Advertisement

ಕಸ್ತೂರಿರಂಗನ್‌ ವರದಿ ಜಾರಿ ವಿರೋಧಿಸಿ ಪ್ರತಿಭಟನೆ

05:03 PM Jul 26, 2022 | Team Udayavani |

ಜೋಯಿಡಾ: ಕಸ್ತೂರಿ ರಂಗನ್‌ ವರದಿ ಬಹಳಷ್ಟು ಲೋಪದೋಷಗಳಿಂದ ಕೂಡಿದ್ದು, ವರದಿ ಜಾರಿಯಿಂದ ಜಿಲ್ಲೆಯ ಜನ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಎಂದು ಜೋಯಿಡಾ ಶಾಸಕ ಆರ್‌.ವಿ.ದೇಶಪಾಂಡೆ ಹೇಳಿದರು.

Advertisement

ಕಸ್ತೂರಿ ರಂಗನ್‌ ವರದಿ ಜಾರಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯವೂ ಸೇರಿದಂತೆ ದೇಶದ 6 ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟದ 56823 ಚದರ ಕಿ.ಮೀ ವಿಸ್ತೀರ್ಣದ ಪ್ರದೇಶವನ್ನು ಸುಪ್ರೀಂ ಕೋರ್ಟನ ಆದೇಶದನ್ವಯ ಪರಿಸರ ಸೂಕ್ಷ ವಲಯ ಎಂದು ಗುರುತಿಸಿ ಕೇಂದ್ರ ಸರ್ಕಾರ ಜು. 6 ರಂದು ಕರಡು ಅಧಿಸೂಚನೆ ಹೊರಡಿಸಿದೆ. ಈ ಹಿಂದೆ 3 ಬಾರಿ ಅಧಿಸೂಚನೆಯನ್ನು ಹೊರಡಿಸಿದ್ದ ಕೇಂದ್ರದ ಈ ಪ್ರಯತ್ನಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಈಗ ಇನ್ನೊಮ್ಮೆ ಅಧಿಸೂಚನೆ ಹೊರಡಿಸಿರುವುದು ರಾಜ್ಯದ ಜನತೆಗೆ ಆತಂಕವನ್ನು ತಂದೊಡ್ಡಿದೆ ಎಂದರು.

ಪಶ್ಚಿಮ ಘಟ್ಟದ ಜೀವ ವೈವಿಧ್ಯ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವು ಕಸ್ತೂರಿ ರಂಗನ್‌ ವರದಿಯಂತೆ ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಲಾದ ಪ್ರದೇಶದಲ್ಲಿ ನಮ್ಮ ರಾಜ್ಯದ 10 ಜಿಲ್ಲೆಗಳ 1112 ಗ್ರಾಮಗಳನ್ನು ಮತ್ತು ನಮ್ಮ ಉತ್ತರ ಕನ್ನಡ ಜಿಲ್ಲೆಯ 9 ತಾಲೂಕುಗಳಿಂದ 704 ಗ್ರಾಮಗಳು ಸೇರ್ಪಡೆಗೊಂಡಿವೆ. ಅತಿ ಹೆಚ್ಚು ಭೂಪ್ರದೇಶ ಸುಮಾರು 206681 ಚದರ ಕಿ.ಮೀ ವಿಸ್ತೀರ್ಣ ಪ್ರದೇಶವು ನಮ್ಮ ರಾಜ್ಯದ ಭಾಗವೇ ಆಗಿದೆ ಎಂದರು.

ಪಶ್ಚಿಮ ಘಟ್ಟಗಳಿಂದಲೇ ಆವರಿಸಿರುವ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ, ವಿಶೇಷವಾಗಿ ಜೋಯಿಡಾ ತಾಲೂಕಿನಲ್ಲಿ ಈಗಾಗಲೇ ಹಲವು ಯೋಜನೆಗಳು, ಅಭಯಾರಣ್ಯಗಳು ಇದ್ದು, ಈ ಯೋಜನೆಗಳಿಂದ ಇಲ್ಲಿಯೇ ಬದುಕನ್ನು ಕಟ್ಟಕೊಂಡ ಜನಸಾಮಾನ್ಯರು, ನಿರಾಶ್ರಿತರಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ 96 ಗ್ರಾಮಗಳು ಪರಿಸರ ಸೂಕ್ಷ್ಮ ವಲಯದಲ್ಲಿ ಗುರುತಿಸಿಕೊಂಡಿದ್ದು, ತಾಲೂಕಿನ ಕೇಂದ್ರ ಸ್ಥಾನವೂ ಸೇರಿದಂತೆ ಶೇ.90 ರಷ್ಟು ಹೆಚ್ಚಿನ ಪ್ರದೇಶ ಈ ವಲಯದ ವ್ಯಾಪ್ತಿಯಲ್ಲಿ ಬರುತ್ತದೆ.

ಇದರಿಂದ ತಾಲೂಕಿನಲ್ಲಿ ಕೈಗೊಳ್ಳುವ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುವ ಆತಂಕ ಎದುರಾಗಿದೆ. ತಾಲೂಕಿನಲ್ಲಿ ಕಾಡು ಉಳಿದಿರುವುದು ಇಲ್ಲಿಯ ಜನರಿಂದ. ಆದರೆ ಈ ವರದಿ ಜಾರಿಯಾದಲ್ಲಿ ತಾಲೂಕಿನ ಮುಗ್ಧ ಜನ ತೊಂದರೆ ಅನುಭವಿಸಬೇಕಾಗಿದೆ. ಘಟ್ಟಗಳ ಪ್ರದೇಶದ ಅರಣ್ಯ, ಜೀವಸಂಕುಲಗಳ ಸಂರಕ್ಷಣೆ ಮತ್ತು ಪರಿಸರದ ಸಮತೋಲನದ ಜೊತೆಗೆ ಅಭಿವೃದ್ಧಿಯೂ ಆಗಬೇಕು ಎಂದರು.

Advertisement

ಆದ್ದರಿಂದ ರಾಜ್ಯ ಸರ್ಕಾರ ಈ ಯೋಜನೆ ಜಾರಿ ಬಗ್ಗೆ ಶೀಘ್ರ ಆಕ್ಷೇಪಣಾ ಅರ್ಜಿ ಸಲ್ಲಿಸಿ ಪಶ್ಚಿಮ ಘಟ್ಟದಲ್ಲಿ ವಾಸಿಸುವವರ ಹಿತರಕ್ಷಣೆಗೆ ಮುಂದಾಗಬೇಕು. ಪರಿಸರ, ಅರಣ್ಯ ಸಂರಕ್ಷಣೆ, ಜೀವ ವೈವಿಧ್ಯತೆಗಳ ಸಂರಕ್ಷಣೆ ಆದ್ಯತೆಯ ಜೊತೆಗೆ ಇವುಗಳೊಂದಿಗೆ ಸಂಬಂಧ ಬೆಳೆದುಕೊಂಡಿರುವ ಜನರ ಹಿತರಕ್ಷಣೆ ಆಗಬೇಕು. ಸರಕಾರ ನಿಗದಿತ ಅವಧಿಯೊಳಗೆ ಆಕ್ಷೇಪಣಾ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ರಾಜ್ಯ ಸರ್ಕಾರ ಕೂಡಲೇ ಕರಡು ಪ್ರಕಟವಾದ 60 ದಿನಗಳಲ್ಲಿ ಆಕ್ಷೇಪ ಅರ್ಜಿ ಸಲ್ಲಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಪಕ್ಷದ ಸದಾನಂದ ದಬ್ಗಾರ, ರಮೇಶನಾಯ್ಕ, ಸಂಜಯ ಹಣಬರ, ಮಂಗೇಶ ಕಾಮತ್‌,ದತ್ತಾ ನಾಯ್ಕ, ದಿಗಂಬರ ದೇಸಾಯಿ, ಅರುಣ ಭಗವತಿರಾಜ್‌, ಅಜಿತ್‌ ತೋರವತ್‌,ವಿಜಯ ಪಂಡಿತ, ವಿನಯ ದೇಸಾಯಿ, ಕೃಷ್ಣಾ ದೇಸಾಯಿ, ನಂದು ತೇಲಿ, ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next