Advertisement

ಪುಣೆ ಶ್ರೀ ಗುರುದೇವ ಸೇವಾ ಬಳಗ: 14ನೇ ವಾರ್ಷಿಕೋತ್ಸವ 

03:54 PM Nov 09, 2017 | |

ಪುಣೆ: ಸಮುದ್ರ ಮತ್ತು ಸಮುದ್ರದ ಅಲೆಗೆ  ಅದರದೇ ಆದಂತಹ ಒಂದು ಸಂಬಂಧವಿದೆ. ಅಂತೆಯೇ   ಆಧ್ಯಾತ್ಮಿಕತೆಯು ಅಂತರಂಗದಿಂದ ಅನುಭವದೊಂದಿಗೆ ಕೂಡಿದಾಗ ಆತ್ಮ ಮತ್ತು ಪರಮಾತ್ಮನ ಸಂಬಂಧ ಬೆಸೆಯುತ್ತದೆ. 

Advertisement

ಪುಣ್ಯಭೂಮಿ ಭಾರತದಲ್ಲಿರುವ ನಮಗೆ  ನಮ್ಮ ಧರ್ಮ, ನಮ್ಮ ಸಂಸ್ಕೃತಿ ಎಂಬ ಅಭಿಮಾನದೊಂದಿಗೆ  ಪ್ರೀತಿ ಹುಟ್ಟಬೇಕು. ನಮ್ಮ ಬದುಕಿನ ಎಲ್ಲಾ ಸಂಗತಿಗಳು ಭಗವದ್ಗೀತೆಯ ಒಳಗೆ ತುಂಬಿದೆ. ಪರಿಶುದ್ಧವಾದ ಹೃದಯ, ಸಂಸ್ಕಾರಯುತ ಅಧ್ಯಾತ್ಮಿಕತೆಯಿಂದ ಕೂಡಿದ ಬದುಕುವ ಶೈಲಿಯನ್ನು ಪ್ರತಿಯೊಬ್ಬರೂ  ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗಬಹುದು. ಅದಕ್ಕಾಗಿ ಪ್ರತಿಯೊಬ್ಬರ  ಕಾರ್ಯ ಕೇತ್ರವು  ಧರ್ಮದ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯತೆಯಿದೆ. ಹೃದಯದಲ್ಲಿ ಒಳ್ಳೆಯ ಚಿಂತನೆಗಳೊಂದಿಗೆ, ಭಾವನೆಗಳು ಶುದ್ಧವಾಗಿದ್ದು, ತತ್ವಾದರ್ಶಗಳೊಂದಿಗೆ  ಸಂಸ್ಕಾರಯುತವಾಗಿ ನಾವು ಮಾಡುವ ಸೇವೆ ಭಗವಂತನಿಗೆ ಪ್ರಿಯವಾಗಿರುತ್ತದೆ. ಬದುಕುವ ಕಲೆಯಲ್ಲಿ ಧರ್ಮದ ಪಾಲನೆ ಅತಿಮುಖ್ಯ
ವಾದುದು. ಧರ್ಮದ ಚೌಕಟ್ಟಿನೊಳಗೆ ನಾವು ಮಾಡುವ ಸೇವೆಯೇ  ಪರಿಪೂರ್ಣವಾಗುತ್ತದೆ  ಎಂದು ಒಡಿಯೂರಿನ ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು.

ನ. 6ರಂದು  ಪುಣೆಯ  ತಿಲಕ್‌  ಸ್ಮಾರಕ ರಂಗ ಮಂದಿರದಲ್ಲಿ   ಪುಣೆ ಶ್ರೀ ಗುರುದೇವ ಸೇವಾ ಬಳಗ ಮತ್ತು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ 14ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ  ಆಶೀರ್ವಚನ ನೀಡಿದ ಶ್ರೀಗಳು, ಆಧ್ಯಾತ್ಮ ಹಾಗೂ ಧರ್ಮದ ಪಾಲನೆ ಮುಖ್ಯ. ಅದರಂತೆ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸಬೇಕಾದ ಅನಿವಾರ್ಯತೆಯಿದೆ. ಈ ಸೂತ್ರಗಳನ್ನು ಅಳವಡಿಸಿಕೊಂಡು ಸಂಘಟನೆಗಳು ಬೆಳೆಯಬೇಕು. ಸದಾ ಸಮಾಜಮುಖೀಯಾಗಿ ವ್ಯಕ್ತಿಗಿಂತ ಭಿನ್ನವಾಗಿ ಸಂಘಟನೆ ಬೆಳೆಯಬೇಕು. ತಂದೆ ತಾಯಿಯ ಸೇವೆಯಿಂದ ಜೀವಮಾನವಿಡೀ ಬಾಳಿನಲ್ಲಿ ಸಮೃದ್ಧಿ ತುಂಬಿಬರುತ್ತದೆ. ಭಾಷೆ ಮತ್ತು ಸಂಸ್ಕೃತಿ ಬೆಳೆದಾಗ ಸಂಸ್ಕಾರಯುತರಾಗಿ ಬಾಳಲು ಸಾಧ್ಯವಾಗುತ್ತದೆ. ಮಾತೃ ಭಾಷೆಯ ಅಭಿಮಾನ ನಮ್ಮಲ್ಲಿ ಬರಬೇಕು. ಧರ್ಮದ ಪಾಲನೆಯೊಂದಿಗೆ ಭಾಷೆ, ಸಂಸ್ಕೃತಿಯನ್ನು ಬೆಳೆಸುವಲ್ಲಿ, ಉಳಿಸುವಲ್ಲಿ, ನಮ್ಮ ನೆಲ ಜಲ ಕಾಪಾಡುವಲ್ಲಿ ನಮ್ಮ ನಿಮ್ಮೆಲ್ಲರ ಸೇವೆ ಸಹಕಾರ ಇದ್ದರೆ  ಉತ್ತಮ  ಸದೃಢ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.

ಶ್ರೀಗಳನ್ನು ಚೆಂಡೆ-ವಾದ್ಯ ಘೋಷದೊಂದಿಗೆ ಬರಮಾಡಿಕೊಳ್ಳಲಾಯಿತು. ಪುಣೆ ಬಳಗದ  ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಅವರು ಶ್ರೀಗಳನ್ನು ತುಳಸಿಹಾರ ಹಾಕಿ ಸ್ವಾಗತಿಸಿದರು. ಸಾಧ್ವಿ ಮಾತೆಯನ್ನು ಕೇಂದ್ರದ ಅಧ್ಯಕ್ಷೆ ಪ್ರೇಮಾ ಎಸ್‌.  ಶೆಟ್ಟಿ ಅವರು ಸ್ವಾಗತಿಸಿದರು. ಧಾರ್ಮಿಕ  ಕಾರ್ಯಕ್ರಮದ ಅಂಗವಾಗಿ ಪೂಜ್ಯ  ಶ್ರೀಗಳ ಪಾದ ಪೂಜೆಯನ್ನು ಪುಣೆ ಭಕ್ತರ ಪರವಾಗಿ ಪುಣೆಯ  ಉದ್ಯಮಿ ಪುಣೆ ಬಳಗದ ಮಾಜಿ ಅಧ್ಯಕ್ಷ, ಪುಣೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ    ನಾರಾಯಣ ಕೆ. ಶೆಟ್ಟಿ  ಮತ್ತು ಸುಧಾ ಎನ್‌. ಶೆಟ್ಟಿ   ದಂಪತಿ ನೆರವೇರಿಸಿದರು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಾಧ್ವಿ ಶ್ರೀ ಮಾತಾನಂದಮಯೀ ಅವರು ಉಪಸ್ಥಿತರಿದ್ದರು.  ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ. ಸಿ. ಭಂಡಾರಿ, ಮುಂಬಯಿ ಉದ್ಯಮಿ ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾಕೂìರು ಇದರ  ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್‌  ಭಂಡಾರಿ, ಪುಣೆಯ ಉದ್ಯಮಿ, ಲೆಕ್ಕ ಪರಿಶೋಧಕ ಎ. ಸದಾನಂದ ಶೆಟ್ಟಿ  ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಮುಂಬಯಿ ಬಳಗದ ಉಪಾಧ್ಯಕ್ಷ ಚಂದ್ರಹಾಸ್‌ ರೈ ಬೋಳ್ನಾಡುಗುತ್ತು,  ಪುಣೆ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ,  ಕೇಂದ್ರದ ಅಧ್ಯಕ್ಷೆ ಪ್ರೇಮಾ  ಎಸ್‌.  ಶೆಟ್ಟಿ  ಅವರು  ಉಪಸ್ಥಿತರಿದ್ದರು. ಸದಸ್ಯೆಯರು ಪ್ರಾರ್ಥನೆಗೈದರು. ಪುಣೆ ಬಳಗದ ಗೌರವ   ಕಾರ್ಯದರ್ಶಿ ಎನ್‌. ರೋಹಿತ್‌ ಶೆಟ್ಟಿ ಅವರು  ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಗಳ ಹಾಗೂ  ಕ್ಷೇತ್ರದ  ಬಗ್ಗೆ ಸಭೆಗೆ  ಮಾಹಿತಿ ನೀಡಿದರು. ಅತಿಥಿಗಳನ್ನು  ಪದ್ಮನಾಭ ಶೆಟ್ಟಿ, ಉಷಾಕುಮಾರ್‌ ಶೆಟ್ಟಿ, ಪ್ರಭಾಕರ ಶೆಟ್ಟಿ, ಜಯ ಶೆಟ್ಟಿ  ಅವರು ಸ್ವಾಗತಿಸಿ ಗೌರವಿಸಿದರು.

Advertisement

ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಅವರು ಒಡಿಯೂರು  ಕ್ಷೇತ್ರದ ಹಾಗೂ ಸ್ವಾಮೀಜಿಯವರ ಮುಖಾಂತರ  ನಡೆಯುವ ಸಮಾಜ ಸೇವಾ  ಕಾರ್ಯಗಳನ್ನು ಸಭೆಯ ಮುಂದಿಟ್ಟರು.  ಅಪಾರ ಸಂಖ್ಯೆಯ  ಭಕ್ತಾ ಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಂದ ಪ್ರಸಾದ ಸ್ವೀಕರಿಸಿದರು. ಮುಂಬಯಿ, ಅಹ್ಮದ್‌ ನಗರ್‌, ನಾಸಿಕ್‌ ಬಳಗದ  ಪದಾಧಿಕಾರಿಗಳು  ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.  ಪುಣೆಯ  ವಿವಿಧ ಸಂಘ -ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಶ್ರೀಗಳಿಗೆ ಹಾರಾರ್ಪಣೆಗೈದು ಪ್ರಸಾದ  ಸ್ವೀಕರಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಪುಣೆ ಬಳಗದ ಸರ್ವ ಸದಸ್ಯರು ಹಾಗೂ ಮಹಿಳಾ  ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪ್ರದೀಪ್‌ ಆಳ್ವ  ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಕಾರ್ಯದರ್ಶಿ ವೀಣಾ ಡಿ. ಶೆಟ್ಟಿ ವಂದಿಸಿದರು. ಕೊನೆಯಲ್ಲಿ ಅನ್ನಸಂತರ್ಪಣೆ ನಡೆಯಿತು.

ಒಳ್ಳೆಯ ಉದ್ದೇಶದೊಂದಿಗೆ, ನಿರ್ಮಲ ಮನಸ್ಸಿನೊಂದಿಗೆ   ಸಮಾಜ  ಸೇವೆ ಮಾಡುವಂತಹ  ಅವಕಾಶವನ್ನು ಭಗವಂತ ನಮ್ಮೆಲ್ಲರಿಗೂ ಕರುಣಿಸಿದ್ದಾನೆ. ಇದರ ಸದುಪಯೋಗವನ್ನು ನಾವೆಲ್ಲರೂ ಪಡೆಯಬೇಕು. ನಮ್ಮ ಮಾತೃ ಶಕ್ತಿಯೇ ಭಾರತದ ಸಂಸ್ಕೃತಿ.  ಮಾತೃತ್ವದ ಮಹತ್ವವನ್ನು ಸಂಪೂರ್ಣವಾಗಿ ಅರಿತಾಗ ನಮ್ಮ  ಸಂಸ್ಕೃತಿ ವಿಕಸನಗೊಳ್ಳುತ್ತದೆ. ಆಧ್ಯಾತ್ಮಿಕತೆಯ ಮೂಲಕ ಸಮಾಜ ಸೇವೆಯಲ್ಲಿ ನಿರತರಾಗಲು ಭಗವಂತನ ಪ್ರೇರಣೆ ಮುಖ್ಯವಾಗಿರುತ್ತದೆ. ನಿಸ್ವಾರ್ಥ ಮನೋಭಾವದ ಸೇವೆಯಿಂದ ದೇವರ, ಗುರುವರ್ಯರ ಅನುಗ್ರಹ ಪಡೆಯಲು ಸಾಧ್ಯ. ಸತ್‌ ಚಿಂತನೆಯೊಂದಿಗೆ ಉತ್ತಮ ಸಂಸ್ಕಾರಯುತ ಕಾರ್ಯಗಳು ನಿರಂತರ ನಡೆಯುತ್ತಿರಲಿ. ಇದಕ್ಕೆ ಸಂಪೂರ್ಣ ಸಹಕಾರ ತಮ್ಮೆಲ್ಲರಿಂದ ಸಿಗಲಿ.  ಒಡಿಯೂರು ಕ್ಷೇತ್ರಕ್ಕೆ ದೊಡ್ಡ ಸೇತುವೆಯಂತೆ ಪುಣೆ ಬಳಗದ ನಿಮ್ಮೆಲ್ಲರ ಪ್ರೀತಿಯ ಸೇವೆ ಸಲ್ಲುತ್ತಿದೆ.  ಇದು ನಿರಂತರವಾಗಿರಲಿ  
   – ಸಾಧ್ವಿ ಶ್ರೀ ಮಾತಾನಂದಮಯಿ (ಶ್ರೀ ಕ್ಷೇತ್ರ ಒಡಿಯೂರು).

ನಮ್ಮ ತುಳುನಾಡಿನ ಸಂಸ್ಕೃತಿ, ಕಲೆ, ಧಾರ್ಮಿಕತೆಗೆ  ಹೊರನಾಡಿನಲ್ಲಿರುವ ತುಳು ಬಾಂಧವರು ನೀಡುತ್ತಿರುವ ಸೇವೆಯಿಂದ ಪ್ರೀತಿ ತುಂಬಿ ಬರುತ್ತಿದೆ. ಇಲ್ಲಿ ನಮ್ಮ ತುಳುನಾಡಿನ ಕಂಪು  ಮೂಡಿ ಬರುತ್ತಿದೆ. ಪ್ರೀತಿ, ಪ್ರೇಮದಿಂದ ನೀಡಿದ ಸೇವೆ ಅದು ಎಂದೆಂದೂ ಶಾಶ್ವತವಾಗಿ ನಿಲ್ಲುತ್ತದೆ.  ಇಂದು ನಾವೆಲ್ಲರೂ ಅಡುವ  ಭಾಷೆ ಯಾವುದೇ ಆದರೂ ಅವರು ನಮ್ಮ ತುಳು ನಾಡಿನವರಾದರೆ ಅವರೆಲ್ಲರೂ ತುಳುವರೇ  ಅಗಿರುತ್ತಾರೆ. ಇಂದು ತುಳು ನಾಡಿನಲ್ಲಿ ತುಳು ಭಾಷೆಗೆ ಯಾವುದೇ ಜಾತಿ ಭೇದವಿಲ್ಲದೆ  ನಾವೆಲ್ಲರೂ  ತುಳುವರು ಎಂಬ  ಹೆಮ್ಮೆ ನಮ್ಮಲ್ಲಿದೆ.  ಪೂಜ್ಯ ಸ್ವಾಮೀಜಿಯವರು   ಗ್ರಾಮಾಭಿವೃದ್ಧಿಯ ಸೇವೆಗಾಗಿ ಗ್ರಾಮೋತ್ಸವ, ತುಳು ಭಾಷೆಗಾಗಿ  ತುಳುತೇರ್‌, ತುಳು ಕಲೆ ಸಾಹಿತ್ಯಕ್ಕೆ ನೀಡಿದ ಪ್ರೋತ್ಸಾಹ ಕಾರ್ಯ  ಅಪಾರವಾಗಿದೆ. ಅವರ ತುಳು ಪ್ರೇಮದ ಜೊತೆ ಜೊತೆಯಲ್ಲಿ, ಗ್ರಾಮೋದ್ಧಾರ,  ಸಮಾಜೋದ್ಧಾರ ಹಾಗೂ ಇನ್ನಿತರ  ಸಮಾಜ ಮುಖೀಯಾಗಿ ಮಾಡುತ್ತಿರುವ  ಸೇವೆಗೆ ನಾವೆಲ್ಲರೂ ತಲೆ ಬಾಗಲೇಬೇಕು
 –  ಎ. ಸಿ. ಭಂಡಾರಿ (ಅಧ್ಯಕ್ಷರು:  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ)

ದೇವರ ಮನುಷ್ಯನ ನಡುವಿನ ಸೇತುವೆಯಾಗಿರುವ ಗುರುವಿನ ಪೂಜೆ ಮಾಡಿದರೆ ಅದರಲ್ಲಿ ನಮ್ಮ ಯಶಸ್ಸು ಸಾಧ್ಯ. ಗುರುವಿನ ಅನುಗ್ರಹದೊಂದಿಗಿರುವ ಸಂಘಟನೆ ಅದೊಂದು ಬಲಿಷ್ಠ ಸಂಘಟನೆಯಾಗಿ ರೂಪುಗೊಳ್ಳುತ್ತದೆ. ಗುರುದೇವ ಸೇವಾ ಬಳಗ ಅದಕ್ಕೊಂದು ಉತ್ತಮ ನಿದರ್ಶನ. ಗುರುವಿನ ಮೂಲಕ ನಮಗೆಲ್ಲರಿಗೂ ಸೇವೆ ಮಾಡುವ ಭಾಗ್ಯ ಬಂದಿದೆ. ಗುರು ಸೇವೆಯೇ ಪರಮ ಸೇವೆ. ಮನುಷ್ಯರಾಗಿ ಜನ್ಮ ತಾಳಿದ ನಾವು ನಮ್ಮಿಂದಾಗುವ ಸೇವೆಯನ್ನು ಸಮಾಜಕ್ಕೆ ನೀಡಬೇಕು. ಯಾವುದೇ ಸೇವೆಯು ಗುರುವಿನ ಮಾರ್ಗದರ್ಶನದ ಮೂಲಕ ನಡೆದರೆ ಅದಕ್ಕೊಂದು ಅರ್ಥವಿದೆ. ನಮ್ಮ ಜೀವನದಲ್ಲಿ ಮಾಡಿದ ದಾನ ಧರ್ಮ ನಮಗೆ ಜನ್ಮ ಜನ್ಮದಲ್ಲೂ ಸತøಜೆಗಳಾಗಿ ಬಾಳಲು ದಾರಿದೀಪವಾಗಬಹುದು. ಇಂದು ಮುಂಬಯಿ ಪುಣೆ ಅಲ್ಲದೆ ಬೇರೆ ಬೇರೆ ಕಡೆಯಲ್ಲಿರುವ   ತುಳುನಾಡಿನವರ ಯಶಸ್ಸಿಗೆ ಇದುವೇ ಕಾರಣವಾಗಿದೆ. ನಾವೆಲ್ಲರೂ  ಶ್ರೀಗಳ ಸಮಾಜಮುಖ ಸೇವೆಗಳಲ್ಲಿ ಬಾಗಿಯಾಗೋಣ 
 – ಕಡಂದಲೆ ಸುರೇಶ್‌ ಭಂಡಾರಿ (ಆಡಳಿತ ಮೊಕ್ತೇಸರರು: ಕಚ್ಚಾರು ಶ್ರೀ  ನಾಗೇಶ್ವರ  ದೇವಸ್ಥಾನ   ಬಾಕೂìರು).

ತಂದೆ ತಾಯಿಯ ಸೇವೆಗೈದ ಪುಣ್ಯ ಮಕ್ಕಳಿಗೆ ಸಿಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಇಂದು ನನ್ನ ಜೀವನದಲ್ಲಿ ನನಗೆ ಅನುಭವಾಗಿದೆ. ನಮಗೆ ಮೊದಲಾಗಿ ತಾಯಿಯೇ ದೇವರು. ಮಾತೃವಿನ,  ಗುರುವಿನ ಆಶೀರ್ವಾದದ ಸೌಭಾಗ್ಯ ನಮಗೆ ಸಿಕ್ಕಿದರೆ ಜೀವನ ಸುಖಮಯವಾಗುತ್ತದೆ. ನಾನು ನನ್ನದು, ನನ್ನಿಂದಾದುದು ಶೂನ್ಯವಾಗಿರಲಿ ಎಂಬ ಗುರು ವಾಕ್ಯವನ್ನು ನಾವು ಜೀವನದಲ್ಲಿ ಪಾಲಿಸಿಕೊಂಡು ಬಂದರೆ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬಹುದು. ಸಂತ ದರ್ಶನವಾದರೆ ಪಾಪ ನಾಶವಾಗುತ್ತದೆ ಎಂದು  ಪುರಾಣದಲ್ಲಿ ಹೇಳಿದೆ. ಗುರು ಪ್ರೇರಣೆ, ಗುರು ಆಶೀರ್ವಾದದೊಂದಿಗೆ ನಾವು ಜೀವನದಲ್ಲಿ ಸತ್ಕರ್ಮಗಳನ್ನು ಮಾಡಿ ಸತøಜೆಗಳಾಗಿ ಬಾಳಬೇಕು. ಆಧ್ಯಾತ್ಮಿಕ ಚಿಂತನೆಯೊಂದಿಗೆ ಸಂಸ್ಕಾರಯುತ ಜೀವನವನ್ನು ನಾವು ಪಡೆಯಬೇಕು 
– ಎ. ಸದಾನಂದ ಶೆಟ್ಟಿ (ಪುಣೆ ಲೆಕ್ಕ ಪರಿಶೋಧಕರು).

Advertisement

Udayavani is now on Telegram. Click here to join our channel and stay updated with the latest news.

Next