Advertisement

PUTTUR: ಪೊಲೀಸ್‌ ದೌರ್ಜನ್ಯ: DySPಗೆ ಕಡ್ಡಾಯ ರಜೆ – ಕಾರ್ಯಕರ್ತರ ಆಕ್ರೋಶ

12:30 AM May 20, 2023 | Team Udayavani |

ಪುತ್ತೂರು: ಹಿಂದೂ ಸಂಘಟನೆ ಕಾರ್ಯಕರ್ತರ ಮೇಲಿನ ಪೊಲೀಸ್‌ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಡಿವೈಎಸ್‌ಪಿ ವೀರಯ್ಯ ಹಿರೇಮಠ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ ಎಂದು ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

Advertisement

ಈಗಾಗಲೇ ಪಿಎಸ್‌ಐ, ಪಿಸಿ ಸಹಿತ ಇಬ್ಬರನ್ನು ಅಮಾನತು ಮಾಡಲಾಗಿದ್ದು, ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ನಗರ ಠಾಣೆಯಲ್ಲಿ ವಿಚಾರಣೆ ನಡೆಸದೇ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ಥಳಿಸಿರುವ ಕ್ರಮ ಮತ್ತು ಉದ್ದೇಶದ ಬಗ್ಗೆಯೂ ಬಂಟ್ವಾಳ ಡಿವೈಎಸ್ಪಿ ನೇತೃತ್ವದ ತನಿಖಾ ತಂಡ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

ಕಣ್ಣೀರಿಟ್ಟ ಪುತ್ತಿಲ
ಶುಕ್ರವಾರ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಯತ್ನಾಳ್‌ ಅವರು ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸುತ್ತಿದ್ದಾಗ ಕಾರ್ಯಕರ್ತರ ಸ್ಥಿತಿ ನೆನೆದು ಹಿಂದೂ ಸಂಘಟನೆಯ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರು ಕಣ್ಣೀರಿಟ್ಟರು.

ರಕ್ತವನ್ನು ಬೆವರು ಮಾಡಿ, ಭಗವಧ್ವಜದ ಅಡಿ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಇಂಥವರ ಮೇಲೆ ದೌರ್ಜನ್ಯ ಎಸಗಲಾಗಿದೆ. ನಮಗೆ ಅಧಿಕಾರ ಬೇಡ, ಯಾವುದೂ ಬೇಡ. ಕಾರ್ಯಕರ್ತರಿಗೆ ಇಂತಹ ಪರಿಸ್ಥಿತಿ ಬರುವುದು ಬೇಡ ಎಂದು ನೋವು ತೋಡಿಕೊಂಡರು.

ಪೋಲಿಸ್‌ ದೌರ್ಜನ್ಯ ಒಳಗಾದ ಅವಿನಾಶ್‌ ಹಾಗೂ ದೀಕ್ಷಿತ್‌ ಅವರನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾರ್ಯ ನಿರ್ವಾಹಕ ನಿರ್ದೇಶಕ ರೋಹಿತ್‌ ಕುಮಾರ್‌ ಕಟೀಲು, ಕಾನೂನು ಸಲಹೆಗಾರ ಸುನೀಲ್‌ ಕುಮಾರ್‌ ಶೆಟ್ಟಿ ಭೇಟಿ ಮಾಡಿದರು. ಈ ಸಂದರ್ಭ ಆಯೋಗದ ವತಿಯಿಂದ ಧನಸಹಾಯ ನೀಡಿ, ಅಮಾಯಕರಿಗೆ ನ್ಯಾಯ ಒದಗಿಸಲು ಸಹಕಾರ ನೀಡುವುದಾಗಿ ತಿಳಿಸಿದರು. ಈ ಮೊದಲು ಉಳ್ಳಾಲದ ನಿವಾಸಿ ಅಜಿತ್‌ ಕುಮಾರ್‌ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದರು.

Advertisement

ಹಲವರ ಭೇಟಿ
ಶುಕ್ರವಾರ ಬೆಳಗ್ಗೆ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಶ್ವ ಹಿಂದೂ ಪರಿಷತ್‌ನ ರಘು ಸಕಲೇಶಪುರ ಸೇರಿದಂತೆ ಹಲವು ಪ್ರಮುಖರು ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ನಮ್ಮವರು ಯಾರು..?
ಆಸ್ಪತ್ರೆಯ ಹೊರಭಾಗದಲ್ಲಿ ಯತ್ನಾಳ್‌ ಅವರನ್ನು ಅರುಣ್‌ ಕುಮಾರ್‌ ಪುತ್ತಿಲ ಸೇರಿದಂತೆ ಹಲವರು ಬರಮಾಡಿಕೊಂಡರು. “ನಮ್ಮವರು ಯಾರು? ಯಾರು ಅಲ್ಲ ಎಂಬುದೇ ತಿಳಿಯುತ್ತಿಲ್ಲ. ನೀವು ನಮಗೆ ನ್ಯಾಯ ದೊರಕಿಸಿ ಕೊಡಬೇಕು. ಎದುರಿಗೊಂದು ಹಿಂದಿನಿಂದೊಂದು ಮಾಡುವವರ ಕೆಲಸದಿಂದಲೇ ಹೀಗೆಲ್ಲ ಆಗಿದೆ” ಎಂದು ಬಿಜೆಪಿ ಮುಖಂಡರ ಮಧ್ಯೆಯೇ ಅರುಣ್‌ ಪುತ್ತಿಲ ಬೇಸರ ವ್ಯಕ್ತಪಡಿಸಿದರು.

ಪಂಚವಟಿಯಲ್ಲಿ ಬೈಠಕ್‌
ಬ್ಯಾನರ್‌ ಪ್ರಕರಣಕ್ಕೆ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಪುತ್ತೂರಿನ ಆರ್‌ಎಸ್‌ಎಸ್‌ನ ಪಂಚವಟಿಯಲ್ಲಿ ಹಿಂದು ಜಾಗರಣ ವೇದಿಕೆಯ ರಾಜ್ಯದ ಪ್ರಮುಖರು, ಪುತ್ತೂರು ಮತ್ತು ಜಿಲ್ಲಾ ಪ್ರಮುಖರೊಂದಿಗೆ ಬೈಠಕ್‌ ನಡೆಯಿತು.

ಗಾಯಾಳು ಇದ್ದಕೊಠಡಿ ಪ್ರವೇಶಕ್ಕೆ ತಡೆ
ಪೊಲೀಸ್‌ ದೌರ್ಜನ್ಯಕ್ಕೆ ಒಳಗಾಗಿರುವ ಗಾಯಾಳುಗಳು ಇದ್ದ ಆಸ್ಪತ್ರೆಯ ಕೊಠಡಿಗೆ ಯತ್ನಾಳ್‌ ಜತೆ ಆಗಮಿಸಿದ ಬಿಜೆಪಿ ಕಾರ್ಯಕರ್ತ ಅಜಿತ್‌ ರೈ ಹೊಸಮನೆ ಅವರನ್ನು ಕೊಠಡಿಯೊಳಗೆ ಪ್ರವೇಶಿಸದಂತೆ ಅರುಣ್‌ ಪುತ್ತಿಲ ಅವರ ಪರ ಗುರುತಿಸಿಕೊಂಡ‌ ಕೆಲವು ಹಿಂದೂ ಕಾರ್ಯಕರ್ತರು ತಡೆ ಒಡ್ಡಿದ ಘಟನೆಯೂ ನಡೆಯಿತು.

ಉನ್ನತ ಪೊಲೀಸ್‌ ಅಧಿಕಾರಿಗಳ ಜತೆ ಪುತ್ತೂರು ಶಾಸಕರ ಚರ್ಚೆ
ಘಟನೆಯಲ್ಲಿ ಭಾಗಿಯಾಗಿರುವ ಡಿವೈಎಸ್ಪಿ, ಇತರ ಪೊಲೀಸರ ವಿರುದ್ಧ ಕಠಿನ ಕಾನೂನು ಕ್ರಮವನ್ನು ತತ್‌ಕ್ಷಣ ಕೈಗೊಳ್ಳುವಂತೆ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್‌ ಕುಮಾರ್‌ ರೈ ಅವರು ಬೆಂಗಳೂರಿನಲ್ಲಿ ಉನ್ನತ ಪೊಲೀಸ್‌ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಅಧಿಕಾರಿಗಳ ಜತೆ ಮಾತನಾಡಿದ ಅವರು ಯಾರದೋ ಒತ್ತಡಕ್ಕೆ ಸಿಲುಕಿ ಅಮಾಯಕರ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಸಂಜೀವ ಮಠಂದೂರು, ನಳಿನ್‌ ವಿರುದ್ಧ ಕಾರ್ಯಕರ್ತರ ಆಕ್ರೋಶ
ಆಸ್ಪತ್ರೆಯ ಕೊಠಡಿಯಲ್ಲಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸುತ್ತಿದ್ದ ಬಸನ ಗೌಡ ಪಾಟೀಲ್‌ ಯತ್ನಾಳ್‌ ಮುಂದೆಯೇ ಕೆಲವು ಕಾರ್ಯಕರ್ತರು ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು, ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಮಾನ ನಡೆಯಿತು.
ಘಟನೆ ನಡೆದು ನಾಲ್ಕು ದಿನಗಳಾದರೂ ಇವರಿಬ್ಬರು ಭೇಟಿ ನೀಡಲಿಲ್ಲ. ಸಂಜೀವ ಮಠಂದೂರು ಪ್ರತಿನಿಧಿಸಿದ ಕ್ಷೇತ್ರ ಇದು. ಅವರಿಬ್ಬರೂ ಕಾಯಕ‌ರ್ತರನ್ನು ಕಡೆಗಣಿಸಿದ್ದಾರೆ. ಈ ಘಟನೆಗೆ ಅವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next