ಯಾದಗಿರಿ: ಸಮರ್ಪಕ ಕುಡಿಯುವ ನೀರು ಸರಬರಾಜಿಗಾಗಿ ಆಗ್ರಹಿಸಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಸೋಮವಾರ ಜಿಲ್ಲೆಯ ನಾಯ್ಕಲ್ ಗ್ರಾಪಂ ಎದುರು ಐದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
ಗ್ರಾಮದ ಮೌಲಾಲಿ ಕಾಲೋನಿ, ಗ್ರಾಪಂ ಕಚೇರಿ ಮುಂಭಾಗದ ಕಾಲೋನಿ, ಯುಕೆಪಿ ಕ್ಯಾಂಪ್ ಸುತ್ತಮುತ್ತಲಿನ ನಿವಾಸಿಗಳು, ಮಜೀದ್ ಕಾಲೋನಿಹೀಗೆ ಗ್ರಾಮದ ಹಲವು ಬಡಾವಣೆಗಳ ಮಹಿಳೆಯರು ಪ್ರತಿಭಟನೆ ನಡೆಸಿ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿದರು.
ಹಲವು ವರ್ಷಗಳಿಂದ ವಿವಿಧ ಬಡಾವಣೆ ನಿವಾಸಿಗಳು ಕೊಡ ನೀರಿಗಾಗಿ ಹೆದ್ದಾರಿಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಕಿ.ಮೀ.ದೂರ ಕ್ರಮಸಿ ನೀರು ತರುವ ಪರಿಸ್ಥಿತಿ ಇದೆ. ನಿತ್ಯ ನೀರು ತರುವುದೇ ಕಾಯಕವಾಗಿದೆ. ಇದನ್ನು ಹೊರತುಪಡಿಸಿ ಕೂಲಿ ಮಾಡುವುದು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಹಲವು ಬಾರಿ ಜಿಪಂ, ತಾಪಂ, ಗ್ರಾಪಂ. ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಅಧಿಕಾರಿಗಳು ಬರುವವರೆಗೆ ಪ್ರತಿಭಟನೆ ಹಿಂಪಡಿಯುವುದಿಲ್ಲ ಎಂದು ಮಹಿಳೆಯರು ಪಟ್ಟು ಹಿಡಿದರು. ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿದ ಶಹಾಪುರ ತಾಪಂ ಕಾ.ನಿ. ಅಧಿಕಾರಿ ಜಗನ್ನಾಥಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಾಪಂ ಅಧಿಕಾರಿ, ನಾಯ್ಕಲ್ ಗ್ರಾಮ ಜಲಜೀವನ್ ಮಷಿನ್ ಯೋಜನೆಯಡಿ ಆಯ್ಕೆಯಾಗಿದೆ. ಮನೆ-ಮನೆಗೆ ನಳ ಅಳವಡಿಸಲಾಗುವುದು. ಇನ್ನೂ 2-3 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಪ್ರತಿಭಟನಾಕಾರರು ನಾವು 2-3 ತಿಂಗಳವರೆಗೆ ಕುಡಿವ ನೀರಿಗಾಗಿ ಏನು ಮಾಡಬೇಕು ಎಂದು ಅಧಿಕಾರಿ ವಿರುದ್ಧ ಹರಿಹಾಯ್ದರು. ತಾತ್ಕಾಲಿಕವಾಗಿ ಎರಡು- ಮೂರು ದಿನಗಳಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡುವುದಾಗಿ ಅಧಿಕಾರಿ ತಿಳಿಸಿದರು