Advertisement

ಪ್ರಚಾರಕ್ಕಿಂತ ಬರೀ ಕಾಳುಮೆಣಸಿನದ್ದೇ ಘಾಟು! ಸ್ಥಳೀಯ

03:45 AM Apr 14, 2019 | Sriram |

ಪುತ್ತೂರು: ಈ ಬಾರಿಯ ಚುನಾವಣಾ ಪ್ರಚಾರದ ಕುರಿತು ಮತದಾರರೊಬ್ಬರು ನೀಡಿದ ವ್ಯಾಖ್ಯಾನ ಕೇಳಿದ್ದೀರಾ?”ಇದು ಹಿರಿಯರ ಪ್ಲ್ರಾನಿಂಗ್‌ನಲ್ಲಿ ಕಿರಿಯರು ಮಾಡುತ್ತಿರುವ ಕ್ಯಾಂಪೇನ್‌’. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಭಾಗವಾದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಉದಯವಾಣಿಯ ತಂಡ ಒಂದು ಸುತ್ತು ಹಾಕಿದಾಗ ಸಿಕ್ಕ ಬೆಳಿಯೂರುಕಟ್ಟೆಯ ಕುಶಾಲಪ್ಪ ರೈ ಅವರನ್ನು ಚುನಾವಣೆ ಪ್ರಚಾರ ಹೇಗಿದೆ ಸಾರ್‌ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದು ಹೀಗೆ.

Advertisement

ಪ್ರಚಾರಕ್ಕೊಂದು ವ್ಯಾಖ್ಯೆ ಕೊಟ್ಟ ಅವರು, ಎಲ್ಲ ಪಕ್ಷಗಳ ಹಿರಿಯರು, ಮುಖಂಡರು ಚುನಾವಣೆಯ ರೂಪುರೇಷೆ ಸಿದ್ಧಪಡಿಸುವಲ್ಲಿ ನಿರತರಾಗಿದ್ದರೆ, ಯುವಕರು ಆ ಕಾರ್ಯವ್ಯೂಹ ಅನುಷ್ಠಾನಗೊಳಿಸುತ್ತಾ ಮತಯಾಚನೆಯಲ್ಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ಭೇಟಿ ನೀಡಿ ಮತದಾರರನ್ನು ಓಲೈಸುವ ಕಾರ್ಯವನ್ನು ಯುವಜನರಿಗೇ ನೀಡಿದಂತಿದೆ ಎಂದರು.

ಅಂದ ಹಾಗೇ ಪುತ್ತೂರು ಮತ್ತೂಂದು ಜಿಲ್ಲೆಯಾಗ ಬೇಕೆಂದು ಬಯಸುತ್ತಿರುವಂಥ ಕ್ಷೇತ್ರ, ಅಡಿಕೆ, ಕಾಳು ಮೆಣಸು ಆಧರಿಸಿದ ಕೃಷಿ ಇಲ್ಲಿನ ಪ್ರಧಾನ ಆರ್ಥಿಕತೆ. ವಾಣಿಜ್ಯ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಕ್ಕರೆ ಇಲ್ಲಿನವರು ಖುಷ್‌. ಜತೆಗೆ ಗ್ರಾಮೀಣ ಪ್ರದೇಶಗಳನ್ನು ಹೊದ್ದು ಕೊಂಡಿರುವ ಕ್ಷೇತ್ರದಲ್ಲಿ ಮೂಲ ಸೌಕರ್ಯ ಗಳು ಇನ್ನಷ್ಟು ಆಗಬೇಕೆಂಬುದು ತಿರುಗಾಟ ದಲ್ಲಿ ವ್ಯಕ್ತವಾದ ಬೇಡಿಕೆಗಳು.

ಪ್ರಚಾರದ ಅಬ್ಬರ ಇಲ್ಲೂ ಕಣ್ಣಿಗೆ ರಾಚುವಷ್ಟು ಕಾಣುತ್ತಿಲ್ಲ. ರಾಷ್ಟ್ರೀಯ ಸಂಗತಿಗಳೇ ಪ್ರಧಾನವಾದರೂ, ಸ್ಥಳೀಯ ಮೂಲ ಸೌಕರ್ಯಗಳ ಕೊರತೆಯನ್ನೂ ಪ್ರಸ್ತಾವಿಸದೇ ಬಿಡಲಾರರು ಮತದಾರರು. ರಸ್ತೆ, ಕುಡಿಯುವ ನೀರು, ವಿದ್ಯುತ್‌ ಸಮಸ್ಯೆ ಈ ಪೈಕಿ ಪ್ರಮುಖವಾದವು. ಜತೆಗೆ ಸರ್ಜಿಕಲ್‌ ಸ್ಟ್ರೈಕ್‌, ರಫೇಲ್‌ ಡೀಲ್‌ನಿಂದ ಹಿಡಿದು ಪಂಪ್‌ವೆಲ್‌ ಸರ್ಕಲ್‌, ವಿಜಯ ಬ್ಯಾಂಕ್‌ ಎಲ್ಲ ಸಂಗತಿಗಳ ಕುರಿತೂ ಪರ-ವಿರೋಧ ಚರ್ಚೆ ಇದ್ದದ್ದೇ.

ಗ್ರಾಮಾಂತರ ಮತ್ತು ಗಡಿ ಭಾಗಗಳಾದ ಪಾಣಾಜೆ, ಸುಳ್ಯಪದವು, ಈಶ್ವರಮಂಗಲ, ಅಡ್ಯನಡ್ಕ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಆರಂಭದಿಂದಲೇ ಇದೆ. ಉಪ್ಪಿನಂಗಡಿ, ವಿಟ್ಲ, ಕುಂಬ್ರದಂತಹ ಪೇಟೆಗಳಲ್ಲಿ ಅಭ್ಯರ್ಥಿಗಳಿಂದ ಪ್ರಚಾರ ಸಭೆಗಳು ನಡೆದಿವೆ. ಕಬಕ, ನರಿಮೊಗರು, ಸಂಪ್ಯ, ಕಾವು, ಬಡಗನ್ನೂರು, ಹಿರೆಬಂಡಾಡಿ, ಪುಣಚಗಳಲ್ಲಿ ಸ್ಥಳೀಯ ಮಟ್ಟದ ನಾಯಕರ ಸಭೆ, ಮನೆ ಮನೆ ಪ್ರಚಾರಗಳಾಗಿವೆ.

Advertisement

ರಸ್ತೆಯದ್ದೇ ಸಮಸ್ಯೆ
ಬಡಗನ್ನೂರು ಪರಿಸರದ ತಿಮ್ಮಪ್ಪ ನವರು ರಾಜಕೀಯದ ಕುರಿತು ಮಾತನಾಡಲು ನಿರಾಕರಿಸಿದರು. 10 ವರ್ಷಗಳಿಂದ ಮುಡುಪಿನಡ್ಕ -ಸುಳ್ಯಪದವು ರಸ್ತೆ ಸಮರ್ಪಕವಾಗಿಲ್ಲ. ಪ್ರತಿ ಬಾರಿ ಭರವಸೆ ನೀಡಿದ್ದಷ್ಟೇ. ಈಗ ಕಾಮಗಾರಿ ಆರಂಭವಾದರೂ ಪೂರ್ಣಗೊಂಡಿಲ್ಲ. ಅಸಮರ್ಪಕ ರಸ್ತೆಯಿಂದ ಆಗುತ್ತಿರುವ ಸಮಸ್ಯೆ ಜೋರಾಗಿದೆ ಎನ್ನುತ್ತಾರೆ.

ಕಾವು ಪರಿಸರಕ್ಕೆ ಬಂದಾಗ ಜನ ರಲ್ಲಿನ ನೋವು, ಅಸಮಾಧಾನ ಅರ್ಥವಾಯಿತು. “ಸಮರ್ಪಕ ವಿದ್ಯುತ್‌ ಇಲ್ಲದೆ ಅಡಿಕೆ ತೋಟ ಹಾಳಾಗುತ್ತಿದೆ. ಯಾರು ಕೇಳುತ್ತಾರೆ ಸಮಸ್ಯೆಯನ್ನು?’ ಎಂದ ವರು ಮಾಟ್ನೂರಿನ ಸುಂದರ ಗೌಡ, ದಿನೇಶ್‌.

ಪ್ರಸ್ತುತ ಪುತ್ತೂರು ವಿ. ಕ್ಷೇತ್ರ ದಲ್ಲಿರುವ ವಿಟ್ಲವನ್ನು ತಾಲೂಕು ಮಾಡಬೇಕೆಂಬ ಒತ್ತಾಯ ನಮ್ಮದು. ಅಭಿವೃದ್ಧಿ ದೃಷ್ಟಿಯಿಂದ ಇದು ಮುಖ್ಯ. ಪ್ರತಿ ಬಾರಿ ಜನಪ್ರತಿ ನಿಧಿಗಳಲ್ಲಿ ಮನವಿ ಮಾಡುತ್ತಲೇ ಇದ್ದೇವೆ ಎನ್ನುತ್ತಾರೆ ಜಯಪ್ರಕಾಶ್‌ ಮತ್ತು ಪ್ರಮೀಳಾ ದಂಪತಿ.

“ಪಾಣಾಜೆ ಗಡಿ ಭಾಗವಾಗಿರುವುದರಿಂದ ಚುನಾ ವಣೆಯ ಬಿಸಿ ಮೊದಲು ಅರಿವಾಗುವುದು ನಮಗೆ. ಗಡಿ ಭಾಗದಲ್ಲಿ ಬಂದೋಬಸ್ತ್ ಹಾಕಲಾಗುತ್ತದೆ. ಇನ್ನು ಪ್ರಚಾರಕ್ಕಾಗಿ ಮುಖಂಡರು ಈ ಭಾಗಕ್ಕೆ ಬರುವುದು ಕಡಿಮೆ ಎಂದು ಹೇಳಿದರು ಆರ್ಲಪದವಿನ ವಿದ್ಯಾರ್ಥಿ ಸೀಮಿತ್‌ ಕುಮಾರ್‌.

ಸ್ಟಾರ್‌ ಪ್ರಚಾರಕರಿಲ್ಲ
ಹಿಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೆ ಹೋಲಿಸಿದರೆ ಈ ಭಾಗದಲ್ಲಿ ಸ್ಟಾರ್‌ ಪ್ರಚಾರಕರು ಇನ್ನೂ ಆಗಮಿಸಿಲ್ಲ. ಅವರು ಆಗಮಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದರು ಸುಂದರೇಶ್‌.

ಮನುಷ್ಯ ತಂತ್ರಜ್ಞಾನದ ಮೂಲಕ ಯಾವುದೇ ಬದಲಾವಣೆ ಮಾಡಿದರೂ ಪ್ರಕೃತಿಯನ್ನು ಬದಲಿ ಸಲು ಸಾಧ್ಯವಿಲ್ಲ. ಬಿಸಿಲಿನ ತಾಪ ಎಲ್ಲರಿಗೂ ಒಂದೇ ರೀತಿ, ಚುನಾ ವಣೆಯಲ್ಲಿ ಗೆದ್ದ ಅಭ್ಯರ್ಥಿಯೂ ಮತದಾರರನ್ನು ಸಮಾನವಾಗಿ ನೋಡಬೇಕೆಂಬ ಸಂದೇಶ ಇದರಲ್ಲಿದೆ ಎಂಬುದಾಗಿ ವಿಶಿಷ್ಟ ವಿಶ್ಲೇಷಣೆ ಮುಂದಿಟ್ಟರು ಕುಂಬ್ರದಲ್ಲಿ ಮಾತಿಗೆ ಸಿಕ್ಕ ಖಾಸಗಿ ಉದ್ಯೋಗಿಗಳಾದ ವಿನಯಕುಮಾರ್‌ ಮತ್ತು ಸತೀಶ್‌.

ಸಕಾಲ ಬಳಸಿಕೊಳ್ಳುತ್ತಿರುವ ಮತದಾರ
ಬೇಸಗೆ ಕಾಲದ ಕೊನೆಯ ಹಂತದಲ್ಲಿ ಎಲ್ಲ ಕಡೆ ಗಳಲ್ಲೂ ಸಮಸ್ಯೆ ಎದ್ದು ಕಾಣುತ್ತದೆ. ಮತ ಕೇಳಿಕೊಂಡು ಬರುವ ಅಭ್ಯರ್ಥಿಗಳಲ್ಲಿ ಜನರು ಇದೇ ಸುಸಮಯ ಎಂದುಕೊಂಡು ಅಹವಾಲು ತೋಡಿಕೊಳ್ಳುತ್ತಾರೆ. ಮುಖ್ಯವಾಗಿ ನೀರು, ವಿದ್ಯುತ್‌ ಕಣ್ಣಮುಚ್ಚಾಲೆಯಾಟ ಇತ್ಯಾದಿ ಹೆಚ್ಚಾಗಿ ಪ್ರಸ್ತಾವವಾಗುತ್ತಿದೆ.

ಒಟ್ಟಾರೆಯಾಗಿ ಕ್ಷೇತ್ರ ದಲ್ಲಿ ಸ್ಥಳೀಯ ಸಮಸ್ಯೆಗಳ ಕುರಿತು ಒಂದಷ್ಟು ಅಸಮಾ ಧಾನ, ಆಕ್ರೋಶಗಳು ಇವೆಯಾದರೂ ಹೆಚ್ಚಿನವು ಬೇಸಗೆ ಅವಧಿಗೆ ಸೀಮಿತವಾದವು. ಉಳಿದಂತೆ ರಾಷ್ಟ್ರೀಯ – ರಾಜ್ಯ ಮಟ್ಟದ ರಾಜಕೀಯ ಬೆಳವಣಿಗೆಯೇ ಪ್ರಮುಖ ಚರ್ಚೆಯ ವಸ್ತುವಾಗಿದೆ.

ಪಕ್ಷೇತರ ಅಭ್ಯರ್ಥಿಗಳ ಮಾಹಿತಿಯಿಲ್ಲ!
ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳ ಮಧ್ಯೆ ಮಾತ್ರ ನೇರ ಸ್ಪರ್ಧೆ ಇದೆ. ಎಸ್‌ಡಿಪಿಐ ಒಂದಷ್ಟು ಚಟುವಟಿಕೆಯಲ್ಲಿದೆ. ಎರಡು ಪ್ರಮುಖ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರು ಮಾತ್ರ ಗ್ರಾಮಗಳನ್ನು ತಲುಪಿದ್ದಾರೆ. ಉಳಿದಂತೆ ಪಕ್ಷೇತರ ಸ್ಪರ್ಧಾಳುಗಳ ಮಾಹಿತಿಯೇ ಜನರಿಗಿಲ್ಲ ಎಂಬ ಅಂಶ ಸರ್ವೆ, ನರಿಮೊಗರು ಭಾಗಗಳ ಮತದಾರರಿಂದ ಕೇಳಿಬಂದಿತು.

– ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next