Advertisement

ಸಾರ್ವಜನಿಕ ಸಾರಿಗೆ: ಪ್ರಯಾಣಿಕರ ಸುರಕ್ಷೆಯೇ ಆದ್ಯತೆಯಾಗಲಿ

01:50 AM Jan 11, 2021 | Team Udayavani |

ಇತ್ತೀಚಿನ ದಿನಗಳಲ್ಲಿ ಬಸ್‌ನಲ್ಲಿ ಪ್ರಯಾಣಿಸುವವರ ಜೀವಕ್ಕೆ ಚಿಕ್ಕಾಸಿನ ಬೆಲೆಯೂ ಇಲ್ಲದಂತಾಗಿದೆ. ಜನರು ಪ್ರಯಾಣಿಸುವ ಸಿಟಿ, ಸರ್ವಿಸ್‌ ಬಸ್‌ಗಳು ಹಾಗೂ ಇನ್ನಿತರ ವಾಹನಗಳು ಅಪಘಾತಕ್ಕೀಡಾಗಿ ಸಾವು-ನೋವು ಸಂಭವಿಸಿದ ವರದಿಗಳು ಸಾಮಾನ್ಯ ಎಂಬಂತಾಗಿದೆ.

Advertisement

ಒಂದು ಬಸ್‌ನಲ್ಲಿ ಎಷ್ಟು ಸೀಟುಗಳಿವೆ, ಎಷ್ಟು ಜನರಿಗೆ ಆ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶವಿದೆ ಮತ್ತು ಬಸ್‌ನ ವೇಗದ ಮಿತಿ ಹೇಗಿರಬೇಕು ಎಂಬುದನ್ನು ಸರಕಾರವು ಮೊದಲು ನಿಗದಿಪಡಿಸಬೇಕಾಗಿದೆ. ಈ ಬಗ್ಗೆ ನಿರ್ದಿಷ್ಟ ಮಾರ್ಗಸೂಚಿಯನ್ನು ರೂಪಿಸಿ ಅದರ ಅನುಷ್ಠಾನಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯವಶ್ಯವಾಗಿದೆ.

ಮಾನವೀಯ ಕಳಕಳಿ ಅಗತ್ಯ :

ಸಿಟಿ, ಸರ್ವಿಸ್‌ ಬಸ್‌ಗಳ ಸಿಬಂದಿ ತಮ್ಮ ಬಸ್‌ಗಳಲ್ಲಿ ಪ್ರಯಾಣಿಸುವವನು ಕೇವಲ ಪ್ರಯಾಣಿಕ ಎಂಬ ದೃಷ್ಟಿಕೋನದಿಂದ ಕಾಣದೇ ಆತನ ಕರ್ತವ್ಯ, ಆತನ ಮೇಲಿರುವ ಜವಾಬ್ದಾರಿಗಳು ಮತ್ತು ಅವನನ್ನು ಅವಲಂಬಿಸಿರುವ ಆತನ ಕುಟುಂಬದ ಬಗೆಗೂ ಒಂದಿಷ್ಟು ಮಾನವೀಯ ನೆಲೆಯಲ್ಲಿ ಚಿಂತಿಸಬೇಕಿದೆ. ಬಸ್‌ ಅಪಘಾತಕ್ಕೀಡಾಗಿ ಸಾವು-ನೋವು ಸಂಭವಿಸಿ ದಾಗ ನೊಂದವರ ಬಗ್ಗೆ ಆ ಕ್ಷಣದಲ್ಲಿ ಅನುಕಂಪ ವ್ಯಕ್ತಪಡಿಸುವವರನ್ನು ಹೊರತುಪಡಿಸಿದಂತೆ ಕೆಲವು ದಿನಗಳು ಕಳೆದ ಬಳಿಕ ನೊಂದವರು ಅಥವಾ ಅವರ ಕುಟುಂಬಗಳ ಸದಸ್ಯರ ಭವಿಷ್ಯದ ಬಗ್ಗೆ ಕಾಳಜಿ ವಹಿಸುವವರು ಯಾರೂ ಇರುವುದಿಲ್ಲ.

ನಿಗದಿತ ಮಿತಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತುಂಬಿಕೊಂಡು ತಮ್ಮ ಕಣ್ಣೆದುರೇ ಬಸ್‌ ಹಾದು ಹೋದರೂ ಸಂಬಂಧಪಟ್ಟ ಸಾರಿಗೆ ಅಥವಾ ಪೊಲೀಸ್‌ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುವ ದೃಶ್ಯಗಳು ಸಾಮಾನ್ಯ. ಪ್ರಯಾಣಿಕರು ಬಸ್‌ನ ಫ‌ುಟ್‌ಬೋರ್ಡ್‌ ಮೇಲೆ ನೇತಾಡುತ್ತಾ ಪ್ರಯಾಣಿಸುತ್ತಿದ್ದರೂ ಇಂತಹ ಬಸ್‌ ಅಥವಾ ಪ್ರಯಾಣಿಕರ ವಿರುದ್ಧ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಈ ಬಗ್ಗೆ ದೂರುಗಳು ಕೇಳಿಬಂದು ಚರ್ಚೆಗಳು ನಡೆದಾಗ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ನೆಪಮಾತ್ರಕ್ಕೆ ಎಂಬಂತೆ ಕೆಲವು ದಿನಗಳ ಕಾಲ ದಂಡ, ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟರೆ ಮತ್ತೆ ಯಥಾಪ್ರಕಾರ ಬಸ್‌ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿರುತ್ತಾರೆ. ಕಣ್ಣಿದ್ದೂ ಕುರುಡರಾಗುವ ಬದಲು ಒಂದಿಷ್ಟು ವಿವೇಚನೆಯಿಂದ ಇಲಾಖಾಧಿಕಾರಿಗಳು ವರ್ತಿಸಿದಲ್ಲಿ ಅಪಘಾತಗಳ ಸಂಖ್ಯೆ ಮತ್ತು ಅಪಘಾತಗಳಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯನ್ನು ಬಹಳಷ್ಟು ಕಡಿಮೆ ಮಾಡಬಹುದಾಗಿದೆ.

Advertisement

ಮೊಬೈಲ್‌ ಬಳಕೆಗೆ ಕಡಿವಾಣ :

ಇನ್ನು ಗ್ರಾಮೀಣ ಪ್ರದೇಶಗಳ ರಸ್ತೆಗಳಂತೂ ಭಾರೀ ತಿರುವುಗಳಿಂದ ಕೂಡಿರುತ್ತವೆ. ಈ ಬಗ್ಗೆ ಚಾಲಕನಿಗೆ ಅರಿವಿದ್ದರೂ ಕೂಡ ಬಸ್‌ನ ವೇಗವನ್ನು ಕಿಂಚಿತ್ತೂ ಕಡಿಮೆಗೊಳಿಸದೆ ಬಸ್‌ ಚಲಾಯಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಚಾಲಕರು ಬಸ್‌ ಚಾಲನೆ ವೇಳೆ ಮೊಬೈಲ್‌ ಬಳಕೆ ಮಾಡುತ್ತಿರುವುದು ಅತಿಯಾಗಿದೆ. ಅಷ್ಟೇ ಅಲ್ಲದೆ ಚಾಲನೆ ಸಂದರ್ಭದಲ್ಲಿ ಬಸ್‌ನಲ್ಲಿರುವ ಪರಿಚಿತ ಪ್ರಯಾಣಿಕರೊಂದಿಗೆ ಮಾತನಾಡುತ್ತಾ ಚಲಾಯಿಸುವ ಚಾಲಕರಿಗೇನೂ ಕಡಿಮೆ ಇಲ್ಲ. ಬಸ್‌ ಚಾಲಕನ ಈ ಎಲ್ಲ ಅಜಾಗರೂಕತೆ, ನಿರ್ಲಕ್ಷ್ಯದ ಕಾರಣಗಳಿಂದಾಗಿ ಅದೆಷ್ಟೋ ಅಪಘಾತಗಳು ಸಂಭವಿಸಿ ಹಲವರು ತಮ್ಮ ಪ್ರಾಣ ತೆತ್ತಿದ್ದರೆ ಮತ್ತದೆಷ್ಟೋ ಮಂದಿ ಗಾಯಾಳುಗಳಾಗಿ ನೋವುಂಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ನೆರೆಯ ಕಾಸರಗೋಡು ಜಿಲ್ಲೆಯ ಪಾಣತ್ತೂರು ಎಂಬಲ್ಲಿ ಮದುವೆ ದಿಬ್ಬಣದ ಬಸ್‌ ಮನೆ ಮೇಲೆ ಉರುಳಿ ಏಳು ಮಂದಿ ಸಾವನ್ನಪ್ಪಿದರೆ 31ಮಂದಿ ಗಾಯಗೊಂಡರು. ಕರಾವಳಿ ಜಿಲ್ಲೆಗಳಲ್ಲಿ ಇಂಥ ಅಪಘಾತಗಳು ದಿನನಿತ್ಯ ಎಂಬಂತೆ ಸಂಭವಿಸುತ್ತಿರುತ್ತವೆ. ಹಾಗೆಂದು ಎಲ್ಲ ಅಪಘಾತಗಳಿಗೂ ಚಾಲಕರನ್ನು ದೂರಲಾಗದು. ಕೆಲವೊಮ್ಮೆ ತಾಂತ್ರಿಕ ಸಮಸ್ಯೆ, ಆಕಸ್ಮಿಕ ಸನ್ನಿವೇಶಗಳೂ ಅಪಘಾತಗಳಿಗೆ ಕಾರಣವಾಗುತ್ತವೆ.

ಗಾಯಾಳುಗಳಿಗೆ ತುರ್ತು ಚಿಕಿತ್ಸೆ :

ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಬಡವರು, ಮಧ್ಯಮವರ್ಗದವರು ಎಂಬ ಕೀಳರಿಮೆ ಇಲ್ಲದೆ ಎಲ್ಲ ವರ್ಗದ ಜನರೂ ಪ್ರಯಾಣಿಸುತ್ತಾರೆ. ಆಕಸ್ಮಿಕವಾಗಿ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುತ್ತದೆ. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯಗಳು ಲಭ್ಯವಿರುವುದಿಲ್ಲ. ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ದೂರದ ಜಿಲ್ಲಾಸ್ಪತ್ರೆಗಳಿಗೆ ಕರೆದೊಯ್ಯುವಾಗ ವೃಥಾ ಕಾಲಹರಣವಾಗಿ ಅವರು ಸಾವನ್ನಪ್ಪುವ ಸಾಧ್ಯತೆಗಳಿರುತ್ತವೆ. ಇಂಥ ಘಟನೆಗಳು ಸಂಭವಿಸುವುದನ್ನು ತಪ್ಪಿಸಲು ಸರಕಾರ ಪ್ರತ್ಯೇಕವಾದ ಯೋಜನೆಯೊಂದನ್ನು ರೂಪಿಸಿ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಲಭ್ಯವಾಗುವುದನ್ನು ಖಾತರಿಪಡಿಸಬೇಕು.

 

 ಯಂ.ಯಂ.ಕುಂಞಿ ಮೊಂಟೆಪದವು

Advertisement

Udayavani is now on Telegram. Click here to join our channel and stay updated with the latest news.

Next