ವಿಜಯಪುರ: ವರ್ಗವಾಗಿ ಬಂದ ಪಿಎಸ್ ಐ ಮೆರವಣಿಗೆ ಮೂಲಕ ಠಾಣೆಗೆ ಕರೆತಂದು, ಮಹಿಳೆಯರು ಸಾಂಪ್ರದಾಯಿಕ ಆರತಿ ಎತ್ತಿ ಸನ್ಮಾನಿಸಿದ ಘಟನೆ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಜರುಗಿದೆ.
ಚಡಚಣ ಪೊಲೀಸ್ ಠಾಣೆಗೆ ಈ ಹಿಂದೆ ಇದೇ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ ಮಹಾದೇವ ಯಲಿಗಾರ ಮತ್ತೆ ಚಡಚಣ ಠಾಣೆಗೆ ವರ್ಗವಾಗಿ ಬಂದಿದ್ದಾರೆ.
ಡಿಸಿಎಂ ಗೋವಿಂದ ಕಾರಜೋಳ ಶಿಫಾರಸ್ಸಿನ ಮೇರೆಗೆ ಚಡಚಣ ಠಾಣೆಗೆ ವರ್ಗವಾಗಿ ಬಂದ ಪಿಎಸ್ ಐ ಮಹಾದೇವ ಯಲಿಗಾರ ಅವರನ್ನು ಚಡಚಣ ಪಟ್ಟಣದಲ್ಲಿ ಸ್ಥಳೀಯರು ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿ ಪೊಲೀಸ್ ಠಾಣೆಗೆ ಕರೆತಂದರು.
ಮೆರವಣಿಗೆಯಲ್ಲಿ ಠಾಣೆಗೆ ಕರೆತಂದ ಬಳಿಕ ಮಹಿಳೆಯರು ಸಾಂಪ್ರದಾಯಿಕ ಆರತಿ ಎತ್ತಿ, ತಿಲಕ ಇರಿಸಿದರು. ಗ್ರಾಮದ ಪ್ರಮುಖರು ಶಾಲು ಹೊದಿಸಿ, ಹೂಮಾಲೆ ಹಾಕಿ ಸನ್ಮಾನಿಸಿದ್ದಾರೆ.
ಜಿ.ಪಂ. ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ನೇತೃತ್ವದಲ್ಲಿ ನಡೆದ ಮೆರವಣಿಗೆಯ ಘಟನೆಗೆ ಜಿಲ್ಲೆಯಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.