Advertisement

ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ಮುಂದುವರಿಸಿ: ಮನವಿ ಸಲ್ಲಿಕೆ

06:30 PM Mar 23, 2022 | Team Udayavani |

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ಮುಂದುವರಿಸುವಂತೆ ಆಗ್ರಹಿಸಿ ಸಾವಿರಾರು ಜನರು ಪ್ರತಿಭಟನಾ ಮೆರವಣಿಗೆಯ ಮೂಲಕ ಶಿರಾಲಿಯ ವೆಂಕಟಾಪುರದ ಶ್ರೀನಿವಾಸ ಸಭಾಗ್ರಹದಿಂದ ತಾಲೂಕಾ ಆಡಳಿತ ಸೌಧಕ್ಕೆ ಆಗಮಿಸಿ ಹಾಜರಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿದರು.

Advertisement

ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯಲ್ಲಿ ಸರಕಾರಿ ಆದೇಶ ದಿನಾಂಕ ನವೆಂಬರ್ 4, 2019ನೇದರಲ್ಲಿ ಕರ್ನಾಟಕದಲ್ಲಿ ವಾಸಿಸುವ ಮೊಗೇರ ಜಾತಿಯ ಜನರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಸುತ್ತೋಲೆಯನ್ನು ಹೊರಡಿಸಿದರೂ ಸಹ ಜಿಲ್ಲಾಧಿಕಾರಿಗಳು ಕಾರವಾರವರ ಕಚೇರಿಯಿಂದ ಅಧೀನ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡದೇ ಇರುವುದರಿಂದ ಗೊಂದಲ ಸೃಷ್ಟಿಯಾಗಿದೆ. ಸರಕಾರ 2018 ಮೇ 31ರ ಸುತ್ತೋಲೆಯನ್ನು ಹಿಂಪಡೆದು ನವೆಂಬರ್ 4, 2019ರಲ್ಲಿ ಹೊಸದಾಗಿ ಆದೇಶ ಹೊರಡಿಸಿರುವುದರಿಂದ ತಹಸೀಲ್ದಾರ್ ಅವರಿಗೆ ಸೂಕ್ತ ನಿರ್ದೇಶನ ನೀಡಿ ಮೊಗೇರ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಮ್ಮ ಬೇಡಿಕೆಗಳಾದ ಉತ್ತರ ಕನ್ನಡದಲ್ಲಿ ವಾಸಿಸುವ ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು, ಕೇಂದ್ರ ಸರಕಾರದ ಪರಿಶಿಷ್ಟ ಜಾತಿಯ ಪಟ್ಟಿಯನ್ನು ಹೊರತುಪಡಿಸಿ, ಇನ್ನುಳಿದ ಹಿಂದುಳಿದ ವರ್ಗ ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗದ ಪಟ್ಟಿಯಿಂದ ಮೊಗೇರ ಜಾತಿಯನ್ನು ಕೈಬಿಡಬೇಕು. ಬಾಕಿರುವ ಸಿಂಧುತ್ವ ಪ್ರಮಾಣ ಪತ್ರವನ್ನು ಕೂಡಲೇ ವಿತರಿಸಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಎಂದು ತಮ್ಮ ಸಮುದಾಯದವರ ಮೇಲೆ ದಾಖಲಿಸಿರುವ ದೂರುಗಳನ್ನು ಹಿಂಪಡೆಯಬೇಕು ಎಂದೂ ಆಗ್ರಹಿಸಲಾಗಿದೆ.

ಸರಕಾರದ ಆದೇಶದ ಪ್ರಕಾರ ತಮ್ಮ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡುವುದನ್ನು ಪುನ: ಆರಂಭಿಸುವ ತನಕ ಸಮುದಾಯದ ಜನರು ಮಾ.23ರಿಂದ ತಾಲೂಕಿನ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಅನಿರ್ಧಿಷ್ಟಾವಧಿಯ ಧರಣಿ ಸತ್ಯಾಗ್ರಹ, ರಾಸ್ತಾರೋಖೊ ಇತ್ಯಾದಿಗಳನ್ನು ನಡೆಸುತ್ತೇವೆ ಎಂದೂ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next