Advertisement

ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

01:14 AM Jan 05, 2021 | Team Udayavani |

ಚಾಮರಾಜನಗರ: ಕರ್ನಾಟಕ ಜಾನಪದ ಅಕಾಡೆಮಿಯು 2020ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಮಂಗಳೂರಿನ ಡಾ| ಗಾಯತ್ರಿ ನಾವಡ ಅವರು ಡಾ| ಜೀ.ಶಂ. ಸ್ಮಾರಕ ಜಾನಪದ ತಜ್ಞ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡದ ಗೋಪಾಲಕೃಷ್ಣ ಬಂಗೇರ ಗೊಂಬೆ ಕುಣಿತ; ಉಡುಪಿಯ ರಮೇಶ್‌ ಕಲ್ಮಾಡಿ ಕರಗ ಕೋಲಾಟ ಪ್ರಕಾರದಲ್ಲಿ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಜಾನಪದ ತಜ್ಞ ಪ್ರಶಸ್ತಿಗೆ ಪಾತ್ರರಾದವರಲ್ಲಿ ಬಸವರಾಜ ಸಬರದ ಅವರೂ ಸೇರಿದ್ದಾರೆ.

Advertisement

ಸ್ತ್ರೀವಾದಿ ಚಿಂತಕಿ ಡಾ| ಗಾಯತ್ರಿ ನಾವಡ
ಮಂಗಳೂರು: ಕನ್ನಡ ಸಾಹಿತ್ಯದಲ್ಲಿ ಓರ್ವ ಸ್ತ್ರೀವಾದಿ ಚಿಂತಕಿ ಯಾಗಿ, ಸಂಸ್ಕೃತಿಯ ವಿಮರ್ಶಕರಾಗಿ, ಜಾನಪದ ವಿದ್ವಾಂಸರಾಗಿ ಡಾ| ಗಾಯತ್ರಿ ನಾವಡ ಅವರದು ವಿಶಿಷ್ಟ ಹೆಸರು.

ಕಾಡ್ಯನಾಟ, ಭಾರತೀಯ ಸ್ತ್ರೀವಾದ, ಸಾಂಸ್ಕೃತಿಕ ಸಬಲೀಕರಣ, ಸ್ತ್ರೀವಾದಿ ಜಾನಪದದಂತಹ ಹೊಸ ಶೋಧಗಳನ್ನು, ಪರಿಕಲ್ಪನೆಗಳನ್ನು ಸಂಶೋಧನ ಲೋಕಕ್ಕೆ ನೀಡಿದವರು. ಕರಾವಳಿಯ ಮಾತೃರೂಪಿ ಸಂಸ್ಕೃತಿಯ ತುಳು, ಕನ್ನಡ ಮೌಖೀಕ ಪರಂಪರೆಯ ಬಗೆಗೆ ಸ್ತ್ರೀವಾದಿ ದೃಷ್ಟಿಕೋನದಿಂದ ಸಂಶೋಧನೆ ನಡೆಸಿದ ಮೊದಲಿಗರು.

2 ಪಿಎಚ್‌ಡಿ ಪದವಿ
ಗುಲ್ಬರ್ಗ (1996) ಮತ್ತು ಮಣಿಪಾಲ (2004) ವಿ.ವಿ.ಗಳಿಂದ ಎರಡು ಪಿಎಚ್‌ಡಿ ಪಡೆದ ಹೆಗ್ಗಳಿಕೆ ಅವರದು. ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧಕಿಯಾಗಿ ಕಾರ್ಯ ನಿರ್ವಹಿಸಿ ಅನೇಕ ಸಂಶೋಧನಾ ಯೋಜನೆಗಳನ್ನು ಪೂರ್ತಿಗೊಳಿಸಿದ್ದರು. ಮಣಿಪಾಲ ವಿ.ವಿ.ಯ ಡಾ| ಟಿ.ಎಂ.ಎ. ಪೈ ರಾಷ್ಟ್ರೀಯ ಫೆಲೋಶಿಪ್‌ ಪಡೆದು 3 ವರ್ಷ ಕಾಲ “ಸಿರಿ ಪಂಥ’ದ ಕುರಿತು ಪಿಎಚ್‌ಡಿ ಸಂಶೋಧನೆ ನಡೆಸಿದ್ದರು. 25ಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದಾರೆ.

ಪ್ರಶಸ್ತಿ ಗೌರವ
ಡಾ| ಪೀಟರ್‌ ಕ್ಲಾಸ್‌ ಮಹಿಳಾ ಜಾನಪದ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಪುಸ್ತಕ ಬಹುಮಾನ ಮಾತ್ರವಲ್ಲದೆ ಹಲವಾರು ಪ್ರಶಸ್ತಿ ಮತ್ತು ಗೌರವಗಳನ್ನು ಗಳಿಸಿದ್ದಾರೆ.

Advertisement

ಕರಗ ಕೋಲಾಟ ಕಲಾವಿದ ರಮೇಶ್‌ ಕಲ್ಮಾಡಿ
ಮಲ್ಪೆ: ಜಾನಪದ (ಕರಗ ಕೋಲಾಟ) ಕಲಾವಿದ ರಮೇಶ್‌ ಕಲ್ಮಾಡಿ ಅವರು ಮಲ್ಪೆಯ ಕಲ್ಮಾಡಿಯಲ್ಲಿ ನೆಲೆಸಿದ್ದು, ಶಿಕ್ಷಕ ವೃತ್ತಿಯ ಜತೆಜತೆಗೆ ಜಾನಪದ ಕಲಾಸೇವೆಯಲ್ಲಿ ತೊಡಗಿಸಿಕೊಂಡವರು.

ಮಂಡ್ಯದ ಕೃಷ್ಣೇಗೌಡರಿಂದ ಕರಗ ಕೋಲಾಟ ತರಬೇತಿ ಪಡೆದಿರುವ ಅವರು ಜಾನಪದ ಕ್ಷೇತ್ರದ ಎಲ್ಲ ಕಲಾ ಪ್ರಕಾರಗಳನ್ನೂ ಕರಗತ ಮಾಡಿ ಕೊಂಡರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. ಜಾನಪದ ಅಕಾಡೆಮಿ ಹಾಗೂ ತುಳು ಆಕಾಡೆಮಿ ಮೂಲಕ ನಾಡಿನ ಅನೇಕ ಜಾನಪದದ  ಮೂಲ ಕಲಾವಿದರಿಂದ, ವಿದ್ವಾಂಸರಿಂದ ಜಾನಪದದ ಕಲಾ ಚಟುವಟಿಕೆ ಗಳ ತರಬೇತಿ, ಮಾಹಿತಿಗಳನ್ನು ಪಡೆದುಕೊಂಡು ಜ್ಞಾನ ವೃದ್ಧಿಸಿಕೊಂಡರು.

ಕಲಾಪರಿಕರ ತಯಾರಕ
ಕಳೆದ 40 ವರ್ಷಗಳಿಂದ ತುಳು ಮತ್ತು ಕನ್ನಡ ಜಾನಪದ ವೇಷಭೂಷಣ, ಕಲಾಪರಿಕರಗಳನ್ನು ಸಂಪ್ರದಾಯಬದ್ಧವಾಗಿ ತಯಾರಿಸಿದವರಲ್ಲಿ ರಾಜ್ಯದ ಮೊದಲಿಗರು. ಸುಮಾರು 12 ಲಕ್ಷಕ್ಕೂ ಅಧಿಕ ಮೌಲ್ಯದ ಪರಿಕರಗಳು ಇವೆ. ದಿಲ್ಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಪುರಸ್ಕಾರ ಪಡೆದಿದ್ದಾರೆ. ಪ್ರಸ್ತುತ ಕಲ್ಮಾಡಿ ಕೊರಗಜ್ಜ ದೈವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗೊಂಬೆ ಕುಣಿತದ ಗೋಪಾಲಕೃಷ್ಣ  ಬಂಗೇರ
ಬಂಟ್ವಾಳ: ತಾಲೂಕಿನ ಮಧ್ವ ನಿವಾಸಿ ಗೊಂಬೆ ಕುಣಿತದ ಕಲಾವಿದ ಗೋಪಾಲಕೃಷ್ಣ ಬಂಗೇರ ಅವರು 2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಾರಂಭದಲ್ಲಿ ಸೈಕಲ್‌ ಬ್ಯಾಲೆನ್ಸ್‌ ಕಲಾವಿದರಾಗಿದ್ದ ಬಂಗೇರ ಅವರು ಬಳಿಕ ಕೀಲುಕುದುರೆ ಕಲೆಯನ್ನು ಕರಗತ ಮಾಡಿಕೊಂಡರು. ಬೆಳ್ತಂಗಡಿಯ ಶೆಟ್ಟಿ ಆರ್ಟ್ಸ್ನಲ್ಲಿ 2 ವರ್ಷ ಕಲಾವಿದರಾಗಿದ್ದು, ಬಳಿಕ 26 ವರ್ಷ ಕಲ್ಲಡ್ಕ ಶಿಲ್ಪಕಲಾ ಗೊಂಬೆ ಬಳಗದಲ್ಲಿ ಕಲಾ ಸೇವೆ ಸಲ್ಲಿಸಿದ್ದಾರೆ.

ಅವರು ಮೈಸೂರು ದಸರಾ, ಹಂಪಿ ಉತ್ಸವ, ಧರ್ಮ ನಡಾವಳಿ, ಕೊಂಕಣಿ ಸಮ್ಮೇಳನ, ಆಳ್ವಾಸ್‌ ನುಡಿಸಿರಿ ಸೇರಿದಂತೆ ಸಾವಿರಾರು ಕಡೆಗಳಲ್ಲಿ ಕೀಲುಕುದುರೆ, ಗೊಂಬೆ ಕುಣಿತದ ಪ್ರದರ್ಶನ ನೀಡಿದ್ದಾರೆ. ನೂರಾರು ಉತ್ಸವಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ.

ಪ್ರಶಸ್ತಿ, ಪುರಸ್ಕಾರ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ, ಸಮ್ಮಾನಗಳು ಅವರಿಗೆ ಸಂದಿವೆ. ಹತ್ತಾರು ಕಡೆಗಳಲ್ಲಿ ಸಮ್ಮಾನ ಸ್ವೀಕರಿಸಿದ್ದಾರೆ.
ಗೋಪಾಲಕೃಷ್ಣ ಬಂಗೇರ ಅವರು ಪ್ರಸ್ತುತ ಮಧ್ವದಲ್ಲಿ ಅಂಗಡಿಯೊಂದನ್ನು ಹೊಂದಿದ್ದು, ಪತ್ನಿ, ನಾಲ್ವರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಕಾಲಿನ ಶಸ್ತ್ರಚಿಕಿತ್ಸೆಯ ಬಳಿಕ ತನ್ನ ಕಲಾಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next