ಕಾಲೇಜು ಮಾಡುತ್ತಿದೆ. ಇದರ ಸಾಕಾರಕ್ಕಾಗಿ ಸಮಾಜಮುಖಿ  ವ್ಯಕ್ತಿತ್ವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಸಂಚಾಲಕ ಸಂತೋಷ್‌ ಬಿ., ಸದಸ್ಯರಾದ ರವಿ ಮುಂಗ್ಲಿಮನೆ, ಶ್ರೀನಿವಾಸ್‌ ಭಟ್‌ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಶ್ರೀಧರ್‌ ಶೆಟ್ಟಿಗಾರ್‌ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಂಶುಪಾಲ ಜೀವನದಾಸ್‌ ವಂದಿಸಿದರು. ಉಪನ್ಯಾಸಕಿ ದಯಾಮಣಿ ಕಾರ್ಯಕ್ರಮ ನಿರ್ವಹಿಸಿದರು.

Advertisement

ವೈವಿಧ್ಯಮಯ ಸ್ಪರ್ಧೆಗಳು
ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ವಿಜ್ಞಾನ ಮಾದರಿ, ಚರ್ಚಾಸ್ಪರ್ಧೆ, ಕಂಪ್ಯೂಟರ್‌ ಪವರ್‌ ಪಾಯಿಂಟ್‌, ಮುಖವರ್ಣಿಕೆ, ಪ್ರಾಕೃತಿಕ ರಂಗೋಲಿ, ಗೂಡು ದೀಪ, ದೃಶ್ಯಕಲೆ, ಚದುರಂಗ, ಯವವಿಜ್ಞಾನಿ ಸ್ಪರ್ಧೆಗಳು ನಡೆದವು. ತತ್‌ಕ್ಷಣವೇ ಬಹುಮಾನ ಗೆಲ್ಲಬಹುದಾದ ಆಸಕ್ತಿದಾಯಕ ಸ್ಪರ್ಧೆಗಳಾದ ಸುಡೊಕು, ಪದಬಂಧ, ಒಗಟು, ಘನಾಕೃತಿಯ ಜೋಡಣೆ, ಏಕಾಗ್ರತೆಯ ಪರೀಕ್ಷೆಗಳನ್ನು ನಡೆಸಲಾಯಿತು. ಉಪಪ್ರಾಂಶುಪಾಲ ಪರಮೇಶ್ವರ ಶರ್ಮರ ನೇತೃತ್ವದಲ್ಲಿ ಅಡ್ಯನಡ್ಕದ ವಾರಣಾಸಿಯನ್ನು ಸಂದರ್ಶಿಸಿದ ವಿದ್ಯಾರ್ಥಿಗಳು ಪ್ರಗತಿಪರ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿಗಳನ್ನು ಪಡೆದುಕೊಂಡರು. ಸುಮಾರು 26 ಪ್ರೌಢಶಾಲೆಗಳ 636 ವಿದ್ಯಾರ್ಥಿಗಳು ಮತ್ತು 51 ಅಧ್ಯಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next