Advertisement

ನೀರಿನ ಲಭ್ಯತೆ ಮೇಲೆ ಬೆಳೆ ಮಾಹಿತಿ ನೀಡಿ

09:46 PM Feb 06, 2020 | Team Udayavani |

ಕೋಲಾರ: ಜಿಲ್ಲೆಯ ಅನುಕೂಲಕ್ಕೆ, ನೀರಿನ ಲಭ್ಯತೆಗೆ ಅನುಗುಣವಾಗಿ ಏನು ಬೆಳೆಯಬಹುದು ಎಂಬುದನ್ನು ಇಲಾಖೆ ಅಧಿಕಾರಿಗಳು ರೈತರಿಗೆ ತಿಳಿಸಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಹೇಳಿದರು.

Advertisement

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಸಾಮಾಜಿಕ ಅರಣ್ಯ ಇಲಾಖೆಯಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಕುರಿತು ರೈತರಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸರ್ಕಾರ ಅನುದಾನ ನೀಡುತ್ತದೆ ಎಂದು ಕಾರ್ಯಾಗಾರ ನಡೆಸಿ ಹೋದರೆ ಪ್ರಯೋಜನ ಆಗುವುದಿಲ್ಲ. ಇದರಿಂದ ರೈತರಿಗೆ ಏನು ಉಪಯೋಗ ಆಗಿದೆ. ಅನುಷ್ಠಾನ ಎಷ್ಟರ ಮಟ್ಟಿಗೆ ಆಗಿದೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದರು.

ಗಿಡಮರಗಳಿಗೂ ವಿಮೆ ಸೌಲಭ್ಯ: ಜಿಲ್ಲೆಯಲ್ಲಿ ಬಿದಿರು ಬೆಳೆ ತೀರಾ ಕಡಿಮೆ ಇದೆ. ಬಿದಿರು ಬೆಳೆಯುವವರಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ವಾಣಿಜ್ಯವಾಗಿಯೂ ಬಿದಿರಿಗೆ ಉತ್ತಮ ಮೌಲ್ಯ ಇದೆ. ಶ್ರೀಗಂಧ ಲಾಭದಾಯಕ ಬೆಳೆ. ಹಾಗಾಗಿ ಕೃಷಿ ಅರಣ್ಯೀಕರಣದಡಿ ಕೆಲವೊಂದು ಜಾತಿಯ ಗಿಡಮರಗಳ ಬೆಳೆಗೆ ವಿಮಾ ಸೌಲಭ್ಯ ಇಲ್ಲದಿರುವ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ನೀರು ತರುವುದಾಗಿ ಶಪಥ: ಜಿಲ್ಲೆಗೆ ಕೆ.ಸಿ. ವ್ಯಾಲಿ ನೀರು ಹರಿಯುತ್ತಿರುವುದರಿಂದ ಕೋಲಾರ, ನರಸಾಪುರ ಸುತ್ತಮುತ್ತಲ ಭಾಗಗಳಲ್ಲಿ ಅಂತರ್ಜಲಮಟ್ಟ ಹೆಚ್ಚಳಕ್ಕೆ ಅನುಕೂಲವಾಗಿದೆ. ಕುಡಿಯುವ ನೀರಿಗೆ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳ್ಳಬೇಕು. ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಜಿಪಂ ಜನಪ್ರತಿನಿಧಿಗಳು ಇಲಾಖೆ ಅಧಿಕಾರಿಗಳನ್ನು ಒಳಗೊಂಡು ಯೋಜನಾ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗುವುದು. ಯೋಜನೆ ಸಂಬಂಧ ಇರುವ ಸಮಸ್ಯೆ ಬಗೆಹರಿಸಲು ಸಚಿವ ಮಾಧುಸ್ವಾಮಿ ಕೂಡ ಸಹಕಾರ ನೀಡುತ್ತಾರೆಂಬ ವಿಶ್ವಾಸವಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಆದಷ್ಟು ಬೇಗ ಯೋಜನೆಯಡಿ ಜಿಲ್ಲೆಗೆ ನೀರು ತಂದೇ ತರುತ್ತೇನೆ, ಇದು ನನ್ನ ಶಪಥ ಎಂದು ಹೇಳಿದರು.

ಕೃಷಿ ಅರಣ್ಯವೂ ಮುಖ್ಯ: ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಅಜಯ್‌ ಮಿಶ್ರಾ ಮಾತನಾಡಿ, ದೇಶದಲ್ಲಿ ಇತ್ತೀಚೆಗೆ ನಡೆದ ಸರ್ವೇಯಲ್ಲಿ ರಾಜ್ಯದಲ್ಲಿ 1025 ಚದರ ಕಿ.ಮೀ. ಅರಣ್ಯ ಹೆಚ್ಚಳವಾಗಿರುವುದು ಕಂಡುಬಂದಿದೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ಅರಣ್ಯೀಕರಣಕ್ಕೆ ಸಾಕಷ್ಟು ಕಾರ್ಯಕ್ರಮಗಳಿದೆ. ಕೃಷಿ ಬೆಳೆಗಳು ಪ್ರತಿಕೂಲ ವಾತಾವರಣದಿಂದ ಬೆಳೆ, ದರದಲ್ಲಿ ವ್ಯತ್ಯಾಸ ಆಗುವುದರಿಂದ ಕೃಷಿಯನ್ನು ಲಾಭದಾಯಕವನ್ನಾಗಿಸಲು ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ಇದರಲ್ಲಿ ಕೃಷಿ ಅರಣ್ಯವೂ ಮುಖ್ಯವಾದುದು ಎಂದು ಹೇಳಿದರು.

Advertisement

ಆದಾಯ ಗಳಿಸಿ: ಮುಂಗಾರು, ಹಿಂಗಾರು ವ್ಯಾತ್ಯಾಸ ಆದ ಸಂದರ್ಭದಲ್ಲಿ ಕೃಷಿ ಬೆಳೆ ನಾಶವಾಗಬಹುದು. ಆದರೆ, ಬರ ಬೆಳೆ ಇದ್ದರೆ ನಷ್ಟ ಆಗುವುದಿಲ್ಲ. ಹೆಬ್ಬೇವು, ಶ್ರೀಗಂಧ, ಹುಣಸೆ, ನುಗ್ಗೆ, ಬೆಟ್ಟದ ನೆಲ್ಲಿ ಇನ್ನಿತರೆ ಜಾತಿಯ ಗಿಡಮರಗಳನ್ನು ಬೆಳೆಸುವುದರಿಂದ ಅವುಗಳಿಂದಲೂ ಆದಾಯ ಗಳಿಸಬಹುದು ಎಂದು ತಿಳಿಸಿದರು.

ಕೃಷಿ ಅರಣ್ಯ ಸಹಕಾರಿಯಾಗಲಿದೆ: ಪ್ರಾಸ್ತಾವಿಕವಾಗಿ ಮಾತನಾಡಿದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ, ರಾಜ್ಯದಲ್ಲಿ 1000 ಚದರ ಕಿಮೀ ಅರಣ್ಯ ಹೆಚ್ಚಳವಾಗಿರುವುದು ರೈತರ ಕೃಷಿ ಜಮೀನಿಂದ. ಜಮೀನಿನಲ್ಲಿ ಮರಗಳನ್ನು ಬೆಳೆಸುವ ಮೂಲಕ ಆದಾಯ ಗಳಿಸಬಹುದು. 2022ಕ್ಕೆ ರೈತರ ಆದಾಯ ದ್ವಿಗುಣಗೊಳಿಸಬೇಕೆಂಬ ಪ್ರಧಾನಿಗಳ ಮಹತ್ವಾಕಾಂಕ್ಷೆ ಈಡೇರಲು ಕೃಷಿ ಅರಣ್ಯ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಜಿಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಮಾತನಾಡಿ, ರೈತ ದೇಶದ ಬೆನ್ನೆಲುಬು. ಜಿಲ್ಲೆಯ ರೈತ ದೇಶಕ್ಕೆ ಬೆನ್ನೆಲುಬು. ಇಂತಹ ಕಾರ್ಯಾಗಾರಗಳಲ್ಲಿ ರೈತರು ಭಾಗವಹಿಸುವುದರಿಂದ ಸರ್ಕಾರದ ಯೋಜನೆ, ಸೌಲಭ್ಯಗಳ ಕುರಿತು ಮಾಹಿತಿ ಸಿಕ್ಕಂತಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಶಿಕ್ಷಣಕ್ಕೆ ಒತ್ತು: ಜಿಲ್ಲೆಯಲ್ಲಿ ನೀರಿನ ಕೊರತೆ ಇರುವ ಸಂದರ್ಭದಲ್ಲಿ ಪೋಷಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಶ್ರೀಗಂಧಕ್ಕೆ ಉತ್ತಮ ಬೇಡಿಕೆ ಇದೆ. ಕೋಲಾರ ಜಿಪಂ ರೈತರ ಪರವಾಗಿರುತ್ತದೆ. ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತನ್ನಿ ಎಂದು ಹೇಳಿದರು.

ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ಜಿಪಂ ಸದಸ್ಯರಾದ ಅರವಿಂದ್‌, ಅರುಣ್‌ ಪ್ರಸಾದ್‌, ಮುಳಬಾಗಲಿ ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್‌, ಡಿಎಫ್‌ಒ ಚಕ್ರಪಾಣಿ, ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ದೇವರಾಜ್‌, ನಿವೃತ್ತ ಡಿಎಫ್‌ಒ ಚಂದ್ರಪ್ರಭಾ, ಶ್ರೀಗಂಧ ಬೆಳೆಗಾರರ ಸಂಘದ ಅಧ್ಯಕ್ಷ ವೆಂಕಟಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಬಾಲಕೃಷ್ಣ, ಜಗನ್ನಾಥರೆಡ್ಡಿ, ಡಾ.ಹನುಮಂತಪ್ಪ ಇತರರು ಇದ್ದರು.

ಕೋಲಾರ ಜಿಲ್ಲೆಯಲ್ಲಿ 1500 ಹೆಕ್ಟೇರ್‌ ಶ್ರೀಗಂಧ ಬೆಳೆ ಇದೆ. ಕೆಲವು ಜಾತಿಯ ಮರಗಳಿಗೆ ವಿಮಾ ಸೌಲಭ್ಯ ಇಲ್ಲದಿರುವ ಬಗ್ಗೆ ವಿವಿಧೆಡೆ ನಡೆದ ಕಾರ್ಯಾಗಾರದ ಸಂದರ್ಭದಲ್ಲಿ ರೈತರು ಗಮನಕ್ಕೆ ತಂದಿದ್ದಾರೆ. ಆರ್‌ಟಿಸಿಯಲ್ಲಿ ಕೃಷಿ ಅರಣ್ಯ ಬೆಳೆ ನಮೂದಾಗುತ್ತಿಲ್ಲ. ಈ ಸಮಸ್ಯೆಯೂ ಬಗೆಹರಿಯಬೇಕಿದೆ. ಹನಿ ನೀರಾವರಿ ಸೌಲಭ್ಯವೂ ಇರಲಿಲ್ಲ. ಇದೀಗ ಕೃಷಿ ಅರಣ್ಯ ಚಟುವಟಿಕೆ ಕೈಗೊಳ್ಳಲು ಸಬ್ಸಿಡಿ ಸೌಲಭ್ಯಕ್ಕೆ ಸರ್ಕಾರ ಆದೇಶ ಮಾಡಿದೆ.
-ಅನಿತಾ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next