ಉಡುಪಿ: ಮಧ್ವಾಚಾರ್ಯರು ಜನಿಸಿದ ಪಾಜಕ ಕ್ಷೇತ್ರದಲ್ಲಿರುವುದು ಅನಂತಪದ್ಮನಾಭನ ಮಂದಿರ. ಅವರ ತಂದೆ ಪುತ್ರಪ್ರಾಪ್ತಿಗಾಗಿ ಬೇಡಿದ್ದು ಉಡುಪಿಯ ಅನಂತೇಶ್ವರನನ್ನು. ಅನಂತೇಶ್ವರನ ಸನ್ನಿಧಿಯಲ್ಲಿ ಈಗಲೂ ಪುತ್ರಪ್ರಾಪ್ತಿಯ ಕಾರಣಿಕ ನಡೆಯುತ್ತಿದೆ ಎಂಬ ನಂಬಿಕೆ ಇದೆ.
ಅಂತಿಮ ದಿನ ಆಚಾರ್ಯ ಮಧ್ವರು ಐತರೇಯ ಉಪನಿಷತ್ತಿನ ಪಾಠವನ್ನು ಹೇಳಿದ್ದು ಅನಂತೇಶ್ವರನ ಸನ್ನಿಧಿಯಲ್ಲಿಯೇ. ಕೊನೆಗೆ ನೆಲೆಸಿದ್ದೂ ಅನಂತಮಠ ಎಂದು ಹೆಸರು ಇರುವ ಉತ್ತರದ ಬದರೀ ಕ್ಷೇತ್ರದಲ್ಲಿ. ಹೀಗಾಗಿಯೇ ಬದರಿಯಲ್ಲಿ ಪೇಜಾವರ ಶ್ರೀಗಳು 1980ರ ದಶಕದಲ್ಲಿ ಉಡುಪಿ ಮಠವನ್ನು ಸ್ಥಾಪಿಸುವಾಗ ಅನಂತ ಮಠ ಎಂದು ಹೆಸರು ಇಟ್ಟಿದ್ದರು.
ಪರ್ಯಾಯ ಪೀಠಸ್ಥರಾಗುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರಿಗೂ “ಅನಂತ’ನಿಗೂ ಅವ್ಯಕ್ತ ವಾದ ನಂಟು ಕಂಡುಬರುತ್ತಿದೆ. ಇವರು ಹುಟ್ಟಿದ್ದು ಕಾಪು ತಾಲೂಕಿನ ಮಾಣಿಯೂರಿನಲ್ಲಿ. ಹುಟ್ಟಿದ ಮನೆಯನ್ನು ಮಾಣಿಯೂರು ಮಠ ಎಂದು ಕರೆಯುತ್ತಾರೆ.
ಇಲ್ಲಿ ಪೂಜೆಗೊಳ್ಳುತ್ತಿರುವುದು ಅನಂತಪದ್ಮನಾಭ. ಈ ಅನಂತ ಪದ್ಮನಾಭನಿಗೂ ಸ್ವಾಮೀಜಿಯಾಗುವ ಮುನ್ನ ಹಯವದನನಾಗಿ ಪುತ್ತಿಗೆ ಶ್ರೀಗಳು ಪೂಜೆ ಸಲ್ಲಿಸಿದ್ದರು. ಪುತ್ತಿಗೆ ಶ್ರೀಗಳವರು ಪ್ರಸ್ತುತ ಉಡುಪಿ ಅನಂತೇಶ್ವರ ದೇವಸ್ಥಾನದ ಆಡಳಿತೆ ಮೊಕ್ತೇಸರರು.
ಪಣಿಯಾಡಿಯ ಅನಂತ ಪದ್ಮನಾಭ ದೇವಸ್ಥಾನ ಬಹು ಹಿಂದಿನಿಂದಲೂ ಪುತ್ತಿಗೆ ಮಠದ ಆಡಳಿತಕ್ಕೊಳಪಟ್ಟಿದ್ದು ಇತ್ತೀಚೆಗಷ್ಟೇ ಜೀರ್ಣೋದ್ಧಾರಗೊಳಿಸಿದ್ದಾರೆ. ಮಾಣಿಯೂರು ಮಠವನ್ನೂ ಅಭಿವೃದ್ಧಿಗೊಳಿಸಿದ್ದು ಇತ್ತೀಚೆಗೆ ಪುತ್ತಿಗೆ ಶ್ರೀಗಳು ಉದ್ಘಾಟಿಸಿದರು.