Advertisement

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

10:49 AM Jan 14, 2020 | Suhan S |

ಕುಂದಗೋಳ: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಎನ್‌ಆರ್‌ಸಿ ಹಾಗೂ ಸಿಎಎ ಕಾಯ್ದೆಯಿಂದಾಗಿ ಮುಸ್ಲಿಮರಿಗೆ ಅನಾನುಕೂಲತೆ ಹಾಗೂ ಅನ್ಯಾಯವಾಗುವ ಸಾಧ್ಯತೆ ಹೆಚ್ಚಾಗಿದೆ. ಜಾತ್ಯತೀತ ರಾಷ್ಟ್ರದಲ್ಲಿ ಜಾತಿ-ಧರ್ಮಗಳ ಮಧ್ಯ ವೈಮನಸ್ಸು ಉಂಟಾಗುತ್ತದೆ. ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕೆಂದು ಮುಸ್ಲಿಂ ಧರ್ಮಗುರು ತಾಜುದ್ದೀನ ಪೀರಾ ಒತ್ತಾಯಿಸಿದರು.

Advertisement

ಪಟ್ಟಣದ ಶಾದಿಮಹಲ್‌ನಲ್ಲಿ ತಾಲೂಕು ಅಂಜುಮನ್‌ ಇಸ್ಲಾಂ ಕಮಿಟಿಯವರು ಎನ್‌ ಆರ್‌ಸಿ ಹಾಗೂ ಸಿಎಎ ರದ್ದುಗೊಳಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾಸಮಾವೇಶದಲ್ಲಿ ಅವರು ಮಾತನಾಡಿದರು. ದೇಶದ ಸಂವಿಧಾನವೇ ಪರಮೋಚ್ಚವಾಗಿದ್ದು, ಈ ಸಂವಿಧಾನದಡಿ ಎಲ್ಲ ಸಮುದಾಯದವರು ಬಾಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಒಂದು ಧರ್ಮಯನ್ನು ತುಳಿದು ಇನ್ನೊಂದು ಧರ್ಮವನ್ನು ಮೇಲೆತ್ತುವ ಹುನ್ನಾರ ನಡೆಸಿದೆ. ಇದರಿಂದ ಮುಸ್ಲಿಂ ಸಮುದಾಯವು ತುಳಿತಕ್ಕೆ ಒಳಗಾಗುತ್ತದೆ. ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಕಾಯ್ದೆಯನ್ನು ಹಿಂಪಡೆಯುವಂತೆ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ನಮ್ಮ ಸಮುದಾಯದಲ್ಲಿ 46ರಷ್ಟು ಅನಕ್ಷರಸ್ಥರು ಇದ್ದು, ಈ ಕಾಯ್ದೆಯಿಂದ ದಾಖಲಾತಿಗಳನ್ನು ಕೇಳುತ್ತಾರೆ. ನಿತ್ಯವು ಕೂಲಿನಾಲಿ ಮಾಡುತ್ತಾ ಬದುಕುವ ನಮ್ಮ ಸಮುದಾಯವು ದಾಖಲಾತಿ ಒದಗಿಸದಿದ್ದರೆ ಪೌರತ್ವವನ್ನೇ ಪಡೆಯುವುದಿಲ್ಲ. ಕೂಡಲೇ ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆಯದಿದ್ದರೆ ದೇಶದಲ್ಲಿ 15 ಕೋಟಿಗೂ ಹೆಚ್ಚು ನಾಗರಿಕರು ಅನ್ಯಾಯಕ್ಕೆ ಒಳಗಾಗುತ್ತಾರೆ ಎಂದರು.

ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿ, ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು ವಿದ್ಯಾವಂತರು ಉದ್ಯೋಗವಿಲ್ಲದೆ ಅಲೆಯುತ್ತಿದ್ದಾರೆ. ಉದ್ಯೋಗ ಸೃಷ್ಟಿಸುವ ಬದಲು ಇಂತಹ ನಿರುಪಯುಕ್ತ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದಾರೆ. ಸಿಎಎ ವಿರೋಧಿ ಹೋರಾಟವನ್ನು ಜೆಡಿಎಸ್‌ ಪಕ್ಷ ಬೆಂಬಲಿಸಲಿದೆ ಎಂದರು.

ಮುಖಂಡರಾದ ಅರವಿಂದ ಕಟಗಿ, ಶಿವಾನಂದ ಬೆಂತೂರ, ಅಜುಮನ್‌ ಕಮಿಟಿ ಅಧ್ಯಕ್ಷ ರಾಯೇಸಾಬ ಕಳ್ಳಿಮನಿ, ಮುತ್ತು ಶಿವಳ್ಳಿ, ಅನಿಲಕುಮಾರ ಪಾಟೀಲ, ಚಂದ್ರಶೇಖರ ಜುಟ್ಟಲ, ಶಾಕೀರ ಸನದಿ, ಪೀತಾಂಬರಪ್ಪ ಬೀಳಾರ ಮಾತನಾಡಿದರು. ಶಾಸಕಿ ಕುಸುಮಾವತಿ ಶಿವಳ್ಳಿ, ಹಜರತಲಿಜೋಡಮನಿ, ಜಿ.ಡಿ. ಘೋರ್ಪಡೆ, ವಿ.ಡಿ. ಹಿರೇಗೌಡ್ರ, ಎಚ್‌.ಎಲ್‌. ನದಾಫ, ರಾಮನಗೌಡ ಪಾಟೀಲ, ದಯಾನಂದ ಕುಂದೂರ, ಬಾಬಾಜಾನ ಮಿಶ್ರಿಕೋಟಿ, ಕಹಿಂ ನಾಲಬಂದ, ಬಾಬಾಜಾನ ಮುಲ್ಲಾ, ಹುಲಗೂರ, ಸುರೇಶ ಗಂಗಾಯಿ, ಎ.ಬಿ. ಉಪ್ಪಿನ, ಬೀರಪ್ಪ ಕುರಬರ, ಸಕ್ರು ಲಮಾಣಿ ಇದ್ದರು. ಪ್ರತಿಭಟನೆಗೆ ತಾಲೂಕಾ ಕಾಂಗ್ರೆಸ್‌ ಸಮಿತಿಯವರೂ ಬೆಂಬಲ ವ್ಯಕ್ತಪಡಿಸಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next