Advertisement

ಪುಣೆ ತುಳುಕೂಟದ ಕ್ರೀಡೋತ್ಸವದ ಸಮಾರೋಪ ಸಮಾರಂಭ

03:45 PM Feb 15, 2017 | Team Udayavani |

ಪುಣೆ: ಹೊರನಾಡಿನಲ್ಲಿದ್ದು ಕೊಂಡು ತುಳುಕೂಟವು ಬಹಳಷ್ಟು ವರ್ಷಗಳಿಂದ ಪುಣೆಯಲ್ಲಿರುವ ತುಳುನಾಡ ಬಾಂಧವರನ್ನು ಸಾಮಾಜಿಕ ಬಂಧುತ್ವದೊಂದಿಗೆ ಒಗ್ಗೂಡಿಸಿಕೊಂಡು ಎಲ್ಲಾ ಜಾತಿ ಧರ್ಮಗಳ ಜನರನ್ನು ತನ್ನ ವಾಹಿನಿಯಲ್ಲಿ ಸೇರಿಸಿಕೊಂಡು ಮಾಡುತ್ತಿರುವ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳು ಶ್ಲಾಘ ನೀಯವಾಗಿದೆ. ಒಗ್ಗಟ್ಟಿನಿಂದ ಉತ್ತಮ ಸಂಘಟಿತ ಸದುದ್ದೇಶದ ಕಾರ್ಯಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವ ಈ ಸಂಸ್ಥೆಯು ಅನ್ಯ ಸಂಸ್ಥೆಗಳಿಗೆ ಮಾದರಿಯಾಗಿದೆ. ಹತ್ತು ಮನಸ್ಸುಗಳು ಒಗ್ಗೂಡಿ ಮಾಡುತ್ತಿರುವ ಯಾವುದೇ ಕಾರ್ಯಗಳೂ ಸುಂದರವಾಗಿ ಮೂಡಿ ಬರುತ್ತದೆ  ಎಂಬುದಕ್ಕೆ ಸಂಸ್ಥೆಯ ಇಂದಿನ ಕ್ರೀಡಾಕೂಟವೇ ಸಾಕ್ಷಿಯಾಗಿದೆ ಎಂದು ಬಂಟ್ಸ್‌ ಅಸೋಸಿಯೇಶನ್‌  ಪುಣೆ ಇದರ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿ ನುಡಿದರು.

Advertisement

ಫೆ. 12ರಂದು ನಗರದ ಗರ್ವಾರೆ ಕಾಲೇಜು ಮೈದಾನದಲ್ಲಿ ನಡೆದ ಪುಣೆ ತುಳುಕೂಟದ ವಾರ್ಷಿಕ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಮ್ಮ ದೈನಂದಿನ ಜೀವನದಲ್ಲಿ ದೇಹಕ್ಕೆ ಆಹಾರ, ವಾಯು, ನೀರು ಎಷ್ಟು ಮುಖ್ಯವೋ ವ್ಯಾಯಾಮವೂ ಜೀವನದ ಅವಿಭಾಜ್ಯ ಅಂಗವಾಗಿದೆ. ಆರೋಗ್ಯವಂತರಾಗಿ ರೋಗಮುಕ್ತರಾಗಿ ಜೀವನ ನಡೆಸಲು ಕ್ರೀಡೆ ಸಹಕಾರಿಯಾಗಿದೆ. ಅಂತೆಯೇ ಬಾಲ್ಯದಿಂದಲೇ ನಮ್ಮ ಮಕ್ಕಳಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ತಾಯಂದಿರು ಪ್ರೋತ್ಸಾಹ ನೀಡಿ, ಕ್ರೀಡಾ ಮನೋಭಾವದೊಂದಿಗೆ ಜೀವನದಲ್ಲಿ ಶಿಸ್ತು ಮತ್ತು ಸಭ್ಯತೆಯೂ ಮನೆಮಾಡುವುದರಿಂದ ಬದುಕು ಸುಂದರವಾಗುತ್ತದೆ. ಯಾವುದೇ ಕೆಲಸವನ್ನು  ಶ್ರದ್ಧೆ ಮತ್ತು ನಿಷ್ಠೆಯಿಂದ ಕರ್ತವ್ಯವೆಂದು ಪರಿಗಣಿಸಿ ಮಾಡುತ್ತಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗುತ್ತದೆ. ಅಂತೆಯೇ ಇಂತಹ ಕ್ರೀಡಾಕೂಟಗಳಲ್ಲಿ ಸೋಲು ಗೆಲುವುಗಳ ಬಗ್ಗೆ ಚಿಂತಿಸದೆ ಭಾಗವಹಿಸುವುದು ಮುಖ್ಯವೆಂದು ಭಾವಿಸಬೇಕು. ಇದರ ಪ್ರೇರಣೆಯಿಂದ ನಮ್ಮ ಪ್ರಯತ್ನ ಮುಂದಿನ ಹಂತಗಳಲ್ಲಿ ಫಲಿತಾಂಶ ತರಲು ಸಾಧ್ಯವಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ತಾರಾನಾಥ ರೈ ಮೇಗಿನಗುತ್ತು ಮಾತನಾಡಿ,  ಇಂದಿನ ಕ್ರೀಡೋತ್ಸವದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಇಷ್ಟೊಂದು ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದ ಸರ್ವ ತುಳುನಾಡ ಬಾಂಧವರಿಗೆ ಅಭಿನಂದನೆಗಳು. ಅಂತೆಯೇ ಈ ಕ್ರೀಡಾಕೂಟವನ್ನು ಆಯೋಜಿಸಲು ಶ್ರಮಿಸಿದ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ ಮತ್ತು ಪಿಂಪ್ರಿ-ಚಿಂಚಾÌಡ್‌ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳಿಗೆ ಕೃತಜ್ಞತೆಗಳು. ಅಂತೆಯೇ ಪ್ರಾಯೋಕತ್ವವನ್ನು ನೀಡಿ  ಸಹಕಾರ ನೀಡಿದ ದಾನಿಗಳಿಗೂ ಕೃತಜ್ಞತೆಗಳು. ಇಂದಿನ ಮುಖ್ಯ ಅತಿಥಿಗಳಾಗಿ ಸಂಘಕ್ಕೆ ಬಹಳಷ್ಟು ವರ್ಷಗಳಿಂದ ಸಹಕಾರ ನೀಡುತ್ತಿರುವ ನಾಯಾಯಣ ಶೆಟ್ಟಿಯವರು ಆಗಮಿಸಿ ನಮಗೆ ಪ್ರೋತ್ಸಾಹ ನೀಡಿರುವುದಕ್ಕೆ  ಋಣಿಯಾಗಿದ್ದೇವೆ. ಮುಖ್ಯವಾಗಿ ಮಕ್ಕಳು ಬಹು ಸಂಖ್ಯೆಯಲ್ಲಿ ಈ ಕ್ರೀಡೋತ್ಸವದಲ್ಲಿ ಭಾಗವಹಿಸಿ ಉತ್ಸಾಹವನ್ನು ತೋರಿರುವುದು ಸಂಘದ ಉದ್ದೇಶವನ್ನು ಸಾರ್ಥಕ್ಯಗೊಳಿಸಿದೆ. ಮುಂದೆಯೂ ಸಂಘದೊಂದಿಗೆ ಎಲ್ಲರೂ ಕೈಜೋಡಿಸಿ ಸಂಘಟನೆಯನ್ನು ಬಲಪಡಿಸಲು ಸಹಕಾರ ನೀಡಬೇಕೆಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಮೋಹನ್‌ ಶೆಟ್ಟಿ ಎಣ್ಣೆಹೊಳೆ, ಕೋಶಾಧಿಕಾರಿ ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ಕ್ರೀಡಾ ಕಾರ್ಯಾಧ್ಯಕ್ಷ ಯಶವಂತ್‌ ಶೆಟ್ಟಿ ತಾಮರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿಲ್ಮಾ ಮಾರ್ಟಿಸ್‌, ಮಹಿಳಾ ವಿಭಾಗದ ಕ್ರೀಡಾ ಸಮಿತಿಯ ರಂಜಿತಾ ರಮೇಶ್‌ ಶೆಟ್ಟಿ ಮತ್ತು ರಮಾ ಶೆಟ್ಟಿ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ 10 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹ, ಕ್ರೀಡಾಪದಕಗಳನ್ನು ನೀಡಲಾಯಿತು. 

ಕ್ರೀಡೋತ್ಸವದಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ ಕ್ರೀಡಾಳುಗಳಿಗೆ ಟ್ರೋಫಿಗಳನ್ನು ಅತಿಥಿಗಳ ಹಸ್ತದಿಂದ ನೀಡಲಾಯಿತು. ಕ್ರೀಡೋತ್ಸವದ ಯಶಸ್ಸಿಗೆ ಪ್ರಾಯೋಜಕತ್ವ ನೀಡಿದ ಪ್ರಾಯೋಜಕರನ್ನು$ಪುಷ್ಪಗುಚ್ಚ ನೀಡಿ ಸತ್ಕರಿಸಲಾಯಿತು. ಕ್ರೀಡಾಕೂಟದ ಯಶಸ್ಸಿಗೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು.

Advertisement

ಕ್ರೀಡಾಕೂಟದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಮತ್ತು ಪದಾಧಿಕಾರಿಗಳು, ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್‌ ಶೆಟ್ಟಿ, ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಪಾಂಗಾಳ ಮತ್ತು ಪದಾಧಿಕಾರಿಗಳು, ಮಹಾಗಣಪತಿ ಯಕ್ಷಗಾನ ಮಂಡಳಿ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು, ಅಂತಾರಾಷ್ಟ್ರೀಯ ಹ್ಯೂಮನ್‌ ರೈಟ್ಸ್‌ ಅಸೋಸಿಯೇಟ್ಸ್‌ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಬಿ. ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸಿ ಶುಭ ಕೋರಿದರು. ಸಂಘದ ಕೋಶಾಧಿಕಾರಿ ಸಂತೋಷ್‌ ಶೆಟ್ಟಿ ಎಣ್ಣೆಹೊಳೆ ವಂದಿಸಿದರು. 

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು.

Advertisement

Udayavani is now on Telegram. Click here to join our channel and stay updated with the latest news.

Next