Advertisement

10 ವರ್ಷದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ವಾಧಿಕ ಅನುದಾನ: ನಳಿನ್‌ ಕುಮಾರ್‌

01:14 PM Apr 03, 2019 | sudhir |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತವಾಗಿ ಎರಡು ಅವಧಿಗೆ ಸಂಸದರಾಗಿ ಜಯ ಗಳಿಸಿದ್ದ ನಳಿನ್‌ ಕುಮಾರ್‌ ಕಟೀಲು ಅವರು ಮತ್ತೆ ಬಿಜೆಪಿಯ ಅಭ್ಯರ್ಥಿಯಾಗಿ ಸ್ಫರ್ಧಿಸುವ ಮೂಲಕ ಮೂಲಕ ಹ್ಯಾಟ್ರಿಕ್‌ ಜಯದತ್ತ ಹೊರಟಿದ್ದಾರೆ. ತಮ್ಮ ಎರಡು ಅಧಿಕಾರವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡು ಮತದಾರರ ಮನ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ. ಕ್ಷೇತ್ರದಲ್ಲಿ ಚುನಾವಣೆಯ
ಕಾವು ಹೆಚ್ಚಾಗುತ್ತಿದ್ದಂತೆ ಬಿಜೆಪಿ ನಾಯಕರು, ಕಾರ್ಯಕರ್ತರ ಪ್ರಚಾರದ ಭರಾಟೆಯೂ ಜೋರಾಗಿದೆ. ಈ ಹಿನ್ನೆಲೆಯಲ್ಲಿ ನಳಿನ್‌ ಕುಮಾರ್‌ ಕಟೀಲು ಅವರು “ಉದಯವಾಣಿ’ ಜತೆಗೆ ಮಾತನಾಡಿದ್ದಾರೆ.

Advertisement

3ನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸುವ ಅವಕಾಶ ಪಡೆದಿರುವ ಬಗ್ಗೆ ಏನು ಹೇಳುವಿರಿ?
ರಾಜ್ಯದ ಪತ್ರಿಕೆಯೊಂದು ಮಾಡಿರುವ ಸಮೀಕ್ಷೆ ನನ್ನನ್ನು ನಂಬರ್‌ ಒನ್‌ ಸಂಸದ ಎಂದು ಗುರುತಿಸಿದೆ. ಟೈಮ್ಸ್‌ ಪತ್ರಿಕೆ ನಡೆಸಿದ ಸರ್ವೆ ಪ್ರಕಾರ ದೇಶದಲ್ಲೇ 6ನೇ ಅತ್ಯಂತ ಕ್ರಿಯಾಶೀಲ ಸಂಸದ ಎಂಬ ಹೆಗ್ಗಳಿಕೆಯೂ ನನಗೆ ಸಿಕ್ಕಿರುವುದು ಕ್ಷೇತ್ರದಲ್ಲಿನ ನನ್ನ ಅಭಿವೃದ್ಧಿಪರ ಕೆಲಸಗಳಿಗೆ ಸಾಕ್ಷಿ. ಸಂಸದರ ಆದರ್ಶ ಗ್ರಾಮ ಯೋಜನೆ ಅನುಷ್ಟಾನದ ಬಗ್ಗೆ ನಡೆಸಿರುವ ಸಮೀಕ್ಷೆಯಲ್ಲಿ ರಾಜ್ಯದಲ್ಲೇ ನನ್ನ ಸಾಧನೆ ಪ್ರಥಮ ಸ್ಥಾನದಲ್ಲಿದೆ. ಕ್ಷೇತ್ರದ ಜನತೆ 10 ವರ್ಷಗಳಲ್ಲಿ ತಾನು ಮಾಡಿರುವ ಕೆಲಸವನ್ನು ಗುರುತಿಸಿದ್ದಾರೆ. ಪಕ್ಷದ ನಾಯಕರು, ಕಾರ್ಯಕರ್ತರು, ಮತದಾರರು ಹರಸಿದ್ದಾರೆ. ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ನಿರಂತರ 4 ದಿನಗಳ ಪಾದಯಾತ್ರೆ ಮಾಡಿದ್ದೇನೆ.

ಆಮಾಯಕ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ವಿರೋಧಿಸಿ ಪ್ರತಿ»ಟಿಸಿದ್ದೇನೆ. ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಉಳಿವಿಗಾಗಿ ಹೋರಾಟದಲ್ಲಿ ನಿರಂತರ ಭಾಗವಹಿಸಿದ್ದೇನೆ. ಈ ಎಲ್ಲ ಜನಪರ ಕೆಲಸಗಳು ನನಗೆ 3ನೇ ಬಾರಿಗೆ ಸ್ಪರ್ಧಿಸುವುದಕ್ಕೆ ಅವಕಾಶ ತಂದು ಕೊಟ್ಟಿದೆ ಎಂದುಕೊಂಡಿದ್ದೇನೆ.

ನೀವು ಮಾಡಿರುವ ಅಭಿವೃದ್ಧಿಕಾರ್ಯಗಳ ಬಗ್ಗೆ ವಿಪಕ್ಷಗಳು ದಾಖಲೆ ಕೇಳುತ್ತಿವೆಯಲ್ಲವೇ?
ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳ, ತಂದಿರುವ ಅನುದಾನಗಳ ದೊಡ್ಡ ಪಟ್ಟಿಯೇ ನನ್ನಲ್ಲಿದೆ. ಕ್ಷೇತ್ರದ ಜನತೆಗೆ ಇದು ತಿಳಿದಿದೆ. ಅವಿರತ ಶ್ರಮ ಮತ್ತು ಪ್ರಯತ್ನದ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಅನೇಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ್ದೇನೆ. ಉಳಿದಿರುವ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ನಾನು ಪ್ರಥಮ ಬಾರಿ ಆಯ್ಕೆಯಾದಾಗ ವಿಪಕ್ಷ ಸಂಸದನಾಗಿದ್ದೆ. ನನ್ನ ಪ್ರಯತ್ನದ ಫಲವಾಗಿ 4,000 ಕೋ.ರೂ. ಅನುದಾನ ತಂದಿದ್ದೇನೆ. ಎರಡನೇ ಬಾರಿ ಆಡಳಿತ ಪಕ್ಷದ ಸಂಸದನಾಗಿ 16,200 ಕೋ.ರೂ. ಅನುದಾನ ತಂದಿದ್ದೇನೆ. ಬಹುಶಃ ಇದು ಇಡಿ ರಾಜ್ಯದಲ್ಲೇ ಒಂದು ಕ್ಷೇತ್ರಕ್ಕೆ ಬಂದಿರುವ ಅತಿ ಹೆಚ್ಚು ಅನುದಾನ.

 ಕ್ಷೇತ್ರದಲ್ಲಿ ನೀವು ಮಾಡಿರುವ ಕೆಲಸಗಳಿಗೆ ಏನು ಅಂಕಿ-ಅಂಶಗಳಿವೆ?
ಕಳೆದ 5 ವರ್ಷಗಳ ಅಂದರೆ 2014-15ರಿಂದ 2018-19ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ಯೋಜನೆಗಳಿಗೆ ಕೇಂದ್ರ ಸರಕಾರದಿಂದ 16200 ಕೋ.ರೂ. ಅನುದಾನ ತಂದಿದ್ದೇನೆ. ಇದನ್ನು ಸಂಕ್ಷಿಪ್ತವಾಗಿ ಉಲ್ಲೇಖೀಸುವುದಾದರೆ ರೈಲ್ವೇ ಇಲಾಖೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 1243.93 ಕೋ.ರೂ., ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ 7,318 ಕೋ.ರೂ., ದ.ಕ. ಜಿಲ್ಲಾ ಪಂಚಾಯತ್‌ಗೆ 346 ಕೋ.ರೂ., ಆರೋಗ್ಯ ಇಲಾಖೆಗೆ 22 ಕೋ.ರೂ. ಶಿಕ್ಷಣ ಇಲಾಖೆಗೆ 161 ಕೋ.ರೂ., ನವಮಂಗಳೂರು ಬಂದರು ಮಂಡಳಿಗೆ 196, ಬಂದರು ಮತ್ತು ಮೀನುಗಾರಿಕಾ ಜೆಟ್ಟಿಗೆ 196 ಕೋ.ರೂ.

Advertisement

ಮಂಗಳೂರು ಮಹಾನಗರ ಪಾಲಿಕೆಗೆ 370 ಕೋ.ರೂ., ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 296.91 ಕೋ.ರೂ., ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಲ್ಲಿ 64 ಕೋ.ರೂ., ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ 26.32 ಕೋ.ರೂ., ನಬಾರ್ಡ್‌ ಯೋಜನೆಯಲ್ಲಿ 42 ಕೋ.ರೂ. ಅನುದಾನ ಇದರಲ್ಲಿ ಸೇರಿದೆ.

 ಕೇಂದ್ರ ಸರಕಾರದ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ಸರಿಯಾಗಿ ಆಗಿಲ್ಲ ಎನ್ನುವ ಆರೋಪ ವಿದೆಯಲ್ಲಾ?
ವಿಪಕ್ಷದವರು ಸರಿಯಾದ ಅಂಕಿ-ಅಂಶ ಇಟ್ಟುಕೊಂಡು ಆರೋಪ ಮಾಡಬೇಕು. ವಾಸ್ತವದಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ 29012 ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಸಮಗ್ರ ವಿದ್ಯುತ್‌ ಅಭಿವೃದ್ಧಿ ಯೋಜನೆಗಾಗಿ 15065 ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಬಿಎಸ್‌ಎನ್‌ಎಲ್‌ನಿಂದ 18,320 ಸ್ಥಿರ ದೂರವಾಣಿ, 27276 ಬ್ರಾಡ್‌ಬ್ಯಾಂಡ್‌ ಸಂಪರ್ಕಗಳು, 6087 ಆಪ್ಟಿಕಲ್‌ ಫೈಬರ್‌ ಸಂಪರ್ಕಗಳು, ದಕ್ಷಿಣ ಜಿಲ್ಲೆಯ 232 ಗಾಮಗಳಿಗೆ ಆಪ್ಟಿಕ್‌ ಫೈಬರ್‌ ಸಂಪರ್ಕಗಳನ್ನು ನೀಡಲಾಗಿದೆ. 105 ಬಿಎಸ್‌ಎನ್‌ಎಲ್‌ ಟವರ್‌ಗಳನ್ನು ಸ್ಥಾಪಿಸಲಾ ಗಿದೆ. ಸುಕನ್ಯಾ ಯೋಜನೆಯಲ್ಲಿ 74,144 ಫಲಾನುಭವಿಗಳಿಗೆ, ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಯೋಜನೆಯಲ್ಲಿ 1,156 ಫಲಾನುಭವಿಗೆ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ 11,358 ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗಿದೆ. ಹೀಗೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿರುವ ಬಗ್ಗೆ ನನ್ನ ಬಳಿಕ ಅಂಕಿ-ಅಂಶಗಳಿವೆ.

ನಿಮ್ಮ ಪ್ರಕಾರ ಈ ಬಾರಿಯೂ ಜಿಲ್ಲೆಯಲ್ಲಿ ಮೋದಿ ಅಲೆಯಿದೆಯೇ?
ಈ ಬಾರಿ ಮೋದಿಯ ಅಲೆಯಷ್ಟೇ ಅಲ್ಲ; ಬದಲಿಗೆ ಸುನಾಮಿ ಅಲೆಯಿದೆ. ದೇಶದ ಸುರಕ್ಷತೆ ಹಾಗೂ ರಾಷ್ಟ್ರೀಯ ಭದ್ರತೆ, ದೇಶದ ಸರ್ವತೋಮುಖ ಅಭ್ಯುದಯ ಹಾಗೂ ಭ್ರಷ್ಟಚಾರ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ನರೇಂದ್ರ ಮೋದಿಯವರೇ ಈ ದೇಶಕ್ಕೆ ಮತ್ತೂಮ್ಮೆ ಪ್ರಧಾನಿಯಾಗಬೇಕು. ಹೀಗಾಗಿ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡಬೇಕು ಎನ್ನುವುದೇ ನನ್ನನ್ನು ಸೇರಿದಂತೆ ಈ ದೇಶದೆಲ್ಲೆಡೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳು ಹಾಗೂ ಮತದಾರರ ಅಪೇಕ್ಷೆಯಾಗಿದೆ. ಆ ನಿಟ್ಟಿನಲ್ಲಿ ನಮ್ಮ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವುದಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next